ಲೇಖಕರು ಸಾಹಿತಿಗಳು ಹಾಗೂ ಹೋರಾಟಗಾರರಿಗೆ ಬೆದರಿಕೆ ಪತ್ರಗಳು ಬರುತ್ತಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.
ಜೀವ ಬೆದರಿಕೆ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಹಿರಿಯ ಸಾಹಿತಿಗಳು, ಲೇಖಕರು ಮತ್ತು ಹೋರಾಟಗಾರರ ನಿಯೋಗ ಭೇಟಿ ಮಾಡಿದೆ ಈ ವೇಳೆ ಸಿಎಂ ಸಿದ್ದರಾಮಯ್ಯ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಹಿರಿಯ ಸಾಹಿತಿ ಡಾ.ಕೆ ಮರುಳಸಿದ್ದಪ್ಪ ಅವರು ಮಾತನಾಡಿ ಹಲವಾರು ಸಾಹಿತಿಗಳಿಗೆ ಕಳೆದ ಒಂದು ವರ್ಷಕ್ಕೂ ಹೆಚ್ಚು ಅವಧಿಯಿಂದ ನಿರಂತರವಾಗಿ ಜೀವ ಬೆದರಿಕೆ ಪತ್ರಗಳು ಬರುತ್ತಿವೆ. ಸಾಹಿತಿಗಳು, ಆತಂಕ, ಮುಜುಗರದಿಂದ ಬದುಕುವ ಪರಿಸ್ಥಿತಿ ಉಂಟಾಗಿದೆ ಎಂದು ಸಿಎಂ ಗಮನಕ್ಕೆ ತಂದಿದ್ದಾರೆ.
ಕುಂ.ವೀರಭದ್ರಪ್ಪ, ಡಾ.ವಸುಂಧರಾ ಭೂಪತಿ, ಬಂಜಗೆರೆ ಜಯಪ್ರಕಾಶ್, ಅವರುಗಳಿಗೆ ಅತಿ ಹೆಚ್ಚು ಬೆದರಿಕೆಗಳು ಬಂದಿವೆ. ಅಭಿವ್ಯಕ್ತಿ ಸ್ವಾತಂತ್ರ್ಯ ಇಲ್ಲದ, ವಾತಾವರಣ ಸೃಷ್ಟಿಯಾಗಿದೆ. ಇದನ್ನು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ ಎಂ.ಎಂ. ಕಲಬುರ್ಗಿ, ಗೌರಿ ಲಂಕೇಶ್ ಅವರಿಗೆ ಒದಗಿದ ಗತಿ ಒದಗಬಹುದು ಎಂದು ಆತಂಕ ವ್ಯಕ್ತಪಡಿಸಿದರು. ಬೆದರಿಕೆ ಪತ್ರಗಳ ಬಗ್ಗೆ ಒಂದು ತಂಡ ರಚಿಸಿದ್ದು, ಇನ್ನಷ್ಟು ಪರಿಣಾಮಕಾರಿಯಾಗಿರುವ, ವೃತ್ತಿಪರವಾಗಿರುವ ಖಡಕ್ ಅಧಿಕಾರಿಗಳ ಪೊಲೀಸ್ ತಂಡವನ್ನು ರಚಿಸಬೇಕು ಎಂದರು.
ಸಾರ್ವಜನಿಕ ಪ್ರತಿಭಟನೆಗಳನ್ನು ಸ್ವಾತಂತ್ರ್ಯ ಉದ್ಯಾನವನಕ್ಕೆ ಮಾತ್ರ ಸೀಮಿತಗೊಳಿಸಿದ್ದು, ಇತರೆಡೆ ಪ್ರತಿಭಟನೆ ಮಾಡಲು ಇರುವ ನಿಷೇಧವನ್ನು ತೆಗೆಯಬೇಕೆಂದು ಮನವಿ ಮಾಡಿದರು.
ಈವರೆಗೆ ಸುಮಾರು 15 ಪತ್ರಗಳು ಬಂದಿವೆ. ಈ ಸರ್ಕಾರ ಬಂದ ನಂತರ ಮೂರು ಪತ್ರಗಳು ಬಂದಿವೆ. ಒಂದೇ ರೀತಿಯ ಒಕ್ಕಣೆ ಇರುವ ಪತ್ರಗಳು ಬಂದಿವೆ ಎಂದು ಸಾಹಿತಿ ಡಾ.ವಸುಂಧರಾ ಭೂಪತಿ ಹೇಳಿದ್ದಾರೆ.
ಈ ವೇಳೆ ಹಿರಿಯ ಸಾಹಿತಿಗಳಾದ ಡಾ.ಕೆ.ಮರುಳಸಿದ್ದಪ್ಪ, ಪ್ರೊ.ಎಸ್.ಜಿ. ಸಿದ್ದರಾಮಯ್ಯ, ಜಾಣಗೆರೆ ವೆಂಕಟರಾಮಯ್ಯ, ಬಂಜಗೆರೆ ಜಯಪ್ರಕಾಶ್, ಡಾ.ವಸುಂಧರಾ ಭೂಪತಿ, ಡಾ. ವಿಜಯಮ್ಮ, ದಿನೇಶ್ ಅಮೀನ್ ಮಟ್ಟು, ರುದ್ರಪ್ಪ ಹನಗವಾಡಿ, ಎಲ್.ಎನ್.ಮುಕುಂದರಾಜ್ ಸೇರಿ ಹಲವು ಲೇಖಕರು ಉಪಸ್ಥಿತರಿದ್ದರು.