ಗಣರಾಜ್ಯೋತ್ಸವದಂದು ಕೆಂಪು ಕೋಟೆಯಲ್ಲಿ ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಸಂಭವಿಸಿದ ಅಹಿತಕರ ಘಟನೆಯಲ್ಲಿ ಭಾಗಿಯಾಗಿದ್ದಾರೆ ಎಂದು 200 ಜನರ ಛಾಯಾಚಿತ್ರಗಳನ್ನು ದೆಹಲಿ ಪೊಲೀಸರು ಶುಕ್ರವಾರ (ಫೆ.19) ಬಿಡುಗಡೆ ಮಾಡಿದ್ದಾರೆ.
ಕಿಸಾನ್ ಗಣರಾಜ್ಯೋತ್ಸವ ದಿನದ ಎಲ್ಲಾ ವೀಡಿಯೊಗಳನ್ನು ಮತ್ತು ಚಿತ್ರಗಳನ್ನು ಪೊಲೀಸರು ಪರಿಶೀಲಿಸಿ ಅವರಿಂದ ಈ 200 ಜನರ ಚಿತ್ರಗಳನ್ನು ತೆಗೆದುಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.
“ನಾವು ಛಾಯಾಚಿತ್ರಗಳನ್ನು ಬಿಡುಗಡೆ ಮಾಡಿದ್ದೇವೆ ಮತ್ತು ಅದರಲ್ಲಿರುವ ಜನರನ್ನು ಗುರುತಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಜನವರಿ 26 ರ ಕೆಂಪುಕೋಟೆ ಘಟನೆ: ಪ್ರಧಾನ ಆರೋಪಿ ದೀಪ್ ಸಿಧು ಬಂಧನ
ಈಗಾಗಲೇ ಜನವರಿ 26 ರ ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್ಯಾಲಿಯಲ್ಲಿ ಅಹಿತಕರ ಘಟನೆ ನಡೆಯಲು ಕಾರಣಕರ್ತ ಎಂದು ಆರೋಪಿಸಲಾಗಿರುವ ನಟ ದೀಪ್ ಸಿಧುವನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಗಣರಾಜ್ಯೋತ್ಸವದಂದು ರೈತ ಸಂಘಗಳು ಕರೆ ನೀಡಿದ್ದ ಕಿಸಾನ್ ಗಣರಾಜ್ಯೋತ್ಸವದಲ್ಲಿ ನೂರಾರು ರೈತರು ಮತ್ತು ದೆಹಲಿ ಪೊಲೀಸರ ನಡುವೆ ಸಂಘರ್ಷ ನಡೆದಿತ್ತು. ಕೆಂಪುಕೋಟೆಯಲ್ಲಿ ಸಿಖ್ ಸಮುದಾಯದ ಧಾರ್ಮಿಕ ಧ್ವಜ ಹಾರಿಸಿದ್ದು ವಿವಾದಕ್ಕೆ ಕಾರಣವಾಗಿತ್ತು.
ಘಟನೆಗೆ ಕಾರಣರಾದವರ ವಿರುದ್ಧ ದೆಹಲಿ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಾದ ಮಾಹಿತಿ ತಿಳಿಯುತ್ತಿದ್ದಂತೆಯೇ, ನಟ ದೀಪ್ ಸಿಧು ತಲೆಮರೆಸಿಕೊಂಡಿದ್ದನು. ಇದರ ನಂತರ ಆತ ಬಿಜೆಪಿ ಜೊತೆಗೆ ಒಡನಾಟ ಇಟ್ಟುಕೊಂಡಿದ್ದನ್ನು ಸಾಮಾಜಿಕ ಜಾಲತಾಣದಲ್ಲಿ ಹಲವರು ಬಹಿರಂಗ ಪಡಿಸಿದ್ದರು. ಆರೋಪಿಯು ಪ್ರಧಾನಿ ಮೋದಿ ಮತ್ತು ಅಮಿತ್ಶಾ ಅವರೊಂದಿಗೆ ಇರುವ ಫೋಟೋಗಳು ವೈರಲ್ ಆಗಿದ್ದವು.
ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಮೂರು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ದೇಶದ ಲಕ್ಷಾಂತರ ರೈತರು ದೆಹಲಿಯ ಗಡಿಯಲ್ಲಿ ನವೆಂಬರ್ 26 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನೆ 90ನೇ ದಿನಕ್ಕೆ ಕಾಲಿಟ್ಟಿದೆ.
ಇದನ್ನೂ ಓದಿ: ಕೆಂಪುಕೋಟೆ ಅಹಿತಕರ ಘಟನೆಯ ರೂವಾರಿ – ಯಾರು ಈ ದೀಪ್ ಸಿಧು?