Homeಅಂಕಣಗಳುಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮದ್ದೂರು: ಕದಲೂರು ಉದಯ್ ದಿಢೀರ್ ಎಂಟ್ರಿಯಿಂದ ಸಂಕಷ್ಟಕ್ಕೆ ಸಿಲುಕಿದ ಡಿ.ಸಿ...

ಕರ್ನಾಟಕ ವಿಧಾನಸಭಾ ಕ್ಷೇತ್ರ ಸಮೀಕ್ಷೆ; ಮದ್ದೂರು: ಕದಲೂರು ಉದಯ್ ದಿಢೀರ್ ಎಂಟ್ರಿಯಿಂದ ಸಂಕಷ್ಟಕ್ಕೆ ಸಿಲುಕಿದ ಡಿ.ಸಿ ತಮ್ಮಣ್ಣ

- Advertisement -
- Advertisement -

ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಕೆ. ವೀರಣ್ಣಗೌಡರು, ದಾನ-ಧರ್ಮಕ್ಕೆ ಖ್ಯಾತಿಯಾದ ಜೋಳದ ಮಂಚೇಗೌಡರು, ಮುಖ್ಯಮಂತ್ರಿ, ಕೇಂದ್ರ ಮಂತ್ರಿ ಮತ್ತು ರಾಜ್ಯಪಾಲರಾಗಿದ್ದ ಎಸ್.ಎಂ ಕೃಷ್ಣರವರು ಹಾಗೂ ಹೋರಾಟಗಾರರಾದ ಎಂ.ಎಸ್ ಸಿದ್ದರಾಜು ರಂತಹ ಮುಖಂಡರನ್ನು ಪರಿಚಯಿಸಿದ ಕ್ಷೇತ್ರ ಮದ್ದೂರು. ಶಿವಪುರದ ಧ್ವಜ ಸತ್ಯಾಗ್ರಹದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಂತಹ ಭವ್ಯ ಇತಿಹಾಸ ಹೊಂದಿರುವ ಮದ್ದೂರು ಇಂದು ಆಳುವವರ ಅಸಡ್ಡೆಗೆ ಸಿಲುಕಿ ಕನಿಷ್ಠ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವುದು ದುರಂತ.

15 ವಿಧಾನಸಭಾ ಚುನಾವಣೆಗಳು ಮತ್ತು ಎರಡು ಉಪಚುನಾವಣೆಗಳು ಸೇರಿದಂತೆ ಒಟ್ಟು 17 ಚುನಾವಣೆಗಳನ್ನು ಕಂಡಿರುವ ಮದ್ದೂರಿನಲ್ಲಿ 9 ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದಾರೆ; ಒಮ್ಮೆ ಸ್ವತಂತ್ರ ಅಭ್ಯರ್ಥಿ, ಮೂರು ಬಾರಿ ಜನತಾಪರಿವಾರದ ಅಭ್ಯರ್ಥಿಗಳು ಗೆದ್ದಿದ್ದಾರೆ. ಕಳೆದ 4 ಚುನಾವಣೆಗಳಿಂದ ಜೆಡಿಎಸ್ ಇಲ್ಲಿ ಸತತವಾಗಿ ವಿಜಯ ಪತಾಕೆ ಹಾರಿಸಿದೆ. ಇಂತಿಪ್ಪ ಮದ್ದೂರು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕರು, ಮಾಜಿ ಸಚಿವರು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಗುರುತಿಸಲ್ಪಡುವ ದೇವೇಗೌಡರ ಬೀಗರಾದ ಡಿ.ಸಿ ತಮ್ಮಣ್ಣನವರು ತಮ್ಮ ಇಳಿವಯಸ್ಸಿನಲ್ಲಿ ಕೊನೆಯ ಚುನಾವಣೆಗೆ ತಯಾರಿ ನಡೆಸುತ್ತಿದ್ದಾರೆ. ದೇವೇಗೌಡರ ಪಕ್ಷಪಾತದ ಕೃಪಾಕಟಾಕ್ಷ ಮತ್ತು ಎದುರಾಳಿ ಅಭ್ಯರ್ಥಿಗಳ ಬೆಂಬಲದಿಂದಲೇ ನಾಲ್ಕು ಬಾರಿ ಶಾಸಕರಾಗಿರುವ ಅವರಿಗೆ ಈ ಬಾರಿ ಕದಲೂರು ಉದಯ್ ಎಂಬ ಹಣವಂತ ನಡುಕ ಹುಟ್ಟಿಸಿದ್ದಾರೆನ್ನಲಾಗುತ್ತಿದೆ. ಹಾಗಾಗಿ ಮದ್ದೂರು ಕ್ಷೇತ್ರದ ಹಾಲಿ ಪರಿಸ್ಥಿತಿ ದಿನದಿನಕ್ಕೂ ರೋಚಕ ಘಟ್ಟ ತಲುಪುತ್ತಿದ್ದು ತೀವ್ರ ಕುತೂಹಲ ಕೆರಳಿಸಿದೆ. ಇಂದಿನ ವಸ್ತು ಸ್ಥಿತಿ ತಿಳಿಯುವ ಮೊದಲು ಕ್ಷೇತ್ರದ ಇತಿಹಾಸವನ್ನೊಮ್ಮೆ ಮೆಲುಕು ಹಾಕೋಣ ಬನ್ನಿ.

ಎಚ್.ಕೆ ವೀರಣ್ಣಗೌಡ

1952ರ ಮೊದಲ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಕೆ ವೀರಣ್ಣಗೌಡರು ಕಾಂಗ್ರೆಸ್ ಪಕ್ಷದಿಂದ ಕಣಕ್ಕಿಳಿದು ಕೆಎಂಪಿ (ಕಿಸಾನ್ ಮಜ್ದೂರ್ ಪ್ರಜಾ) ಪಕ್ಷದ ಎಸ್.ಸಿ ಮಲ್ಲಯ್ಯನವರನ್ನು ಮಣಿಸುತ್ತಾರೆ. 1957ರ ಚುನಾವಣೆಯಲ್ಲಿ ಪ್ರಜಾ ಸೋಷಿಯಲಿಸ್ಟ್ ಪಕ್ಷದ (ಪಿಎಸ್‌ಪಿ) ಎಸ್.ಕೆ ಚಿಕ್ಕಣ್ಣನವರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. ಆದರೆ 1962ರ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಎಸ್.ಸಿ ಮಲ್ಲಯ್ಯನವರ ಪುತ್ರ ಎಸ್.ಎಂ ಕೃಷ್ಣರವರ ಎದುರು ಸೋಲು ಕಾಣುತ್ತಾರೆ.

1967ರ ಚುನಾವಣೆ ವೇಳೆಗೆ ಎಚ್.ಕೆ ವೀರಣ್ಣಗೌಡರ ಅಳಿಯರಾದ ಎಂ ಮಂಚೇಗೌಡರು ಕಾಂಗ್ರೆಸ್‌ನಿಂದ ಕಣಕ್ಕಿಳಿಯುತ್ತಾರೆ. ಬರಗಾಲದಲ್ಲಿ ಬಡವರಿಗೆ ಜೋಳ ದಾನ ಮಾಡುವ ಮೂಲಕ ಖ್ಯಾತಿ ಗಳಿಸಿದ್ದ ಅವರು ಪಿಎಸ್‌ಪಿಯಿಂದ ಸ್ಪರ್ಧಿಸಿದ್ದ ಎಸ್.ಎಂ ಕೃಷ್ಣರವರ ಎದುರು ಗೆಲುವು ಸಾಧಿಸುತ್ತಾರೆ. ಸೋತ ಎಸ್.ಎಂ ಕೃಷ್ಣರವರು ಲೋಕಸಭೆಗೆ ಆಯ್ಕೆಯಾಗುತ್ತಾರೆ. ಆನಂತರ ಕಾಂಗ್ರೆಸ್ ಪಕ್ಷ ಸೇರುತ್ತಾರೆ.

1972ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹಾಲಿ ಶಾಸಕ ಎಂ. ಮಂಚೇಗೌಡರ ಬದಲಿಗೆ ಎಸ್.ಎಂ ಕೃಷ್ಣರ ಆಪ್ತ ಬಿಳಿಗೌಡರಿಗೆ ಟಿಕೆಟ್ ನೀಡುತ್ತದೆ. ನೊಂದ ಮಂಚೇಗೌಡರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಾರೆ. ಆದರೆ ಬಿಳಿಗೌಡರು ಗೆಲುವು ಸಾಧಿಸುತ್ತಾರೆ. 1978ರ ಚುನಾವಣೆ ವೇಳೆಗೆ ಮಂಚೇಗೌಡರು ಜನತಾ ಪಕ್ಷದ ಅಭ್ಯರ್ಥಿಯಾಗಿ ಇಂದಿರಾ ಕಾಂಗ್ರೆಸ್ ಅಭ್ಯರ್ಥಿ ಬಿಳಿಗೌಡರನ್ನು ಮಣಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ.

1983ರ ಚುನಾವಣೆ ವೇಳೆಗೆ ಕಾಂಗ್ರೆಸ್ ಎಂ.ಮಂಚೇಗೌಡರನ್ನು ಮತ್ತೆ ಕರೆತಂದು ಅಭ್ಯರ್ಥಿಯನ್ನಾಗಿಸುತ್ತದೆ. ಅವರು ಸ್ವತಂತ್ರ ಅಭ್ಯರ್ಥಿ ಚನ್ನೇಗೌಡರ ಎದುರು ಜಯ ಸಾಧಿಸಿ ಮೂರನೇ ಬಾರಿಗೆ ಶಾಸಕರಾಗುತ್ತಾರೆ. ಆದರೆ ಅವರು 1984ರಲ್ಲಿ ನಿಧನ ಹೊಂದಿದ ಕಾರಣ ಆ ವರ್ಷ ಉಪಚುನಾವಣೆ ಎದುರಾಗುತ್ತದೆ. ಅವರ ಪತ್ನಿ ಜಯವಾಣಿ ಮಂಚೇಗೌಡರು ಕಾಂಗ್ರೆಸ್‌ನಿಂದ ಕಣಕ್ಕಿಳಿದು ಅನುಕಂಪದ ಅಲೆಯಲ್ಲಿ ಜನತಾಪಕ್ಷದ ಕೆ.ಪಿ ಶ್ರೀಕಂಠೇಗೌಡರನ್ನು ಮಣಿಸಿ ಶಾಸಕರಾಗುತ್ತಾರೆ. ಆದರೆ ಮರು ವರ್ಷ 1985ರಲ್ಲಿ ನಡೆದ ಚುನಾವಣೆಯಲ್ಲಿ ಅವರು ಜನತಾ ಪಕ್ಷದ ಬಿ.ಅಪ್ಪಾಜಿಗೌಡರ ಎದುರು ಸೋಲು ಕಾಣುತ್ತಾರೆ.

1989ರ ಚುನಾವಣೆಗೆ ಎಸ್.ಎಂ ಕೃಷ್ಣರವರು ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗುತ್ತಾರೆ. ಅವರು ರೈತ ಸಂಘದ ಅಭ್ಯರ್ಥಿ ಎಚ್.ಶ್ರೀನಿವಾಸ್‌ರವರನ್ನು ಮಣಿಸಿ ಎರಡನೇ ಬಾರಿಗೆ ಶಾಸಕರಾಗುತ್ತಾರೆ. ಅಲ್ಲದೆ ಉಪಮುಖ್ಯಮಂತ್ರಿ ಮತ್ತು ಸ್ಪೀಕರ್ ಹುದ್ದೆಯೂ ಅವರಿಗೆ ಲಭಿಸುತ್ತದೆ. 1994ರ ಚುನಾವಣೆಯಲ್ಲಿ ಎಸ್.ಎಂ ಕೃಷ್ಣರವರು ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಾರೆ. ಮಂಚೇಗೌಡ-ಜಯವಾಣಿಯವರ ಪುತ್ರ ಡಾ.ಎಂ ಮಹೇಶ್ ಚಂದ್ ಜನತಾದಳ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯ ಸಾಧಿಸುತ್ತಾರೆ.

1999ರ ವೇಳೆಗೆ ಎಸ್.ಎಂ ಕೃಷ್ಣರವರು ಪಾಂಚಜನ್ಯ ಯಾತ್ರೆ ನಡೆಸುವ ಮೂಲಕ ಕಾಂಗ್ರೆಸ್‌ನಲ್ಲಿ ಪ್ರಬಲರಾಗಿರುತ್ತಾರೆ. ಆ ಚುನಾವಣೆಯಲ್ಲಿ ಡಾ.ಮಹೇಶ್ ಚಂದ್ ವಿರುದ್ಧ ಸುಲಭ ಜಯ ಸಾಧಿಸಿದ ಅವರು ಮುಖ್ಯಮಂತ್ರಿಯಾಗುತ್ತಾರೆ. ಆ ಮೂಲಕ ಮಂಡ್ಯ ಜಿಲ್ಲೆಯಿಂದ ಆಯ್ಕೆಯಾದ ಮುಖ್ಯಮಂತ್ರಿ ಎಂಬ ಖ್ಯಾತಿಗೆ ಪಾತ್ರರಾಗುತ್ತಾರೆ.

ಡಿ.ಸಿ ತಮ್ಮಣ್ಣನವರ ಆಗಮನ

1999ರಲ್ಲಿ ಪಕ್ಕದ ಕಿರುಗಾವಲು ಕ್ಷೇತ್ರದಲ್ಲಿ (ಈಗಿಲ್ಲ) ಡಿ.ಸಿ ತಮ್ಮಣ್ಣನವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿದು ಜೆಡಿಎಸ್‌ನ ದೇವೇಗೌಡರ ಪರೋಕ್ಷ ಸಹಕಾರದೊಂದಿಗೆ ಕೇವಲ 724 ಮತಗಳ ಅಂತರದಿಂದ ಮಾಜಿ ಸಚಿವ ಕೆ.ಎನ್ ನಾಗೇಗೌಡರ ಎದುರು ಗೆಲುವು ಸಾಧಿಸಿರುತ್ತಾರೆ. ಕೆ.ಎನ್ ನಾಗೇಗೌಡರು ನಿಧನದ ನಂತರ 2004ರ ಚುನಾವಣೆಯಲ್ಲಿ ಅವರ ಪತ್ನಿ ನಾಗಮಣಿ ನಾಗೇಗೌಡರು ಸ್ಪರ್ಧಿಸಲು ಮುಂದಾಗುತ್ತಾರೆ. ಅನುಕಂಪದ ಅಲೆಯ ಕಾರಣದಿಂದ ಅವರ ಎದುರು ಗೆಲುವು ಸಾಧ್ಯವಿಲ್ಲ ಎಂಬುದನ್ನು ಅರಿತ ಡಿ.ಸಿ ತಮ್ಮಣ್ಣನವರು ಮದ್ದೂರು ಕ್ಷೇತ್ರಕ್ಕೆ ಪಲಾಯನ ಮಾಡುತ್ತಾರೆ ಎಂಬ ಮಾತು ಇಂದಿಗೂ ಕೇಳಿಬರುತ್ತದೆ.

ಈ ವೇಳೆಗೆ ಎಸ್.ಎಂ ಕೃಷ್ಣರವರು ಸಹ ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರಕ್ಕೆ ವಲಸೆ ಹೋಗಿರುತ್ತಾರೆ. ಹಾಗಾಗಿ ಡಿ.ಸಿ ತಮ್ಮಣ್ಣನವರಿಗೆ ಸುಲಭವಾಗಿ ಕಾಂಗ್ರೆಸ್ ಟಿಕೆಟ್ ಲಭಿಸುತ್ತದೆ. ಆದರೆ ಗೆಲುವು ಸುಲಭವಿರಲಿಲ್ಲ. ಏಕೆಂದರೆ ಜೆಡಿಎಸ್ ಪಕ್ಷದ ಎಂ.ಎಸ್ ಸಿದ್ಧರಾಜುರವರು ಅಪಾರ ಜನಮನ್ನಣೆ ಗಳಿಸಿ ಅಭ್ಯರ್ಥಿಯಾಗಲು ಉತ್ಸುಕರಾಗಿರುತ್ತಾರೆ. ಇಂತಹ ಸಂದರ್ಭದಲ್ಲಿ ಮತ್ತೆ ಎಚ್.ಡಿ ದೇವೇಗೌಡರು ತಮ್ಮ ಬೀಗ ತಮ್ಮಣ್ಣನವರ ಗೆಲುವಿಗೆ ದಾಳ ಉರುಳಿಸುತ್ತಾರೆ. ಎಂ.ಎಸ್ ಸಿದ್ಧರಾಜು ಮತ್ತು ಬಿ.ವಿವೇಕಾನಂದ ಇಬ್ಬರಿಗೂ ಜೆಡಿಎಸ್ ಬಿ ಫಾರಂ ನೀಡಿ ಗೊಂದಲ ಮೂಡಿಸಿದ್ದರಿಂದ ಒಬ್ಬರು ಪಕ್ಷೇತರ ಅಭ್ಯರ್ಥಿಯಾಗಿ ಕಣದಲ್ಲಿ ಉಳಿಯುತ್ತಾರೆ. ಇಬ್ಬರ ನಡುವಿನ ಮತ ವಿಭಜನೆಯಿಂದಾಗಿ ಡಿ.ಸಿ ತಮ್ಮಣ್ಣನವರು 10,735 ಮತಗಳ ಅಂತರದಿಂದ ಸುಲಭವಾಗಿ ಜಯ ಸಾಧಿಸುತ್ತಾರೆ ಎಂಬ ವಿಶ್ಲೇಷಣೆ ಜನಜನಿತವಾಗಿದೆ.

ಎಸ್.ಎಂ ಕೃಷ್ಣ

ಎರಡು ಚುನಾವಣೆಗಳಲ್ಲಿ ಸೋಲು ಕಂಡಿದ್ದ ಎಂ.ಎಸ್ ಸಿದ್ಧರಾಜುರವರು 2008ರಲ್ಲಿ ಜೆಡಿಎಸ್ ಪಕ್ಷದಿಂದ ಕಣಕ್ಕಿಳಿದು 49,954 ಮತಗಳನ್ನು ಪಡೆದು ಗೆಲುವು ಕಾಣುತ್ತಾರೆ. ಡಿ.ಸಿ ತಮ್ಮಣ್ಣನವರು 42,364 ಮತಗಳಿಗೆ ಸೀಮಿತಗೊಳ್ಳಬೇಕಾಗುತ್ತದೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮಧು ಮಾದೇಗೌಡ 36,967 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆಯುತ್ತಾರೆ. ಆದರೆ ಶಾಸಕ ಎಂ.ಎಸ್ ಸಿದ್ಧರಾಜುರವರ ನಿಧನದಿಂದ ಅದೇ ವರ್ಷ ಉಪ ಚುನಾವಣೆ ಎದುರಾಗುತ್ತದೆ. ಅವರ ಪತ್ನಿ ಕಲ್ಪನಾ ಸಿದ್ಧರಾಜು ಜೆಡಿಎಸ್ ಅಭ್ಯರ್ಥಿಯಾಗುತ್ತಾರೆ. ತಮ್ಮಣ್ಣ ಬಿಜೆಪಿ ಸೇರಿ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಪಕ್ಷವು ಎಸ್.ಎಂ ಕೃಷ್ಣರವರ ಸಹೋದರ ಎಸ್.ಎಂ ಶಂಕರ್‌ರವರ ಪುತ್ರ ಗುರುಚರಣ್ ಅವರಿಗೆ ಟಿಕೆಟ್ ನೀಡುತ್ತದೆ. ಮೂರು ಜನರ ನಡುವಿನ ಕಾಳಗದಲ್ಲಿ ಕಲ್ಪನಾ ಸಿದ್ಧರಾಜುರವರು 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಜಯ ಸಾಧಿಸುತ್ತಾರೆ.

2013ರ ಚುನಾವಣೆ ವೇಳೆಗೆ ಹಾಲಿ ಶಾಸಕಿ ಕಲ್ಪನಾ ಸಿದ್ಧರಾಜುರವರಿಗೆ ದೇವೇಗೌಡರು ಜೆಡಿಎಸ್ ಟಿಕೆಟ್ ನೀಡುವುದಿಲ್ಲ. ಬದಲಿಗೆ ತಮ್ಮ ಬೀಗ ಡಿ.ಸಿ ತಮ್ಮಣ್ಣನವರನ್ನು ಜೆಡಿಎಸ್‌ಗೆ ಬರಮಾಡಿಕೊಂಡು ಅಭ್ಯರ್ಥಿಯನ್ನಾಗಿಸುತ್ತಾರೆ. ಮುನಿಸಿಕೊಂಡ ಕಲ್ಪನಾ ಸಿದ್ಧರಾಜು ಪಕ್ಷೇತರ ಅಭ್ಯರ್ಥಿಯಾಗುತ್ತಾರೆ. ಕಾಂಗ್ರೆಸ್ ಪಕ್ಷವು ಮಧು ಮಾದೇಗೌಡರವರಿಗೆ ಟಿಕೆಟ್ ನೀಡುತ್ತದೆ. ಡಿ.ಸಿ ತಮ್ಮಣ್ಣ 80,926 ಮತಗಳನ್ನು ಪಡೆದು ಗೆಲುವು ಕಂಡರೆ, ಮಧು ಮಾದೇಗೌಡ 48,968 ಮತಗಳೊಂದಿಗೆ ಸೋಲುಕಾಣುತ್ತಾರೆ. ಕಲ್ಪನಾ ಸಿದ್ಧರಾಜುರವರಿಗೆ ಕೇವಲ 15,797 ಮತಗಳು ಲಭಿಸುತ್ತವೆ.

ಇದನ್ನೂ ಓದಿ: ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಗೆಲ್ಲುವವರಾರು? ಇಲ್ಲಿದೆ ಪೂರ್ಣ ಸಮೀಕ್ಷೆ

2018ರ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿದ್ದ ಡಿ.ಸಿ ತಮ್ಮಣ್ಣನವರಿಗೆ ಆಡಳಿತ ವಿರೋಧಿ ಅಲೆ ಕಾಡುತ್ತಿರುತ್ತದೆ. ಆದರೂ ಅವರು ಕಾಂಗ್ರೆಸ್‌ನ ಮಧು ಮಾದೇಗೌಡರ ಎದುರು 54,030 ಮತಗಳ ಬೃಹತ್ ಅಂತರದಿಂದ ಗೆಲುವು ಸಾಧಿಸುತ್ತಾರೆ. ಡಿ.ಸಿ ತಮ್ಮಣ್ಣನವರಿಗೆ 1,09,239 ಮತಗಳು ಬಿದ್ದರೆ, ಮಧು ಮಾದೇಗೌಡ 52,209 ಮತಗಳನ್ನು ಪಡೆಯುತ್ತಾರೆ. ಬಿಜೆಪಿಯಿಂದ ಸ್ಪರ್ಧಿಸಿದ್ದ ಮದ್ದೂರು ಸತೀಶ ಕೇವಲ 4,159 ಮತಗಳನ್ನು ಪಡೆಯುತ್ತಾರೆ.

ಅಂದಾಜು ಜಾತಿವಾರು ಮತಗಳು

ಮಂಡ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಂತೆ ಮದ್ದೂರು ಸಹ ಒಕ್ಕಲಿಗ ಮತಬಾಹುಳ್ಯದ ಕ್ಷೇತ್ರವಾಗಿದೆ. ಇದುವರೆಗೂ ಇಲ್ಲಿಂದ ಗೆದ್ದವರೆಲ್ಲ ಒಕ್ಕಲಿಗ ಸಮುದಾಯದವರೇ ಆಗಿದ್ದಾರೆ. ಒಟ್ಟು ಅಂದಾಜು 2,20,000 ಮತದಾರರಿರುವ ಮದ್ದೂರಿನಲ್ಲಿ ಸುಮಾರು 1 ಲಕ್ಷ ಒಕ್ಕಲಿಗ ಮತಗಳಿವೆ ಎನ್ನಲಾಗಿದೆ. ಪರಿಶಿಷ್ಟ ಜಾತಿಯ 36,000 ಮತಗಳು, 12,000 ದಷ್ಟು ಮುಸ್ಲಿಂ ಮತಗಳು, 12,000ದಷ್ಟು ಕುರುಬ ಸಮುದಾಯದ ಮತಗಳು ಮತ್ತು 10,000ದಷ್ಟು ಲಿಂಗಾಯತ ಸಮುದಾಯದ ಮತಗಳಿವೆ ಎನ್ನಲಾಗಿದೆ. ಇತರೆ ಎಲ್ಲಾ ಸಮುದಾಯದ ಸುಮಾರು 50,000 ಮತಗಳು ಕ್ಷೇತ್ರದಲ್ಲಿವೆ ಎನ್ನಲಾಗಿದೆ.

ಹಾಲಿ ಪರಿಸ್ಥಿತಿ

ನಾಲ್ಕನೇ ಬಾರಿಗೆ ಶಾಸಕರಾದ ಡಿ.ಸಿ ತಮ್ಮಣ್ಣನವರು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದರು. ಶಾಲಾ-ಕಾಲೇಜುಗಳನ್ನು ಸ್ಥಾಪಿಸಿದ್ದಾರೆ, ಕೆರೆಗಳನ್ನು ತುಂಬಿಸಿದ್ದಾರೆ ಮತ್ತು ಒಂದಷ್ಟು ರಸ್ತೆಗಳನ್ನು ಮಾಡಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರು ಹೇಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡಿದ್ದ ತಮ್ಮಣ್ಣನವರು ’ಕ್ಷೇತ್ರದಿಂದ ಮುಖ್ಯಮಂತ್ರಿ ಆಗಿದ್ದ ಎಸ್.ಎಂ ಕೃಷ್ಣರವರಿಗೆ ಆಗ ಐಡಿಯಾ ಕೊಟ್ಟಿದ್ದೇ ನಾನು. ಅವರಿಗಿಂತಲೂ ಹೆಚ್ಚಿನ ಅಭಿವೃದ್ದಿ ನಾನು ಮಾಡಿದ್ದೇನೆ’ ಎಂದು ಹೇಳಿಕೊಂಡಿದ್ದರು.

ಆದರೆ ಮದ್ದೂರಿನ ವಾಸ್ತವ ಸ್ಥಿತಿ ಬೇರೆಯದೆ ಕಥೆ ಹೇಳುತ್ತದೆ. ಮದ್ದೂರು ನಗರದಲ್ಲಿ ಇಂದಿಗೂ ಒಂದು ಸಾರ್ವಜನಿಕ ಶೌಚಾಲಯವಿಲ್ಲ ಎಂದು ಜನ ಬೊಟ್ಟು ಮಾಡಿ ತೋರಿಸುತ್ತಾರೆ. 14 ಹಳ್ಳಿಗಳಿಗೆ ಕುಡಿಯುವ ನೀರು ಒದಗಿಸುವ ಕೆಮ್ಮಣ್ಣು ನಾಲೆ ಕಸಕಡ್ಡಿಗಳಿಂದ ತುಂಬಿಹೋಗಿದೆ. ಅದನ್ನು ಶುದ್ಧೀಕರಿಸಲು ಇನ್ನೂ ಸಾಧ್ಯವಾಗಿಲ್ಲವೆಂದರೆ ಇಷ್ಟು ವರ್ಷ ತಮ್ಮಣ್ಣನವರು ಏನು ಮಾಡುತ್ತಿದ್ದರು ಎಂಬ ಪ್ರಶ್ನೆಗೆ ಯಾರ ಬಳಿಯೂ ಉತ್ತರವಿಲ್ಲ. ತಾಲ್ಲೂಕು ಆಸ್ಪತ್ರೆಯಲ್ಲಿ ಸಮರ್ಪಕ ಯಂತ್ರಗಳಿಲ್ಲ, ಸಿಬ್ಬಂದಿಗಳಿಲ್ಲ, ಎಳನೀರು ಮಾರುಕಟ್ಟೆಯನ್ನು ಸುಸಜ್ಜಿತಗೊಳಿಸಿ ಆನ್‌ಲೈನ್ ಸೇವೆಗೆ ಉನ್ನತೀಕರಿಸಿಲ್ಲ, ಕಾಡು ಹಂದಿ-ಮುಳ್ಳಂದಿ ದಾಳಿಗೆ ಪರಿಹಾರ ಸಿಕ್ಕಿಲ್ಲ, ರೈತರ ವಿದ್ಯುತ್ ಬಿಲ್ ಕಡಿತವಾಗಿಲ್ಲ, ಕಬ್ಬಿಗೆ ವೈಜ್ಞಾನಿಕ ಬೆಲೆ ಸಿಕ್ಕಿಲ್ಲ-ಒ॒ಟ್ಟಿನಲ್ಲಿ ಈ ಇಲ್ಲಗಳ ನಡುವೆ ಬೇರೇನೂ ಹೆಚ್ಚು ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ. ಆಶ್ಚರ್ಯವೆಂದರೆ ಜನ ಇಷ್ಟೆಲ್ಲ ಸಂಕಷ್ಟದಲ್ಲಿದ್ದರೂ ತಮ್ಮಣ್ಣನವರು ತಲೆ ಕೆಡಿಸಿಕೊಂಡಿಲ್ಲ, ಹೋಗಲಿ ಉಳಿದ ಪಕ್ಷದ ಮುಖಂಡರಾದರೂ ಈ ಕುರಿತು ದನಿ ಎತ್ತುವರೆ ಎಂದರೆ ಅದೂ ಇಲ್ಲ. ಕ್ಷೇತ್ರದ ಯಾವೊಬ್ಬ ರಾಜಕಾರಣಿಗೂ ತಮ್ಮಣ್ಣನವರ ವಿರುದ್ಧ ದನಿ ಎತ್ತಿ ಮಾತನಾಡುವ ಧೈರ್ಯವಿಲ್ಲ. ಕಾಂಗ್ರೆಸ್, ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಸಹ ತಮ್ಮಣ್ಣನವರ ವೈಫಲ್ಯಗಳ ಕುರಿತು ಮಾತನಾಡದಷ್ಟು ಅಸಮರ್ಥರಾಗಿದ್ದಾರೆ. ಹಾಗಾಗಿ ತಮ್ಮಣ್ಣನವರು ಯಾವುದೇ ಚಿಂತೆಯಿಲ್ಲದೆ ಗೆಲುವು ನನ್ನದೆ ಎಂದುಕೊಂಡು ಆರಾಮಾಗಿದ್ದರು.

ದಿಢೀರ್ ಎಂಟ್ರಿ ಕೊಟ್ಟ ಕದಲೂರು ಉದಯ್

ಅಷ್ಟರಲ್ಲಿ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಮಾಡಿದವರು ಸೋಕಾಲ್ಡ್ ಸಮಾಜ ಸೇವಕರೆನಿಸಿಕೊಂಡ ಕದಲೂರು ಉದಯ್. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಪತನವಾಗುವುದಲ್ಲಿ ಪಾತ್ರವಹಿಸಿದ್ದಾರೆ ಎನ್ನಲಾದ ಇವರು ಹತ್ತಾರು ಕೆಸಿನೋ, ಕ್ಲಬ್‌ಗಳ ಮಾಲೀಕರಾಗಿ ಬಹುಕೋಟಿಗಳ ಒಡೆಯರೆನಿಸಿಕೊಂಡು ಕ್ಷೇತ್ರದಲ್ಲಿ ದುಡ್ಡನ್ನು ನೀರಿನಂತೆ ಖರ್ಚು ಮಾಡುವ ಮೂಲಕ ಮುನ್ನೆಲೆಗೆ ಬಂದಿದ್ದಾರೆನ್ನಲಾಗಿದೆ.

ಕದಲೂರು ಉದಯ್

ಕದಲೂರು ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡು ಕನಿಷ್ಠ ಒಂದು ವರ್ಷದಿಂದ ಮತಬೇಟೆಗೆ ಇಳಿದಿದ್ದಾರೆ. ಗ್ರಾಮಗಳಿಗೆ ಶುದ್ಧನೀರಿನ ಘಟಕ, ದೇವಾಲಯಗಳ ಜೀರ್ಣೋದ್ಧಾರಕ್ಕೆ ಹಣ, ಆರೋಗ್ಯ ಶಿಬಿರ, ಶಿಕ್ಷಕರಿಗೆ ಸನ್ಮಾನ, ಮಕ್ಕಳಿಗೆ ಬ್ಯಾಗು, ಧರ್ಮಸ್ಥಳ, ಓಂ ಶಕ್ತಿ ದೇವಾಲಯಗಳಿಗೆ ಹೋಗುವವರಿಗೆ ಸಾರಿಗೆ-ವಸತಿ ವ್ಯವಸ್ಥೆ, ಕ್ಷೇತ್ರದ ಮಹಿಳೆಯರಿಗೆ ಸೀರೆ, ಬಳೆ, ಕ್ಯಾಲೆಂಡರ್ ಉಳ್ಳ ಸಂಕ್ರಾತಿ ಬಾಗಿನ ಸೇರಿದಂತೆ ಹತ್ತಾರು ಜನಪ್ರಿಯ ಸಮಾಜಸೇವೆಯ ಕೆಲಸಗಳಲ್ಲಿ ನಿರತರಾಗಿದ್ದಾರೆ. ಕೆಲ ಗ್ರಾಮಗಳಿಗೆ ರಸ್ತೆ ನಿರ್ಮಾಣಕ್ಕೂ ಮುಂದಾಗಿ ಗಮನ ಸೆಳೆದಿದ್ದಾರೆ. ಆ ಮೂಲಕ ಮಿಂಚಿನ ಸಂಚಾರ ನಡೆಸಿರುವ ಅವರು ಪ್ರಬಲ ಅಭ್ಯರ್ಥಿಯಾಗಿ ಹೊರಹೊಮ್ಮಿ ತಮ್ಮಣ್ಣನವರ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.

ಅಪಾರ ಕಾರ್ಯಕರ್ತರ ಬಳಗ ಕಟ್ಟಿಕೊಂಡು ಸದ್ಯಕ್ಕೆ ಸ್ವತಂತ್ರವಾಗಿ ಗುರುತಿಸಿಕೊಂಡಿರುವ ಕದಲೂರು ಉದಯ್ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಬಿಜೆಪಿ ಟಿಕೆಟ್ ನೀಡಲು ಉತ್ಸುಕರಾಗಿದ್ದರೂ ಅವರ ಮನಸ್ಸು ಮಾತ್ರ ಕಾಂಗ್ರೆಸ್‌ನಲ್ಲಿದೆ. ಹಾಗಾಗಿ ಅವರ ಬೆಂಬಲಿಗರು ಡಿ.ಕೆ ಶಿವಕುಮಾರ್‌ರವರನ್ನು ಭೇಟಿ ಮಾಡಿ ತಮಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಮನವಿ ಮಾಡಿದ್ದಾರೆ. ಒಂದು ವೇಳೆ ಯಾವ ಪಕ್ಷವೂ ಟಿಕೆಟ್ ನೀಡದಿದ್ದರೆ ಪಕ್ಷೇತರವಾಗಿಯಾದರೂ ಕಣಕ್ಕಿಳಿಯುವುದು ಖಚಿತ ಎಂಬ ಸೂಚನೆ ನೀಡಿದ್ದಾರೆ.

ಕಾಂಗ್ರೆಸ್‌ನ ಕಥೆ-ವ್ಯಥೆ

ಒಂದು ಕಾಲದಲ್ಲಿ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಮದ್ದೂರು ಕ್ಷೇತ್ರವು ಪಕ್ಷದ ಸ್ವಯಂಕೃತ ಅಪರಾಧದಿಂದಾಗಿ ಕೈಚೆಲ್ಲಿ ಹೋಗಿದೆ. ವಾಪಸ್ ತೆಕ್ಕೆಗೆ ತೆಗೆದುಕೊಳ್ಳಲು ಅವಕಾಶವಿದ್ದರೂ ಸೂಕ್ತ ಯೋಜನೆಗಳಿಲ್ಲದೆ, ಇದುವರೆಗಿನ ಅಭ್ಯರ್ಥಿಗಳ ಹೊಂದಾಣಿಕೆ ರಾಜಕಾರಣದಿಂದ ಆ ಕೆಲಸ ನೆನೆಗುದಿಗೆ ಬಿದ್ದಿದೆ. ಕಳೆದ ಎರಡು ಚುನಾವಣೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡರವರು ತಮ್ಮಣ್ಣನವರೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಸೋತು ಕೊನೆಗೆ ಎಂಎಲ್‌ಸಿಯಾಗಿದ್ದಾರೆ ಎಂಬ ಆರೋಪ ಕೆಲವರದು. ಇನ್ನು ಈ ಬಾರಿ ಅಭ್ಯರ್ಥಿಯಾಗಲು ನಿರ್ಧರಿಸಿ ಎಸ್.ಎಂ ಗುರುಚರಣ್ ಅರ್ಜಿ ಸಲ್ಲಿಸಿದ್ದರು. ಅವರ ತಾತ ಎಸ್.ಎಂ ಕೃಷ್ಣ ಬಿಜೆಪಿಗೆ ಗುಡ್ ಬೈ ಹೇಳಿ ರಾಜಕೀಯ ನಿವೃತ್ತಿ ತೆಗೆದುಕೊಂಡಿದ್ದರಿಂದ ಅವರು ತನಗೆ ಕಾಂಗ್ರೆಸ್ ಟಿಕೆಟ್ ದಕ್ಕಿಸಿಕೊಡುತ್ತಾರೆ ಮತ್ತು ತನ್ನ ಪರ ಪ್ರಚಾರ ಮಾಡುತ್ತಾರೆ ಎಂದು ನಂಬಿದ್ದರು.

ಆದರೆ ಯಾವಾಗ ಕದಲೂರು ಉದಯ್ ಕಾಂಗ್ರೆಸ್ ಟಿಕೆಟ್‌ಗಾಗಿ ಪ್ರಯತ್ನಿಸಿದರೋ ಆಗಿನಿಂದ ಗುರುಚರಣ್‌ಗೆ ಆತಂಕ ಶುರುವಾಗಿದೆ. ತನಗೆ ಈ ಬಾರಿ ಟಿಕೆಟ್ ಸಿಗದಿದ್ದರೂ ಪರವಾಗಿಲ್ಲ, ಆದರೆ ಕದಲೂರು ಉದಯ್‌ಗೆ ಮಾತ್ರ ಕಾಂಗ್ರೆಸ್ ಟಿಕೆಟ್ ಸಿಗಬಾರದು ಎಂಬ ಯೋಚನೆ ಅವರದು. ಒಂದು ವೇಳೆ ಕದಲೂರು ಉದಯ್‌ಗೆ ಟಿಕೆಟ್ ಸಿಕ್ಕಲ್ಲಿ ಅವರು ಬೆಳೆದು ತಾವು ಮೂಲೆಗುಂಪಾಗುತ್ತೇವೆಂಬ ಭಯದಲ್ಲಿ ಮತ್ತೊಂದು ಗೇಮ್ ಪ್ಲಾನ್ ಮಾಡಿದ್ದಾರೆನ್ನಲಾಗುತ್ತಿದೆ. ಅದೇನೆಂದರೆ ಮತ್ತೋರ್ವ ಟಿಕೆಟ್ ಆಕಾಂಕ್ಷಿ ರಾಮೃಕೃಷ್ಣರವರು ಮತ್ತು ಹಲವು ಕಾಂಗ್ರೆಸ್ ಮುಖಂಡರೊಂದಿಗೆ ರಾತ್ರೋರಾತ್ರಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ರವರನ್ನು ಭೇಟಿ ಮಾಡಿ ನೀವೇ ಮದ್ದೂರಿನಲ್ಲಿ ಬಂದು ಸ್ಪರ್ಧಿಸಿ ಎಂಬ ಆಹ್ವಾನ ನೀಡಿದ್ದಾರೆ! ಆದರೆ ಡಿ.ಕೆ ಶಿವಕುಮಾರ್ ಮದ್ದೂರಿಗೆ ಬರುವ ಮನಸ್ಸು ಮಾಡುವುದರ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ.

ಉಳಿದಂತೆ ಕಾಂಗ್ರೆಸ್‌ನಿಂದ ಮಾಜಿ ವಿಧಾನ ಪರಿಷತ್ ಸದಸ್ಯರಾದ ಬಿ.ರಾಮಕೃಷ್ಣ ಮತ್ತು ಕೆಐಎಡಿಬಿ ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ವಿ.ಬಿ ಶಂಕರೇಗೌಡರವರು ಕಾಂಗ್ರೆಸ್ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷವು ಕದಲೂರು ಉದಯ್‌ಗೆ ಟಿಕೆಟ್ ಕೊಟ್ಟರೆ ತಮ್ಮಣ್ಣನವರ ವಿರುದ್ಧ ನೇರಾನೇರ ಪೈಪೋಟಿ ಏರ್ಪಡುತ್ತದೆ ಎಂಬ ಅಭಿಪ್ರಾಯವನ್ನು ಕೆಲ ಕಾಂಗ್ರೆಸ್ ಕಾರ್ಯಕರ್ತರೇ ವ್ಯಕ್ತಪಡಿಸುತ್ತಿದ್ದಾರೆ.

ಜೆಡಿಎಸ್ ತೊರೆದ ಸ್ವಾಮಿಗೆ ಬಿಜೆಪಿ ಟಿಕೆಟ್?

ಜೆಡಿಎಸ್ ಟಿಕೆಟ್ ಸಿಗುವುದಿಲ್ಲ ಎಂಬುದನ್ನು ಅರಿತು ಪಕ್ಷ ತೊರೆದು ಬಿಜೆಪಿ ಸೇರಿರುವ ಮುನ್ಮುಲ್ ನಿರ್ದೇಶಕ ಎಸ್.ಪಿ ಸ್ವಾಮಿಯವರು ಬಿಜೆಪಿ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಮಂಡ್ಯ ಜಿ.ಪಂ ಅಧ್ಯಕ್ಷರಾಗಿದ್ದ ಅವರ ಪತ್ನಿ ನಾಗರತ್ನರವರ ಜೊತೆಗೂಡಿ ಬಿಜೆಪಿ ಕಟ್ಟುವಲ್ಲಿ ಶ್ರಮಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಟಿಕೆಟ್ ಖಾತ್ರಿ ಎನ್ನಲಾಗುತ್ತಿದೆ. ಆದರೆ ಉದ್ಯಮಿ ಕದಲೂರು ಉದಯ್‌ರವರು ಹವಾ ಎಬ್ಬಿಸಿದ ನಂತರ ಬಿಜೆಪಿ ಅವರತ್ತ ಮುಖ ಮಾಡಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

2023ರ ಸಾಧ್ಯತೆಗಳೇನು?

ಆರು ತಿಂಗಳ ಹಿಂದಿನವರೆಗೂ ಡಿ.ಸಿ ತಮ್ಮಣ್ಣನವರು ಸುಲಭವಾಗಿ ಗೆಲ್ಲುತ್ತಾರೆ ಎಂಬ ಪರಿಸ್ಥಿತಿ ಇತ್ತು. ಆದರೆ ಈಗ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಹಿಂದೆಲ್ಲಾ ತಮ್ಮಣ್ಣನವರ ಹೊಂದಾಣಿಕೆ ರಾಜಕಾರಣಕ್ಕೆ ಸುಲಭವಾಗಿ ಬಗ್ಗುವ ಅಭ್ಯರ್ಥಿಗಳಿದ್ದರು. ಇದುವರೆಗೂ ತಮ್ಮಣ್ಣನವರನ್ನು ಎದುರಿಸುವ, ಅವರೆದುರು ಗೆಲ್ಲುವ ತಾಕತ್ತಿರುವ ಒಬ್ಬ ಡೈನಾಮಿಕ್ ವ್ಯಕ್ತಿಯ ನಿರೀಕ್ಷೆಯಲ್ಲಿತ್ತು ಮದ್ದೂರು ಕ್ಷೇತ್ರ. ಆ ಸ್ಥಾನಕ್ಕೆ ಉದ್ಯಮಿ ಕದಲೂರು ಉದಯ್ ಪ್ರತಿಷ್ಠಾಪಿತರಾಗುತ್ತಿದ್ದಾರೆ. ಒಂದರ್ಥದಲ್ಲಿ ಉದಯ್‌ರವರು ಡಿ.ಸಿ ತಮ್ಮಣ್ಣನವರಿಗೆ ಪೈಪೋಟಿ ನೀಡುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಹೈಕಮಾಂಡ್ ಗಮನಕ್ಕೆ ಬಂದಿದೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ನಿಜವಾಗಿಯೂ ಮದ್ದೂರು ಕ್ಷೇತ್ರವನ್ನು ಗೆದ್ದುಕೊಳ್ಳುವ ಇರಾದೆ ಇದ್ದರೆ ಅದು ಕದಲೂರು ಉದಯ್‌ಗೆ ಮಣೆ ಹಾಕಲೇಬೇಕಾಗುತ್ತದೆ ಎನ್ನುತ್ತಾರೆ ಹಲವು ಕಾಂಗ್ರೆಸ್ ಬೆಂಬಲಿಗರು. ಇಲ್ಲದಿದ್ದಲ್ಲಿ ಅವರು ಪಕ್ಷೇತರ ಅಭ್ಯರ್ಥಿಯಾದರೂ ಕಣಕ್ಕಿಳಿಯುವುದು ಖಚಿತ. ಆಗ ಅವರು ಕಾಂಗ್ರೆಸ್ ಮತಬುಟ್ಟಿಗೂ ತಪ್ಪದೇ ಕೈ ಹಾಕುತ್ತಾರೆ. ಹಾಗಾದಲ್ಲಿ ಅದು ಡಿ.ಸಿ ತಮ್ಮಣ್ಣನವರಿಗೆ ವರವಾಗುವ ಸಾಧ್ಯತೆಯಿದೆ.

ಇನ್ನು ಎಸ್.ಪಿ ಸ್ವಾಮಿಯವರು ಜೆಡಿಎಸ್ ಪಕ್ಷ ತೊರೆಯುವಾಗ ಅವರೊಬ್ಬರೆ ಹೋಗುವ ಬದಲಿಗೆ ನಾಲ್ಕು ಜನ ಜಿ.ಪಂ ಸದಸ್ಯರನ್ನು ಕರೆದುಕೊಂಡು ಹೋಗಿದ್ದಾರೆ. ಅವರು ಯಾರ ಮತ ಕಬಳಿಸುತ್ತಾರೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ.

ಕದಲೂರು ಉದಯ್ ಕಾಂಗ್ರೆಸ್ ಅಭ್ಯರ್ಥಿಯಾದರೆ ಆಗ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಒಳೇಟು ಕೊಡುವ ಸೂಚನೆ ನೀಡಬಹುದು. ಪಕ್ಷ ಅವರನ್ನು ಸಮಾಧಾನ ಮಾಡಿದರೆ ಈ ಬಾರಿ ಡಿ.ಸಿ ತಮ್ಮಣ್ಣ ಮತ್ತು ಕದಲೂರು ಉದಯ್ ನಡುವೆ ನೇರ ಪೈಪೋಟಿ ಕಂಡುಬರುತ್ತದೆ. ಆಗ ಕದಲೂರು ಉದಯ್ ಅವರಿಗೆ ಒಂದು ಕೈ ಮೇಲಾಗುವ ಸಂಭವವೂ ಇದೆ. ಅಂತಹ ಸಂದರ್ಭ ಬಂದಲ್ಲಿ ಎಚ್.ಡಿ ಕುಮಾರಸ್ವಾಮಿಯವರು ಕದಲೂರು ಉದಯ್‌ರವರ ಕಡತಗಳ ಬಿಚ್ಚಲು ಮುಂದಾಗಬಹುದು ಎಂಬ ವಾದವೂ ಇದೆ. ಒಂದು ವೇಳೆ ಕಾಂಗ್ರೆಸ್ ಟಿಕೆಟ್ ಸಿಗದೆ ಕದಲೂರು ಪಕ್ಷೇತರ ಅಭ್ಯರ್ಥಿಯಾದರೂ ತಮ್ಮಣ್ಣನವರಿಗೆ ಪೈಪೋಟಿ ನೀಡಿಯೇ ನೀಡುತ್ತಾರೆ ಎಂಬ ವಾತಾವರಣ ಸದ್ಯಕ್ಕೆ ಕಂಡುಬರುತ್ತಿದೆ. ಚುನಾವಣೆ ಹತ್ತಿರ ಬಂದಂತೆ ಮತ ಸಮೀಕರಣಗಳು ಮತ್ತಷ್ಟು ಬದಲಾಗಬಹುದು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...