Homeಪುಸ್ತಕ ವಿಮರ್ಶೆಪ್ರಾದೇಶಿಕ ನಿಘಂಟು ಮತ್ತು ಬಹುತ್ವ

ಪ್ರಾದೇಶಿಕ ನಿಘಂಟು ಮತ್ತು ಬಹುತ್ವ

- Advertisement -
- Advertisement -

ವ್ಯಂಗ್ಯಚಿತ್ರ ಕಲಾವಿದರಾದ ಪಂಜು ಗಂಗೊಳ್ಳಿ ಅವರ ಮುಖ್ಯ ಸಂಪಾದಕತ್ವದಲ್ಲಿ, ಸಿ.ಎ. ಪೂಜಾರಿ ಹಾಗೂ ರಾಮಚಂದ್ರ ಉಪ್ಪುಂದ ಅವರು ಸಂಪಾದಿಸಿರುವ ನಿಘಂಟು ಇದು. ಹಿರಿಯ ಪತ್ರಕರ್ತರಾದ ರಾಜಾರಾಮ ತಲ್ಲೂರರ ಕುಟುಂಬ ಟ್ರಸ್ಟಿನ ನೆರವಿನಿಂದ ಪ್ರಕಟವಾಗಿದೆ. ಅಂತಾರಾಷ್ಟ್ರೀಯ ಕಲಾವಿದರಾದ ಟಿ.ಎನ್. ತಲ್ಲೂರರು ಇದರ ಮುಖಪುಟ ರಚಿಸಿದ್ದಾರೆ. ಈ ನಿಘಂಟು ಬಹಳ ಅಚ್ಚುಕಟ್ಟಾಗಿ ಪ್ರಕಟವಾಗಿದೆ. ಸುಮಾರು ಏಳುನೂರು ಪುಟಗಳ ಈ ನಿಘಂಟು, ಮೊದಲನೇ ಭಾಗದಲ್ಲಿ ಶಬ್ದಕೋಶವನ್ನು ಎರಡನೆಯ ಭಾಗದಲ್ಲಿ ನುಡಿಗಟ್ಟು-ಗಾದೆಗಳನ್ನು ಒಳಗೊಂಡಿದೆ. ಈ ನಿಘಂಟು ಶೈಕ್ಷಣಿಕ ಸಾಂಸ್ಕೃತಿಕ ಮತ್ತು ರಾಜಕೀಯ ಮಹತ್ವವನ್ನು ಹೊಂದಿದೆ.

ಈಚೆಗೆ ವಿಧಾನಸಭೆಯ ಸ್ಪೀಕರ್ ಆದ ಯು.ಟಿ. ಖಾದರ್ ಅವರ ಕನ್ನಡದ ಬಗ್ಗೆ ಚರ್ಚೆಯಾಯಿತು. ಅದರಲ್ಲಿ ಅವರು ತಮ್ಮ ಕನ್ನಡ ಸರಿಪಡಿಸಿಕೊಳ್ಳಬೇಕೆಂದೂ, ಅವರ ಕನ್ನಡ ತುಳುಗನ್ನಡವಾಗಿದ್ದು ಅವರು ಸರಿಪಡಿಸಿಕೊಳ್ಳಬೇಕಾದ್ದು ಕನ್ನಡದ ಉಚ್ಛಾರಣೆಯನ್ನು ಮಾತ್ರ ಎಂದೂ ಎರಡು ಅಭಿಪ್ರಾಯಗಳು ವ್ಯಕ್ತವಾದವು. ಇವುಗಳ ಜತೆ ನಿರ್ದಿಷ್ಟ ಕನ್ನಡವನ್ನು ಮಾತ್ರ ಶುದ್ಧ ಮತ್ತು ಪ್ರಮಾಣವೆಂದು ಭಾವಿಸಿ, ಕರ್ನಾಟಕದ ಬೇರೆಬೇರೆ ಕನ್ನಡಗಳನ್ನು ನಿರಾಕರಿಸುವ ಅಧಿಕಾರಸ್ಥ ಧೋರಣೆಯನ್ನು ಪ್ರಶ್ನಿಸುವ ಅಭಿಪ್ರಾಯವೂ ಪ್ರಕಟವಾಯಿತು. ಕನ್ನಡದ ವಿವಿಧ ರೂಪಗಳ (ಕವಿರಾಜಮಾರ್ಗಕಾರ ಇವನ್ನು ಕನ್ನಡಂಗಳ್ ಎಂದು ಕರೆಯುತ್ತಾನೆ) ಅಸ್ಮಿತೆಯನ್ನು, ಅವುಗಳ ಸ್ವಾತಂತ್ರ್ಯ ಮತ್ತು ಹಕ್ಕುದಾರಿಕೆಯನ್ನು ಇದು ಪ್ರತಿಪಾದಿಸಿತು.

ಪಂಜು ಗಂಗೊಳ್ಳಿ

ಈ ಹಿನ್ನೆಲೆಯಲ್ಲಿ ಕನ್ನಡದ ವಿವಿಧ ರೂಪಗಳ ಸಾಂಸ್ಕೃತಿಕ ವೈವಿಧ್ಯ, ವಿಶಿಷ್ಟತೆ ಮತ್ತು ಹಕ್ಕುದಾರಿಕೆಗಳ ಭಾಗವಾಗಿ ಪ್ರಕಟವಾಗಿರುವ ವಿವಿಧ ನಿಘಂಟುಗಳನ್ನು ಗಮನಿಸಬಹುದು. ಇವುಗಳಲ್ಲಿ ಮುದೇನೂರ ಸಂಗಣ್ಣನವರ ಚಿಗಟೇರಿ ಪದಕೋಶ, ದೇಶಾಂಶ ಹುಡಗಿಯವರು ಬೀದರ ಕನ್ನಡ ನಿಘಂಟು, ಅರೆಭಾಷೆಯ ನಿಘಂಟು, ಪ್ರೊ. ಸುಧಾಕರ ಅವರ ಜನಪದ ನುಡಿಗಟ್ಟುಕೋಶಗಳು ಸೇರುತ್ತವೆ. ಕರ್ನಾಟಕದ ಜನಭಾಷೆಗಳಾದ ತುಳು ಬ್ಯಾರಿ ಕೊಡವ ಹವ್ಯಕ ಭಾಷೆಯ ಕೋಶಗಳೂ ಸೇರುತ್ತವೆ. ಇವೆಲ್ಲವೂ ಕನ್ನಡ ಭಾಷೆ ಮತ್ತು ಕರ್ನಾಟಕದ ಭಾಷೆಗಳು ಬೇರೆಬೇರೆ ಕ್ಷೇತ್ರಗಳಲ್ಲಿ ತಮ್ಮ ಶಬ್ದಸಂಪತ್ತನ್ನು, ನುಡಿಗಟ್ಟುಗಳನ್ನು ಪಡೆದುಕೊಂಡ ನಿದರ್ಶನಗಳು.

ಈ ದೃಷ್ಟಿಯಿಂದ ಕುಂದಾಪ್ರ ನಿಘಂಟಿನ ಎರಡನೇ ಭಾಗವು ಬಹಳ ಮಹತ್ವದ್ದು ಎನಿಸುತ್ತದೆ. ಇದರಲ್ಲಿ ನುಡಿಗಟ್ಟುಗಳನ್ನು ಮಾತ್ರ ಕೊಟ್ಟಿಲ್ಲ. ಅವುಗಳ ಬಳಕೆಯನ್ನೂ ಕೊಡಲಾಗಿದೆ. ಇವು ಕುಂದಾಪ್ರ ಕನ್ನಡದ ಚೆಲುವನ್ನು ಮಾತ್ರವಲ್ಲ, ಈ ಭಾಗದ ಜನರ ಜೀವನವಿವೇಕವನ್ನೂ ಲೋಕದೃಷ್ಟಿಯನ್ನೂ ಬಿತ್ತರಿಸುತ್ತವೆ. ಭಾಷೆಯು ಸಂಸ್ಕೃತಿಯ ವಾಹಕವಾಗುವುದಕ್ಕೆ ಇವು ಸಮರ್ಥ ಸಾಕ್ಷ್ಯಗಳಾಗಿವೆ. ಉದಾಹರಣೆಗೆ ಹೇಲು ಎಂಬುದರಿಂದ ಶುರುವಾಗುವ ನುಡಿಗಟ್ಟುಗಳನ್ನೇ ಗಮನಿಸಬಹುದು. ಜಿಪುಣನಿಗೆ ಇಲ್ಲಿ ‘ಹೇಲಿಗ್ ಉಪ್ಪ್ ಹಾಯ್ಕ ತಿಂಬನ್’ ಎಂದು ವರ್ಣಿಸಲಾಗಿದೆ. ಇದೊಂದು ಮಹಾ ಉತ್ಪ್ರೇಕ್ಷೆಯಿಂದ ಕೂಡಿದ ಕಲ್ಪನಾವಿಲಾಸದ ನುಡಿಗಟ್ಟು. ತರೀಕೆರೆ ಸೀಮೆಯಲ್ಲಿ ಜಿಪುಣರಿಗೆ ‘ಉಚ್ಚೆಯಲ್ಲಿ ಮೀನು ಹಿಡಿಯೋನು’ ಎಂದು ಹೇಳುವರು. ಇವು ಮುಜುಗರವೆನಿಸುವ ಶಬ್ದಗಳನ್ನು ಬಳಸಿದರೂ, ಇವುಗಳ ಉದ್ದೇಶ ಕಟುವಾಗಿ ಜನರ ಸ್ವಭಾವಗಳನ್ನು ವಿಮರ್ಶಿಸುವುದು. ಹಾಗಲ್ಲ ಬದುಕುವುದು ಎಂದು ಸೂಚಿಸುವುದು. ಎಂತಲೇ ಈ ನುಡಿಗಟ್ಟು ಭಾಷಿಕ ಸಮೃದ್ಧಿಯನ್ನು ಮಾತ್ರವಲ್ಲದೆ, ಬದುಕಿನ ಅರ್ಥವನ್ನೂ ಒಳಗೊಂಡಿವೆ. ಯಾವುದೇ ಮುಜುಗರವಿಲ್ಲದೆ ಮಡಿವಂತಿಕೆಯಿಲ್ಲದೆ ಸಂಪಾದಕರು ಕುಂದಾಪ್ರ ಕನ್ನಡದ ಜಗತ್ತನ್ನು ಹಿಡಿದುಕೊಟ್ಟಿದ್ದಾರೆ. ಇದಕ್ಕೆ ಕಾರಣ, ಇವರು ಕಿಟ್ಟೆಲರ ಮಾದರಿಯನ್ನು ಅನುಸರಿಸಿರುವುದು.

ಇದನ್ನೂ ಓದಿ: ’ದ ಇಂಡಿಯನ್ಸ್- ಹಿಸ್ಟರೀಸ್ ಆಫ್ ಸಿವಿಲೈಸೇಶನ್’ ಪುಸ್ತಕದ ಪರಿಚಯ ಪ್ರಬಂಧದ ಆಯ್ದ ಭಾಗ

ಇದೇ ಹೊತ್ತಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ ಹತ್ತಾರು ಸಂಪುಟಗಳಲ್ಲಿರುವ ನಿಘಂಟು ನೆನಪಿಗೆ ಬರುತ್ತದೆ. ಈ ಸಂಪುಟಗಳ ಹಿಂದಿನ ಶ್ರಮಶ್ರದ್ಧೆಗಳನ್ನು ಗೌರವಿಸುತ್ತಲೇ ಅವುಗಳಲ್ಲಿರುವ ಮಡಿವಂತಿಕೆ ಮತ್ತು ಅಖಿಲ ಕರ್ನಾಟಕತ್ವವಿಲ್ಲದ ಸಂಕುಚಿತತೆಯನ್ನು ವಿಮರ್ಶೆ ಮಾಡಬೇಕಿದೆ. ಇದನ್ನು ಸಿದ್ಧಪಡಿಸಿದವರು ಹೆಚ್ಚಾಗಿ ಶಾಸನ ಹಸ್ತಪ್ರತಿ ಗ್ರಂಥಗಳನ್ನು ಓದಿದವರು. ಸಮಾಜದ ಮೇಲ್ಜಾತಿಯ ಸ್ತರಕ್ಕೆ ಸೇರಿದವರು. ಬೆಂಗಳೂರು ಮೈಸೂರು ಭಾಗದವರು. ಹೀಗಾಗಿ ಅದು ಕನ್ನಡದ ಬೇರೆಬೇರೆ ಪ್ರದೇಶದ, ವೃತ್ತಿಯ, ಸ್ತರದ ಸಮೃದ್ಧಿಯನ್ನು ಒಳಗೊಳ್ಳಲು ಮತ್ತು ಪ್ರತಿನಿಧಿಸಲು ಸಾಧ್ಯವಾಗಲಿಲ್ಲ. ಈ ಸಂಪುಟಗಳ ತುರ್ತಾಗಿ ಪರಿಷ್ಕರಣೆ ಆಗಬೇಕಿದೆ. ಅದಕ್ಕಾಗಿ ಇಂತಹ ಪ್ರಾದೇಶಿಕವಾದ ಭಾಷಾನಿಘಂಟುಗಳಿಂದ ಪ್ರೇರಣೆ ಪಡೆಯಬೇಕಿದೆ. ಯಾಕೆಂದರೆ, ಕುಂದಾಪ್ರ ಕನ್ನಡದ ನಿಘಂಟಿಗೆ ಬೇಕಾದ ಶಬ್ದ, ನುಡಿಗಟ್ಟು ಮತ್ತು ಗಾದೆಗಳನ್ನು ಕೇವಲ ವಿದ್ವಾಂಸರಿಂದ, ಗ್ರಂಥಗಳಿಂದ ಸಂಗ್ರಹಿಸಿಲ್ಲ. ಕೋಳಿ ತಜ್ಞರ, ಯಕ್ಷಗಾನ ಕಲಾವಿದರ, ಸ್ಥಳೀಯ ದೈವಗಳ ಪಾತ್ರಿಗಳ ನೆರವನ್ನು ಕೂಡ ಪಡೆಯಲಾಗಿದೆ. ಈ ಅರ್ಥದಲ್ಲಿ ಇದು ಪ್ರದೇಶದ ವಿವಿಧ ಸಮುದಾಯಗಳನ್ನು ಪ್ರತಿನಿಧಿಸುತ್ತದೆ. ಇದೊಂದು ಡೆಮಾಕ್ರಟಿಕ್ ಕ್ರಿಯೆ.

ಕುಂದಾಪ್ರ ನಿಘಂಟನ್ನು ನೋಡುವಾಗ, ಈ ಭಾಗದ ಲೇಖಕರಲ್ಲಿ ಇಲ್ಲಿನ ಭಾಷೆಯು ಯಾವ ಬಗೆಯಲ್ಲಿ ಪ್ರಾತಿನಿಧಿತ್ವ ಪಡೆದಿದೆ ಎಂಬ ಪ್ರಶ್ನೆ ಎದುರಾಗುತ್ತದೆ. ದೇವನೂರರ ‘ಒಡಲಾಳ’ ರಾವ ಬಹಾದ್ದೂರರ ‘ಗ್ರಾಮಾಯಣ’ ಗೀತಾ ನಾಗಭೂಷಣರ ‘ಬದುಕು’, ಅಮರೇಶ ನುಗಡೋಣಿ, ರಾಜಶೇಖರ ನೀರಮಾನ್ವಿ, ಗಣೇಶ ಮೊಗಳ್ಳಿ, ಬೆಸಗರಹಳ್ಳಿ ರಾಮಣ್ಣ ಮೊದಲಾದವರ ಕಥನಸಾಹಿತ್ಯವು, ತನ್ನ ಪ್ರದೇಶದ ಭಾಷೆಯನ್ನು ಸೃಜನಶೀಲವಾಗಿ ದುಡಿಸಿಕೊಂಡ ನಿದರ್ಶನಗಳು ನಮ್ಮ ಮುಂದಿವೆ. ಇವುಗಳ ಮುಂದೆ ಕುಂದಾಪುರ ಭಾಗದಿಂದ ಬಂದ ಶಿವರಾಮ ಕಾರಂತರ ಕಾದಂಬರಿಗಳನ್ನು ನೋಡುವಾಗ, ಅವು ಕುಂದಾಪ್ರ ಕನ್ನಡವನ್ನು ದುಡಿಸಿಕೊಂಡಿಲ್ಲ ಎಂದು ಅನಿಸುತ್ತದೆ. ಕಾರಂತರ ಕಾದಂಬರಿಯ ಪಾತ್ರಗಳು ಕುಂದಾಪ್ರ ಕನ್ನಡವನ್ನು ಆಡುವುದಿಲ್ಲ ಎಂದು ಜಿ.ರಾಜಶೇಖರ್ ಕೂಡ ತಮ್ಮ ಸಂದರ್ಶನದಲ್ಲಿ ತಿಳಿಸಿದ್ದುಂಟು. ಹಾಗೆ ಕಂಡರೆ ಕಾರಂತರು ‘ಚೋಮನದುಡಿ’ ‘ಕುಡಿಯರ ಕೂಸು’ ಕಾದಂಬರಿಗಳನ್ನು ಬರೆದವರು. ವೈದೇಹಿ ಅವರ ಕತೆಗಳಲ್ಲಿ ಕುಂದಾಪ್ರ ಕನ್ನಡದ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ರೂಪವಿದೆ. ನಿಜವಾದ ಕುಂದಾಪ್ರ ಕನ್ನಡದ ವಿವಿಧ ಸ್ತರಗಳನ್ನು ದುಡಿಸಿಕೊಂಡ ಕಥನಸಾಹಿತ್ಯವು ಇನ್ನೂ ಬಂದಿಲ್ಲವೇನೊ ಅನಿಸುತ್ತದೆ. ಭಾಷೆಯನ್ನು ದುಡಿಸಿಕೊಳ್ಳುವುದು ಎಂದರೆ ಒಂದು ಪ್ರದೇಶದ ಬದುಕಿನ ವಿವಿಧ ಕ್ಷೇತ್ರ ಮತ್ತು ಸ್ತರಗಳ ಅನುಭವಲೋಕ ಮತ್ತು ಪಾತ್ರಗಳನ್ನು ಕೂಡ ಒಳಗೊಳ್ಳುವುದು. ಯಾಕೆಂದರೆ ಕುಂದಾಪ್ರ ಕನ್ನಡದಲ್ಲಿ ಜಾತಿವಾರು, ಪ್ರದೇಶವಾರು ವೃತ್ತಿವಾರು ಭೇದಗಳಿವೆ. ತಲೆಮಾರು ಭೇದವೂ ಇದೆ. ಅದೊಂದು ಸಂಕೀರ್ಣವಾದ ವಿಸ್ತಾರವಾದ ಜಗತ್ತು.

ಶಿವರಾಮ ಕಾರಂತ

ಕುಂದಾಪ್ರ ನಿಘಂಟು- ಸರ್ಕಾರದಿಂದ ಧನಸಹಾಯ ಪಡೆದ ವಿಶ್ವವಿದ್ಯಾಲಯ, ಸಂಶೋಧನ ಸಂಸ್ಥೆ, ಸಾಹಿತ್ಯ ಪರಿಷತ್ತುಗಳು ಮಾಡುವ ಕೆಲಸವಿದು- ಆದರೆ ಇದನ್ನು ಕೆಲವೇ ವ್ಯಕ್ತಿಗಳು ಸೇರಿ ಮಾಡಿದ್ದಾರೆ. ಇದರ ಹಿಂದೆ ಕೆಲಸ ಮಾಡಿರುವ ಮುಖ್ಯ ಸಂಗತಿಯೆಂದರೆ, ತಮ್ಮ ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಇರುವ ಪ್ರೀತಿ. ಈ ವಿಶಿಷ್ಟ ಭಾಷೆಯು ಆಧುನಿಕ ಹೊಸತಲೆಮಾರಿನಲ್ಲಿ ಮುಂದುವರಿಯದೆ ಕಳೆದುಹೋಗುತ್ತಿದೆ ಎಂಬ ಆತಂಕ. ತಮ್ಮ ಭಾಷೆಯು ಹೀಗಿದೆ ಎಂದು ಲೋಕಕ್ಕೆ ತೋರುವ ಆ ಮೂಲಕ ತಮ್ಮ ಸಾಂಸ್ಕೃತಿಕ ಅಸ್ಮಿತೆಯನ್ನು ಕಾಣಿಸುವ ಅಭಿಮಾನ. ಜನರಲ್ಲಿರುವ ಈ ಭಾಷಿಕ ವಿನ್ಯಾಸಗಳನ್ನು ಗ್ರಂಥರೂಪಕ್ಕೆ ತರಲಾಗಿದೆ. ಇದು ಗ್ರಂಥರೂಪದಲ್ಲಿ ಹಾಗೆಯೇ ಉಳಿಯುತ್ತದೆಯೊ, ಮತ್ತೆ ಜನಬಳಕೆಗೆ ಇಳಿಯುತ್ತದೆಯೊ? ಇಳಿದರೆ ಹೇಗೆ ಎಂಬ ಪ್ರಶ್ನೆಗಳನ್ನು ಈ ನಿಘಂಟು ಮುಂದಿಟ್ಟಿದೆ.

ಈಚೆಗೆ ತುಳುವಿನಲ್ಲಿ ಬ್ಯಾರಿಯಲ್ಲಿ ಬರೆಯಲು ಹಲವರು ಆರಂಭಿಸಿದ್ದಾರೆ. ಅವುಗಳ ಹಾಡುಗಳು, ನಿಘಂಟು ಪ್ರಕಟವಾಗುತ್ತಿವೆ. ಇದರಂತೆ ಕುಂದಾಪ್ರ ಕನ್ನಡದ ಹಾಡುಗಳು ಮಾತುಕತೆಗಳು ನಾಟಕಗಳು ಜನಪ್ರಿಯವಾಗುತ್ತಿವೆ. ಇವೆಲ್ಲವೂ ಒಂದು ವಿಶಿಷ್ಟ ಕಾಲಘಟ್ಟದಲ್ಲಿ ಪ್ರಕಟವಾಗುತ್ತಿವೆ. ಆ ಕಾಲಘಟ್ಟ ಯಾವುದೆಂದರೆ, ಒಂದು ಭಾಷೆ, ಒಂದು ದೇಶ ಒಂದು ಸಂಸ್ಕೃತಿಯನ್ನು ಇಡೀ ದೇಶದ ಮೇಲೆ ಹೇರಲು ಯತ್ನಿಸುತ್ತಿರುವ ರಾಜಕಾರಣವು ಬಲಗೊಂಡಿರುವ ದಿನಗಳು. ಇಂತಹ ದಿನಗಳಲ್ಲಿ ಈ ಯತ್ನಗಳು, ಈ ಏಕರೂಪಿ ರಾಜಕಾರಣದ ಹುಸಿಯನ್ನು ತಮ್ಮದೇ ರೀತಿಯಲ್ಲಿ ಮುಖಾಮುಖಿ ಮಾಡುತ್ತಿರುವ ಮತ್ತು ಪ್ರತಿರೋಧಿಸುತ್ತಿರುವ ಮತ್ತು ಪರ್ಯಾಯ ಮಂಡಿಸುತ್ತಿರುವ ಹೇಳಿಕೆಗಳಾಗಿವೆ. ಆದ್ದರಿಂದ ಇವು ಶೈಕ್ಷಣಿಕ ಸಾಂಸ್ಕೃತಿಕ ಯತ್ನಗಳಾಗಿದ್ದರೂ ಇವುಗಳಲ್ಲಿ ಒಂದು ರಾಜಕೀಯ ಹೇಳಿಕೆಯಿದೆ. ಅದು ಭಾರತದ ಬಹುತ್ವವನ್ನು ಸಮರ್ಥಿಸುವ ಹೇಳಿಕೆ.

ಕುಂದಾಪ್ರ ಕನ್ನಡವನ್ನು ಸಂಪಾದಕರು ಕನ್ನಡದ ಉಪಭಾಷೆ ಎಂದು ಕರೆದಿದ್ದಾರೆ. ಈಚೆಗೆ ಈ ಶಬ್ದವು ಭಾಷೆಗಳ ಸ್ವಾಯತ್ತತಯನ್ನು ಮನ್ನಿಸುವುದಿಲ್ಲವಾಗಿ, ಭಾಷಾವಿಜ್ಞಾನಿಗಳು ಬಳಸುವುದಿಲ್ಲ. ಯಾವುದಕ್ಕೆ ಯಾವುದು ಉಪ ಅಥವಾ ಪ್ರಧಾನ? ಉಪಸಂಸ್ಕೃತಿ ನುಡಿಗಟ್ಟು ಕೂಡ ಹೀಗೇ ಸಮಸ್ಯಾತ್ಮಕವಾದುದು. ಅಧಿಕಾರವಲಯಕ್ಕೆ ಸಿಕ್ಕ ಭಾಷೆ ಸಂಸ್ಕೃತಿಗಳು ಪ್ರಧಾನ ಎನಿಸಿಬಿಡುತ್ತವೆ. ಕರ್ನಾಟಕದ ರಾಜಧಾನಿ ಕುಂದಾಪುರವಾಗಿದ್ದರೆ, ಬೆಂಗಳೂರು ಮೈಸೂರು ಕನ್ನಡಕ್ಕೂ ಇದೇ ಅವಸ್ಥೆ ಬರುತ್ತದೆ. ಆದ್ದರಿಂದ ಕುಂದಾಪ್ರ ಕನ್ನಡದ ರೂಪವೆಂದು ಹೇಳುವುದೇ ಸರಿಯಾದುದು.

ಕುಂದಾಪ್ರ ಕನ್ನಡದ ನಿಘಂಟಿಗಿರುವ ಭಾಷಿಕ ಮಹತ್ವ, ಸಾಂಸ್ಕೃತಿಕ ಮಹತ್ವಗಳ ಜತೆ, ಒಂದು ಸೃಜನಶೀಲ ಗುಣವೂ ಇದೆ. ಅದನ್ನು ಒಂದು ಕಾದಂಬರಿಯಂತೆ ಓದಬಹುದು.

ಪ್ರೊ. ರಹಮತ್ ತರೀಕೆರೆ

ಪ್ರೊ. ರಹಮತ್ ತರೀಕೆರೆ
ರಹಮತ್ ತರೀಕೆರೆ ಕನ್ನಡನಾಡಿನ ಖ್ಯಾತ ಚಿಂತಕರು. ನಾಥಪಂಥ, ಕರ್ನಾಟಕದ ಸೂಫಿಗಳು, ಗುರುಪಂಥಗಳು ಹೀಗೆ ನಾಡಿನ ಹಲವು ಬಹುತ್ವದ ಪಂಥಗಳು ಮತ್ತು ಸೌಹಾರ್ದ ಬದುಕಿನ ಬಗ್ಗೆ ವಿಶೇಷ ಅಧ್ಯಯನಗಳನ್ನು ಮಾಡಿ ಪುಸ್ತಕ ರಚಿಸಿದ್ದಾರೆ. ಇವರ ವಿಮರ್ಶಾ ಸಂಕಲನ ’ಕತ್ತಿಯಂಚಿನ ದಾರಿ’ಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯ ಗೌರವ ಸಂದಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಹಲ್ಗಾಮ್ ದಾಳಿ ಕುರಿತ ಪೋಸ್ಟ್‌: ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್‌ಗೆ ನಿರೀಕ್ಷಣಾ ಜಾಮೀನು ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಕುರಿತು ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಸಂಬಂಧಿಸಿದಂತೆ ಜಾನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಂಗಳವಾರ ಅವರಿಗೆ ನಿರೀಕ್ಷಣಾ ಜಾಮೀನು...

ಮಧ್ಯಪ್ರಾಚ್ಯ ಉದ್ವಿಗ್ನತೆ: ಎಲ್‌ಪಿಜಿ ಕೊರತೆಗೆ ಮುಂಬೈನಲ್ಲಿ ಶೇ. 20 ರಷ್ಟು ಹೋಟೆಲ್‌, ರೆಸ್ಟೋರೆಂಟ್‌ ಬಂದ್: ಬೆಂಗಳೂರು, ಚೆನ್ನೈನಲ್ಲೂ ಸಮಸ್ಯೆ

ಪಶ್ಚಿಮ ಏಷ್ಯಾ ಸಂಘರ್ಷ ಹತ್ತು ದಿನಗಳಿಗೂ ಹೆಚ್ಚು ಕಾಲ ಮುಂದುವರಿದಿರುವುದರಿಂದ, ಭಾರತದ ಹೋಟೆಲ್‌ಗಳು ಮತ್ತು ಇತರ ಉಧ್ಯಮಗಳು ಎಲ್‌ಪಿಜಿ ಪೂರೈಕೆ ಬಿಕ್ಕಟ್ಟನ್ನು ಎದುರಿಸುತ್ತಿವೆ. ಬೆಂಗಳೂರಿನ ನಂತರ, ಚೆನ್ನೈ ಮತ್ತು ಮುಂಬೈನಂತಹ ಇತರ ನಗರಗಳು ಸಹ...

‘ಕೋವಿಡ್ ಲಸಿಕೆ ಪೀಡಿತರಿಗಾಗಿ ಪರಿಹಾರ ನೀತಿ ಅಳವಡಿಸಿಕೊಳ್ಳಿ..’; ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

ಕೋವಿಡ್ ವಿರುದ್ಧ ರೋಗನಿರೋಧಕ ಶಕ್ತಿಯಾಗಿ ಲಸಿಕೆ ನೀಡಿದ ನಂತರ ಉಂಟಾಗುವ ಪ್ರತಿಕೂಲ ಪರಿಣಾಮಗಳ ವೈಜ್ಞಾನಿಕ ಮೌಲ್ಯಮಾಪನಕ್ಕಾಗಿ ಅಸ್ತಿತ್ವದಲ್ಲಿರುವ ಕಾರ್ಯವಿಧಾನವನ್ನು ಮುಂದುವರಿಸಬೇಕೆಂದು ಸುಪ್ರೀಂ ಕೋರ್ಟ್ ಮಂಗಳವಾರ ಆದೇಶಿಸಿದೆ. ಅದೇ ಸಮಯದಲ್ಲಿ, ಕೋವಿಡ್ -19 ವ್ಯಾಕ್ಸಿನೇಷನ್ ನಂತರದ...

ಮೇಘಾಲಯ|ಜಿಲ್ಲಾ ಪರಿಷತ್ ಚುನಾವಣೆಯಲ್ಲಿ ವಿವಾದಾತ್ಮಕ ಅಧಿಸೂಚನೆ: ಪಶ್ಚಿಮ ಗಾರೋ ಬೆಟ್ಟಗಳಲ್ಲಿ ಭುಗಿಲೆದ್ದ ಹಿಂಸಾಚಾರ; ಇಬ್ಬರ ಸಾವು

ಗುವಾಹಟಿ: ಏಪ್ರಿಲ್ 10 ರಂದು ನಡೆಯಲಿರುವ ಗಾರೋ ಹಿಲ್ಸ್ ಸ್ವಾಯತ್ತ ಜಿಲ್ಲಾ ಮಂಡಳಿ (ಜಿಎಚ್‌ಎಡಿಸಿ) ಚುನಾವಣೆಯಲ್ಲಿ ಬುಡಕಟ್ಟು ಜನಾಂಗದವರಲ್ಲದವರು ಸ್ಪರ್ಧಿಸುವುದನ್ನು ನಿಷೇಧಿಸುವ ವಿವಾದಾತ್ಮಕ ಅಧಿಸೂಚನೆಯನ್ನು ವಿರೋಧಿಸಿ ಮೇಘಾಲಯದ ಪಶ್ಚಿಮ ಗಾರೋ ಹಿಲ್ಸ್ ಜಿಲ್ಲೆಯಲ್ಲಿ...

ಸಂವಿಧಾನ, ಸದನದ ಘನತೆ ಉಳಿಸಲು ಲೋಕಸಭಾ ಸ್ಪೀಕರ್ ವಿರುದ್ಧ ನಿರ್ಣಯ: ಕಾಂಗ್ರೆಸ್ ಸಂಸದ ಗೊಗೊಯ್

ಸ್ಪೀಕರ್ ಓಂ ಬಿರ್ಲಾ ಪಕ್ಷಪಾತಿ ವರ್ತನೆ ಹೊಂದಿದ್ದಾರೆ. ಹಾಗಾಗಿ, ಸಂವಿಧಾನ ಉಳಿಸಲು ವಿರೋಧ ಪಕ್ಷವು ಅವರನ್ನು ಪದಚ್ಯುತಗೊಳಿಸುವ ನಿರ್ಣಯ ತರಬೇಕಾಯಿತು ಎಂದು ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಮಂಗಳವಾರ (ಮಾ.10) ಲೋಕಸಭೆಯಲ್ಲಿ ಹೇಳಿದರು....

ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸಿಕೊಳ್ಳಲು ‘ಅಗತ್ಯ ಸರಕು ಕಾಯ್ದೆ’ ಜಾರಿಗೆ ತಂದ ಕೇಂದ್ರ

ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಕೊರತೆ ಕುರಿತು ದೂರು ನೀಡಿದ ನಂತರ, ದೇಶೀಯ ಅಡುಗೆ ಅನಿಲದ ನಿರಂತರ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರವು 'ಅಗತ್ಯ ಸರಕು ಕಾಯ್ದೆ'ಯನ್ನು ಜಾರಿಗೆ ತಂದಿದೆ ಎಂದು...

‘ಯುದ್ಧ ಯಾವಾಗ ಕೊನೆಗೊಳ್ಳುತ್ತದೆ ಎಂಬುದನ್ನು ಇರಾನ್ ನಿರ್ಧರಿಸುತ್ತದೆ’: ಟ್ರಂಪ್ ‘ಅಲ್ಪಾವಧಿಯ ಸಂಘರ್ಷ’ ಹೇಳಿಕೆಗೆ ಇರಾನ್ ತಿರುಗೇಟು 

ಟೆಹ್ರಾನ್: ಇರಾನ್‌ನಲ್ಲಿ ಯುದ್ಧವನ್ನು ಕೊನೆಗೊಳಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗೆ ಟೆಹ್ರಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಅಮೆರಿಕ ಮತ್ತು ಇಸ್ರೇಲಿ ಗುರಿಗಳ ವಿರುದ್ಧದ ಮಿಲಿಟರಿ ಕ್ರಮಗಳು ಯಾವಾಗ ನಿಂತವು ಎಂಬುದನ್ನು...

ಮಹಿಳಾ ಮೀಸಲಾತಿ ಮಸೂದೆ; ತ್ವರಿತ ಅನುಷ್ಠಾನಕ್ಕೆ ವಿಪಕ್ಷಗಳ ಅಭಿಪ್ರಾಯ ಕೇಳಿದ ಕೇಂದ್ರ ಸರ್ಕಾರ

ನವದೆಹಲಿ: ಮಹಿಳಾ ಮೀಸಲಾತಿ ಕಾನೂನಿನ ಅನುಷ್ಠಾನವನ್ನು ತ್ವರಿತಗೊಳಿಸುವ ಪ್ರಯತ್ನದಲ್ಲಿ, ಲೋಕಸಭೆ ಮತ್ತು ರಾಜ್ಯ ಶಾಸಕಾಂಗ ಸಭೆಗಳಲ್ಲಿ ಮಹಿಳೆಯರಿಗೆ ಶೇ 33 ರಷ್ಟು ಮೀಸಲಾತಿ ನೀಡುವ ಶಾಸನವನ್ನು ತಿದ್ದುಪಡಿ ಮಾಡುವ ಪ್ರಸ್ತಾಪದ ಕುರಿತು ಅಭಿಪ್ರಾಯಗಳನ್ನು...

ಕೋಲ್ಕತ್ತಾ : ಕಾಳಿಘಾಟ್ ಬಳಿಕ ದಕ್ಷಿಣೇಶ್ವರದಲ್ಲೂ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ‘ಗೋ ಬ್ಯಾಕ್ ಘೋಷಣೆ’

ಕಾಳಿಘಾಟ್ ಬಳಿಕ ಕೋಲ್ಕತ್ತಾದ ದಕ್ಷಿಣೇಶ್ವರ ದೇವಸ್ಥಾನದಲ್ಲೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ದ 'ಗೋ ಬ್ಯಾಕ್ ಘೋಷಣೆಗಳು' ಕೇಳಿ ಬಂದಿವೆ. ಮಂಗಳವಾರ (ಮಾ.10) ಬೆಳಿಗ್ಗೆ ಜ್ಞಾನೇಶ್ ಕುಮಾರ್ ದಕ್ಷಿಣೇಶ್ವರ ಕಾಳಿ ದೇವಸ್ಥಾನಕ್ಕೆ ಭೇಟಿ...

ಉತ್ತರ ಪ್ರದೇಶ| ಹೋಳಿ ಹಬ್ಬದ ಶುಭ ಕೋರಿದ ದಲಿತ ಯುವಕನನ್ನು ಕೊಂದ ಪ್ರಬಲಜಾತಿ ಕುಟುಂಬ

ಉತ್ತರ ಪ್ರದೇಶದ ಲಕ್ನೋದ ದುಬಗ್ಗಾ ಪ್ರದೇಶದಲ್ಲಿ, ಹೋಳಿ ಹಬ್ಬದ ಸಂದರ್ಭದಲ್ಲಿ ಶುಭಕೋರಿದ 22 ವರ್ಷದ ದಲಿತ ವ್ಯಕ್ತಿಯನ್ನು ಬ್ರಾಹ್ಮಣ ಕುಟುಂಬದ ಸದಸ್ಯರು ಇರಿದು ಕೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಘಟನೆ ಮಾರ್ಚ್ 4...