ಐದು ವರ್ಷದವರೆಗೆ ನಾನೇ ಮುಂದಿನ ಮುಖ್ಯಮಂತ್ರಿ ಎಂದು ಬಿಜೆಪಿ ಮುಖಂಡ ದೇವೇಂದ್ರ ಫಡ್ನಾವೀಸ್ ಹೇಳಿಕೆ ನೀಡಿದ ಬೆನ್ನೆಲ್ಲೇ ಇಂದು ಕರೆದಿದ್ದ ಬಿಜೆಪಿ ಸಭೆಯನ್ನು ದಿಢೀರ್ ರದ್ದುಪಡಿಸಿದ್ದಾರೆ. ಬಿಜೆಪಿ ಸಭೆಗೆ ಹೋಗದ ಶಿವಸೇನೆ ಮುಖಂಡರು ಅಂತರ ಕಾಯ್ದುಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆಯೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿರಲಿಲ್ಲ. ಲೋಕಸಭಾ ಚುನಾವಣೆ ವೇಳೆ ಆದ ಮೈತ್ರಿಯೇ ಮುಂದುವರೆದಿತ್ತೇ ಹೊರತು ಅಧಿಕಾರ ಹಂಚಿಕೆಯ ಕುರಿತು ಯಾವುದೇ ಮಾತುಕತೆ ನಡೆದಿಲ್ಲ. ಮುಂದಿನ ಐದು ವರ್ಷ ನಾನೇ ಮುಖ್ಯಮಂತ್ರಿಯಾಗುತ್ತೇನೆಂದು ಫಡ್ನಾವೀಸ್ ಮಂಗಳವಾರ ಬೆಳಗ್ಗೆ ಹೇಳಿದ್ದರು.
ಈ ಹೇಳಿಕೆಯಿಂದ ಅಸಮಾಧಾನಗೊಂಡಿರುವ ಶಿವಸೇನೆ ನಾಯಕರು 50:50 ಅಧಿಕಾರ ಹಂಚಿಕೆಗೆ ಬಿಜೆಪಿ ಒಪ್ಪುತ್ತಿಲ್ಲ. ಸಭೆಗೆ ಹೋಗುವುದರಿಂದ ಪ್ರಯೋಜನವೇನು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ.
ಶಿವಸೇನೆ ಹಿಂದಿನಿಂದಲೂ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ ಮಾಡಬೇಕು ಎಂದರೆ ಎರಡೂವರೆ ವರ್ಷ ಬಿಜೆಪಿ ಮತ್ತೆ ಎರಡೂವರೆ ವರ್ಷ ಶಿವಸೇನೆಗೆ ಅಧಿಕಾರ ಬಿಟ್ಟುಕೊಡಬೇಕು ಎಂದು ಶಿವಸೇನೆ ಮುಖಂಡರು ಪ್ರತಿಪಾದಿಸುತ್ತಲೇ ಬರುತ್ತಿದ್ದಾರೆ. ಮಿತ್ರ ಪಕ್ಷ ಬಿಜೆಪಿ ವಿರುದ್ದ ಆಕ್ರೋಶ ಹೊರಹಾಕುತ್ತಿರುವುದು ಮುಂದುವರಿದಿದೆ.
ಆದರೆ ಶಿವಸೇನೆ 50:50 ಅಧಿಕಾರ ಹಂಚಿಕೆಯನ್ನು ತಳ್ಳಿಹಾಕಿರುವ ದೇವೇಂದ್ರ ಫಡ್ನಾವೀಸ್, ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಸ್ತಿತ್ವಕ್ಕೆ ಬರಲಿದೆ ಎಂಬುದನ್ನು ಖಚಿತಪಡಿಸಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ 105, ಶಿವಸೇನೆ-56, ಎನ್.ಸಿ.ಪಿ 54, ಕಾಂಗ್ರೆಸ್ 44 ಮತ್ತು ಇತರರು 20 ಮಂದಿ ಇದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಶಿವಸೇನೆ ಪರ್ಯಾಯ ಹುಡುಕಿಕೊಂಡರೂ ಅಚ್ಚರಿ ಇಲ್ಲ..