ಶಾಲಾ ಬಸ್ಸಿನಲ್ಲಿ ಸಂಭವಿಸಿದ ಅಪಘಾತದಲ್ಲಿ ತನ್ನ 10 ವರ್ಷದ ಮಗುವನ್ನು ಕಳೆದುಕೊಂಡ ತಾಯಿಯೊಬ್ಬರು ರೋದಿಸುತ್ತಿದ್ದಾಗ, ಬಾಯಿ ಮುಚ್ಚುವಂತೆ ಮಹಿಳಾ ಅಧಿಕಾರಿಯೊಬ್ಬರು ಗದರಿಸಿದ್ದಾರೆ. “ಬಸ್! ಚುಪ್” (ಸಾಕು! ಮುಚ್ಚು) ಎಂದು ಅಧಿಕಾರಿ ಕಿರುಚಿದ್ದಾರೆ. ಈ ಘಟನೆಯು ಉತ್ತರ ಪ್ರದೇಶದ ಮೋದಿನಗರದಲ್ಲಿ ನಡೆದಿದೆ.
ಸರ್ಕಾರಿ ಅಧಿಕಾರಿ ಅಸೂಕ್ಷ್ಮತೆಯಿಂದ ನಡೆದುಕೊಂಡಿರುವ ವಿಡಿಯೊ, ದೆಹಲಿಯಿಂದ ಸುಮಾರು 40 ಕಿಮೀ ದೂರದಲ್ಲಿರುವ ಮೋದಿನಗರದ ಪೊಲೀಸ್ ಠಾಣೆಯಿಂದ ಹೊರಬಿದ್ದಿದೆ. ಅಪಘಾತದಲ್ಲಿ ಸಾವಿಗೀಡಾದ 4ನೇ ತರಗತಿಯ ವಿದ್ಯಾರ್ಥಿ ಅನುರಾಗ್ ಭಾರದ್ವಾಜ್ನ ಪೋಷಕರು ಗುರುವಾರ ಪ್ರತಿಭಟನೆ ಕುಳಿತ್ತಿದ್ದರು. ಮಗುವಿನ ಸಾವಿಗೆ ನಿರ್ಲಕ್ಷ್ಯವೇ ಕಾರಣವಾಗಿದ್ದು, ಶಾಲೆಯ ವಿರುದ್ಧ ಕ್ರಮಕ್ಕೆ ಒತ್ತಾಯಿಸುತ್ತಿದ್ದರು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಬುಧವಾರ ಬೆಳಿಗ್ಗೆ ಅನುರಾಗ್ ಬಸ್ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ವಾಕರಿಕೆ ಬಂದಿದೆ. ಕಿಟಕಿಯಿಂದ ಹೊರಗೆ ಒರಗಿದ್ದನು. ಈ ವೇಳೆ ಚಾಲಕ ಅಡ್ಡಾದಿಡ್ಡಿ ವಾಹನ ಚಾಲನೆ ಮಾಡಿದ್ದು, ಬಾಲಕ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ವರದಿಯಾಗಿದೆ. ಚಾಲಕ ಮತ್ತು ಮತ್ತೊಬ್ಬ ಬಸ್ ಸಿಬ್ಬಂದಿಯನ್ನು ಬಂಧಿಸಿದ್ದರೂ ಶಾಲೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲದಿರುವುದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
The parents and relatives of #AnuragBharadwaj, a 10-year-old boy who lost his life in an accident on the school bus, sat in protest outside a police station in #Modinagar near #Delhi on April 21. The SDM of Modinagar, #ShubhangiShukla, yelled at the wailing mother “Bas! Chup”. pic.twitter.com/azHi55isQf
— The Logical Indian (@LogicalIndians) April 22, 2022
ಮೋದಿನಗರದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಶುಭಾಂಗಿ ಶುಕ್ಲಾ ಅವರು, ಅನುರಾಗ್ ಅವರ ತಾಯಿ ನೇಹಾ ಭಾರದ್ವಾಜ್ ಅವರ ಮೇಲೆ ಕಿರುಚಾಡುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು. ನೇಹಾ ಅವರು ತನ್ನ ಪತಿ, ಮಗಳು ಮತ್ತು ಇತರ ಕೆಲವು ಪೋಷಕರೊಂದಿಗೆ ನೆಲದ ಮೇಲೆ ಕೂತು ಧರಣಿ ನಡೆಸುತ್ತಿದ್ದರು.
“ನಿಮಗೇಕೆ ಅರ್ಥವಾಗುತ್ತಿಲ್ಲ? ಸುಮ್ಮನಿರಲು ನಾನು ಹೇಳುತ್ತಿದ್ದೇನೆ” ಎಂದು ಶುಭಾಂಗಿ ಶುಕ್ಲಾ ಅವರು ನೋವುಂಡ ತಾಯಿಯ ಮೇಲೆ ವಾಕ್ ಪ್ರಹಾರ ನಡೆಸುತ್ತಾರೆ.
“ಅದು ನಿನ್ನ ಮಗನೇ?” ಎಂದು ನೇಹಾ ಭಾರದ್ವಾಜ್ ಅಳುತ್ತಾ ಪ್ರತಿಕ್ರಿಯಿಸಿದ್ದಾರೆ.
“ನಾನು ಎಷ್ಟು ಬಾರಿ ಪ್ರಯತ್ನಿಸಬೇಕು. ನಿಮಗೆ ಅರ್ಥ ಮಾಡಿಸಬೇಕು” ಎಂದು ಮತ್ತೆ ಅಧಿಕಾರಿ ಶುಭಾಂಗಿ ಕಿರುಚುತ್ತಾರೆ.
“ನನಗೆ ಸಾಕಷ್ಟು ಅರ್ಥವಾಗಿದೆ. ಅವರು ಈಗ ಮೌನವಾಗಿದ್ದಾರೆ” ಎಂದು ನೇಹಾ ಉತ್ತರಿಸುತ್ತಾರೆ. ಮೃತಪಟ್ಟಿರುವ ತನ್ನ ಮಗುವನ್ನು ಉಲ್ಲೇಖಿಸಿ ಮಾತನಾಡುತ್ತಾರೆ.
ಘಟನೆಯ ಆಘಾತದ ನಡುವೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಧ್ಯ ಪ್ರವೇಶಿಸಿ ವರದಿ ಕೇಳಿದ್ದಾರೆ. ಶಾಲೆ, ಬಸ್ ಸಿಬ್ಬಂದಿ ಹಾಗೂ ಸಾರಿಗೆ ಇಲಾಖೆ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಶಾಲಾ ಬಸ್ಗಳ ಫಿಟ್ನೆಸ್ ತಪಾಸಣೆಗೆ ಆದೇಶಿಸಿದ್ದಾರೆ.
ಇದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿಯವರು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
ಇದನ್ನೂ ಓದಿರಿ: ಮಂಗಳೂರು: ಮಳಲಿಪೇಟೆಯ ಪ್ರಾಚೀನ ಮಸೀದಿಯನ್ನು ದೇವಸ್ಥಾನ ಎಂದು ಸುಳ್ಳು ಹಬ್ಬಿಸಿದ ಕನ್ನಡ ಮಾಧ್ಯಮಗಳು
ಬಸ್ನಲ್ಲಿ ಗುಣಮಟ್ಟದ ಮುನ್ನೆಚ್ಚರಿಕೆಗಳನ್ನು ಶಾಲಾ ಮಂಡಲಿ ತೆಗೆದುಕೊಂಡಿಲ್ಲ ಎಂದು ಅನುರಾಗ್ ಪೋಷಕರು ಆರೋಪಿಸಿದ್ದಾರೆ. ಯಾರೂ ಮೇಲ್ವಿಚಾರಣೆ ತೆಗೆದುಕೊಂಡಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಅನುರಾಗ್ ಅವರ ತಾಯಿ ಚಾಲಕನಿಗೆ ದೂರು ನೀಡಿದ್ದರು ಎನ್ನಲಾಗಿದೆ.
ಏಪ್ರಿಲ್ 1 ರಂದು ಶಾಲೆಯ ಪ್ರಾಂಶುಪಾಲರು, ಆಡಳಿತ ಮಂಡಳಿ ಮತ್ತು ಚಾಲಕರೊಂದಿಗೆ ಜಗಳವಾಡಿರುವುದಾಗಿ ಪೋಷಕರು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಅಧಿಕಾರಿ ಶುಕ್ಲಾ ತನ್ನ ವರದಿಯಲ್ಲಿ ಬೇರೆಯದ್ದನ್ನೇ ಹೇಳುತ್ತಿದ್ದಾರೆ. “ಬಸ್ನಲ್ಲಿಯೇ ಇದ್ದ ಶಿಕ್ಷಕರಲ್ಲಿ ಈ ಬಾಲಕ ಏನನ್ನು ಹೇಳಿಕೊಳ್ಳಲಿಲ್ಲ. ಬಸ್ನಲ್ಲಿದ್ದ ಸೀಟ್ಗಳಿಗಿಂತ ಕಡಿಮೆ ವಿದ್ಯಾರ್ಥಿಗಳಿದ್ದರು” ಎಂದಿದ್ದಾರೆ ಶುಕ್ಲಾ. ಆದರೆ, ಬಸ್ಗೆ ಫಿಟ್ನೆಸ್ ಪ್ರಮಾಣಪತ್ರ ಇರಲಿಲ್ಲ.