ಪ್ರಶ್ನೆ ಮಾಡುವವರನ್ನು ದಮನಿಸುವ ಅಧಿಕಾರದಲ್ಲಿರುವವರನ್ನು ಮನೆಗೆ ಕಳಿಸುವ ಕೆಲಸ ಕರ್ನಾಟಕದಿಂದ ಆರಂಭವಾಗಲಿ ಎಂದು ರೈತ ಹೋರಾಟಗಾರ ಡಾ. ದರ್ಶನ್ ಪಾಲ್ ಕರೆ ನೀಡಿದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ನಡೆದ ಮಸ್ತ ಜನ ಚಳುವಳಿಗಳ ಸಂಯುಕ್ತ ದನಿಯಾಗಿ ಜನಾಗ್ರಹ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ, ಅಮಿತ್ ಷಾ, ಅಂಬಾನಿ, ಅದಾನಿಗಳ ಅನಾಚಾರಗಳ ವಿರುದ್ಧ ದನಿ ಎತ್ತಿದ ಪತ್ರಕರ್ತರು, ಅಧಿಕಾರಿಗಳು, ವಕೀಲರು, ಮಾನವ ಹಕ್ಕುಗಳ ಹೋರಾಟಗಾರರು, ರೈತರು, ಸಾಮಾಜಿಕ ಕಾರ್ಯಕರ್ತರು ಜೈಲಿನಲ್ಲಿದ್ದಾರೆ. ಇಂತಹ ಫ್ಯಾಸಿಸ್ಟ್ ಮನಸ್ಥಿತಿಯ ದುರಂಹಕಾರಿಗಳ ವಿರುದ್ಧ ಎಲ್ಲ ಜನವರ್ಗದ ಪ್ರವಾಹವನ್ನು ಸೃಷ್ಟಿಸಿ ಪಾಠ ಕಲಿಸಬೇಕು” ಎಂದರು.
“ಸಂಯುಕ್ತ ಕಿಸಾನ್ ಮೋರ್ಚಾ ನೇತೃತ್ವದಲ್ಲಿ ನಡೆದ ದೆಹಲಿ ಹೋರಾಟವನ್ನು ಮಣಿಸಲು ಗೋಲಿಬಾರ್ನಿಂದ ಹಿಡಿದು, ಲಖೀಂಪುರ ಖೇರಿಯಲ್ಲಿ ರೈತರ ಹತ್ಯೆ ತನಕ ಹಲವು ರೀತಿಯಲ್ಲಿ ದಬ್ಬಾಳಿಕೆ ನಡೆಸಿದರು. ಸರ್ಕಾರದ ವಿರುದ್ಧ ನಡೆದ ಐತಿಹಾಸಿಕ ಚಳವಳಿಯಲ್ಲಿ ಹೋರಾಡಿ ರಕ್ತ ಸುರಿಸಿ 740 ರೈತರು ಹುತಾತ್ಮರಾದರು. ಆ ಮೂಲಕ ನೀವು ಮನಸ್ಸಿಗೆ ಬಂದಂತೆ ದೇಶವನ್ನು ಆಳ್ವಿಕೆ ಮಾಡಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ದೇಶದ ರೈತರು, ಕಾರ್ಮಿಕರು, ಜನಸಾಮಾನ್ಯರು ಸಂದೇಶ ಕೊಟ್ಟರು” ಎಂದು ದರ್ಶನ್ ಪಾಲ್ ಐತಿಹಾಸಿಕ ಚಳವಳಿಯನ್ನು ಸ್ಮರಿಸಿದರು.
ಜನಾಂದೋಲನಗಳಿಂದಲೇ ಜನರ ಜಾಗೃತಿ ಮತ್ತು ಶಕ್ತಿ ಬೆಳೆಯಲು ಸಾಧ್ಯ. ಜನಾಂದೋಲನಗಳನ್ನು ಬೆಳೆಸುವ ಮೂಲಕ 2023 ರಲ್ಲಿ ಕರ್ನಾಟಕದಲ್ಲಿ, 2024ರಲ್ಲಿ ಕೇಂದ್ರದಲ್ಲೂ ಜನವಿರೋಧಿ ಹಾಗೂ ಫ್ಯಾಸಿವಾದಿ ಬಿಜೆಪಿಗೆ ತಕ್ಕ ಪಾಠ ಕಲಿಸೋಣ ಎಂದರು.
ದಲಿತ ಮುಖಂಡ ಮಾವಳ್ಳಿ ಶಂಕರ್ ಮಾತನಾಡಿ, “ಸಂಘಪರಿವಾರದ ಸರ್ಕಾರ ದೇಶವನ್ನು ಅಧೋಗತಿಗೆ ತೆಗೆದುಕೊಂಡು ಹೋಗುತ್ತಿದೆ. ಗೋಹತ್ಯೆ ನಿಷೇಧ ಕಾಯ್ದೆ ಹಿಂತೆಗೆದುಕೊಳ್ಳದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು” ಎಂದರು.
ಕರಾಳ ಕೃಷಿ ಕಾಯ್ದೆಗಳನ್ನು ಮೋದಿ ಹಿಂಪಡೆದರೂ, ರಾಜ್ಯದಲ್ಲಿ ಯಡಿಯೂರಪ್ಪ ಸಿಎಂ ಆಗದ್ದಾಗ ತಂದ ಕಾಯ್ದೆಗಳನ್ನು ಇದುವರೆಗೂ ಹಿಂಪಡೆದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವಾಧ್ಯಕ್ಷರಾದ ಚಾಮರಸ ಮಾಲಿಪಾಟೀಲ್ ಕಿಡಿಕಾರಿದರು.
ಇದನ್ನೂ ಓದಿ; ಗೌರಿ ಕೊಲೆಯೂ, ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕು ಎಂಬ ಕರೆಯೂ..