ನವೆಂಬರ್ 2005ರ ನಂತರ ಸೇವೆಗೆ ಸೇರ್ಪಡೆಗೊಂಡ ರಾಜ್ಯ ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಆಯ್ದುಕೊಳ್ಳಲು ಅವಕಾಶ ನೀಡುವ ಪ್ರಸ್ತಾವನೆಯನ್ನು ಮಹಾರಾಷ್ಟ್ರ ಸಚಿವ ಸಂಪುಟ ಗುರುವಾರ ಅನುಮೋದಿಸಿದೆ.
ಒಪಿಎಸ್ ಮರುಸ್ಥಾಪಿಸಲು ಒತ್ತಾಯಿಸಿ ಕಳೆದ ವರ್ಷ ಎರಡು ಬಾರಿ ನೌಕರರು ಮುಷ್ಕರ ನಡೆಸಿದ್ದರು. ಇದೀಗ ಸರ್ಕಾರ ಒಪಿಸ್ ಆಯ್ದುಕೊಳ್ಳಲು ಅವಕಾಶ ನೀಡಲು ಮುಂದಾಗಿರುವುದರಿಂದ ಸರಿ ಸುಮಾರು 26,000 ರಾಜ್ಯ ಸರ್ಕಾರಿ ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ.
“ರಾಜ್ಯ ಸಚಿವ ಸಂಪುಟ ಅನುಮೋದಿಸಿದ ಪ್ರಸಾವನೆಯ ಪ್ರಕಾರ, ರಾಜ್ಯ ಸರ್ಕಾರಿ ನೌಕರರು ನವೆಂಬರ್ 2005ರ ನಂತರ ಸೇವೆಗಳಿಗೆ ಸೇರಿದ್ದರೆ, ಅಂದರೆ ನವೆಂಬರ್ 2005ರ ಮೊದಲು ಜಾಹೀರಾತು ಮಾಡಲಾದ ಹುದ್ದೆಗಳಿಗೆ ಒಪಿಎಸ್ ಆಯ್ಕೆಯನ್ನು ಪಡೆಯಲಿದ್ದಾರೆ. ಇದು ಸುಪ್ರೀಂ ಕೋರ್ಟ್ನ ಆದೇಶಕ್ಕೆ ಅನುಗುಣವಾಗಿದೆ ಮತ್ತು ಕೇಂದ್ರ ಸರ್ಕಾರ ಇದರಲ್ಲಿ ಬದಲಾವಣೆಗಳನ್ನು ಮಾಡಿದೆ” ಎಂದು ಮಹಾರಾಷ್ಟ್ರ ಸರ್ಕಾರದ ಮುಖ್ಯ ಕಾರ್ಯದರ್ಶಿ ನಿತಿನ್ ಕರೀರ್ ತಿಳಿಸಿದ್ದಾರೆ.
ಒಪಿಎಸ್ ಆಯ್ಕೆ ಮಾಡಿಕೊಳ್ಳಲು ಆರು ತಿಂಗಳ ಸೀಮಿತ ಸಮಯ ನೀಡಲಾಗಿದೆ. ನಂತರ ಉದ್ಯೋಗಿಗಳು ಎನ್ಪಿಎಸ್ನಿಂದ ಒಪಿಎಸ್ ಅಥವಾ ಒಪಿಎಸ್ನಿಂದ ಎನ್ಪಿಎಸ್ಗೆ ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳ ಕಚೇರಿ (ಸಿಎಂಒ) ಹೊರಡಿಸಿದ ಪ್ರಕಟನೆಯಲ್ಲಿ ಹೇಳಿದೆ.
ಒಪಿಎಸ್ ಆಯ್ದುಕೊಳ್ಳುವವರು, ಅದಕ್ಕಾಗಿ ಗೊತ್ತುಪಡಿಸಿದ ಪ್ರಾಧಿಕಾರವನ್ನು ಸಂಪರ್ಕಿಸಬೇಕು. ಪ್ರಾಧಿಕಾರ ಅನುಮೋದಿಸಿದರೆ ಉದ್ಯೋಗಿಗಳು ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ನಿಂದ ಒಪಿಎಸ್ ಬದಲಾಗಳಿದ್ದಾರೆ. ಎನ್ಪಿಎಸ್ನಲ್ಲಿ ಉದ್ಯೋಗಿಗಳ ಕೊಡುಗೆಯನ್ನು ವ್ಯಕ್ತಿಯ ಸಾಮಾನ್ಯ ಭವಿಷ್ಯ ನಿಧಿಗೆ (ಜಿಪಿಎಫ್) ಜಮಾ ಮಾಡಲಾಗುತ್ತದೆ ಎಂದು ಸಿಎಂ ಕಚೇರಿ ತಿಳಿಸಿದೆ.
ಒಪಿಎಸ್ ಆಯ್ದುಕೊಳ್ಳಲು ಅವಕಾಶ ನೀಡುವ ನಿರ್ಧಾರದಿಂದ ನವೆಂಬರ್ 2005 ರ ನಂತರ ರಾಜ್ಯ ಸರ್ಕಾರದ ಹುದ್ದೆಗಳಿಗೆ ಆಯ್ಕೆಯಾದ ಸುಮಾರು 26,000 ನೌಕರರಿಗೆ ಪ್ರಯೋಜನವಾಗಲಿದೆ. ನವೆಂಬರ್ 2005ರ ಮೊದಲು ಸೇವೆಗೆ ಸೇರಿದ 9.5 ಲಕ್ಷ ರಾಜ್ಯ ಸರ್ಕಾರಿ ಉದ್ಯೋಗಿಗಳು ಈಗಾಗಲೇ ಒಪಿಎಸ್ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಎಂದು ಮಹಾರಾಷ್ಟ್ರ ರಾಜ್ಯ ನೌಕರರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಶ್ವಾಸ್ ಕಾಟ್ಕರ್ ಹೇಳಿದ್ದಾರೆ.
ಮಹಾರಾಷ್ಟ್ರದ 1.6 ದಶ ಲಕ್ಷಕ್ಕೂ ಹೆಚ್ಚು ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಮರು ಪರಿಚಯಿಸಲು ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ ಅವರು ಕಳೆದ ವರ್ಷ ಎರಡು ಬಾರಿ ಮುಷ್ಕರ ನಡೆಸಿದ್ದಾರೆ. ಒಪಿಎಸ್ ಮರುಸ್ಥಾಪನೆಯ ಕಾರ್ಯಸಾಧ್ಯತೆಯ ಕುರಿತು ಪರಿಶೀಲಿಸಲು ರಾಜ್ಯ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಸುಬೋಧ್ ಕುಮಾರ್ ನೇತೃತ್ವದ ಸಮಿತಿಯನ್ನು ರಚಿಸಿದ್ದು, ಅದು ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಡಿಸೆಂಬರ್ 2023ರಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಫೆಬ್ರವರಿ-ಮಾರ್ಚ್ನಲ್ಲಿ ನಡೆಯಲಿರುವ ಬಜೆಟ್ ಅಧಿವೇಶನದಲ್ಲಿ ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿ ಕುರಿತು ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ.
1.6 ದಶ ಲಕ್ಷಕ್ಕಿಂತಲೂ ಹೆಚ್ಚು ಸರ್ಕಾರಿ ಉದ್ಯೋಗಿಗಳಲ್ಲಿ ಅರ್ಧದಷ್ಟು ಜನರು 2005ರ ನಂತರ ಸೇವೆಗೆ ಸೇರಿದ್ದಾರೆ ಮತ್ತು ಹೊಸ ಪಿಂಚಣಿ ಯೋಜನೆ (ಎನ್ಪಿಎಸ್) ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ. ಇದು ಒಪಿಎಸ್ನಷ್ಟು ಲಾಭದಾಯಕವಲ್ಲ. ಎನ್ಪಿಎಸ್ ಅಡಿಯಲ್ಲಿ, ರಾಜ್ಯ ಸರ್ಕಾರಿ ನೌಕರನು ತಮ್ಮ ಮೂಲ ವೇತನದ ಶೇ.10 ಮತ್ತು ತುಟ್ಟಿ ಭತ್ಯೆಯನ್ನು ರಾಜ್ಯವು ಹೊಂದಾಣಿಕೆಯ ಕೊಡುಗೆಯಾಗಿ ನೀಡಬೇಕಾಗುತ್ತದೆ. ಈ ಹಣವನ್ನು ನಂತರ ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (PFRDA)ಅನುಮೋದಿಸಿದ ಹಲವಾರು ಪಿಂಚಣಿ ನಿಧಿಗಳ ಪೈಕಿ ಒಂದರಲ್ಲಿ ಹೂಡಿಕೆ ಮಾಡಲಾಗುತ್ತದೆ ಮತ್ತು ಆದಾಯವು ಮಾರುಕಟ್ಟೆಗೆ ಸಂಬಂಧಿಸಿರುತ್ತದೆ.
ಒಪಿಎಸ್ ಅಡಿಯಲ್ಲಿ ನಿವೃತ್ತಿ ಬಳಿಕ ಸರ್ಕಾರಿ ನೌಕರರು ಅವರ ಕೊನೆಯ ಸಂಬಳದ ಶೇ. 50ರಷ್ಟು ಮಾಸಿಕ ಪಿಂಚಣಿ ಪಡೆಯಲಿದ್ದಾರೆ. ಇದಕ್ಕೆ ನೌಕರರ ಕೊಡುಗೆ (Employee Contribution)ಯ ಅಗತ್ಯವಿಲ್ಲ.
ನವೆಂಬರ್ 2005 ರಲ್ಲಿ ಮಹಾರಾಷ್ಟ್ರ ರಾಜ್ಯ ಸರ್ಕಾರವು ಸುಮಾರು ₹1.10 ಲಕ್ಷ ಕೋಟಿಗಳಷ್ಟು ಸಾಲದ ಹಿನ್ನೆಲೆ ಅನಿಶ್ಚಿತ ಆರ್ಥಿಕ ಪರಿಸ್ಥಿತಿಯ ಕಾರಣ ಮುಂದಿಟ್ಟು ಒಪಿಎಸ್ ಸ್ಥಗಿತಗೊಳಿಸಲು ನಿರ್ಧರಿಸಿತ್ತು.
ಇದನ್ನೂ ಓದಿ : ಬೆಂಗಳೂರು: ಖಾಯಂ ನೇಮಕಾತಿಗೆ ಆಗ್ರಹಿಸಿ ಅತಿಥಿ ಉಪನ್ಯಾಸಕರಿಂದ ಅನಿರ್ದಿಷ್ಟಾವಧಿ ಧರಣಿ