ಛತ್ತೀಸ್ಗಢದಲ್ಲಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಬೆಟ್ಟಿಂಗ್ ಪ್ಲಾಟ್ಫಾರ್ಮ್ ವಿರುದ್ಧ ಕ್ರಮಕೈಗೊಳ್ಳಲು ತಿಂಗಳುಗಳ ಹಿಂದೆಯೇ ಮನವಿ ಮಾಡಿದ್ದರು. ಆದರೆ ಮಹದೇವ್ ಆ್ಯಪ್ ಮೇಲೆ ನಿಷೇಧ ಹೇರಲು ಕೇಂದ್ರ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ.
ಬಘೆಲ್ ಅವರು ಆ್ಯಪ್ನ ಮೇಲಿನ ನಿಷೇಧಕ್ಕೆ ಬೇಡಿಕೆಯಿಟ್ಟಿರುವುದನ್ನು ಸರ್ಕಾರ ಹೊಗಳಬೇಕಿತ್ತು ಆದರೆ ಅವರ ವಿರುದ್ಧವೇ ಆರೋಪ ಮಾಡುತ್ತಿದೆ. ಬಿಜೆಪಿಯ ಈ ಆರೋಪಗಳಿಗೆ ವಿಧಾನಸಭಾ ಚುನಾವಣೆಯಲ್ಲಿ ಜನರೇ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ X ನಲ್ಲಿನ ಪೋಸ್ಟ್ ಮಾಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ”ಮಹಾದೇವ್ ಅಪ್ಲಿಕೇಶನ್ ಪ್ರಕರಣವನ್ನು ಇಡಿ ಹಲವಾರು ತಿಂಗಳುಗಳಿಂದ ತನಿಖೆ ನಡೆಸುತ್ತಿದೆ ಆದರೆ ಅದನ್ನು ನಿಷೇಧಿಸಲು ಇಷ್ಟು ಸಮಯ ತೆಗೆದುಕೊಂಡಿರುವುದು ಆಶ್ಚರ್ಯಕರ” ಎಂದು ಹೇಳಿದರು.
ED कई महीनों से ‘महादेव ऐप’ मामले की जांच कर रही है। फिर भी इसे बैन करने में इतना समय लगना आश्चर्य की बात है।
महादेव ऐप को बैन करने की मांग भी सबसे पहले 24 अगस्त 2023 को छत्तीसगढ़ के मुख्यमंत्री @bhupeshbaghel ने की थी। उनकी प्रशंसा करने के बजाय…
— Jairam Ramesh (@Jairam_Ramesh) November 6, 2023
”ಆಗಸ್ಟ್ 24ರಂದು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಮಹದೇವ್ ಆ್ಯಪ್ನ್ನು ನಿಷೇಧಿಸುವ ಬೇಡಿಕೆಯನ್ನು ಮೊದಲು ಎತ್ತಿದ್ದರು. ಪ್ರಧಾನಿ ಮೋದಿಯವರು ಅವರನ್ನು ಹೊಗಳುವ ಬದಲು, ಅವರ ವಿರುದ್ಧ ಇಡಿಯನ್ನು ನಿಯೋಜಿಸಿದ್ದಾರೆ” ಎಂದು ರಮೇಶ್ ಆರೋಪಿಸಿದ್ದಾರೆ.
ಛತ್ತೀಸ್ಗಢ ಸರ್ಕಾರವು ಮಹದೇವ್ ಆ್ಯಪ್ನ್ನು ನಿಷೇಧಿಸುವಂತೆ ಒತ್ತಾಯಿಸಿಲ್ಲ ಎಂದು ಕೇಂದ್ರ ಸಚಿವರು ಹೇಳುತ್ತಿರುವುದು ದೊಡ್ಡ ಸುಳ್ಳು” ಎಂದು ಕಾಂಗ್ರೆಸ್ ಆರೋಪಿಸಿದೆ.
ಆಗಸ್ಟ್ 24, 2023 ರಂದು ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಘೇಲ್ ಅವರು ಆರೋಪಿಗಳನ್ನು ಬಂಧಿಸುವಂತೆ ಕರೆ ನೀಡಿದ್ದರು ಮತ್ತು ಕೇಂದ್ರ ಸರ್ಕಾರವು 28 ರಷ್ಟು ತೆರಿಗೆ ವಿಧಿಸುವ ಮೂಲಕ ಆನ್ಲೈನ್ ಬೆಟ್ಟಿಂಗ್ಗೆ ಕಾನೂನು ಸ್ಥಾನಮಾನ ನೀಡುವ ವಿಷಯವನ್ನು ಪ್ರಸ್ತಾಪಿಸಿದರು ಎಂದು ರಮೇಶ್ ಗಮನಸೆಳೆದರು.
”ಕೇಂದ್ರ ಸರ್ಕಾರವು ಈ ಬೆಟ್ಟಿಂಗ್ ಆ್ಯಪ್ನ್ನು ಏಕೆ ನಿಷೇಧಿಸುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಹಲವಾರು ತಿಂಗಳುಗಳಿಂದ ನಿರಂತರವಾಗಿ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಬಹುಶಃ 28% ಜಿಎಸ್ಟಿಯ ದುರಾಸೆಯಿಂದ ನಿಷೇಧವನ್ನು ಹೇರಲಾಗುತ್ತಿಲ್ಲ ಎಂದು ಅವರು (ಬಘೆಲ್) ಹೇಳಿದ್ದರು. ಆ್ಯಪ್ ಆಪರೇಟರ್ಗಳೊಂದಿಗೆ ಬಿಜೆಪಿಯ ನಂಟು ಇದೆಯೇ? ಎಂದು ತಮ್ಮ ಪೋಸ್ಟ್ನಲ್ಲಿ ರಮೇಶ್ ಅವರು ಪ್ರಶ್ನೆ ಮಾಡಿದ್ದಾರೆ.
”ಬಿಜೆಪಿ ಸರ್ಕಾರ ಈ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸದಿರುವುದು ಮಾತ್ರವಲ್ಲದೆ, ತೆರಿಗೆ ವಸೂಲಿ ಮಾಡುವ ಮೂಲಕ ಆ್ಯಪ್ ಆಪರೇಟರ್ಗಳ ಅಕ್ರಮಗಳಿಗೆ ಕಾನೂನು ಮಾನ್ಯತೆ ನೀಡಲು ಮುಂದಾಗಿದೆ” ಎಂದು ಅವರು ಆರೋಪಿಸಿದ್ದಾರೆ.
”ಛತ್ತೀಸ್ಗಢದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿಯ ಈ ಕ್ರಮಗಳಿಗೆ ರಾಜ್ಯದ ಜನತೆ ವಿಧಾನಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪರವಾಗಿ ತಮ್ಮ ಜನಾದೇಶ ನೀಡುವ ಮೂಲಕ ತಕ್ಕ ಉತ್ತರ ನೀಡುತ್ತಾರೆ” ಎಂದು ರಮೇಶ್ ಪ್ರತಿಪಾದಿಸಿದರು.
ಇದನ್ನೂ ಓದಿ: “ಮಹದೇವ್ ಬೆಟ್ಟಿಂಗ್ ಅಪ್ಲಿಕೇಶನ್ನೊಂದಿಗೆ ಕೇಂದ್ರದ ರಹಸ್ಯ ಒಪ್ಪಂದ”: ಭೂಪೇಶ್ ಬಾಘೆಲ್