ಪ್ರಶ್ನೆಗಾಗಿ ನಗದು ಪ್ರಕರಣದಲ್ಲಿ ಸಂಸದೆ ಮಹುವಾ ಮೊಯಿತ್ರಾ ಅವರ ಪ್ರಕರಣದ ತನಿಖೆ ನಡೆಸುತ್ತಿರುವ ಲೋಕಸಭೆಯ ನೈತಿಕ ಸಮಿತಿಯು ತನ್ನ ಸಭೆಯನ್ನು ನ.9ಕ್ಕೆ ಮರು ನಿಗದಿಪಡಿಸಿದ್ದು, ತೃಣಮೂಲ ಕಾಂಗ್ರೆಸ್ ಸಂಸದೆ ಬಗ್ಗೆ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಕರಡು ವರದಿಯನ್ನು ಅಂಗೀಕರಿಸುವ ನಿರೀಕ್ಷೆಯಿದೆ.
ಆರಂಭದಲ್ಲಿ ಸಭೆಯನ್ನು ನ.7 ರಂದು ನಡೆಸಲು ನಿರ್ಧರಿಸಲಾಗಿತ್ತು. ನ.2ರಂದು ಸಮಿತಿಯ ಅಧ್ಯಕ್ಷ ವಿನೋದ್ ಸೋಂಕರ್ ಅವರ ಬಗ್ಗೆ ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದಾರೆ ಎಂದು ಆರೋಪಿಸಿ ಮಹುವಾ ಮತ್ತು ಇತರ ವಿರೋಧ ಪಕ್ಷದ ಸಂಸದರು ಸಭೆಯಿಂದ ಹೊರಬಂದಿದ್ದರು.
ಈ ಬಳಿಕ ಸಭೆಯನ್ನು ನ.7ರಿಂದ ನ.9ಕ್ಕೆ ಮುಂದೂಡಲಾಗಿದೆ. ಈ ಬಗ್ಗೆ ಲೋಕಸಭಾ ಸಚಿವಾಲಯವು ಹೊರಡಿಸಿರುವ ನೋಟಿಸ್ನಲ್ಲಿ ಮುಂದೂಡಿಕೆಗೆ ಕಾರಣವನ್ನು ಅಧಿಕೃತವಾಗಿ ಉಲ್ಲೇಖಿಸಲಾಗಿಲ್ಲ.
ಕರಡು ವರದಿಯ ಪರಿಗಣನೆ ಮತ್ತು ಅಂಗೀಕಾರಕ್ಕಾಗಿ ಸಭೆಯನ್ನು ಕರೆಯಲಾಗಿದೆ. ಸಮಿತಿಯು ತನ್ನ ವಿಚಾರಣೆಯನ್ನು ಪೂರ್ಣಗೊಳಿಸಿದೆ ಮತ್ತು ಈಗ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಕುರಿತು ತನ್ನ ಶಿಫಾರಸನ್ನು ನೀಡಲಿದೆ ಎನ್ನಲಾಗಿದೆ. ಸಮಿತಿಯು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಸಲಿರುವ ತನ್ನ ವರದಿಯಲ್ಲಿ ಮೊಯಿತ್ರಾ ವಿರುದ್ಧ ಶಿಫಾರಸುಗಳನ್ನು ಮಾಡುವ ಸಾಧ್ಯತೆಗಳಿವೆ.
15 ಸದಸ್ಯರ ಸಮಿತಿಯಲ್ಲಿ ಬಿಜೆಪಿ ಸಂಸದರು ಬಹುಮತವನ್ನು ಹೊಂದಿದ್ದು, ಮೊಯಿತ್ರಾ ವಿರುದ್ಧದ ಆರೋಪಗಳ ಬಗ್ಗೆ ಕಠಿಣ ನಿಲುವು ತೆಗೆದುಕೊಳ್ಳುವ ಸಾಧ್ಯತೆಯಿದೆ.
ಪ್ರಶ್ನೆ ಕೇಳಲು ಹಣ ಪಡೆದಿರುವ ಕುರಿತಂತೆ ಜೈ ಅನಂತ್ ದೇಹದ್ರಾಯಿ ಅವರ ಆರೋಪಗಳನ್ನು ಉಲ್ಲೇಖಿಸಿ, ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿದ್ದರು. ಉದ್ಯಮಿ ದರ್ಶನ್ ಹಿರಾನಂದಾನಿ ಅವರ ಆಣತಿಯಂತೆ, ಮೋಯಿತ್ರಾ ಅವರ ಸಂಸದೀಯ ಇ–ಮೇಲ್ ಖಾತೆ ಮೂಲಕ ಪ್ರಶ್ನೆಗಳನ್ನು ಟೈಪ್ ಮಾಡಲಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಮೊಯಿತ್ರಾ ಅವರಿಗೆ ಹಣ, ಉಡುಗೊರೆಗಳನ್ನು ನೀಡಲಾಗುತ್ತಿತ್ತು ಎಂದು ದುಬೆ ಆರೋಪಿಸಿದ್ದರು.
ಬಿಜೆಪಿ ಸಂಸದ ನಿಶಿಕಾಂತ್ ದುಬೆ ಮತ್ತು ಮಹುವಾ ಅವರ ಮಾಜಿ ಜೊತೆಗಾರ ಜೈ ಅನಂತ್ ದೆಹದ್ರಾಯ್ ಅವರು ಸಲ್ಲಿಸಿದ ದೂರಿಗೆ ಪ್ರತಿಯಾಗಿ ಮಹುವಾ ಅವರನ್ನು ಸಮಿತಿಯು ವಿಚಾರಣೆಗೆ ಹಾಜರಾಗಲು ಕರೆದಿತ್ತು. ಸಮಿತಿಯ ಮುಂದೆ ಹಾಜರಾದ ಮಹುವಾ ಅವರು, ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ತಾವು ಹಣ, ಉಡುಗೊರೆ ಪಡೆದಿಲ್ಲ ಎಂದು ಹೇಳಿದರು. ದೆಹದ್ರಾಯ್ ಅವರ ಜೊತೆ ತಾವು ಸಂಬಂಧ ಕಡಿದುಕೊಂಡ ಕಾರಣ ದ್ವೇಷದಿಂದ ಈ ಆರೋಪ ಮಾಡಲಾಗಿದೆ ಎಂದು ಹೇಳಿದ್ದರು.
ಇದನ್ನು ಓದಿ: ರಾಜ್ಯಪಾಲರು ಬಿಲ್ಗೆ ಅಂಕಿತ ಹಾಕಲು ವಿಳಂಬದ ಬಗ್ಗೆ ಸುಪ್ರೀಂ ಅಸಮಾಧಾನ