ಎರ್ನಾಕುಲಂ ಜಿಲ್ಲೆಯ ಒಡಕ್ಕಲಿ ಗ್ರಾಮದ ಬಳಿ ಡಿಸೆಂಬರ್ 10ರಂದು ನಡೆದ ವಿದ್ಯಾರ್ಥಿ ಸಂಘಟದ ಪ್ರತಿಭಟನೆಗೆ ಸಂಬಂಧಿಸಿದಂತೆ ಕೇರಳದ ದೂರದರ್ಶನ ಸುದ್ದಿ ವಾಹಿನಿ 24 ನ್ಯೂಸ್ನ ವರದಿಗಾರ್ತಿ ವಿರುದ್ಧದ ಪೊಲೀಸ್ ಕ್ರಮವನ್ನು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ಶುಕ್ರವಾರ ಖಂಡಿಸಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸಂಪುಟದ ಕೆಲವು ಸದಸ್ಯರು ಪ್ರಯಾಣಿಸುತ್ತಿದ್ದ ಬಸ್ಗೆ ಶೂ ಎಸೆದ ಆರೋಪದ ಮೇಲೆ ಕಾಂಗ್ರೆಸ್ನ ವಿದ್ಯಾರ್ಥಿ ಘಟಕವಾದ ಕೇರಳ ವಿದ್ಯಾರ್ಥಿ ಸಂಘದ ಕೆಲ ಸದಸ್ಯರು ಮತ್ತು ವರದಿಗಾರ್ತಿ ವಿನಿತಾ ವಿಜಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ವಿನಿತಾ ವಿರುದ್ಧ ಕ್ರಿಮಿನಲ್ ಪಿತೂರಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ ಎಂದು ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
“ಹಿಂಸಾಚಾರವನ್ನು ಒಪ್ಪುವುದಿಲ್ಲ. ಆದರೆ, ವರದಿಗಾರ್ತಿ ವಿರುದ್ಧದ ಪೊಲೀಸ್ ಕ್ರಮವನ್ನು ಬಲವಾಗಿ ಖಂಡಿಸುತ್ತದೆ. ಪ್ರತಿಭಟನೆಗಳ ಕುರಿತು ಸುದ್ದಿ ಮಾಡುವುದು ಮಾಧ್ಯಮದ ಜವಾಬ್ದಾರಿ. ಅದು ಅಪರಾಧವಲ್ಲ. ಪ್ರತಿಭಟನಾ ಸ್ಥಳದಲ್ಲಿ ವರದಿಗಾರರು ಇದ್ದರೂ ಎಂಬ ಕಾರಣಕ್ಕೆ ಅಹಿತಕರ ಘಟನೆಗೆ ಅವರು ಸಹಭಾಗಿ ಎನ್ನಲು ಸಾಧ್ಯವಿಲ್ಲ” ಎಂದು ಎಡಿಟರ್ಸ್ ಗಿಲ್ಡ್ ಹೇಳಿದೆ.
“ತನ್ನ ವೃತ್ತಿಪರ ಕರ್ತವ್ಯವನ್ನು ನಿರ್ವಹಿಸಿ ವರದಿಗಾರ್ತಿ ವಿರುದ್ದ ಕ್ರಮ ಕೈಗೊಳ್ಳಬಾರದು. ಅವರ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ಹಿಂಪಡೆದು ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕು” ಎಂದು ಆಗ್ರಹಿಸಿದೆ.
ಕೇರಳದ ಸರ್ಕಾರದ ‘ನವ ಕೇರಳ ಸದಸ್’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಸಚಿವರ ತಂಡ ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ ಶೂ ಎಸೆಯಲಾಗಿತ್ತು. ಒಂದು ಶೂ ಸಿಎಂ ಮತ್ತು ಸಚಿವರು ಇದ್ದ ಬಸ್ ಮೇಲೆ ಬಿದ್ದರೆ, ಮತ್ತೊಂದು ಬೆಂಗಾವಲು ವಾಹನ ವಿಂಡ್ ಶೀಲ್ಡ್ಗೆ ಬಿದ್ದಿತ್ತು ಎಂದು ದಿ ಹಿಂದೂ ವರದಿ ಮಾಡಿದೆ.
ಸಿಎಂ ಮತ್ತು ಸಚಿವರು ಇದ್ದ ಬಸ್ ಮೇಲೆ ಶೂ ಎಸೆಯುವ ಬಗ್ಗೆ ವರದಿಗಾರ್ತಿಗೆ ಮೊದಲೇ ಗೊತ್ತಿತ್ತು. ಆದರೂ ಆಕೆ ಆ ಬಗ್ಗೆ ಪೊಲೀಸರಿಗೆ ತಿಳಿಸಿಲ್ಲ ಎಂದು ಆರೋಪಿಸಿ ಪ್ರಕರಣ ದಾಖಲಿಸಲಾಗಿದೆ.
ಪತ್ರಕರ್ತೆ ಸೇರಿದಂತೆ ಹೋರಟಗಾರರ ವಿರುದ್ದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 283, 353, 34, 308ಗಳಡಿ ಪ್ರಕರಣ ದಾಖಲಾಗಿದೆ. ಪ್ರಸ್ತುತ ಪೆರುಂಬವೂರ್ನ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನಿಡಿದೆ. ಆದರೆ, ಸೆಕ್ಷನ್ 308 ನ್ನು ಯಾಕೆ ಹಾಕಲಾಗಿದೆ ಎಂದು ಪೊಲೀಸರುನ್ನು ಪ್ರಶ್ನಿಸಿದೆ ಎಂದು ದಿ ಹಿಂದೂ ವರದಿ ತಿಳಿಸಿದೆ.
ಇದನ್ನೂ ಓದಿ: ಕೇರಳ ವಿವಿ ಸೆನೆಟ್ಗೆ ರಾಜ್ಯಪಾಲರಿಂದ ನಾಮನಿರ್ದೇಶನಗೊಂಡಿದ್ದ ABVP ಕಾರ್ಯಕರ್ತ ಕೊಲೆ ಯತ್ನ ಕೇಸ್ನಲ್ಲಿ ಅರೆಸ್ಟ್