Homeಮುಖಪುಟಅನಿಕೇತನದ ಕಿಡಿ ಬಿತ್ತಿದ ವಿಶ್ವಮಾನವ ಸಂದೇಶ

ಅನಿಕೇತನದ ಕಿಡಿ ಬಿತ್ತಿದ ವಿಶ್ವಮಾನವ ಸಂದೇಶ

- Advertisement -
- Advertisement -

ಕುವೆಂಪು ಅವರ ಜನ್ಮದಿನ ಹತ್ತಿರ ಬರುತ್ತಿದೆ. ಕರ್ನಾಟಕ ಸರ್ಕಾರವು 2005ರ ಡಿಸೆಂಬರ್‌ನಲ್ಲಿ ಕುವೆಂಪು ಜನ್ಮದಿನವಾದ ಡಿಸೆಂಬರ್ 29ಅನ್ನು ’ವಿಶ್ವ ಮಾನವ’ ದಿನವನ್ನಾಗಿ ಆಚರಿಸುವುದಾಗಿ ಆದೇಶ ಹೊರಡಿಸಿತು. ಕುವೆಂಪು ಅವರು ತಮ್ಮ ಬರವಣಿಗೆ ಮತ್ತು ಬದುಕಿನುದ್ದಕ್ಕೂ ಪಾಲಿಸಿಕೊಂಡು ಬಂದ, ತಾವು ದರ್ಶನ ಪಡೆದ ಹಲವು ತತ್ವಗಳು ವಿಶ್ವಮಾನವ ಸಂದೇಶದ ಮೂಲಕ ಸಾರಿದ್ದರು. ಈ ಸಂದೇಶಗಳು ವರ್ಷಕ್ಕೊಮ್ಮೆ ನೆನಪಿಸಿಕೊಳ್ಳುವ, ವೈದಿಕರ ಮಂತ್ರಗಳಂತೆ ಪಠಿಸಬೇಕಾದವುಗಳಲ್ಲ, ಹೃದಯದಿಂದ ಕೇಳಿಸಿಕೊಳ್ಳಬೇಕಾದ ಮತ್ತು ನಮಗೆ ನಾವೇ ಕನ್ನಡಿ ಹಿಡಿದುಕೊಳ್ಳುವಂತೆ ಮಾಡುವ ದರ್ಶನಗಳು.

ಕುವೆಂಪು ಅವರು ಬರೆದಿರುವ ಎರಡು ಮಹಾಕಾವ್ಯದಂತಹ ಕಾದಂಬರಿಗಳು ಮತ್ತು ವಿಶ್ವಮಾನವ ಸಂದೇಶ ಎರಡನ್ನೂ ಒಟ್ಟಿಗೆ ನೋಡಿದಾಗ, ಅವರು ’ಮಲೆಗಳಲ್ಲಿ ಮದುಮಗಳು’ ಕಾದಂಬರಿಯಲ್ಲಿ ಮುನ್ನುಡಿ ರೂಪದಲ್ಲಿ ಬರೆದಿರುವ ಅತ್ಯಂತ ಜನಪ್ರಿಯವಾದ

“ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ”

ಎಂಬ ಸಾಲುಗಳು ಕೇವಲ ತಮ್ಮ ಕಾದಂಬರಿಯ ಕುರಿತು ಹೇಳಿದಲ್ಲ. ಇಡೀ ಸಮಾಜದ ರಚನೆ ಕುರಿತು ಸಹ ಆ ಸಾಲುಗಳು ಆಗಿರಬಹುದು. ಕುವೆಂಪು ಅವರು ತಮ್ಮ ಕಾದಂಬರಿಗಳಲ್ಲಿ, ತಾವು ಪ್ರತಿನಿಧಿಸುವ ಸಮುದಾಯದ ಕುರಿತು ಸಹ ಎಲ್ಲಿಯೂ ಹಿಂಜರಿಕೆ ಇಲ್ಲದೆ ಮಾತನಾಡುವ ಧೈರ್ಯ ತೋರಿಸಿದ್ದಾರೆ. ಒಬ್ಬ ಲೇಖಕನಿಗೆ ಇರಬೇಕಾದ ಮುಖ್ಯ ಗುಣ ಅದು ಎಂಬುದು ನನ್ನ ನಂಬಿಕೆ. ಕುವೆಂಪು ಅವರು ತಮ್ಮ ’ಮಲೆನಾಡಿನ ಚಿತ್ರಗಳು’ ಪುಸ್ತಕದಲ್ಲಿ ಹೇಳಿಕೊಂಡಿರುವ ಲಘು ಹಾಸ್ಯದ ಬೆರೆತ ಹಲವು ಅನುಭವಗಳಲ್ಲಿ, ತಾವು ಬಾಲಕರಾಗಿದ್ದಾಗಲೇ ಶಿಕ್ಷಣದ ಪದ್ಧತಿಗಳು, ತಮ್ಮ ಸುತ್ತಲಿನ ದಿನ ನಿತ್ಯದ ಚಟುವಟಿಕೆಗಳ ಅಸಮಾನತೆಯ ಗೆರೆ ಗುರುತಿಸುವ ಸೂಕ್ಷ್ಮವಾದ ಪ್ರವೃತ್ತಿ ಬೆಳೆಸಿಕೊಂಡಿದ್ದು ತಿಳಿಯುತ್ತದೆ. ಅವರು ಮುಂದೆ ವಿಶ್ವಮಾನವ ಸಂದೇಶದ ಮೂಲಕ ಹೇಳಲು ಹೊರಟಿರುವುದು ಸಹ ಅದೇ ಆಗಿದೆ.

“ಯಾವ ಒಂದು ಗ್ರಂಥವೂ ’ಏಕೈಕ ಪರಮ ಪೂಜ್ಯ’ ಧರ್ಮಗ್ರಂಥವಾಗಬಾರದು. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ಸಾಧ್ಯವಾದವುಗಳನ್ನೆಲ್ಲ ಓದಿ ತಿಳಿದು ತನ್ನ ’ದರ್ಶನ’ವನ್ನು ತಾನೇ ನಿರ್ಣಯಿಸಿ ಕಟ್ಟಿಕೊಳ್ಳಬೇಕು” ಎಂಬ ಕುವೆಂಪು ಅವರ ಈ ಸಂದೇಶವನ್ನು ನವಯುವಕರ ಕಿವಿಗೆ ಎಲ್ಲಾ ಕಾಲಕ್ಕಿಂತಲೂ ಹೆಚ್ಚಾಗಿ ಈ ದಿನದಲ್ಲಿ ಮುಟ್ಟಿಸಬೇಕಾದ ಜರೂರತ್ತು ಇದೆ. ಮನುಷ್ಯನ ಮೂಲಭೂತ ಅವಶ್ಯಕತೆಗಳು ಈಡೇರಿಕೆಗೆ ಕಾಯಕ ಮುಖ್ಯವೇ ಹೊರತು, ಹೊಟ್ಟೆ ತುಂಬಿದವರು ಹೇಳುವ ಪ್ರವಚನಗಳಲ್ಲ ಎಂಬ ವಾಸ್ತವವನ್ನು ಜಾತಿಗಳ ಅಮಲು ತಲೆಗೇರಿಸಿಕೊಂಡವರಿಗೆ ತೋರಿಸಬೇಕಿದೆ.

ಇದನ್ನೂ ಓದಿ:ಪೌರೋಹಿತ್ಯ ಧಿಕ್ಕರಿಸಿದ ವಿವಾಹದ ಪರಿಕಲ್ಪನೆ ’ಮಂತ್ರ ಮಾಂಗಲ್ಯ’

ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಕುವೆಂಪು ಅವರು ಪ್ರಕೃತಿಯ ಬಗ್ಗೆ ಎಷ್ಟು ವರ್ಣಿಸಿದ್ದಾರೊ ಇನ್ನೂ ಹೆಚ್ಚು ಜೀವಂತವಾಗಿ ನಾಯಿಗುತ್ತಿಯನ್ನು ಪರಿಚಯಿಸುತ್ತಾರೆ. ಕಗ್ಗತ್ತಲಿನ ಕಾಡುಗಳ ರಾತ್ರಿಯ ಎದೆಯಲ್ಲಿ ನಡುಗದೆ, ಪ್ರೀತಿಯ ಬೀಜಗಳನ್ನು ಎದೆಯೊಳಗಿಟ್ಟುಕೊಂಡ ಗುತ್ತಿಯ ಬಿಗಿ ಉಸಿರಿನಲ್ಲಿ ಸಹ ಕುವೆಂಪು ಅವರ ವಿಶ್ವಮಾನವ ಸಂದೇಶ ಇದೆ.

ಕಾನೂರು ಹೆಗ್ಗಡತಿಯ ಹೂವಯ್ಯನ ಹೊಸ ವಿಚಾರಗಳಲ್ಲಿನ ಕ್ರಾಂತಿಯ ಕಿಡಿಯೊಳಗೆ ಬುದ್ಧನ ಶಾಂತಸಾಗರದ ನಗು ಮತ್ತು ಕುವೆಂಪು ಅವರು ಹೇಳುವ “ಪ್ರತಿಯೊಂದು ಮಗುವೂ ಹುಟ್ಟುತ್ತಲೆ – ವಿಶ್ವಮಾನವ. ಬೆಳೆಯುತ್ತಾ ನಾವು ಅದನ್ನು ’ಅಲ್ಪಮಾನವ’ನನ್ನಾಗಿ ಮಾಡುತ್ತೇವೆ. ಮತ್ತೆ ಅದನ್ನು ’ವಿಶ್ವಮಾನವ’ನನ್ನಾಗಿ ಮಾಡುವುದೇ ವಿದ್ಯೆಯ ಕರ್ತವ್ಯವಾಗಬೇಕು” ಎನ್ನುವ ಮಾತು ಅಡಗಿದೆ. ಹೂವಯ್ಯನ ಮೂಲಕ ಕಟ್ಟಿಕೊಟ್ಟ ದರ್ಶನ ನನಗೆ ಹೆಚ್ಚು ಆಪ್ತವಾಗುತ್ತದೆ.

ಕುವೆಂಪು ಅವರ ನಾಟಕ, ಕಥೆ, ಕಾದಂಬರಿ ಮತ್ತು ಅವರ ಒಟ್ಟು ಬರವಣಿಗೆಯ ಪಯಣವೇ ವಿಶ್ವಮಾನವದೆಡೆಗಿನ ಪ್ರಯಾಣವಾಗಿತ್ತು. ಅವರು ಬರೆದಿರುವ ಬರಹಗಳಲ್ಲಿ ಒಂದು ರೀತಿಯ ಪ್ರಕೃತಿಯ ದಿವ್ಯಸ್ಪರ್ಶ ಇದೆ, ಮೂಢನಂಬಿಕೆಗಳು ಮತ್ತು ವೈದಿಕರ ಕೆಡುಕಿನ ಜಾಣತನದ ವಿರುದ್ಧ ಗಟ್ಟಿಯಾದ ಸಿಟ್ಟಿದ್ದು ಅದರ ಬಿಸಿ ತಾಗುತ್ತದೆ.

ಇದನ್ನೂ ಓದಿ: ಸಾಂಸ್ಕೃತಿಕ ಕ್ರಾಂತಿಯ ರೂವಾರಿ ಕುವೆಂಪು ಹೊರಿಸಿದ ಹೊರೆಗಳು

ಅವರ ಆತ್ಮಕಥೆ ’ನೆನಪಿನ ದೋಣಿಯಲ್ಲಿ ನಿವೇದಿಸಿಕೊಂಡಿರುವಂತೆ, ಯುವಕರಾಗಿದ್ದಾಗ ಕುವೆಂಪು ಅವರು ಒಂದು ಸಲ “ಲೈಬ್ರರಿಯಲ್ಲಿ ಸಾಲಾಗಿ ಜೋಡಿಸಿಟ್ಟ ಪುಸ್ತಕಗಳ ಹೆಸರು ನೋಡಿ”, ಓದುತ್ತಾ ಬೆರಗಾಗಿ ನಿಲ್ಲುತ್ತಾರೆ. ಅವರಿಗೆ ಇದ್ದ ಜ್ಞಾನದಾಹ ಇದರಿಂದ ತಿಳಿಯುತ್ತದೆ. ನಮ್ಮನ್ನು ಆಂತರಿಕವಾಗಿ ಮತ್ತು ಬಾಹ್ಯವಾಗಿ ಶೋಷಿಸುವ ಹಲವು ಸಂಗತಿಗಳಿಗೆ ಪ್ರಶ್ನಿಸುವ ಮತ್ತು ಪ್ರತಿಭಟಿಸುವ ಶಕ್ತಿ ಓದಿನಿಂದ ಮಾತ್ರ ಬರುವಂತಹುದು.

’ವಿಚಾರ ಕ್ರಾಂತಿಗೆ ಆಹ್ವಾನ’ ಪುಸ್ತಕದಲ್ಲಿ ಕುವೆಂಪು ಅವರು ತಮ್ಮ ಬದುಕಿನ ವಿಚಾರಗಳಲ್ಲಿದ್ದ ’ಎಷ್ಟೊಂದು ಮಡಿವಂತಿಕೆಗಳಿಗೆ ಛಿದ್ರ ಮಾಡಿದ್ದಾರೆ’ ಎಂಬುದು ತಿಳಿಯುತ್ತದೆ. ಬರವಣಿಗೆಯಂತೆ ಬದುಕಿದ ಕುವೆಂಪು ಅವರು ವಿಶ್ವಮಾನವರಾಗಿದ್ದು ಹೀಗೆ.

“ಜಾತಿ-ಮತ ಇವೆಲ್ಲಾ ಇರಬೇಕು ಅನ್ನುವವರು, ಅವನು ಎಂಥಾ ಸಾಹಿತಿಯೇ ಆಗಿರಲಿ ಅವನಿಗೆ ಧಿಕ್ಕಾರ”- ಕುವೆಂಪು.

ಈ ಮೇಲಿನ ಮಾತುಗಳನ್ನು ಗಮನಿಸಿದಾಗ, ನಿರಂತರವಾಗಿ ಯಾವುದೋ ಒಂದು ಧರ್ಮ ಶ್ರೇಷ್ಠವೆಂದು ಸಾರುವ ಲೇಖಕರ ಹಿಂದೆ ಯುವಪಡೆ ಓಡುತ್ತಿರುವ ಸನ್ನಿವೇಶದಲ್ಲಿ, ಪ್ರಶ್ನಿಸುವ ಮನಸ್ಸು ಕಳೆದುಕೊಂಡಿರುವ ವಿದ್ಯಾವಂತರ ಕುರಿತು, ಭವಿಷ್ಯದ ನಮ್ಮ ನಾಡಿನ ಬಗ್ಗೆ ಆತಂಕ ಹುಟ್ಟುತ್ತದೆ. ಕುವೆಂಪು ಅವರ ಜನ್ಮದಿನದ ಹೊತ್ತಿನಲ್ಲಿ ಆದರೂ ನಾವೆಲ್ಲ ಗಟ್ಟಿಯಾಗಿ ನಿಂತು ’ಜೀವಪರ’ ವಿಚಾರಗಳನ್ನು ಬೆಂಬಲಿಸುತ್ತ, ಇನ್ನೊಬ್ಬರ ತಲೆಯಲ್ಲಿ ಸೆಗಣಿ ತುಂಬಲು ಪ್ರಯತ್ನಿಸುತ್ತಿರುವವರ ಕೈಕೆಳಗಿನಿಂದ ಪಾರಾಗಿ ಹೊರಬರುವ ಪ್ರತಿಜ್ಞೆ ಮಾಡಿ ಅದನ್ನು ಆಚರಿಸಬೇಕಿದೆ.

ಓ ನನ್ನ ಚೇತನ,
ಆಗು ನೀ ಅನಿಕೇತನ!
ನೂರು ಮತದ ಹೊಟ್ಟ ತೂರಿ,
ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗಂತವಾಗಿ ಏರಿ,
ಓ ನನ್ನ ಚೇತನ,
ಆಗು ನೀ ಅನಿಕೇತನ!

ಕುವೆಂಪು ಅವರ ವಿಶ್ವಮಾನವ ಗೀತೆಯಂತೆ ನಾವೆಲ್ಲ ನಮ್ಮ ನಮ್ಮ ಮತಗಳ ಹೊಟ್ಟ ತೂರಿ, ನಿಜವಾದ ಬೇರು ಬಿಟ್ಟು ಚಿಗುರೊಡೆಯಬಲ್ಲ ಕಾಳುಗಳನ್ನು ಹುಡುಕಬೇಕಿದೆ.

ಕಪಿಲ ಪಿ ಹುಮನಾಬಾದೆ

ಯುವ ಬರಹಗಾರ ಕಪಿಲ ಪಿ ಹುಮನಾಬಾದೆ ಅವರು ಮೂಲತಃ ಬೀದರ್‌ನವರು. ಸದ್ಯ ಕಾವ್ಯಮನೆ ಪ್ರಕಾಶನ ಬಳ್ಳಾರಿ, ಮುಖ್ಯ ಸಂಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಕಾದಂಬರಿ ಹಾಣಾದಿ ಸಾಕಷ್ಟು ಮೆಚ್ಚುಗೆಯನ್ನು ಗಳಿಸಿದೆ. ಈಗ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ವಿದ್ಯಾರ್ಥಿ.


ಇದನ್ನೂ ಓದಿ: ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ, ‘ಬಹುಭಾಷೆಗಳಲ್ಲಿ ದ್ವಿಭಾಷೆ’: ಕುವೆಂಪು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK: ಜಾತಿ ಗಣತಿ ಕುರಿತ ರಾಹುಲ್ ಗಾಂಧಿಯ ವೈರಲ್ ಕ್ಲಿಪ್ ಎಡಿಟೆಡ್

0
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿರುವ ಭಾಷಣದ ಕ್ಲಿಪ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅನೇಕ ಬಾರಿ ಸುಳ್ಳು ಸುದ್ದಿಗಳನ್ನು ಹಂಚಿಕೊಂಡಿರುವ ಬಲ ಪಂಥೀಯ ಎಕ್ಸ್...