Homeಮುಖಪುಟಲೋಕಸಭಾ ಚುನಾವಣೆ: ತಮಿಳುನಾಡಿನಲ್ಲಿ ಪ್ರತ್ಯೇಕ ಮತಗಟ್ಟೆಗೆ ಬೇಡಿಕೆ ಇಟ್ಟ ದಲಿತರು

ಲೋಕಸಭಾ ಚುನಾವಣೆ: ತಮಿಳುನಾಡಿನಲ್ಲಿ ಪ್ರತ್ಯೇಕ ಮತಗಟ್ಟೆಗೆ ಬೇಡಿಕೆ ಇಟ್ಟ ದಲಿತರು

ಪ್ರಬಲ ಜಾತಿಯವರು ಅವಕಾಶ ಸಿಕ್ಕಾಗಲೆಲ್ಲ ದಾಳಿ ನಡೆಸುವ ತಂತ್ರ ಹೆಣೆಯುತ್ತಿದ್ದಾರೆ. ಇದರಿಂದ ನಾವು ಭಯಭೀತರಾಗಿದ್ದೇವೆ ಎಂದ ಗ್ರಾಮಸ್ಥರು

- Advertisement -
- Advertisement -

ಮೇಲ್ಪತಿ ಗ್ರಾಮದ ದಲಿತರ ವಸತಿ ಪ್ರದೇಶದಲ್ಲಿ ವಾಸಿಸುವ 450 ಕ್ಕೂ ಹೆಚ್ಚು ಮತದಾರರು ಈಗಿರುವ ಮತಗಟ್ಟೆಗೆ ಹೋಗಲು ಜಾತಿ ಹಿಂದೂ ಪ್ರದೇಶವನ್ನು ಪ್ರವೇಶಿಸುವ ಭಯದಿಂದ ಪ್ರತ್ಯೇಕ ಮತಗಟ್ಟೆಗೆ ಒತ್ತಾಯಿಸಿದ್ದಾರೆ. ಏಪ್ರಿಲ್ 2023 ರಲ್ಲಿ, ಗ್ರಾಮದ ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ಪ್ರವೇಶಿಸಿದ್ದಕ್ಕಾಗಿ ಹಲವಾರು ದಲಿತ ನಿವಾಸಿಗಳ ಮೇಲೆ ದೈಹಿಕ ಹಲ್ಲೆ ಮತ್ತು ಅವಾಚ್ಯ ಶಬ್ದಗಳಿಂದ ನಿಂದಿಸಲಾಯಿತು.

ತಮಿಳುನಾಡಿನ ಮೇಲ್ಪತಿ ಗ್ರಾಮದ 450ಕ್ಕೂ ಹೆಚ್ಚು ದಲಿತ ಮತದಾರರು ತಮಗೆ ಲೋಕಸಭಾ ಚುನಾವಣೆಯಲ್ಲಿ ಮತ ಚಲಾಯಿಸಲು ಪ್ರತ್ಯೇಕ ಮತಗಟ್ಟೆ ನೀಡುವಂತೆ ಒತ್ತಾಯಿಸಿದ್ದಾರೆ.

2023ರ ಏಪ್ರಿಲ್‌ನಲ್ಲಿ ಗ್ರಾಮದ ದ್ರೌಪದಿ ಅಮ್ಮನ್ ದೇವಸ್ಥಾನಕ್ಕೆ ದಲಿತರು ಪ್ರವೇಶಿಸಿದ್ದಕ್ಕಾಗಿ, ಅವರ ಮೇಲೆ ಹಲ್ಲೆ, ಜಾತಿ ನಿಂದನೆ ನಡೆದಿತ್ತು. ಹೀಗಾಗಿ, ಈಗ ಮತ ಚಲಾಯಿಸಲು ಗ್ರಾಮದ ಒಳಗೆ ಹೋದರೆ, ಮತ್ತೆ ಪ್ರಬಲ ಜಾತಿಗರು ಹಲ್ಲೆ ನಡೆಸಬಹುದು ಎಂಬ ಭಯ ದಲಿತರನ್ನು ಕಾಡುತ್ತಿದೆ.

ಶುಕ್ರವಾರ ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ದಲಿತರು, ”ಪ್ರಬಲ ಜಾತಿಯವರು ಅವಕಾಶ ಸಿಕ್ಕಾಗಲೆಲ್ಲ ನಮ್ಮ ಮೇಲೆ ದಾಳಿ ನಡೆಸುವ ತಂತ್ರ ಹೆಣೆಯುತ್ತಿದ್ದಾರೆ. ಇದರಿಂದ ನಾವು ಭಯಭೀತರಾಗಿದ್ದೇವೆ. ಗ್ರಾಮದಲ್ಲಿ ಮತಗಟ್ಟೆಯು ಪ್ರಬಲ ಜಾತಿಗರಿರುವ ಪ್ರದೇಶದಲ್ಲಿದೆ. ಮತದಾನದ ದಿನ ನಾವು ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ. ಹೀಗಾಗಿ, ನಮಗೆ ಮತ ಚಲಾಯಿಸಲು ಪ್ರತ್ಯೇಕ ಮತಗಟ್ಟೆ ಬೇಕು” ಎಂದು ಒತ್ತಾಯಿಸಿದ್ದಾರೆ.

“ನಾವು ಪ್ರತ್ಯೇಕ ಮತಗಟ್ಟೆ ಕೇಳುತ್ತಿರುವುದು ಭಯದಿಂದಲ್ಲ. ಆದರೆ, ನಮ್ಮ ಆತ್ಮಗೌರವ ಮತ್ತು ಘನತೆಯನ್ನು ಕಾಪಾಡುವುದಕ್ಕಾಗಿ. ಒಂದು ವರ್ಷದ ಹಿಂದೆ, ದೇವಸ್ಥಾನಕ್ಕೆ ಪ್ರವೇಶಿಸಿದ ಕಾರಣಕ್ಕೆ ಪ್ರಬಲ ಜಾತಿಗರು ಅಟ್ಟಿಸಿಕೊಂಡು ಬಂದು ಹಲ್ಲೆ ನಡೆಸಿದ್ದರು. ನಂತರ, ನಾವು ಅವರಿಂದ ದೂರ ಉಳಿದಿದ್ದೇವೆ” ಎಂದು ಗ್ರಾಮದ ದಲಿತ ನಿವಾಸಿಯೊಬ್ಬರು ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

“ಪ್ರಬಲ ಜಾತಿಯವರು ನಮ್ಮನ್ನು ಕೃಷಿ ಕಾರ್ಮಿಕರಾಗಿ ನೇಮಿಸಿಕೊಳ್ಳುವುದನ್ನೂ ನಿಲ್ಲಿಸಿದ್ದಾರೆ. ನಮ್ಮ ಮೇಲಿನ ಹಿಂಸಾಚಾರ ಮತ್ತು ಜಾತಿ ತಾರತಮ್ಯಕ್ಕಾಗಿ ಬಲಿಷ್ಠ ಜಾತಿಯವರಲ್ಲಿ ಯಾರನ್ನೂ ಈವರೆಗೆ ಬಂಧಿಸಿಲ್ಲ. ಘಟನೆಯನ್ನು ನಿಭಾಯಿಸುವಲ್ಲಿ ಸರ್ಕಾರದ ನಿಷ್ಕ್ರಿಯತೆ ಮತ್ತು ಪೊಲೀಸರ ನಿರಾಸಕ್ತಿ ತೋರಿದ್ದಾರೆ. ಹೀಗಾಗಿ, ಮತದಾನದ ದಿನದಂದು ಆಡಳಿತಗಳು ಒದಗಿಸಿದ ಭದ್ರತೆಯ ಬಗ್ಗೆ ನಮಗೆ ಅಪನಂಬಿಕೆ ಇದೆ. ನಾವು ಮತ್ತೆ ಅದೇ ನೋವನ್ನು ಅನುಭವಿಸಲು ಚುನಾವಣೆ ಕಾರಣವಾಗಬಾರದು” ಎಂದು ಅವರು ತಿಳಿಸಿದ್ದಾರೆ.

“ಹೊಸ ಬೂತ್ ಸ್ಥಾಪಿಸಲು ಸಾಧ್ಯವಾಗದಿದ್ದರೆ, ನಾವು ಜಿಲ್ಲಾಕೇಂದ್ರದಲ್ಲಿಯೇ ಮತ ಚಲಾಯಿಸುತ್ತೇವೆ. ಮತದಾನದ ದಿನ ಅಲ್ಲಿಗೆ ಹೋಗಲು ನಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತೇವೆ. ಕೇವಲ ದೇವಸ್ಥಾನವನ್ನು ಪ್ರವೇಶಿಸಿದ್ದಕ್ಕಾಗಿ ನಾವು ಅವಮಾನಕ್ಕೊಳಗಾದ ಊರಿಗೆ (ಜಾತಿ ಹಿಂದೂ ಪ್ರದೇಶ) ನಾವು ಹೋಗುವುದಿಲ್ಲ” ಎಂದು ಗ್ರಾಮದ ದಲಿತ ಮುಖಂಡರು ಹೇಳಿದ್ದಾಗಿ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.

ಮೇಲ್ಪತಿ ಗ್ರಾಮದ ದಲಿತರು ಪ್ರತ್ಯೇಕ ಮತಗಟ್ಟೆಗಾಗಿ ಪ್ರಸ್ತಾಪಿಸಿದ್ದಾರೆ. ಆದರೆ, ಮತದಾರರ ಸಂಖ್ಯೆ 1,500ಕ್ಕಿಂತ ಹೆಚ್ಚಿದ್ದರೆ ಮಾತ್ರ ಬೂತ್ ಹಂಚಿಕೆ ಮಾಡಬಹುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸಮಸ್ಯೆಗೆ ಪ್ರತಿಕ್ರಿಯಿಸಿದರುವ ಜಿಲ್ಲಾಧಿಕಾರಿ ಪಳನಿ, “ನಾವು ಮೇಲ್ಪತಿ ಗ್ರಾಮದ ಮತಗಟ್ಟೆಯನ್ನು ನಿರ್ಣಾಯಕ/ದುರ್ಬಲ ಮತಗಟ್ಟೆ ಎಂದು ಗುರುತಿಸಿದ್ದೇವೆ. ಸಿಆರ್‌ಪಿಎಫ್ ಸಿಬ್ಬಂದಿಯಿಂದ ವಿಶೇಷ ರಕ್ಷಣೆ, ಲೈವ್ ವೆಬ್‌ಕ್ಯಾಮ್ ಕಾಸ್ಟಿಂಗ್, ರಾಜ್ಯ ಪೊಲೀಸ್ ಪಡೆ ಮತ್ತು ಮೈಕ್ರೋ ಅಬ್ಸರ್ವರ್‌ಗಳನ್ನು ನಿಯೋಜಿಸುತ್ತೇವೆ. ದಲಿತರು ಶಾಂತಿಯಿಂದ ಮತ ಚಲಾಯಿಸಬಹುದು. ಯಾವುದೇ ಅನಾಹುತ ಸಂಭವಿಸದಂತೆ ನೋಡಿಕೊಳ್ಳಲಾಗುವುದು. ಇದಲ್ಲದೆ, ಚುನಾವಣೆಯ ದಿನದಂದು ದಲಿತರೊಂದಿಗೆ ಜಗಳವಾದಲ್ಲಿ ಪ್ರಬಲ ಜಾತಿಗರಿಗೆ ಕಠಿಣ ಪೊಲೀಸ್ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದೇವೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ : ‘ಭಾರತದ ಭೂಮಿಯನ್ನು ಬಾಂಗ್ಲಾಕ್ಕೆ ಕೊಟ್ಟ ಮೋದಿ..’; ಬಿಜೆಪಿ ವಿರುದ್ಧ ಫಾರೂಕ್ ಅಬ್ದುಲ್ಲಾ ವಾಗ್ದಾಳಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...