ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ಗೆ ಭಾರತದಿಂದ ಪರಾರಿಯಾಗಿರುವ ದಾವೂದ್ ಇಬ್ರಾಹಿಂ ಜೊತೆ ಸಂಬಂಧವಿದೆ ಎಂದು ಹೇಳಿಕೆ ನೀಡಿದ ಮಹಾರಾಷ್ಟ್ರದ ಬಿಜೆಪಿ ಶಾಸಕರಾದ ನಿತೇಶ್ ರಾಣೆ ಮತ್ತು ಅವರ ಸಹೋದರರಾದ ನಿಲೇಶ್ ರಾಣೆ ವಿರುದ್ಧ ಪ್ರಕರಣ ದಾಖಲಾಗಿದೆ.
ಕಳೆದ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಾಸಕ ನಿತೇಶ್ ರಾಣೆ, “ಮಹಾರಾಷ್ಟ್ರದ ಸಚಿವ ಮತ್ತು ಎನ್ಸಿಪಿಯ ಮುಖ್ಯ ವಕ್ತಾರ ನವಾಬ್ ಮಲಿಕ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿದ್ದರೂ ಶರದ್ ಪವಾರ್ ಏಕೆ ಅವರ ರಾಜೀನಾಮೆ ಕೇಳಿಲ್ಲ” ಎಂದು ಪ್ರಶ್ನಿಸಿದ್ದರು. ಮುಂದುವರೆದು ಶರದ್ ಪವಾರ್ ಭಾರತದಿಂದ ಪರಾರಿಯಾಗಿರುವ ದಾವೂದ್ ಇಬ್ರಾಹಿಂಗೆ ಸಹ ಸಹಾಯ ಮಾಡುತ್ತಾರೆ ಎಂದು ಆರೋಪಿಸಿದ್ದರು.
ಶರದ್ ಪವಾರ್ರವರು ನವಾಬ್ ಮಲಿಕ್ ರಾಜೀನಾಮೆ ಏಕೆ ಪಡೆದಿಲ್ಲ? ಶರದ್ ಪವಾರ್ ಮತ್ತು ದಾವೂದ್ ಇಬ್ರಾಹಿಂ ನಡುವೆ ಸಂಬಂಧವಿದೆಯೆ? ಶರದ್ ಪವಾರ್ ದಾವೂದ್ ಇಬ್ರಾಹಿಂ ಪರ ಮಹಾರಾಷ್ಟ್ರದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬುದಾಗಿ ನನಗೆ ಸಂದೇಹವಿದೆ. ಮಹಾರಾಷ್ಟ್ರ ಸರ್ಕಾರ ಮತ್ತು ಶರದ್ ಪವಾರ್ ಜಿ ಅವರಿಗೆ ದಾವೂದ್ ಇಬ್ರಾಹಿಂ ಬಗ್ಗೆ ತುಂಬಾ ಪ್ರೀತಿ ಇದ್ದರೆ, ಅವರು ತಮ್ಮ ಕ್ಯಾಬಿನ್ನಿಂದ ಗಾಂಧೀಜಿ ಫೋಟೋ ತೆಗೆದು ದಾವೂದ್ ಇಬ್ರಾಹಿಂ ಫೋಟೊ ಹಾಕಿಕೊಳ್ಳಲಿ. ನಾವು ಈ ಸರ್ಕಾರವನ್ನು ಬಯಲಿಗೆಳೆದುದ್ದಕ್ಕೆ ನಮ್ಮ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ” ಎಂದು ನಿಲೇಶ್ ರಾಣೆ ಹೇಳಿದ್ದರು.
ಎನ್ಸಿಪಿ ಪದಾಧಿಕಾರಿ ಶ್ರೀನಿವಾಸ್ ಅವರ ನೀಡಿದ ದೂರಿನ ಆಧಾರದ ಮೇಲೆ ಈ ಸಹೋದರರ ವಿರುದ್ಧ ಆಜಾದ್ ಮೈದಾನ್ ಪೊಲೀಸ್ ಠಾಣೆಯಲ್ಲಿ 120-ಬಿ (ಕ್ರಿಮಿನಲ್ ಪಿತೂರಿ), 499 (ಮಾನನಷ್ಟ), 153 (ಗಲಭೆ ಉಂಟು ಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೇಂದ್ರ ಸಚಿವ ನಾರಾಯಣ ರಾಣೆ ಅವರ ಪುತ್ರರಾದ ನಿತೇಶ್ ರಾಣೆ ಮತ್ತ ನಿಲೇಶ್ ರಾಣೆ ಸಹೋದರರು ಶರದ್ ಪವಾರ್ ವಿರುದ್ಧ ಮಾತನಾಡಿರುವ ಕೆಲವು ವಿಡಿಯೋ ತುಣುಕುಗಳನ್ನು ದೂರುದಾರರು ಪೊಲೀಸರಿಗೆ ಸಲ್ಲಿಸಿದ್ದಾರೆ.
ಈ ಕುರಿತು ಇಂದು ಪ್ರತಿಕ್ರಿಯಿಸಿರುವ ಶಾಸಕ ನಿತೇಶ್ ರಾಣೆ, “ನಾವು ಯಾವ ಅಪರಾಧ ಮಾಡಿದ್ದೀವಿ ಎಂದು ನಮ್ಮ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಗೊತ್ತಿಲ್ಲ. ನಾವು ಗಲಭೆ ಸೃಷ್ಟಿಸುವ ಕೆಲಸ ಮಾಡಿಲ್ಲ. ನಾವು ಹಿಂದುತ್ವದ ಪರ ಮಾತನಾಡುವುದು ತಪ್ಪೆ? ತಪ್ಪೆಂದರೆ ಅದನ್ನು 100 ಸಲ ಮಾಡಲು ಸಿದ್ದರಿದ್ದೇವೆ” ಎಂದಿದ್ದಾರೆ.
ಮಹಾರಾಷ್ಟ್ರದ ಮಾಜಿ ಸಚಿವ ಅನಿಲ್ ದೇಶ್ಮುಕ್ ಹಿಂದೂ ಎನ್ನುವ ಕಾರಣಕ್ಕೆ ರಾಜೀನಾಮೆ ಪಡೆಯಲಾಯಿತೆ? ಮುಸ್ಲಿಂ ನವಾಬ್ ಮಲ್ಲಿಕ್ ರಾಜೀನಾಮೆ ಏಕೆ ಪಡೆಯುವುದಿಲ್ಲ ಎಂದು ನಾನು ಪ್ರಶ್ನಿಸಿದೆ. ಆತ ಮುಸ್ಲಿಮ್ ಆದ ಕಾರಣ ದಾವೂದ್ ಇಬ್ರಾಹಿಂ ಜೊತೆ ಸಂಬಂಧವಿದೆಯೇ ಎಂದು ಪ್ರಶ್ನಿಸಿದ್ದು ತಪ್ಪೆ ಎಂದು ನಿತೇಶ್ ರಾಣೆ ಹೇಳಿದ್ದಾರೆ.
ಇದನ್ನೂ ಓದಿ: ಪೋನ್ ಕದ್ದಾಲಿಕೆ ಪ್ರಕರಣ: ಇಂದು ದೇವೇಂದ್ರ ಫಡ್ನಾವಿಸ್ ವಿಚಾರಣೆ