ದೆಹಲಿಯ ಸುತ್ತಮುತ್ತ ರೈತರ ಪ್ರತಿಭಟನೆಯ ನಡುವೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಘೋಷಣೆ ಮಾಡಿದ್ದು, ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಖಾತರಿ ಕಾನೂನು ಜಾರಿಗೆ ತರಲಾಗುವುದು ಎಂದು ಹೇಳಿದ್ದಾರೆ.
ರಾಹುಲ್ ಗಾಂಧಿ ಮುನ್ನಡೆಸುತ್ತಿರುವ ಭಾರತ್ ಜೋಡೋ ನ್ಯಾಯ ಯಾತ್ರೆಯ ಭಾಗವಾಗಿ ಛತ್ತೀಸ್ಗಢದ ಸುರ್ಗುಜಾ ವಿಭಾಗದ ವಿಭಾಗೀಯ ಕೇಂದ್ರವಾದ ಅಂಬಿಕಾಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಎಂಎಸ್ಪಿ ಖಾತರಿ ಕಾನೂನು ಜಾರಿಗೆ ತರಲಾಗುವುದು. ಇದು ಕಾಂಗ್ರೆಸ್ ಪಕ್ಷದ ಗ್ಯಾರಂಟಿ. ಛತ್ತೀಸ್ಗಢದ ನೆಲದಿಂದ ಮೊದಲ ಬಾರಿಗೆ ನಾನು ಇದನ್ನು ಘೋಷಿಸುತ್ತಿದ್ದೇನೆ” ಎಂದಿದ್ದಾರೆ.
ತಮ್ಮ ಬಹುಕಾಲದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ನಡೆಸುತ್ತಿರುವ ಹೋರಾಟವನ್ನು ಉಲ್ಲೇಖಿಸಿದ ಖರ್ಗೆ, “ಕೇಂದ್ರದ ಬಿಜೆಪಿ ಸರ್ಕಾರವು ರೈತರು ದೆಹಲಿಗೆ ಬರದಂತೆ ತಾತ್ಕಾಲಿಕ ಕಾಂಕ್ರೀಟ್ ಗೋಡೆಗಳು ಮತ್ತು ಮೊಳೆಗಳನ್ನು ಬಳಸಿ ಅಮಾನವೀಯ ಕೃತ್ಯಗಳನ್ನು ಎಸಗುತ್ತಿದೆ. ರೈತರನ್ನು ಯಾವ ರೀತಿ ದಮನ ಮಾಡಲಾಗುತ್ತಿದೆ ನೋಡಿ. ಇದು ದೇಶದ ಪ್ರಜಾಪ್ರಭುತ್ವದ ಸ್ಥಿತಿಯನ್ನು ಸೂಚಿಸುತ್ತದೆ” ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಖರ್ಗೆ, ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಮೋದಿ ನಕಲು ಮಾಡಿದ್ದಾರೆ. ಅವರು ಭಾರತ ರತ್ನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿರುವ ಎಂ.ಎಸ್ ಸ್ವಾಮಿನಾಥನ್ ಅವರ ಬೆಂಬಲದೊಂದಿಗೆ ದೇಶಕ್ಕೆ ಹಸಿರು ಕ್ರಾಂತಿಯನ್ನು ತಂದದ್ದು ಕಾಂಗ್ರೆಸ್. ಆದರೆ, ಏನೂ ಮಾಡದೆ ಮೋದಿ ಅದರ ಕ್ರೆಡಿಟ್ ತೆಗೆದುಕೊಳ್ಳುತ್ತಿದ್ದಾರೆ. ಸ್ವಾಮಿನಾಥನ್ ಅವರಿಗೆ ಅತ್ಯುನ್ನತ ಗೌರವ ಸಿಗುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ. ಹಸಿರು ಕ್ರಾಂತಿ ಮತ್ತು ಸ್ವಾಮಿನಾಥನ್ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ರೈತರ ಹಿತದೃಷ್ಟಿಯಿಂದ ಎಂಎಸ್ಪಿಗೆ ಕಾನೂನು ಖಾತರಿ ನೀಡಲಿದೆ ಎಂದು ಭರವಸೆ ನೀಡಿದ್ದಾರೆ.
“ನಾವು ಕರ್ನಾಟಕ ಮತ್ತು ತೆಲಂಗಾಣದ ಚುನಾವಣೆಗಳನ್ನು ಐದು ಗ್ಯಾರಂಟಿಗಳ ಆಧಾರದ ಮೇಲೆ ಗೆದ್ದಿದ್ದೇವೆ. ಈಗ ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳನ್ನು ಮೋದಿ ಗ್ಯಾರಂಟಿ ಎಂದು ಕಾಪಿ ಮಾಡಲಾಗುತ್ತಿದೆ. ನಮ್ಮ ವಿಷಯದಲ್ಲಿ ಗ್ಯಾರಂಟಿಗಳು ಪಕ್ಷಕ್ಕೆ ಸೇರಿದ್ದು. ಆದರೆ, ಬಿಜೆಪಿಯ ವಿಷಯದಲ್ಲಿ ಅದು ಮೋದಿಗೆ ಸೇರಿದ್ದು. ಇದು ಅವರ ನಿರಂಕುಶ ಸ್ವಭಾವವನ್ನು ತೋರಿಸುತ್ತದೆ” ಎಂದು ಖರ್ಗೆ ಹೇಳಿದ್ದಾರೆ.
ಜನರನ್ನು ತಪ್ಪು ದಾರಿಗೆಳೆಯಲು ಸುಳ್ಳು ಹೇಳುವ ಮೋದಿ ‘ಸುಳ್ಳಿನ ಸರದಾರ’. ಅವರನ್ನು ನಂಬಬೇಡಿ ಎಂದು ಜನರಲ್ಲಿ ಮನವಿ ಮಾಡಿದರು. ದೇಶದಲ್ಲಿ ಪ್ರತಿ ಎರಡು ಗಂಟೆಗೆ ಐವರು ದಲಿತರು ಮತ್ತು ಬುಡಕಟ್ಟು ಜನಾಂಗದವರು ದೌರ್ಜನ್ಯ ಎದುರಿಸುತ್ತಿದ್ದಾರೆ ಎಂದು ಖರ್ಗೆ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಂಎಸ್ಪಿ ಖಾತರಿ ಪುನರುಚ್ಚರಿಸಿದ ರಾಹುಲ್ ಗಾಂಧಿ:
ರಾಹುಲ್ ಗಾಂಧಿ ಕೂಡ ಎಂಎಸ್ಪಿ ಖಾತರಿ ವಿಚಾರವನ್ನೇ ಪುನರುಚ್ಚರಿಸಿದ್ದು, “ರೈತ ಬಂಧುಗಳೇ, ಇಂದು ಐತಿಹಾಸಿಕ ದಿನ. ಸ್ವಾಮಿನಾಥನ್ ಆಯೋಗದ ಪ್ರಕಾರ ಬೆಳೆಗಳ ಮೇಲೆ ಪ್ರತಿ ರೈತರಿಗೆ ಎಂಎಸ್ಪಿ ಕಾನೂನುಬದ್ಧ ಖಾತರಿ ನೀಡಲು ಕಾಂಗ್ರೆಸ್ ನಿರ್ಧರಿಸಿದೆ. ಈ ಕ್ರಮವು 15 ಕೋಟಿ ರೈತ ಕುಟುಂಬಗಳ ಏಳಿಗೆಯನ್ನು ಖಾತ್ರಿಪಡಿಸುವ ಮೂಲಕ ಅವರ ಜೀವನವನ್ನು ಸುಧಾರಿಸುತ್ತದೆ. ನ್ಯಾಯದ ಹಾದಿಯಲ್ಲಿ ಇದು ಕಾಂಗ್ರೆಸ್ನ ಮೊದಲ ಗ್ಯಾರಂಟಿ” ಎಂದು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
किसान भाइयों आज ऐतिहासिक दिन है!
कांग्रेस ने हर किसान को फसल पर स्वामीनाथन कमीशन के अनुसार MSP की कानूनी गारंटी देने का फैसला लिया है।
यह कदम 15 करोड़ किसान परिवारों की समृद्धि सुनिश्चित कर उनका जीवन बदल देगा।
न्याय के पथ पर यह कांग्रेस की पहली गारंटी है।#KisaanNYAYGuarantee
— Rahul Gandhi (@RahulGandhi) February 13, 2024
ಹಲವು ರಾಜ್ಯಗಳ ರೈತರು ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಎಂಎಸ್ಪಿ ಖಾತರಿ ಕಾನೂನು ಜಾರಿಗೊಳಿಸುವುದು ಅವರ ಪ್ರಮುಖ ಬೇಡಿಕೆಯಾಗಿದೆ.
ಇದನ್ನೂ ಓದಿ : ಭಾರತ್ ಜೋಡೋ ನ್ಯಾಯ ಯಾತ್ರೆ: ಬಿಜೆಪಿ ಸರಕಾರದಿಂದ ರೈತರಿಗೆ ಅನ್ಯಾಯ; ರಾಹುಲ್ ಗಾಂಧಿ ವಾಗ್ಧಾಳಿ