ಮಾಜಿ ಆರ್ಎಲ್ಜೆಪಿ ನಾಯಕ ಮತ್ತು ಹಾಲಿ ಖಗಾರಿಯಾ ಸಂಸದ ಮತ್ತು ಎನ್ಡಿಎ ಮೈತ್ರಿ ಕೂಟದ ಏಕೈಕ ಮುಸ್ಲಿಂ ಸಂಸದ ಚೌಧರಿ ಮೆಹಬೂಬ್ ಅಲಿ ಕೈಸರ್ ಇಂದು ಲಾಲು ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳಕ್ಕೆ ಸೇರ್ಪಡೆಗೊಂಡಿದ್ದಾರೆ.
ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಆರ್ಜೆಡಿ ರಾಜ್ಯಾಧ್ಯಕ್ಷ ಜಗದಾನಂದ್ ಸಿಂಗ್ ಅವರ ಸಮ್ಮುಖದಲ್ಲಿ ಚೌಧರಿ ಮೆಹಬೂಬ್ ಅಲಿ ಕೈಸರ್ ಆರ್ಜೆಡಿಗೆ ಸೇರ್ಪಡೆಯಾದರು.
LJP ವಿಭಜನೆಯಾದ ನಂತರ ಮಾಜಿ ಕೇಂದ್ರ ಸಚಿವ ಪಶುಪತಿ ಕುಮಾರ್ ಪಾರಸ್ ಅವರೊಂದಿಗೆ ಗುರುತಿಸಿಕೊಂಡಿದ್ದ ಕೈಸರ್ ಅವರಿಗೆ ಈ ಬಾರಿ ಚಿರಾಗ್ ಪಾಸ್ವಾನ್ ಟಿಕೆಟ್ ನಿರಾಕರಿಸಿದ್ದರು. ಹೀಗಾಗಿ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಸಮ್ಮುಖದಲ್ಲಿ ಕೈಸರ್ ಆರ್ಜೆಡಿ ಸೇರ್ಪಡೆಯಾಗಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ತೇಜಸ್ವಿ ಯಾದವ್, ಕೈಸರ್ ಜಿ ಇಂದು ಇಲ್ಲಿದ್ದಾರೆ ಮತ್ತು ಪಕ್ಷಕ್ಕೆ ಸೇರಲು ನಿರ್ಧರಿಸಿದ್ದಾರೆ. ಅವರಿಗೆ ರಾಜಕೀಯದಲ್ಲಿ ಸುದೀರ್ಘ ಅನುಭವವಿದೆ. ಅವರ ಸೇರ್ಪಡೆ ಪಕ್ಷವನ್ನು ಬಲಪಡಿಸುತ್ತದೆ ಎಂದು ನಾನು ನಂಬುತ್ತೇನೆ. ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ, ಅವರ ನಿರ್ಧಾರವು ದೇಶ, ಬಿಹಾರದ ಪರವಾಗಿದೆ ಮತ್ತು ಪ್ರಜಾಪ್ರಭುತ್ವವನ್ನು ಉಳಿಸುವ ನಿಟ್ಟಿನಲ್ಲಿದೆ ಎಂದು ಹೇಳಿದ್ದಾರೆ.
ಕೈಸರ್ ಪಶುಪತಿ ನಾಥ್ ಪಾರಸ್ ನೇತೃತ್ವದ ಎನ್ಡಿಎ ಭಾಗವಾಗಿದ್ದರು. ಆದರೆ ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟವು ಪಾರಸ್ ಬಣಕ್ಕೆ ಯಾವುದೇ ಸ್ಥಾನಗಳನ್ನು ನೀಡದ ಕಾರಣ ಅವರು ಇತ್ತೀಚೆಗೆ ತಮ್ಮ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.
ಮತ್ತೊಂದೆಡೆ, ಎನ್ಡಿಎ ಚಿರಾಗ್ ಪಾಸ್ವಾನ್ ನೇತೃತ್ವದ ಬಣಕ್ಕೆ ಹಾಜಿಪುರ್, ಜಮುಯಿ, ವೈಶಾಲಿ, ಸಮಸ್ತಿಪುರ್ ಮತ್ತು ಖಗಾರಿಯಾ ಕ್ಷೇತ್ರಗಳಲ್ಲಿ ಐದು ಟಿಕೆಟ್ಗಳನ್ನು ನೀಡಿದೆ. ಖಗಾರಿಯಾದಿಂದ ಸ್ಪರ್ಧಿಸುವ ಬಗ್ಗೆ ಕೈಸರ್ ಈ ಹಿಂದೆ ಚಿರಾಗ್ ಪಾಸ್ವಾನ್ ಅವರೊಂದಿಗೆ ಮಾತನಾಡಿದ್ದರು. ಆದರೆ, ಚಿರಾಗ್ ರಾಜೇಶ್ ವರ್ಮಾಗೆ ಟಿಕೆಟ್ ನೀಡಿದ್ದರಿಂದ ಒಪ್ಪಂದವು ಮುರಿದು ಬಿದ್ದಿತ್ತು. ಬಿಹಾರದಲ್ಲಿ ತಾನು ಸ್ಪರ್ಧಿಸುತ್ತಿರುವ 23 ಲೋಕಸಭಾ ಸ್ಥಾನಗಳಲ್ಲಿ ಒಂದನ್ನು ಹೊರತುಪಡಿಸಿ ಉಳಿದೆಲ್ಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಆರ್ಜೆಡಿ, ಚುನಾವಣೆಯಲ್ಲಿ ಕೈಸರ್ ಅವರನ್ನು ಕಣಕ್ಕಿಳಿಸಲಿದೆಯೇ ಎಂದು ಕಾದು ನೋಡಬೇಕಿದೆ.
ಇದನ್ನು ಓದಿ: ಬಿಜೆಪಿ ಇನ್ನು ಮುಂದೆ ರಾಜಕೀಯ ಪಕ್ಷವಲ್ಲ, ನರೇಂದ್ರ ಮೋದಿಯನ್ನು ಆರಾಧಿಸುವ ‘ಪಂಥ’: ಪಿ ಚಿದಂಬರಂ