ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ (ಕೆಸಿಆರ್) ಎನ್ಡಿಎ ಮೈತ್ರಿಕೂಟ ಸೇರಲು ಪ್ರಯತ್ನಿಸಿದ್ದರು ಆದರೆ ಅವರ ಬೇಡಿಕೆಯನ್ನು ತಿರಸ್ಕರಿಸಲಾಗಿತ್ತು ಎಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ನಾಯಕ ಕೆಟಿ ರಾಮರಾವ್ ಟೀಕಿಸಿದ್ದಾರೆ.
ಪ್ರಧಾನಿಯವರ ಹೇಳಿಕೆಗೆ ತಿರುಗೇಟು ನೀಡಿದ ಕೆಟಿಆರ್, ಬಿಜೆಪಿ ಈಗಾಗಲೇ ಪ್ರಮುಖ ಮಿತ್ರಪಕ್ಷಗಳನ್ನು ಕಳೆದುಕೊಂಡಿದೆ, ಈಗ ಬಿಜೆಪಿಯ ಜೊತೆ ಕೇವಲ ಸಿಬಿಐ, ಇಡಿ ಮತ್ತು ಐಟಿ ಮಾತ್ರ ಉಳಿದಿದೆ ಎಂದು ಹೇಳಿದ್ದಾರೆ.
ನಿಜಾಮಾಬಾದ್ನಲ್ಲಿ ಪ್ರಧಾನಿ ಮೋದಿಯವರ ರ್ಯಾಲಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಆರ್ಎಸ್ ನಾಯಕ ಕೆಟಿ ರಾಮರಾವ್, ಬಿಜೆಪಿಗೆ ಸೇರ್ಪಡೆಗೊಂಡ ನಾಯಕರ ವಿರುದ್ಧದ ಪ್ರಕರಣಗಳನ್ನು ತನಿಖೆ ಮಾಡುತ್ತಿಲ್ಲ ಎಂದು ಹೇಳಿದ್ದಾರೆ.
ಎನ್ಡಿಎ ಜೊತೆ ಮೈತ್ರಿಗೆ ಬಿಆರ್ಎಸ್ ನಾಯಕರಿಗೆ ಹುಚ್ಚು ನಾಯಿ ಕಚ್ಚಿದೆಯೇ? ಈ ಪ್ರಧಾನಿ ಅಸಮಂಜಸವಾಗಿ ಮಾತನಾಡುತ್ತಾರೆ. ಅವರು ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಬಿಆರ್ಎಸ್ ಹಣ ನೀಡಿದ್ದಾರೆ ಮತ್ತು ಅದಕ್ಕಾಗಿ ಎನ್ಡಿಎಗೆ ಅವಕಾಶ ನೀಡಿಲ್ಲ ಎಂದು ಹೇಳುತ್ತಾರೆ. ನಾವು ಎನ್ಡಿಎಗೆ ಸೇರಲು ನಮಗೆ ಹುಚ್ಚು ನಾಯಿ ಕಚ್ಚಿದೆಯೇ? ಇಂದು ಶಿವಸೇನೆ, ಜೆಡಿಯು, ಟಿಡಿಪಿ, ಶಿರೋಮಣಿ ಅಕಾಲಿ ದಳ ಸೇರಿದಂತೆ ಹಲವು ಪಕ್ಷಗಳು ಬಿಜೆಪಿ ತೊರೆದಿದ್ದಾರೆ. ನಿಮ್ಮೊಂದಿಗೆ ಯಾರು ಇದ್ದಾರೆ? ಸಿಬಿಐ, ಇಡಿ ಮತ್ತು ಐಟಿ ಹೊರತುಪಡಿಸಿ ನಿಮ್ಮ ಬಳಿ ಯಾರಿದ್ದಾರೆ ಎಂದು ತೆಲಂಗಾಣ ಸಚಿವರು ಪ್ರಧಾನಿಗೆ ಪ್ರಶ್ನಿಸಿದ್ದಾರೆ.
ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ನಂತರ ಎನ್ಡಿಎ ಸೇರಲು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಬಯಸಿದ್ದರು. ಆದರೆ ನಾವು ಅವರ ಮನವಿಯನ್ನು ತಿರಸ್ಕರಿಸಿದ್ದೇವೆ ಎಂದು ಹೇಳಿದ್ದರು.
ಇದನ್ನು ಓದಿ: ತನಿಖಾ ಸಂಸ್ಥೆ ಪ್ರತೀಕಾರ ತೀರಿಸಿಕೊಳ್ಳಲು ಸಾಧ್ಯವಿಲ್ಲ’: ED’ಗೆ ಸುಪ್ರೀಂ ಛೀಮಾರಿ