ಮಧ್ಯಪ್ರದೇಶದದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಹೊಸದಾಗಿ ನಿರ್ಮಿಸಲಾದ ಸೇತುವೆ ಸೇರಿದಂತೆ ಎರಡು ಸೇತುವೆಗಳು ಕೊಚ್ಚಿಕೊಂಡು ಹೋಗಿವೆ. ಅಷ್ಟೇ ಅಲ್ಲದೆ 14 ಜನರು ಸಾವನ್ನಪ್ಪಿದ್ದು, ರಾಜ್ಯದ 450 ಕ್ಕೂ ಹೆಚ್ಚು ಹಳ್ಳಿಗಳ ಜನರನ್ನು ಸ್ಥಳಾಂತರಗೊಳಿಸಲಾಗಿದೆ.
ಕೊಚ್ಚಿಕೊಂಡು ಹೋಗಿರುವ ಸೇತುವೆ ರಾಜ್ಯದ ಮಹಾಕೋಷಲ್ ಪ್ರದೇಶದ ಸಿಯೋನಿ ಜಿಲ್ಲೆಯ ವೈಂಗಂಗಾ ನದಿಯ ಮೇಲೆ ನಿರ್ಮಿಸಲಾಗಿತ್ತು.
ಒಂದು ದಶಕದ ಹಿಂದೆ ನಿರ್ಮಿಸಲಾದ ಒಂದು ಸೇತುವೆ ಛಾಪಾರಾ ಮತ್ತು ಭೀಮ್ಗಡ್ನ್ನು ಸಂಪರ್ಕಿಸಿದರೆ, ಸೋನ್ವಾರಾ ಮತ್ತು ಧನೋರಾವನ್ನು ಸಂಪರ್ಕಿಸುವ ಇನ್ನೊಂದು ಸೇತುವೆ ಕೇವಲ ಎರಡು ತಿಂಗಳ ಹಿಂದೆಯೇ ಪೂರ್ಣಗೊಂಡಿತ್ತು ಎನ್ನಲಾಗಿದೆ.
ಇದನ್ನೂ ಓದಿ: ಪ್ರವಾಹ, ಕೊರೊನಾ ಸಂದರ್ಭದಲ್ಲಿ ಕಣ್ಮರೆ, ಗಲಭೆ ಆದಾಗ ಪ್ರತ್ಯಕ್ಷ: ಯಾರಿವರು ಗೊತ್ತೇ?
ಎರಡು ಸೇತುವೆಗಳನ್ನು ತಲಾ 3 ಕೋಟಿ ರೂ.ಗಿಂತ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಎರಡನೇ ಸೇತುವೆಯನ್ನು ಪ್ರಧಾನ್ ಮಂತ್ರಿ ಗ್ರಾಮೀಣ ಸಡಕ್ ಯೋಜನೆ (ಪಿಎಂಜಿಎಸ್ವೈ) ಅಡಿಯಲ್ಲಿ ನಿರ್ಮಿಸಲಾಗಿದೆ.
ಇದರ ನಿರ್ಮಾಣವು ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭವಾಗಿ, ಎರಡು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡಿತ್ತು. ಸೇತುವೆಯನ್ನು ಇನ್ನೂ ಅಧಿಕೃತವಾಗಿ ಉದ್ಘಾಟಿಸಲಿಲ್ಲವಾದರೂ, ಅದು ಈಗಾಗಲೇ ಬಳಕೆಯಲ್ಲಿತ್ತು. ಅದೀಗ ನೀರು ಪಾಲಾಗಿದೆ.
“ಸೇತುವೆ 150 ಮೀಟರ್ ಉದ್ದ ಮತ್ತು 9.28 ಮೀಟರ್ ಎತ್ತರವಿತ್ತು. ಇದರ ನಿರ್ಮಾಣವು ಜೂನ್ 2020 ರಲ್ಲಿ ಪೂರ್ಣಗೊಂಡಿತು. ಕಳೆದ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ವೈಂಗಂಗಾ ನದಿ ಮತ್ತು ಅದರ ಉಪನದಿಯಲ್ಲಿ ಪ್ರವಾಹ ಉಂಟಾಯಿತು. ಭಾರೀ ಮಳೆ ಮತ್ತು ನದಿಯ ಪ್ರವಾಹದಿಂದಾಗಿ ಭೀಮ್ಗಡ್ ಅಣೆಕಟ್ಟು ಪೂರ್ಣ ಸಾಮರ್ಥ್ಯಕ್ಕೆ ತುಂಬಿತು. ಆಗಸ್ಟ್ 27-28 ರ ರಾತ್ರಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡಬೇಕಾಗಿತ್ತು, ಇದರಿಂದಾಗಿ ಎರಡು ತಿಂಗಳ ಹಿಂದೆಯಷ್ಟೇ ಪೂರ್ಣಗೊಂಡಿದ್ದ ಸೇತುವೆ ಕೊಚ್ಚಿಕೊಂಡು ಹೋಗಿದೆ” ಎಂದು ಸಿಯೋನಿ ಜಿಲ್ಲೆಯ ಕಾರ್ಯನಿರ್ವಾಹಕ ಎಂಜಿನಿಯರ್ (ಪಿಎಂಜಿಎಸ್ವೈ) ಜೆಪಿ ಮೆಹ್ರಾ ಹೇಳಿದ್ದಾರೆ.
ಸಿಯೋನಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕುಮಾರ್ ಪ್ರತೀಕ್ ಎರಡು ಸೇತುವೆಗಳ ಕುಸಿತ ಮತ್ತು ಜಿಲ್ಲೆಯಲ್ಲಿ ಪ್ರವಾಹ ಮತ್ತು ಮಳೆ ಸಂಬಂಧಿತ ಅಪಘಾತಗಳಿಂದಾಗಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ದೃಡಪಡಿಸಿದರು. ಸಿಯೋನಿ ಜಿಲ್ಲಾ ಆಡಳಿತವು ಅಪಘಾತದ ಬಗ್ಗೆ ತನಿಖೆ ನಡೆಸಲು ಆದೇಶಿಸಿದೆ.
ಇದನ್ನೂ ಓದಿ: ನಿಲ್ಲದ ಪ್ರವಾಹ, ಬಾರದ ಪರಿಹಾರ: ಇಂದಿನ ಪ್ರಧಾನಿ ಸಭೆಯಲ್ಲಿ ದನಿಯೆತ್ತಲು ವಿಪಕ್ಷಗಳ ಆಗ್ರಹ
ಪಿಡಬ್ಲ್ಯುಡಿ ಇಲಾಖೆಯಿಂದ ಸುಮಾರು 10 ವರ್ಷಗಳ ಹಿಂದೆ ಅದೇ ವೈಂಗಂಗಾ ನದಿಯಲ್ಲಿ ನಿರ್ಮಿಸಲಾದ ಮತ್ತೊಂದು ಸೇತುವೆ ಭೀಮ್ಗಡ್ ಅಣೆಕಟ್ಟಿನಿಂದ ಕೇವಲ ಮೂರು ಕಿಲೋಮೀಟರ್ ದೂರದಲ್ಲಿದೆ, ಇದರಿಂದ ಕಳೆದ ಎರಡು ದಿನಗಳಲ್ಲಿ ಸುಮಾರು 2.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿದೆ.
ಈ ನಡುವೆ, ಕಳೆದ ಮೂರು-ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಮಧ್ಯ ಮಧ್ಯಪ್ರದೇಶದ ಮಹಾಕೋಷಲ್ ಪ್ರದೇಶದ ಪ್ರಮುಖ ನದಿಗಳಾದ ನರ್ಮದಾ, ಪೆಂಚ್ ಮತ್ತು ವೈಂಗಂಗ ನದಿಗಳಲ್ಲಿ ಪ್ರವಾಹ ಉಂಟಾಗಿದ್ದು, ಕನಿಷ್ಠ 12 ಜಿಲ್ಲೆಗಳಲ್ಲಿ ಸಾವಿರಾರು ಜನರ ಮೇಲೆ ಪರಿಣಾಮ ಬೀರಿದೆ.
ಹೋಶಂಗನಾಡ್, ಭೋಪಾಲ್, ಚಿಂದ್ವಾರ, ಸೆಹೋರ್, ರೈಸನ್, ನರಸಿಂಗ್ಪುರ, ಸಿಯೋನಿ, ಬಾಲಘಾಟ್, ಹರ್ಡಾ, ವಿದಿಶಾ ಮತ್ತು ದೇವಾಸ್ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿದೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು. ಸ್ಥಳೀಯ ಆಡಳಿತ ಮತ್ತು ಪೊಲೀಸ್, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ಹಾಗೂ ಭಾರತೀಯ ಸೇನೆ ನಡೆಸುತ್ತಿರುವ ರಕ್ಷಣಾ ಕಾರ್ಯಗಳನ್ನು ಪರಿಶೀಲಿಸಿದರು.
ಎನ್ಡಿಆರ್ಎಫ್, ಎಸ್ಡಿಆರ್ಎಫ್, ಸೇನಾ ತಂಡಗಳು ಈವರೆಗೆ ಸುಮಾರು 11,000 ಜನರನ್ನು ರಕ್ಷಿಸಿದೆ.
ರಾಜ್ಯದ ಒಟ್ಟು 251 ಜಲಾಶಯಗಳಲ್ಲಿ 120 ರಷ್ಟು ತುಂಬಿದ್ದು, ಹೆಚ್ಚುವರಿ ನೀರನ್ನು ಹೊರಹಾಕಲು ಅಣೆಕಟ್ಟು ಗೇಟ್ಗಳನ್ನು ತೆರೆಯಬೇಕಾಗಿದೆ. ಒಟ್ಟಾರೆಯಾಗಿ ರಾಜ್ಯದಲ್ಲಿ ಶನಿವಾರ ಬೆಳಿಗ್ಗೆ ತನಕ 815.2 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ: ಭಾರತದಾದ್ಯಂತ ಪ್ರವಾಹ; 508 ಸಾವು, 1.26 ಕೋಟಿ ಜನ ನಿರಾಶ್ರಿತರು