ಬಿಜೆಪಿ 6 ಸಾವಿರ ನೀಡಿದರೆ ನಮ್ಮ ಅಭ್ಯರ್ಥಿಗೆ ಮತ ನೀಡಿ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಮತ್ತು ಬಿಜೆಪಿಯ ಇತರ ಹಿರಿಯ ನಾಯಕರ ವಿರುದ್ಧ ರಾಜ್ಯ ಕಾಂಗ್ರೆಸ್ ಬುಧವಾರ ಪೊಲೀಸ್ ದೂರು ದಾಖಲಿಸಿದೆ. ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಸಲ್ಲಿಸಿರುವ ದೂರಿನಲ್ಲಿ “ಇದು ಪ್ರಜಾಪ್ರಭುತ್ವವನ್ನು ಹೈಜಾಕ್ ಮಾಡುವ ಖಂಡನೀಯ ಮತ್ತು ನಿರ್ಲಜ್ಜ ಪ್ರಯತ್ನ” ಎಂದು ಕಾಂಗ್ರೆಸ್ ಆರೋಪಿಸಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಇತರರನ್ನು ಲಂಚ, ಕ್ರಿಮಿನಲ್ ಪಿತೂರಿ ಮತ್ತು ಜನರ ಪ್ರಾತಿನಿಧ್ಯ ಕಾಯಿದೆ, 1951 ರ ವಿಭಾಗಗಳಿಗೆ ಸಂಬಂಧಿಸಿದ ಭಾರತೀಯ ದಂಡ ಸಂಹಿತೆಯ ಸೆಕ್ಷನ್ಗಳ ಅಡಿಯಲ್ಲಿ ಹೊಣೆಗಾರರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ತನ್ನ ದೂರಿನಲ್ಲಿ ಕೋರಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಈ ಪಿತೂರಿಯಲ್ಲಿ ಇಡೀ ಗುಂಪಿನ ವ್ಯಕ್ತಿಗಳು ಭಾಗಿಯಾಗಿದ್ದಾರೆ. ಮೇಲಿನ ನಾಲ್ಕು ವ್ಯಕ್ತಿಗಳ ಬಂಧಿಸಿ, ಅವರ ವಿಚಾರಣೆ ನಡೆಸಬೇಕು. ಈ ವೇಳೆ ಅವರ ಸೆಲ್ ಫೋನ್ಗಳು, ಕಂಪ್ಯೂಟರ್ಗಳು ಮತ್ತು ಇತರ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಂಡಾಗ ಈ ವಿಚಾರ ಸ್ಪಷ್ಟವಾಗುತ್ತದೆ” ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೀಡಿದ ದೂರಿನಲ್ಲಿ ಹೇಳಲಾಗಿದೆ.
ಜನವರಿ 22 ರಂದು ಬೆಳಗಾವಿಯ ಸುಳೇಭಾವಿ ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತ ಹಾಕುವ ಮತದಾರರಿಗೆ 6 ಸಾವಿರ ರೂಪಾಯಿ ನೀಡುವುದಾಗಿ ರಮೇಶ್ ಜಾರಕಿಹೊಳಿ ಹೇಳಿದ್ದರು. ಬೆಳಗಾವಿ ಗ್ರಾಮಾಂತರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಟೀಕೆಗಳನ್ನು ಮಾಡುತ್ತಾ ಮಾತನಾಡಿದ್ದ ಜಾರಕಿಹೊಳಿ ಈ ಹೇಳಿಕೆ ನೀಡಿದ್ದರು.
“ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಮ್ಮ ಕ್ಷೇತ್ರದ ಮತದಾರರಿಗೆ ಉಡುಗೊರೆ ಹಂಚುತ್ತಿದ್ದಾರೆ. ಇದುವರೆಗೆ ಸುಮಾರು 1000 ರೂಪಾಯಿ ಮೌಲ್ಯದ ಅಡುಗೆ ಸಾಮಗ್ರಿಗಳಾದ ಕುಕ್ಕರ್, ಮಿಕ್ಸರ್ ನೀಡಿರಬೇಕು. ಇದರ ನಂತರ ಅವರು ಇನ್ನೊಂದು ಸೆಟ್ ಗಿಪ್ಟ್ ನೀಡಬಹುದು. ಇವೆಲ್ಲವೂ ಸೇರಿ ಸುಮಾರು 3,000 ರೂ. ಆಗಬಹುದು ಅಷ್ಟೆ. ಆದರೆ ನಾವು 6000 ರೂಪಾಯಿ ಕೊಟ್ಟರೆ ಮಾತ್ರ ನಮಗೆ ಮತ ನೀಡಿ” ಎಂದು ಜಾರಕಿಹೊಳಿ ಹೇಳಿದ್ದರು.
ಸೋಮವಾರ, ಮತ್ತೊಂದು ಕಾರ್ಯಕ್ರಮದಲ್ಲಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಜಾರಕಿಹೊಳಿ, ಕರ್ನಾಟಕದಲ್ಲಿ ತಮಗೆ ಬೇಕಾದ ಸಂಖ್ಯೆ ಸಿಗದಿದ್ದರೂ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದಾರೆ. ಗೋಕಾಕದಲ್ಲಿ ಪಕ್ಷದ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಜಾರಕಿಹೊಳಿ, ಕೆಲವು ಸ್ಥಾನಗಳು ಕಡಿಮೆಯಾದರೆ ಬಿಜೆಪಿಗೆ ಹೊಂದಾಣಿಕೆ ಮಾಡಿಕೊಳ್ಳುವ ಶಕ್ತಿ ಇದೆ ಎಂದು ಹೇಳಿದ್ದಾರೆ.
ಜಾರಕಿಹೊಳಿ ಅವರ ವೀಡಿಯೋಗೆ ಪ್ರತಿಕ್ರಿಯಿಸಿದ ಕರ್ನಾಟಕ ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ್, ಪಕ್ಷವೂ ಮತಕ್ಕಾಗಿ ಹಣ ನೀಡುವುದನ್ನು ನಿರಾಕರಿಸಿದ್ದಾರೆ. ಬಿಜೆಪಿಯಲ್ಲಿ ಇಂತಹವುಗಳಿಗೆ ಸ್ಥಾನವಿಲ್ಲ ಎಂದ ಅವರುಮ, “ಒಬ್ಬ ವ್ಯಕ್ತಿ ಹೇಳಿಕೆ ನೀಡಿದರೆ ಅದು ಪಕ್ಷದ ಹೇಳಿಕೆಯಲ್ಲ. ಇದು ಅವರ ಅಭಿಪ್ರಾಯ ಮಾತ್ರ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾವು ₹6 ಸಾವಿರ ಕೊಟ್ಟರೆ ಓಟ್ ಹಾಕಿ: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ