ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಛತ್ತೀಸ್ಗಢದಲ್ಲಿ ಮುಂದುವರಿದಿದ್ದು, ಯಾತ್ರೆ ವೇಳೆ ರಾಹುಲ್ ಗಾಂಧಿ ‘ದೆಹಲಿ ಚಲೋ’ ಬಗ್ಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಿಜೆಪಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಹೇಳಿದ್ದಾರೆ.
ಭಾರತ್ ಜೋಡೋ ನ್ಯಾಯ ಯಾತ್ರೆ ನಾಳೆ ಜಾರ್ಖಂಡ್ಗೆ ಪ್ರವೇಶಿಸಲಿದೆ. ಇದಕ್ಕೂ ಮೊದಲು ಯಾತ್ರೆ ರಾಯ್ಗಢ್, ಶಕ್ತಿ, ಕೊರ್ಬಾ, ಸೂರಜ್ಪುರ, ಸುರ್ಗುಜಾ ಮತ್ತು ಬಲರಾಮ್ಪುರ ಜಿಲ್ಲೆಗಳ ಮೂಲಕ ಛತ್ತೀಸ್ಗಢದಲ್ಲಿ 536 ಕಿಲೋಮೀಟರ್ ಕ್ರಮಿಸಲಿದೆ. ಕೆಲವು ದಿನಗಳ ಹಿಂದೆ ಯಾತ್ರೆಯಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ಅವರು ಶೀಘ್ರದಲ್ಲೇ ಉಕ್ಕಿನ ಮಿಲ್ಗಳನ್ನು ತಮ್ಮ ಕೋಟ್ಯಾಧಿಪತಿ ಸ್ನೇಹಿತರಿಗೆ ಹಸ್ತಾಂತರಿಸಲಿದ್ದಾರೆ. ದೇಶದಲ್ಲಿ ಆರ್ಥಿಕ ಅನ್ಯಾಯ ನಡೆಯುತ್ತಿದೆ. ಪ್ರಧಾನಿ ಮೋದಿ ದೇಶದ ಸಂಪತ್ತನ್ನು ಕೆಲವೇ ಕೆಲ ಗೆಳೆಯರಿಗೆ ಹಸ್ತಾತರಿಸಲು ಉತ್ಸುಕರಾಗಿದ್ದಾರೆ ಎಂದು ಹೇಳಿದ್ದರು.
ಛತ್ತೀಸ್ಗಢದ ಅಂಬಿಕಾಪುರದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಈ ದೇಶದಲ್ಲಿ ಪ್ರತಿದಿನ ಬಡವರು, ರೈತರು, ಕಾರ್ಮಿಕರು ಮತ್ತು ಸಣ್ಣ ಉದ್ಯಮಿಗಳ ಮೇಲೆ ಅನ್ಯಾಯ ನಡೆಯುತ್ತಿದೆ, ಅನ್ಯಾಯ ಇರುವ ಸಮಾಜದಲ್ಲಿ ಹಿಂಸೆ ಮತ್ತು ದ್ವೇಷ ಇರುತ್ತದೆ ಎಂದು ಹೇಳಿದ್ದಾರೆ.
ಬಿಜೆಪಿ ಸರ್ಕಾರ ಎಂಎಸ್ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಿಸಿದೆ. ಆದರೆ ಅವರು ಎಂಎಸ್ ಸ್ವಾಮಿನಾಥನ್ ಹೇಳಿದ್ದನ್ನು ಜಾರಿಗೆ ತರಲು ಸಿದ್ಧರಿಲ್ಲ. ಅವರು ತಮ್ಮ ವರದಿಯಲ್ಲಿ ರೈತರಿಗೆ ಎಂಎಸ್ಪಿಗೆ ಕಾನೂನುಬದ್ಧ ಹಕ್ಕನ್ನು ನೀಡಬೇಕು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದ್ದರು. ಆದರೆ ಬಿಜೆಪಿ ಸರ್ಕಾರ ಅದನ್ನು ಮಾಡುತ್ತಿಲ್ಲ. INDIA ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವು ಭಾರತದ ರೈತರಿಗೆ ಎಂಎಸ್ಪಿ ಖಾತರಿಪಡಿಸುವ ಕಾನೂನು ಜಾರಿಗೆ ತರುತ್ತೇವೆ. ಸ್ವಾಮಿನಾಥನ್ ವರದಿಯಲ್ಲಿ ಉಲ್ಲೇಖಿಸಿದ್ದನ್ನು ನಾವು ಈಡೇರಿಸುತ್ತೇವೆ. ಇಂದು ರೈತರು ದಿಲ್ಲಿಯತ್ತ ಪಾದಯಾತ್ರೆ ನಡೆಸುತ್ತಿದ್ದಾರೆ, ಅವರನ್ನು ತಡೆಯಲಾಗುತ್ತಿದೆ, ಅಶ್ರುವಾಯು ಪ್ರಯೋಗಿಸಲಾಗುತ್ತಿದೆ. ಅವರು ಏನು ಹೇಳುತ್ತಿದ್ದಾರೆ, ಅವರು ತಮ್ಮ ದುಡಿಮೆಯ ಫಲವನ್ನು ಕೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಎಂಎಸ್ ಸ್ವಾಮಿನಾಥನ್ ಮತ್ತು ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡುವ ಸರ್ಕಾರ ರೈತರಿಗೆ ಅನ್ಯಾಯ ಮಾಡುತ್ತಿದೆ. ರೈತ ಸಂಘಟನೆಗಳು 3-4 ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದೆ. ಸ್ವಾಮಿನಾಥನ್ ಸೂತ್ರವನ್ನು ಜಾರಿಗೆ ತರಬೇಕೆಂಬುದು ಅವರ ದೊಡ್ಡ ಬೇಡಿಕೆಯಾಗಿದೆ. ಎಂಎಸ್ಪಿ ‘ಮೋದಿ ಮಾರಾಟ ಬೆಲೆ’ ಅಲ್ಲ. MSP ಎಂದರೆ ‘ಕನಿಷ್ಠ ಬೆಂಬಲ ಬೆಲೆ’ ಎಂದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಹೇಳಿದ್ದಾರೆ.
ರೈತರಿಗೆ ಕೇಂದ್ರ ಸರ್ಕಾರ ನೀಡಿದ ಭರವಸೆಗಳನ್ನು ಈಡೇರಿಸುವಂತೆ ರೈತ ಸಂಘಗಳು ಒತ್ತಾಯಿಸುತ್ತಿವೆ. ಆದರೆ ಪ್ರಧಾನಿ ಮೋದಿ ಅವರ ಸರ್ಕಾರವು ರಾಷ್ಟ್ರ ರಾಜಧಾನಿಗೆ ಪ್ರವೇಶಿಸದಂತೆ ರೈತರನ್ನು ತಡೆಯಲು ಪ್ರಯತ್ನಿಸುತ್ತಿದೆ. ಇದು ತುಂಬಾ ದುರದೃಷ್ಟಕರ, ರಾಹುಲ್ ಗಾಂಧಿ ರೈತ ಸಂಘಗಳನ್ನು ಭೇಟಿ ಮಾಡಿ ಎಂಎಸ್ಪಿ, ಸಾಲ ಮನ್ನಾ ಮತ್ತು ಪಿಎಂ ಫಸಲ್ ಬಿಮಾ ಯೋಜನೆ ಕುರಿತು ಚರ್ಚಿಸಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.
ಜನವರಿ 14 ರಂದು ಮಣಿಪುರದಲ್ಲಿ ಪ್ರಾರಂಭವಾದ ‘ಭಾರತ್ ಜೋಡೋ ನ್ಯಾಯ ಯಾತ್ರೆ’ 67 ದಿನಗಳಲ್ಲಿ 6,713 ಕಿಮೀ ಕ್ರಮಿಸಿ ಮಾರ್ಚ್ 20ರಂದು ಮುಂಬೈನಲ್ಲಿ ಕೊನೆಗೊಳ್ಳಲಿದೆ.
ಇದನ್ನು ಓದಿ: ಶಾರುಖ್ ಖಾನ್ ಮಧ್ಯಸ್ಥಿಕೆಯಿಂದ ಕತಾರ್ ಸರ್ಕಾರ 8 ಭಾರತೀಯರನ್ನು ಬಿಡುಗಡೆ ಮಾಡಿದೆ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ