ಭಾರತ್ ಜೋಡೋ ಯಾತ್ರೆಯಲ್ಲಿ ಕೋವಿಡ್ ನಿಯಮಾವಳಿ ಅನುಸರಿಸಲಾಗಿದೆಯೇ ಎಂದು ಖಚಿತಪಡಿಸಬೇಕು. ಪ್ರೊಟೊಕಾಲ್ ಅನುಸರಿಸುತ್ತಿಲ್ಲವಾದರೆ ರಾಷ್ಟ್ರೀಯ ಹಿತಾಸಕ್ತಿಯ ಕಾರಣದಿಂದ ಯಾತ್ರೆಯನ್ನು ನಿಲ್ಲಿಸಬೇಕು ಎಂಬ ಕೇಂದ್ರ ಆರೋಗ್ಯ ಸಚಿವರ ಮನ್ಸುಖ್ ಮಾಂಡವಿಯಾರವರ ಪತ್ರಕ್ಕೆ ಯಾತ್ರೆ ನಿಲ್ಲಿಸಲು ನೆಪ ಹುಡುಕುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
ಹರಿಯಾಣದ ನುಹ್ನಲ್ಲಿ ಮಾತನಾಡಿದ ಅವರು, “ಈ ಯಾತ್ರೆ ಕಾಶ್ಮೀರದವರೆಗೂ ಸಂಚರಿಸಲಿದೆ. ಈಗ ಬಿಜೆಪಿಯವರು ಹೊಸ ಐಡಿಯಾವನ್ನು ಮಾಡಿದ್ದಾರೆ. ಕೋವಿಡ್ ಬರುತ್ತಿದೆ ಹಾಗಾಗಿ ಯಾತ್ರೆ ನಿಲ್ಲಿಸಿ ಎಂದು ನನಗೆ ಪತ್ರ ಬರೆದಿದ್ದಾರೆ. ನೋಡಿ, ಈಗ ಯಾತ್ರೆ ನಿಲ್ಲಿಸಲು ಸಬೂಬು ಹೇಳಲಾಗುತ್ತಿದೆ. ಮಾಸ್ಕ್ ಧರಿಸಿ, ಯಾತ್ರೆ ನಿಲ್ಲಿಸಿ… ಇವೆಲ್ಲ ನೆಪಗಳಷ್ಟೆ. ಅವರು ಈ ದೇಶದ ಶಕ್ತಿ ಮತ್ತು ಸತ್ಯದ ಬಗ್ಗೆ ಹೆದರುತ್ತಾರೆ” ಎಂದಿದ್ದಾರೆ.
ಜೈರಾಂ ರಮೇಶ್ ಟ್ವೀಟ್ ಮಾಡಿ “Omicron ಸಬ್-ವೇರಿಯಂಟ್ BF.7 ಉಲ್ಬಣದ 4 ಪ್ರಕರಣಗಳು ಗುಜರಾತ್ ಮತ್ತು ಒಡಿಶಾದಲ್ಲಿ ಜುಲೈ, ಸೆಪ್ಟೆಂಬರ್ ಮತ್ತು ನವೆಂಬರ್ನಲ್ಲಿ ವರದಿಯಾಗಿದೆ. ಆರೋಗ್ಯ ಸಚಿವರು ನಿನ್ನೆ ರಾಹುಲ್ ಗಾಂಧಿಯವರಿಗೆ ಪತ್ರ ಬರೆದಿದ್ದಾರೆ ಮತ್ತು ಇಂದು ಪ್ರಧಾನಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. #BharatJodoYatra ಮರುದಿನ ದೆಹಲಿ ಪ್ರವೇಶಿಸಲಿದೆ. ಕ್ರೊನಾಲಜಿ ಅರ್ಥ ಮಾಡಿಕೊಳ್ಳಿ” ಎಂದು ಟೀಕಿಸಿದ್ದಾರೆ.
ಇನ್ನೊಂದೆಡೆ ಸಾಮ್ನಾ ಕೂಡ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ. “ಭಾರತ್ ಜೋಡೋ’ ಯಾತ್ರೆಯ ಯಶಸ್ಸಿನಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಭೀತಿ ಸರಿಯಾಗಿದೆ. ಆದರೆ ಮೂರು ವರ್ಷಗಳ ಹಿಂದೆ ಕೊರೊನಾ ವಿನಾಶವನ್ನುಂಟುಮಾಡಿದಾಗ ಅಂದಿನ ಅಮೆರಿಕ ಅಧ್ಯಕ್ಷ ಟ್ರಂಪ್ ಅವರನ್ನು ಗುಜರಾತ್ಗೆ ಆಹ್ವಾನಿಸಿ, ಲಕ್ಷಾಂತರ ಜನರನ್ನು ಒಟ್ಟುಗೂಡಿಸಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಿದ್ದು ನೀವೇ” ಎಂದು ಕಿಡಿಕಾರಿದೆ.
ಈ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯ ದೃಷ್ಟಿಯಿಂದ ಮತ್ತು ಕೋವಿಡ್ ಸಾಂಕ್ರಾಮಿಕ ರೋಗದ ಸಮಸ್ಯೆ ದೇಶದಲ್ಲಿ ಉಂಟಾಗದಂತೆ, ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಲ್ಲಿ ‘ಭಾರತ್ ಜೋಡೋ ಯಾತ್ರೆ’ಯನ್ನು ಮುಂದೂಡುವಂತೆ ನಾನು ನಿಮ್ಮನ್ನು ವಿನಂತಿಸುತ್ತೇನೆ” ಎಂದು ಆರೋಗ್ಯ ಸಚಿವರು ಪತ್ರದಲ್ಲಿ ಹೇಳಿದ್ದಾರೆ.
ಕಾಂಗ್ರೆಸ್ ಪತ್ರಕ್ಕೆ ಟೀಕೆ ವ್ಯಕ್ತಪಡಿಸಿದ ನಂತರ, “ಒಂದು ಕುಟುಂಬ ತಾನು ಎಲ್ಲಕ್ಕಿಂತ ಮೇಲು ಎಂದು ಭಾವಿಸಿದಾಕ್ಷಣ ಕೋವಿಡ್ ಹರಡದಂತೆ ತಡೆಯುವ ನನ್ನ ಕರ್ತವ್ಯದಿಂದ ನಾನು ವಿಮುಖನಾಗಲಾರೆ. ಯಾರಿಗೂ ವಿಶೇಷ ಆತಿಥ್ಯ ನೀಡಲಾಗುವುದಿಲ್ಲ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ; ಚುನಾವಣೆಯ ಸಂದರ್ಭದಲ್ಲಿ ಭುಗಿಲೇಳುವ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಭಾಷಾ ನಂಟು ಇದೆಯೇ?
ಕೋವಿಡ್ ಹೆಸರಲ್ಲಿ ಭಯ ಹುಟ್ಟಿಸುವ ನಾಟಕ ಬೇಡ.
https://fb.watch/hA9qp_txQk/