ಕೋಲಾರ ಜಿಲ್ಲೆಯಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪವೆಸಗಿದ ಹಿನ್ನೆಲೆ ಕಾಮಸಮುದ್ರ ಪೊಲೀಸ್ ವೃತ್ತ ನಿರೀಕ್ಷಕ ಪಿ.ಜೆ.ಮಧುಕರ್ನ್ನು ಅಮಾನತುಗೊಳಿಸಿ ಕೇಂದ್ರ ವಲಯ ಐಜಿಪಿ ರವಿಕಾಂತೇಗೌಡ ಭಾನುವಾರ ಆದೇಶ ಹೊರಡಿಸಿದ್ದಾರೆ.
ಜೂನ್ 27ರಂದು ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೋಡಗುರ್ಕಿ ಗ್ರಾಮದಲ್ಲಿ ಮರ್ಯಾದಾ ಹತ್ಯೆ ನಡೆದಿತ್ತು. ಮರ್ಯಾದಾ ಹತ್ಯೆ ಪ್ರಕರಣದ ತನಿಖೆಯಲ್ಲಿ ಸಿಪಿಐ ಲೋಪವೆಸಗಿದ್ದರು. ಹಾಗಾಗಿ ಇದೀಗ ಐಜಿಪಿ ಆದೇಶ ಹೊರಡಿಸಿದ್ದು, ಕಾಮಸಮುದ್ರ ಸಿಪಿಐ ಮಧುಕರ್ ಅಮಾನತುಗೊಳಿಸಲಾಗಿದೆ.
ಏನಿದು ಘಟನೆ?
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೋಡಗುರ್ಕಿ ಗ್ರಾಮದಲ್ಲಿ, ದಲಿತ ಸಮುದಾಯಕ್ಕೆ ಸೇರಿದ ಯುವಕನನ್ನು ತನ್ನ ಮಗಳು ಪ್ರೀತಿಸಿದಳು ಎನ್ನುವ ಏಕೈಕ ಕಾರಣಕ್ಕೆ ತಂದೆಯೇ ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದ ಅಮಾನುಷ ಮರ್ಯಾದೆಗೇಡು ಹತ್ಯೆ ನಡೆದಿತ್ತು. ಪ್ರೇಯಸಿಯ ಸಾವಿನ ಸುದ್ದಿ ತಿಳಿದ ಪ್ರಿಯಕರ ರೈಲಿನ ಹಳಿಗೆ ತಲೆ ಕೊಟ್ಟು ಆತನೂ ಸಾವಿಗೀಡಾದ ಹೃದಯವಿದ್ರಾವಕ ಘಟನೆ ನಡೆದಿತ್ತು.
ಬೋಡಗುರ್ಕಿ ಗ್ರಾಮದ ದಲಿತ ಸಮುದಾಯಕ್ಕೆ ಸೇರಿದ ಯುವಕ ಗಂಗಾಧರ (23) ಮತ್ತು ಗೊಲ್ಲ ಸಮುದಾಯಕ್ಕೆ ಸೇರಿದ ಕೀರ್ತಿ (20) ಪರಸ್ಪರ ಪ್ರೀತಿಸುತ್ತಿದ್ದರು. ದಲಿತ ಸಮುದಾಯದ ಹುಡುಗನನ್ನು ಮಗಳು ಪ್ರೀತಿಸಿದ್ದಾಳೆ ಎನ್ನುವ ಕಾರಣಕ್ಕೆ ಕುಪಿತಗೊಂಡ ಹೀನ ಜಾತಿವಾದಿ ಮನಸ್ಥಿತಿಯ ತಂದೆ ಕೃಷ್ಣಮೂರ್ತಿ ಜೂನ್ 26ರಂದು ಮಗಳ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ವಿಷಯ ತಿಳಿದ ಯುವಕ ಜೂನ್ 27ರಂದು ಬಂಗಾರಪೇಟೆ ಬಳಿಯ ಪುರ ಎಂಬಲ್ಲಿ ಮೈಸೂರು-ಚೆನ್ನೈ ಎಕ್ಸ್ಪ್ರೆಸ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಘಟನೆಗೆ ಸಂಬಂಧಿಸಿದಂತೆ ಕೃಷ್ಣಮೂರ್ತಿಯನ್ನು ಬಂಧಿಸಿದ್ದು ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.
ಕೊಲೆಯಾದ ಕೀರ್ತಿ ಕೆಜಿಎಫ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ಓದುತ್ತಿದ್ದಳು. ಇನ್ನು ದ್ವಿತೀಯ ಪಿಯುಸಿ ಅನುತ್ತೀರ್ಣನಾಗಿದ್ದ ಗಂಗಾಧರ, ತಮಟೆ ಬಾರಿಸುವ ಕಲಾವಿದನಾಗಿದ್ದು ಜೊತೆಗೆ ಗಾರೆ ಕೆಲಸ ಮಾಡುತ್ತಿದ್ದನು. ಅವರಿಬ್ಬರ ಮನೆಗಳು ಒಂದೇ ಬೀದಿಯಲ್ಲಿವೆ. ಬಾಳಿ ಬದುಕಬೇಕಾದ ಎರಡು ಅಮೂಲ್ಯ ಜೀವಗಳು ಕ್ರೂರ ಜಾತಿವ್ಯವಸ್ಥೆಗೆ ಬಲಿಯಾದವು ಎರಡು ಮನೆಗಳಲ್ಲಿ ನೀರವ ಮೌನ ಆವರಿಸಿದೆ. ಹುಡುಗಿಯ ಮನೆಯಲ್ಲಿ ಕೊಲೆಗೆ ಸಮರ್ಥನೆಗಳನ್ನು ಹುಡುಕುತ್ತ ಮನಸ್ಸುಗಳು ಗಲಿಬಿಲಿಗೊಂಡಿವೆ. ತಮ್ಮದಲ್ಲದ ತಪ್ಪಿಗೆ ಮನೆಮಗನನ್ನು ಕಳೆದುಕೊಂಡ ಗಂಗಾಧರನ ಮನೆಯಲ್ಲಿ ದುಃಖ ಮಡುಗಟ್ಟಿದೆ.
ಇದನ್ನೂ ಓದಿ: ಕೋಲಾರ ಮರ್ಯಾದೆಗೇಡು ಹತ್ಯೆ: ಬೆಚ್ಚಿಬೀಳಿಸಿದ ಹೀನಕೃತ್ಯ