ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣಾ ಕಣ ರಂಗೇರಿದೆ. ಈಗಾಗಲೇ ಬಿಜೆಪಿ ಮತ್ತು ಶಿವಸೇನೆ ಮೈತ್ರಿ ಮಾಡಿಕೊಂಡಿದ್ದು, ಸ್ಥಾನಗಳನ್ನೂ ಹಂಚಿಕೊಂಡಿವೆ. ಆದರೆ ಸೀಟು ಹಂಚಿಕೆ ಬಗ್ಗೆ ಶಿವಸೇನೆ ಕಾರ್ಯಕರ್ತರು ಮತ್ತು ಪ್ರಮುಖರು ಅಸಮಾಧಾನಗೊಂಡಿದ್ದು, ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಚುನಾವಣೆಗೆ ಕೆಲ ದಿನಗಳು ಬಾಕಿಯಿದ್ದಾಗಲೇ ಕಾರ್ಯಕರ್ತರು ರಾಜೀನಾಮೆ ನೀಡಿರುವುದು ಶಿವಸೇನೆಗೆ ಶಾಕ್ ನೀಡಿದೆ.
ಶಿವಸೇನೆಯ 26 ಕಾರ್ಪೋರೇಟರ್ ಗಳು, ಸುಮಾರು 300 ಕಾರ್ಯಕರ್ತರು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಸೀಟು ಹಂಚಿಕೆಯಲ್ಲಿ ಬಿಜೆಪಿ ತಾರತಮ್ಯ ಮಾಡಿದೆ. ಪ್ರಮುಖ ಸ್ಥಾನಗಳನ್ನು ತಾನು ತೆಗೆದುಕೊಂಡು, ಚಿಕ್ಕ ಚಿಕ್ಕ ಸ್ಥಾನಗಳನ್ನು ಶಿವಸೇನೆಗೆ ನೀಡಿದೆ. ಪೂರ್ವದ ಕಲ್ಯಾಣ ಕ್ಷೇತ್ರವನ್ನು ಶಿವಸೇನೆಗೆ ಬಿಟ್ಟು ಕೊಡುವಂತೆ ಶಿವಸೇನೆ ಒತ್ತಾಯಿಸಿದ್ದರೂ ಪ್ರಯೋಜನವಾಗಲಿಲ್ಲ. ಪಕ್ಷ ಯಾವುದೇ ಮುಜುಗರಕ್ಕೆ ಒಳಗಾಗದಿರಲಿ ಎಂದು ಮನನೊಂದು ರಾಜೀನಾಮೆ ನೀಡಿದ್ದೇವೆಂದು ಕಾರ್ಯಕರ್ತರು ಹೇಳಿದ್ದಾರೆ.
ರಾಜೀನಾಮೆ ಸಲ್ಲಿಸಿರುವ ಶರದ್ ಪಾಟೀಲ್ ಮಾತನಾಡಿ, ರಾಜೀನಾಮೆ ಪತ್ರಗಳನ್ನು ಪಕ್ಷದ ಮುಖ್ಯಸ್ಥ ಉದ್ಧವ್ ಠಾಕ್ರೆ, ಕ್ಯಾಬಿನೆಟ್ ಮಿನಿಸ್ಟರ್ ಏಕನಾಥ್ ಶಿಂಧೆ, ಕಲ್ಯಾಣ ಎಂ.ಪಿ ಶ್ರೀಕಾಂತ್ ಶಿಂಧೆಗೆ ರವಾನಿಸಿದ್ದಾಗಿ ತಿಳಿಸಿದ್ದಾರೆ.
ಹೌದು… ಮಹಾರಾಷ್ಟ್ರದಲ್ಲಿ ಹೆಚ್ಚು ಪ್ರಾಬಲ್ಯವಿರುವ ಪಕ್ಷ ಶಿವಸೇನೆ. ಹಿಂದೂ ಹಾಗೂ ಮರಾಠಿಗರು ಬೆಂಬಲಿಸುವ ಪಕ್ಷ ಶಿವಸೇನೆ. ರಾಜ್ಯದಲ್ಲಿ ಒಟ್ಟು 288 ವಿಧಾನಸಭೆ ಕ್ಷೇತ್ರಗಳಿವೆ. ಪ್ರತಿಸಲದಂತೆ ಈ ಬಾರಿಯೂ ಬಿಜೆಪಿ ಮತ್ತು ಶಿವಸೇನೆ ಮಧ್ಯೆ ಸೀಟು ಹಂಚಿಕೆ ಗೊಂದಲ ಸೃಷ್ಟಿಯಾಗಿತ್ತು. 120ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಶಿವಸೇನೆಗೆ ಬಿಟ್ಟುಕೊಡಬೇಕು ಎಂದು ಉದ್ಧವ್ ಠಾಕ್ರೆ ಪಟ್ಟು ಹಿಡಿದಿದ್ದರು. ಅದರಂತೆ ಬಿಜೆಪಿ 150 ಸ್ಥಾನಗಳನ್ನು ಇಟ್ಟುಕೊಂಡು, ಶಿವಸೇನೆಗೆ 124 ಸ್ಥಾನಗಳನ್ನು ಬಿಟ್ಟು ಕೊಟ್ಟಿದೆ. ಆದರೆ ಶಿವಸೇನೆ ಪ್ರಮುಖರು ಮತ್ತು ಕಾರ್ಯಕರ್ತರು ಬಿಜೆಪಿ ನಡೆಯಿಂದ ಬೇಸರಗೊಂಡಿದ್ದಾರೆ. ಮಹಾರಾಷ್ಟ್ರದಲ್ಲಿ ಪರಿಶ್ರಮ ವಹಿಸಿ ಕೆಲಸ ಮಾಡುವ ಶಿವಸೇನೆಗೆ ಕಡಿಮೆ ಸೀಟು ನೀಡಿರುವುದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಧಾನಸಭೆ ಚುನಾವಣೆಗೆ ಬಿಜೆಪಿ ಹಾಗೂ ಶಿವಸೇನೆ ಮಧ್ಯೆ 50:50 ಸೀಟು ಹಂಚಿಕೆಯಾಗುತ್ತೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಶಿವಸೇನೆಗೆ ಕೇವಲ 124 ಸ್ಥಾನ ನೀಡಿರುವ ಬಿಜೆಪಿ 150 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಶಿವಸೇನೆಯ ನಾಯಕ ಧನಂಜಯ್ ಬೋಡಾರೆ ಮಾತನಾಡಿ, ನಾನು ಈ ಭಾರಿ ವಿಧಾನಸಭೆ ಚುನಾವಣೆಯಲ್ಲಿ ಪೂರ್ವ ಕಲ್ಯಾಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದೆ. ಅಲ್ಲಿ 10 ವರ್ಷಗಳಿಂದ ಮೂಲ ಸೌಕರ್ಯ ಹಾಗೂ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಆದರೆ ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟು ಕೊಡಲಾಗಿದೆ ಎಂದು ಅತೃಪ್ತಿ ಹೊರಹಾಕಿದರು.