ಹಿರಿಯ ಜನಪರ ಹೋರಾಟಗಾರ, ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿಯವರು (74) ಗುರುವಾರ ರಾತ್ರಿ ಹೃದಯಾಘಾತದಿಂದ ಕೊಪ್ಪಳದ ಭಾಗ್ಯನಗರದ ಅವರ ನಿವಾಸದಲ್ಲಿ ನಿಧನ ಹೊಂದಿದ್ದಾರೆ.
ಸಾಹಿತಿಗಳಾಗಿ ತಮ್ಮ ನೇರ ನಿಷ್ಠುರ ಬರವಣಿಗೆಗಳ ಮೂಲಕ ತುಳಿತಕ್ಕೊಳಗಾದವರ ಪರವಾಗಿ ದನಿಯೆತ್ತುತ್ತಿದ್ದ ಅವರು ಪತ್ರಕರ್ತರಾಗಿಯೂ, ಅಂಕಣಕಾರರಾಗಿಯೂ ದುಡಿದಿದ್ದರು. ದಶಕಗಳ ಕಾಲ ಕೊಪ್ಪಳದ ಎಲ್ಲಾ ಜನಪರ ಹೋರಾಟಗಳ ದನಿಯಾಗಿದ್ದ ಅವರು, ತುಂಗಭದ್ರಾ ಜಲಾಶಯದ ಹೂಳಿನ ವಿಚಾರ, ಕೈಗಾರಿಕೆಗಳ ಕಾರ್ಮಿಕರ ಶೋಷಣೆಯ ವಿಚಾರ ಸೇರಿದಂತೆ ನೊಂದವರ ಪರ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆಯುತ್ತಿದ್ದರು. ಸುದೀರ್ಘ ಹೋರಾಟಮಯ ಜೀವನವೇ ಅವರದಾಗಿತ್ತು. ಮಾನವ ಹಕ್ಕುಗಳ ಹೋರಾಟಗಾರರಾಗಿದ್ದ ಅವರು ಸದಾ ನೂರಾರು ಸತ್ಯಶೋಧನಾ ತಂಡಗಳಲ್ಲಿ ತೊಡಗಿಸಿಕೊಂಡಿದ್ದರು.
ಬಡತನದಲ್ಲಿಯೇ ಜೀವನ ಸವೆಸಿದ ಹಿರಿಯ ಚೇತನ ವಿಠ್ಠಪ್ಪ ಗೋರಂಟ್ಲಿ ಅವರು ನೇಕಾರಿಕೆಯನ್ನು ಮಾಡಿದರು. ನೇಕಾರರನ್ನು ಸಂಘಟಿಸಿ ಅವರ ಸಮಸ್ಯೆಗಳ ಕುರಿತು ಸರ್ಕಾರದ ಮಟ್ಟದಲ್ಲಿಯೂ ಧ್ವನಿ ಎತ್ತಿದ್ದರು. ಜುಲೈ 19 ರಂದು ಮಾರ್ಯಾದೇಗೇಡು ಹತ್ಯೆಗಳ ವಿರುದ್ಧ ನಡೆದ ಕೊಪ್ಪಳ ಚಲೋ ಹೋರಾಟದಲ್ಲಿಯೂ ಅವರು ಪಾಲ್ಗೊಂಡು ಜಿಲ್ಲಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
20ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಇವರ ಸಮಗ್ರ ಸಾಹಿತ್ಯ ಸೇವೆ ಪರಿಗಣಿಸಿ ರಾಜ್ಯ ಸರ್ಕಾರವು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಅಕಾಡಮಿ ಪ್ರಶಸ್ತಿ ನೀಡಿ ಗೌರವಿಸಿತ್ತು. ಇದಲ್ಲದೇ ನೂರಾರು ಸಂಘ ಸಂಸ್ಥೆಗಳು ಇವರ ಜೀವನ ಸಾಧನೆಗೆ, ಜನ ಸೇವೆಗೆ ಸನ್ಮಾನಿಸಿ ಗೌರವಿಸಿದವು.
ವಿಠ್ಠಪ್ಪ ಗೋರಂಟ್ಲಿಯವರ ನಿಧನಕ್ಕೆ ರಾಜ್ಯದ ಸಾವಿರಾರು ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ನರಗುಂದ ಹೋರಾಟ ಮುಗಿಸಿ ತೆರಳುತ್ತಿದ್ದಾಗ ಅಪಘಾತ: ಹಿರಿಯ ರೈತ ಮುಖಂಡರಾದ ಜಿ.ಟಿ ರಾಮಸ್ವಾಮಿ, ರಾಮಣ್ಣ ನಿಧನ