ಬಿಜೆಪಿ ಐಟಿ ಸೆಲ್ಗೆ ಸಂಬಂಧಿಸಿದ ಮಾನಹಾನಿಕರ ಎನ್ನಲಾದ ವಿಡಿಯೊವನ್ನು ಮರುಟ್ವೀಟ್ ಮಾಡಿ ತಪ್ಪೆಸಗಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದಾರೆ.
2018ರಲ್ಲಿ ಯೂಟ್ಯೂಬರ್ ಧ್ರುವ್ ರಾಠಿ ಅವರು ಪೋಸ್ಟ್ ಮಾಡಿದ್ದ ಮಾನಹಾನಿಕರ ಎನ್ನಲಾದ ವಿಡಿಯೋವನ್ನು ಮರುಟ್ವೀಟ್ ಮಾಡಿದ್ದಕ್ಕಾಗಿ ಕೇಜ್ರಿವಾಲ್ ವಿರುದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.
ಈ ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ಕೇಜ್ರಿವಾಲ್ಗೆ ಸಮನ್ಸ್ ನೀಡಿತ್ತು. ಅದನ್ನು ಪ್ರಶ್ನಿಸಿ ಕೇಜ್ರಿವಾಲ್ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ ಸಮನ್ಸ್ ಅನ್ನು ಎತ್ತಿ ಹಿಡಿದಿತ್ತು. ಹಾಗಾಗಿ, ಕೇಜ್ರಿವಾಲ್ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಇಂದು (ಫೆ 26) ವಿಚಾರಣೆ ನಡೆಸಿತು.
“ಮಾನಹಾನಿಕರ ಆರೋಪಕ್ಕೆ ಕಾರಣವಾಗಿರುವ ಮರುಟ್ವೀಟ್ ಕೂಡ ಸಾಮಾನ್ಯವಾಗಿ ಐಪಿಸಿ ಸೆಕ್ಷನ್ 499ರ ಅಡಿಯಲ್ಲಿ ಮೂಲ ಪೋಸ್ಟ್ಗೆ ಸಮಾನವಾಗಿರುತ್ತದೆ”ಎಂದು ಫೆಬ್ರವರಿ 5ರ ಆದೇಶದಲ್ಲಿ ಹೈಕೋರ್ಟ್ ಹೇಳಿತ್ತು.
ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಅವರ ಸುಪ್ರೀಂ ಕೋರ್ಟ್ ಪೀಠವು ಮುಂದಿನ ವಿಚಾರಣೆಯನ್ನು ಮಾರ್ಚ್ 11ಕ್ಕೆ ನಿಗದಿಪಡಿಸಿದ್ದು, ಅಲ್ಲಿಯವರೆಗೆ ಪ್ರಕರಣದ ವಿಚಾರಣೆ ಮುಂದುವರೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ ನಿರ್ದೇಶಿಸಿದೆ.
ಕೇಜ್ರಿವಾಲ್ ತಪ್ಪೊಪ್ಪಿಕೊಂಡ ಹಿನ್ನೆಲೆಯಲ್ಲಿ ‘ಈ ಪ್ರಕರಣವನ್ನು ಇಲ್ಲಿಗೆ ಮುಕ್ತಾಯಗೊಳಿಸಲು ಬಯಸುವಿರಾ?’ ಎಂದು ದೂರುದಾರರನ್ನು ಪೀಠವು ಕೇಳಿದೆ. ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು ಕೇಜ್ರಿವಾಲ್ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಕೇಜ್ರಿವಾಲ್ ಮರುಟ್ವೀಟ್ ಮಾಡಿದ್ದ ವಿಡಿಯೋದಲ್ಲಿ ಮಾನಹಾನಿಕರ ಅಂಶಗಳು ಇತ್ತು ಎಂದು ಆರೋಪಿಸಿ ವಿಕಾಸ್ ಸಾಂಕೃತ್ಯಾನನ್ ಎಂಬವರು ಕೇಜ್ರಿವಾಲ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಇದನ್ನೂ ಓದಿ : “ನಿಮಗೆ ಸಾಧ್ಯವಾಗದಿದ್ದರೆ ನಾವು ಮಾಡುತ್ತೇವೆ”: ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಸುಪ್ರೀಂ ಕೋರ್ಟ್