ಮಹಿಳಾ ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಖಾಯಂ ಆಯೋಗ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಕೊನೆಯ ಎಚ್ಚರಿಕೆ ನೀಡಿರುವ ಸುಪ್ರೀಂ ಕೋರ್ಟ್, “ಮಹಿಳೆಯರನ್ನು ಬಿಟ್ಟು ಬಿಡಲು ಸಾಧ್ಯವಿಲ್ಲ. ನಿಮಗೆ ಮಾಡಲು ಸಾಧ್ಯವಾಗದಿದ್ದರೆ, ನಾವು ಮಾಡುತ್ತೇವೆ” ಎಂದಿದೆ.
“ಕಾರ್ಯಾತ್ಮಕತೆ ಮುಂತಾದ ವಾದವು ಈ ವರ್ಷ ನಿಲ್ಲದು. ನಿಮಗಾಗದೇ ಇದ್ದರೆ ನಾವು ಮಾಡುತ್ತೇವೆ. ಅದನ್ನು ಪರಿಗಣಿಸಿ” ಎಂದು ಕೇಂದ್ರ ಪರ ವಕೀಲ, ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರನ್ನುದ್ದೇಶಿಸಿ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಹೇಳಿದರು. ಕೋಸ್ಟ್ ಗಾರ್ಡ್ಗೆ ಅಫಿಡವಿಟ್ ಸಲ್ಲಿಸಲು ಸೂಚಿಸುವುದಾಗಿ ಕೇಂದ್ರದ ಪರ ವಕೀಲರು ಹೇಳಿದರು.
ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಮಾರ್ಚ್ 1ಕ್ಕೆ ನಿಗದಿಪಡಿಸಿದೆ. ಕೋಸ್ಟ್ ಗಾರ್ಡ್ ಶಾರ್ಟ್ ಸರ್ವಿಸ್ ಅಪಾಯಿಂಟ್ಮೆಂಟ್ ಅಧಿಕಾರಿ ಪ್ರಿಯಾಂಕಾ ತ್ಯಾಗಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸಿತು.
ಕೋಸ್ಟ್ ಗಾರ್ಡ್ ಶಾರ್ಟ್ ಸರ್ವಿಸ್ ಆಯೋಗದ ಅಡಿಯಲ್ಲಿ ಸೇವೆಗೆ ಸೇರುವ ಅರ್ಹ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ ರಚಿಸುವಂತೆ ಅರ್ಜಿಯಲ್ಲಿ ಮನವಿ ಮಾಡಲಾಗಿದೆ. ಕೋಸ್ಟ್ ಗಾರ್ಡ್ ನೌಕಾಪಡೆ ಮತ್ತು ಸೇನೆಗಿಂತ ಭಿನ್ನವಾಗಿದೆ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್ ವಾದಿಸಿದ್ದಾರೆ.
ಫೆ. 19ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಕೋಸ್ಟ್ ಗಾರ್ಡ್ನಲ್ಲಿ ಮಹಿಳೆಯರಿಗೆ ಖಾಯಂ ಆಯೋಗದ ನೀಡಿಕೆ ವಿಚಾರದಲ್ಲಿ ‘ಪುರುಷ ಪ್ರಧಾನ’ ಧೋರಣೆ ಅನುಸರಿಸುತ್ತಿರುವ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. “ಸೇನೆ ಮತ್ತು ನೌಕಾಪಡೆ ಈಗಾಗಲೇ ಈ ನೀತಿಯನ್ನು ಜಾರಿಗೆ ತಂದಿರುವಾಗ ಕೋಸ್ಟ್ ಗಾರ್ಡ್ ಏಕೆ ವಿಭಿನ್ನವಾಗಿರಬೇಕು?” ಎಂದು ಪ್ರಶ್ನಿಸಿತ್ತು.
“ಮಹಿಳೆಯರು ಗಡಿಗಳನ್ನು ರಕ್ಷಿಸಬಲ್ಲರಾದರೆ, ಅವರು ಕರಾವಳಿಯನ್ನೂ ರಕ್ಷಿಸಬಲ್ಲರು” ಎಂದು ಹೇಳಿದ್ದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, ಮಹಿಳಾ ಶಕ್ತಿಯ ಬಗ್ಗೆ ಮಾತನಾಡುವ ಸರ್ಕಾರಕ್ಕೆ ತನ್ನ ಬದ್ಧತೆಯನ್ನು ಪ್ರದರ್ಶಿಸುವ ಸಮಯ ಬಂದಿದೆ ಎಂದಿತ್ತು.
ಇದನ್ನೂ ಓದಿ : ಮುಸ್ಲಿಮರ ವಿರುದ್ಧದ ದ್ವೇಷ ಭಾಷಣ ಕಳೆದ 6 ತಿಂಗಳಲ್ಲಿ ಅತಿ ಹೆಚ್ಚಳ: ವರದಿ