Homeಕರ್ನಾಟಕ‘ನಮ್ಮ ಹುಡುಗರು ಚಡ್ಡಿ ಸುಟ್ಟಿದ್ದಾರೆಯೇ ಹೊರತು ರಾಷ್ಟ್ರಧ್ವಜವನ್ನಲ್ಲ’ - ಡಿಕೆ ಶಿವಕುಮಾರ್‌

‘ನಮ್ಮ ಹುಡುಗರು ಚಡ್ಡಿ ಸುಟ್ಟಿದ್ದಾರೆಯೇ ಹೊರತು ರಾಷ್ಟ್ರಧ್ವಜವನ್ನಲ್ಲ’ – ಡಿಕೆ ಶಿವಕುಮಾರ್‌

- Advertisement -
- Advertisement -

ನಮ್ಮ ಹುಡುಗರು ಚಡ್ಡಿ ಸುಟ್ಟಿದ್ದಾರೆಯೇ ಹೊರತು ರಾಷ್ಟ್ರಧ್ವಜ ಸುಟ್ಟಿಲ್ಲ, ಸಚಿವ ನಾಗೇಶ್ ಮನೆಗೆ ನುಗ್ಗಿಲ್ಲ ಎಂದು ಎನ್‌ಎಸ್‌ಯುಐ ಕಾರ್ಯಕರ್ತರ ಬಂಧನ ವಿಚಾರವಾಗಿ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ.

ತುಮಕೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರ ಶಿಕ್ಷಣ ಸಚಿವ ನಾಗೇಶ್ ಅವರ ಮೂಲಕ ರಾಜ್ಯ ಹಾಗೂ ದೇಶದ ಇತಿಹಾಸ ತಿರುಚಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪಠ್ಯಪುಸ್ತಕದಲ್ಲಿ ಕುವೆಂಪು, ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರುಗಳಿಗೆ ಅಪಮಾನ ಮಾಡುತ್ತಿರುವುದು ಸರಿಯಲ್ಲ. ದೇಶದ ಸಂಸ್ಕೃತಿ, ಅನೇಕ ಮಹಾನ್ ನಾಯಕರ ವಿಚಾರ ತಿರುಚುವುದು ಸರಿಯಿಲ್ಲ ಎಂದು ಹಲವು ಮಠಾಧೀಶರು, ಸಾಹಿತಿಗಳು ವಿರೋಧಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ವಿದ್ಯಾರ್ಥಿ ನಾಯಕರು ನಾಗೇಶ್ ಅವರ ಮನೆ ಮುಂದೆ ಹೋಗಿ ಚಡ್ಡಿ ಸುಟ್ಟಿರಬಹುದು, ಧಿಕ್ಕಾರ ಕೂಗಿರಬಹುದು. ಆದರೆ ಅವರು ಮನೆಯೊಳಗೆ ನುಗ್ಗಿಲ್ಲ. ಕಾರ್ಯಕರ್ತರು ಕೆಲ ಕಾಗದ ಸುಟ್ಟಿರಬಹುದು. ನಾವು ಅನೇಕ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಕಾಗದ ಹರಿದಿದ್ದೇವೆ. ಆದರೆ ನಮ್ಮ ಹುಡುಗರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ವೈಯಕ್ತಿಕ ದ್ವೇಷದ ಪ್ರಕರಣಕ್ಕೆ ಕೋಮು ಆಯಾಮ ನೀಡಿ ‘ಮುಸ್ಲಿಂ ದ್ವೇಷ’ ಹರಡಿದ ದಿಗ್ವಿಜಯ & ಪಬ್ಲಿಕ್ ಟಿವಿ

“ಪ್ರತಿಭಟನೆಯಲ್ಲಿ ಸಾಂಕೇತಿಕವಾಗಿ ಇವರೇ ಚಡ್ಡಿ ತೆಗೆದುಕೊಂಡು ಹೋಗಿ ಸುಟ್ಟಿದ್ದಾರೆ. ಅವರು ನಾಗೇಶ್ ಅವರ ಮನೆ ಅಥವಾ ಬೇರೆಯವರ ಮನೆಯ ಚಡ್ಡಿ ತಂದು ಸುಟ್ಟಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಸಾಂವಿಧಾನಿಕ ಹಕ್ಕಿದೆ” ಎಂದು ಅವರು ತಮ್ಮ ಪಕ್ಷದ ವಿದ್ಯಾರ್ಥಿ ಸಂಘದ ಕಾರ್ಯಕರ್ತರನ್ನು ಸಮರ್ಥಿಸಿಕೊಂಡಿದ್ದಾರೆ.

“ಮೊನ್ನೆ ರೈತ ನಾಯಕ ಟಿಕಾಯತ್ ಅವರ ಮೇಲೆ ಬೆಂಗಳೂರಿನಲ್ಲಿ ಕೆಲವರು ಮೋದಿ ಅವರಿಗೆ ಜೈಕಾರ ಕೂಗುತ್ತಾ ಹಲ್ಲೆ ಮಾಡಿದ್ದಾರೆ. ಸರ್ಕಾರ ಇವರ ವಿರುದ್ಧ ಯಾವ ಸೆಕ್ಷನ್ ಹಾಕಿದೆ? ನಮ್ಮ ವಿದ್ಯಾರ್ಥಿ ನಾಯಕರಿಗೆ ಜಾಮೀನು ಸಿಗಬಾರದು ಎಂದು 143, 147, 448, 443, 332 ಸೇರಿದಂತೆ ಹಲವು ಗಂಭೀರ ಸೆಕ್ಷನ್ ಹಾಕಿ ಪ್ರಕರಣ ದಾಖಲಿಸಿದ್ದಾರೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಈ ಜಿಲ್ಲೆಯಲ್ಲಿ ಇಬ್ಬರು ದಲಿತರು ಸತ್ತಾಗ ಸಚಿವರು ಎಲ್ಲಿ ಹೋಗಿದ್ದರು? ಇಲ್ಲಿನ ಶಾಸಕರು, ಜಿಲ್ಲಾ ಮಂತ್ರಿಗಳು ಹೋಗಿ ದಲಿತರ ರಕ್ಷಣೆ ಮಾಡಿದ್ದಾರಾ? ಎರಡು ದಿನವಾದರೂ ಉಸಿರು ಎತ್ತಿರಲಿಲ್ಲ. ಆದರೆ ಈಗ ವಿದ್ಯಾರ್ಥಿ ನಾಯಕರನ್ನು ಅರ್ಧ ಗಂಟೆಯಲ್ಲೇ ಬಂಧಿಸಿದ್ದಾರೆ” ಎಂದು ಡಿಕೆಶಿ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಮೋದಿಯವರ 8 ವರ್ಷದ ಆಡಳಿತದಲ್ಲಿ ದೇಶದ ಅಭಿವೃದ್ದಿ 20 ವರ್ಷ ಹಿಂದಕ್ಕೆ ಕುಸಿದಿದೆ: ಸಿದ್ದರಾಮಯ್ಯ

“ಪಠ್ಯಕ್ರಮ ಬದಲಾವಣೆ ವಿಚಾರವಾಗಿ ನಿರ್ಮಲಾನಂದ ಸ್ವಾಮೀಜಿ, ಸಿದ್ದಗಂಗಾ ಸ್ವಾಮೀಜಿ ಸೇರಿದಂತೆ ಹಲವು ಸ್ವಾಮೀಜಿಗಳು, ಸಾಹಿತಿಗಳು ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಪ್ರೇರಣೆಯಿಂದ ರಾಜ್ಯದಲ್ಲಿ ಧರ್ಮ ದ್ವೇಷ ಹೆಚ್ಚುತ್ತಿರುವುದು, ಶಾಂತಿ ಭಂಗವಾಗುತ್ತಿರುವುದು, ಇತಿಹಾಸ ತಿರುಚಲು ಯತ್ನಿಸುತ್ತಿರುವುದನ್ನು ಖಂಡಿಸಿ ಈ ಹುಡುಗರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈ ಹುಡುಗರಿಗೆ ಜಾಮೀನು ತಿರಸ್ಕಾರಗೊಂಡಿದ್ದು, ಇದು ಅಪಮಾನವಲ್ಲ. ನಾವು ಉನ್ನತ ನ್ಯಾಯಾಲಯದ ಮೊರೆ ಹೋಗುತ್ತೇವೆ” ಎಂದು ಅವರು ಹೇಳಿದ್ದಾರೆ.

“ರಾಜಕೀಯ ದುರುದ್ದೇಶದಿಂದ ಇಂತಹ ಪ್ರಕರಣ ದಾಖಲಿಸಲಾಗುತ್ತಿದೆ. ಬಿಜೆಪಿ ನಾಯಕರು ಹಲವು ಬಾರಿ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಶಿವಮೊಗ್ಗದಲ್ಲಿ ಸೆಕ್ಷನ್ 144 ಜಾರಿಯಲ್ಲಿದ್ದರೂ ಸಚಿವರು ಶವಯಾತ್ರೆ ಮಾಡಿದ್ದರೂ, ಬಿಜೆಪಿ ನಾಯಕರು ಜನರನ್ನು ಸೇರಿಸಿ ಜಾತ್ರೆ, ಹುಟ್ಟುಹಬ್ಬ ಆಚರಿಸಿದ್ದರು. ಆದರೆ ಅವರ ಮೇಲೆ ಯಾವುದೇ ಪ್ರಕರಣ ದಾಖಲಿಸಿಲ್ಲ. ನಾವು ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡಿದ್ದಕ್ಕೆ ನಮ್ಮ ಮೇಲೆ ಪ್ರಕರಣ ದಾಖಲಿಸಿದ್ದಾರೆ” ಎಂದು ಅವರು ಹೇಳಿದ್ದಾರೆ.

“ರಾಜಕಾರಣಿಗಳ ಮಾತು ಕೇಳಿ ಅನಗತ್ಯವಾಗಿ ಸೆಕ್ಷನ್ ಹಾಕುತ್ತಿರುವ ಅಧಿಕಾರಿಗಳು ಒಂದು ದಿನ ಇದಕ್ಕೆಲ್ಲಾ ಉತ್ತರ ನೀಡಿ, ಇದರ ಪರಿಣಾಮ ಅನುಭವಿಸಬೇಕಾಗುತ್ತದೆ. ನಮ್ಮ ಹುಡುಗರು ಮನೆಯೊಳಗೆ ನುಗಿಲ್ಲ. ಅವರು ಆವರಣದಲ್ಲಿ ಚಡ್ಡಿ ಸುಟ್ಟಿದ್ದಾರೆ. ಆರ್ ಎಸ್ ಎಸ್ ನವರು ಈಗ ಪ್ಯಾಂಟ್ ಹಾಕುತ್ತಿದ್ದು ಅದನ್ನು ಅವರ ಸಮವಸ್ತ್ರ ಎಂದು ಹೇಗೆ ಹೇಳಲು ಸಾಧ್ಯ?” ಎಂದು ಅವರು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: 8 ವರ್ಷಗಳ ನರೇಂದ್ರ ಮೋದಿ ಸರ್ಕಾರದ ವಿಚ್ಛಿದ್ರಕಾರಿ ಸಾಧನೆಗಳು

“ನಮ್ಮ ಹುಡುಗರ ಮೇಲೆ ರೌಡಿ ಶೀಟರ್ ಗಳು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ನಾವು ದೂರು ಕೊಟ್ಟರೂ ಪೊಲೀಸ್ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿಲ್ಲ. ಚಿಂತನ ಮಂಥನ ಸಭೆಯಲ್ಲಿದ್ದ ಕಾರಣ ನಾವು ಬರಲು ಸಾಧ್ಯವಾಗಿರಲಿಲ್ಲ. ಇಲ್ಲದಿದ್ದರೆ ನಾವು ಬರುತ್ತಿದ್ದೆವು. ಬಿಜೆಪಿ ಸಂಸದರು ಚಡ್ಡಿ ನಮ್ಮ ಬ್ರ್ಯಾಂಡ್ ಎಂದು ಹೇಳಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅವರು ಮಾತ್ರ ಚಡ್ಡಿ ಹಾಕುತ್ತಾರಾ? ನಾವು ಹಾಕುವುದಿಲ್ಲವೇ? ಪ್ರತಿಭಟನೆ ಪ್ರತೀಕವಾಗಿ ಚಡ್ಡಿ ಸುಟ್ಟಿದ್ದಾರೆ. ಅವರು ರಾಷ್ಟ್ರಧ್ವಜಕ್ಕೆ ಬೆಂಕಿ ಹಚ್ಚಿಲ್ಲ” ಎಂದು ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ: ಅಪಹರಣಕ್ಕೊಳಗಾಗಿದ್ದ ಸಂತ್ರಸ್ತೆಯ ರಕ್ಷಣೆ

0
ಅಪಹರಣಕ್ಕೊಳಗಾಗಿದ್ದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ, ಶಾಸಕ ಹೆಚ್‌.ಡಿ ರೇವಣ್ಣ ಅವರ ಮನೆ ಕೆಲಸದ ಮಹಿಳೆಯನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ)ದ ಅಧಿಕಾರಿಗಳು ಇಂದು (ಮೇ 4) ರಕ್ಷಣೆ ಮಾಡಿದ್ದಾರೆ. ಪ್ರಜ್ವಲ್...