Homeಕರ್ನಾಟಕಮಾಜಿ ‘ಅನರ್ಹ’ರ ಮಂತ್ರಿಗಿರಿ ವಿಳಂಬಕ್ಕೆ ಕಾರಣವಾಗಿರೋದು ‘ಧನುರ್ಮಾಸ’ವೋ? ಶಾ ಲೆಕ್ಕಾಚಾರವೋ?

ಮಾಜಿ ‘ಅನರ್ಹ’ರ ಮಂತ್ರಿಗಿರಿ ವಿಳಂಬಕ್ಕೆ ಕಾರಣವಾಗಿರೋದು ‘ಧನುರ್ಮಾಸ’ವೋ? ಶಾ ಲೆಕ್ಕಾಚಾರವೋ?

- Advertisement -
- Advertisement -

ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ತುದಿಗಾಲ ಮೇಲೆ ನಿಂತಿರುವ ಮಾಜಿ ಅನರ್ಹ ಕಂ ಹಾಲಿ ಅರ್ಹ ಶಾಸಕರಿಗೆ ಇನ್ನೂ ಒಂದು ತಿಂಗಳು ವಿರಹ ವೇದನೆ ತಪ್ಪಿದ್ದಲ್ಲ ಎಂಬ ಮಾತುಗಳು ಶಕ್ತಿಸೌಧದ ಪಡಸಾಲೆಯಲ್ಲಿ ಕೇಳಿಬರುತ್ತಿವೆ. ಫಲಿತಾಂಶ ಬಂದು ಮೂರು ದಿನವಾದರು ಇದುವರೆಗೆ ಹೈಕಮಾಂಡ್‌ನಿಂದ ಯಡ್ಯೂರಪ್ಪನವರಿಗೆ ಬುಲಾವ್ ಬಂದಿಲ್ಲ. ದಿಲ್ಲಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಗದ ಹೊರತು ಸಂಪುಟ ವಿಸ್ತರಣೆಯಾಗದು. ಮಾಧ್ಯಮದವರ ಜೊತೆ ಮಾತನಾಡುತ್ತ ತಾನು ಇನ್ನೂ ಒಂದು ವಾರ ದಿಲ್ಲಿಗೆ ಹೋಗಲ್ಲ ಎಂಬ ಮಾತನ್ನು ಯಡ್ಯೂರಪ್ಪನವರು ಹೇಳಿದ್ದಾರೆ. ಮುಂದಿನ ವಾರದಿಂದ ಧನುರ್ಮಾಸ ಶುರುವಾಗಲಿರುವುದರಿಂದ, ಅಲ್ಲಿಂದ ಒಂದು ತಿಂಗಳು, ಅಂದರೆ ಜನವರಿ ಮೂರನೇ ವಾರದವರೆಗೆ ಯಾವ ಶುಭಕಾರ್ಯಗಳೂ ನಡೆಯುವುದು ಕ್ಷೇಮವಲ್ಲ ಎಂಬ ಮೂಢನಂಬಿಕೆ ಪಂಚಾಂಗದಲ್ಲಿದೆ. ಅದನ್ನು ಅಪಾರವಾಗಿ ನಂಬುವ ಯಡ್ಯೂರಪ್ಪ ಧನುರ್ಮಾಸದಲ್ಲಿ ಸಂಪುಟ ವಿಸ್ತರಣೆಗೆ ಕೈಹಾಕಲಾರರು ಎನ್ನುತ್ತಿವೆ ರಾಜಕೀಯ ವಿಶ್ಲೇಷಣೆಗಳು. ಹಾಗಾಗಿ ಉಪಚುನಾವಣೆಯಲ್ಲಿ ಗೆದ್ದು ಬಂದರು ಮಾಜಿ ಅನರ್ಹರು ಮಂತ್ರಿಗಳಾಗಲು ಇನ್ನು ಒಂದು ತಿಂಗಳು ಕಾಯಬೇಕಾಗಬಹುದು.

ಮೇಲ್ನೋಟಕ್ಕೆ ಧನುರ್ಮಾಸವನ್ನು ಈ ವಿಳಂಬಕ್ಕೆ ಕಾರಣವಾಗಿ ತೋರಿಸಲಾಗುತ್ತಿದೆಯಾದರು, ಇದರ ಹಿಂದೆ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಲೆಕ್ಕಾಚಾರಗಳೂ ಇವೆ  ಎನ್ನಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ರಾಷ್ಟ್ರಪತಿ ಆಳ್ವಿಕೆಯನ್ನು ತೆರವುಗೊಳಿಸಿ, ಬೆಳ್ಳಂಬೆಳಗಿನ ಚುಮುಚುಮು ಛಳಿಯಲ್ಲೇ ಫಡ್ನವೀಸ್‌ಗೆ ಪ್ರಮಾಣವಚನ ಸ್ವೀಕರಿಸಲು ಗ್ರೀನ್‌ಸಿಗ್ನಲ್ ಕೊಡುವಷ್ಟ ಆತುರ ತೋರಿದ ಬಿಜೆಪಿಗೆ ಕರ್ನಾಟಕದ ಸಂಪುಟ ವಿಸ್ತರಣೆಗೆ ಅನುಮತಿ ಕೊಡಲು ಒಂದು ವಾರ ಕಾಯಿಸುವ ಯಾವ ಘನ ಕಾರಣಗಳೂ ಕಾಣುತ್ತಿಲ್ಲ. ಈಗಾಗಲೇ ಸಿಎಂ ಯಡ್ಯೂರಪ್ಪನವರು ಕೊಟ್ಟ ಮಾತಿನಂತೆ ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಮಂತ್ರಿ ಮಾಡಲಾಗುವುದು ಎಂದು ಘೋಷಿಸಿದ್ದಾರೆ. ಹೈಕಮಾಂಡ್‌ನ ಆಶ್ವಾಸನೆಯಿಂದಲೇ ಅವರು ಇಷ್ಟು ಘಂಟಾಘೋಷವಾಗಿ ಹೇಳುತ್ತಿದ್ದಾರೆ. ಮಂತ್ರಿ ಮಾಡುವುದೇ ದಿಟವೆಂದ ಮೇಲೆ ಕಾಯಿಸುವುದರಿಂದ ಏನು ಪ್ರಯೋಜನ? ಯಾವ ಲೆಕ್ಕಾಚಾರವನ್ನು ಶಾ ಈಡೇರಿಸಿಕೊಳ್ಳಬಹುದು? ಎಂಬ ಪ್ರಶ್ನೆಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತವೆ.

ಈ ಪ್ರಶ್ನೆಗಳಿಗೆ ಉತ್ತರವಾಗಿ ಹೀಗೊಂದು ವಿಶ್ಲೇಷಣೆ ಹರಿದಾಡುತ್ತಿದೆ. ಯಡ್ಯೂರಪ್ಪನವರು ಮುಖ್ಯಮಂತ್ರಿಯಾಗುವುದು ಬಿಜೆಪಿ ಹೈಕಮಾಂಡ್‌ಗೆ ಮೊದಲಿನಿಂದಲೂ ಇಷ್ಟವಿರಲಿಲ್ಲ. ಅವರು ತೋರಿದ ಅಸಹಕಾರ, ನಿರ್ಲಕ್ಷ್ಯಗಳೇ ಇದನ್ನು ಸಾಬೀತು ಮಾಡುತ್ತವೆ. ಇಂಥಾ ಸಮಯದಲ್ಲಿ ಎದುರಾದ ಉಪಚುನಾವಣೆಯ ಬಗ್ಗೆಯೂ ಹೈಕಮಾಂಡ್ ಹೆಚ್ಚಿನ ಆಸಕ್ತಿಯನ್ನೇನೂ ತೋರಲಿಲ್ಲ. ನೀವು ಮುಖ್ಯಮಂತ್ರಿಯಾಗಿ ನಿಮ್ಮ ಸರ್ಕಾರ ಉಳಿಯಬೇಕೆಂದರೆ ಅನರ್ಹರನ್ನು ನೀವೇ ಗೆಲ್ಲಿಸಿಕೊಳ್ಳಿ ಎಂಬ ವರ್ತನೆಯಷ್ಟೆ ಹೈಕಮಾಂಡ್‌ನಿಂದ ಯಡ್ಯೂರಪ್ಪಗೆ ಸಿಕ್ಕಿದ್ದು.

ಆ ಸವಾಲಿನಲ್ಲಿ ಯಡ್ಯೂರಪ್ಪ ಭರ್ಜರಿಯಾಗೇ ಗೆದ್ದು ತೋರಿಸಿದ್ದಾರೆ. ನಾಯಕರ ಅಸಹಕಾರ, ಟಿಕೇಟ್ ತಪ್ಪಿದವರ ಬಂಡಾಯದ ನಡುವೆಯೂ ಏಕಾಂಗಿಯಾಗಿ ‘ತಂತ್ರ’ಗಾರಿಕೆ ನಡೆಸಿ, ಹದಿನೈದು ಕ್ಷೇತ್ರಗಳ ಪೈಕಿ ಹನ್ನೆರಡರಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಸಂಖ್ಯಾಬಲವನ್ನು 117ಕ್ಕೆ ಏರಿಸಿಕೊಂಡಿದ್ದಾರೆ. ಈ ಮೂಲಕ ರಾಜ್ಯ ಬಿಜೆಪಿಗೆ ಈಗಲೂ ನಾನೇ ವರ್ಚಸ್ವಿ ನಾಯಕ ಎಂಬುದನ್ನಷ್ಟೇ ಅಲ್ಲ, ಲಿಂಗಾಯತ ಓಟ್ ಬ್ಯಾಂಕ್‌ಗೆ ಈಗಲೂ ನಾನೇ ಅಧಿನಾಯಕ ಅನ್ನೋದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಟ್ಟಿದ್ದಾರೆ. ಒಟ್ಟಿನಲ್ಲಿ ಈ ಉಪಚುನಾವಣೆಯ ಫಲಿತಾಂಶ ಯಡ್ಯೂರಪ್ಪನವರನ್ನು ಪಕ್ಷದೊಳಗೆ ಮತ್ತಷ್ಟು ಬಲಿಷ್ಠಗೊಳಿಸಿದೆ. ಅವರನ್ನು ಮೂಲೆಗುಂಪು ಮಾಡುವ ಹಾದಿಯಲ್ಲಿದ್ದ ಹೈಕಮಾಂಡ್ ಕೊಂಚ ಯೋಚಿಸುವಂತೆ ಮಾಡಿದೆ.

ಯಡ್ಯೂರಪ್ಪ ಎಂಥಾ ಡಾಮಿನೇಟ್ ವ್ಯಕ್ತಿತ್ವದವರು ಅನ್ನೋದು ಅಮಿತ್ ಶಾಗೆ ಗೊತ್ತಿಲ್ಲದ ಸಂಗತಿಯೇನಲ್ಲ. ಕೊಂಚ ಅವಕಾಶ ಸಿಕ್ಕರೂ ಹೈಕಮಾಂಡ್‌ನ ಅಳತೆಮೀರಿ ಬೆಳೆದುಬಿಡುವ ಸಾಧ್ಯತೆಯೂ ಗೊತ್ತಿದೆ.

ಈ ಫಲಿತಾಂಶದಿಂದ ಯಡ್ಯೂರಪ್ಪ ಮೇಲುಗೈ ಸಾಧಿಸಿರೋದ್ರಿಂದ ಪಕ್ಷದೊಳಗೇ ಅವರತ್ತ ಸರಿದುಕೊಳ್ಳುವ ಬೆಂಬಲಿಗರ ಸಂಖ್ಯೆ ಹಿಗ್ಗಲಿದೆ. ಇನ್ನು ತಮ್ಮತಮ್ಮ ಮಾತೃಪಕ್ಷಗಳಿಗೆ ರಾಜೀನಾಮೆ ಕೊಟ್ಟು ಬಂದಿರುವ ಹದಿನೇಳು ಮಂದಿಯೂ ಯಡ್ಯೂರಪ್ಪನವರನ್ನು ನಂಬಿ, ಅವರ ಮೇಲೆ ವಿಶ್ವಾಸವಿಟ್ಟು ಬಂದಿದ್ದಾರೆಯೇ ವಿನಾಃ ಬಿಜೆಪಿ ಪಕ್ಷವನ್ನು ಇಡಿಯಾಗಿ ನಂಬಿಯಾಗಲಿ ಅಥವಾ ಮೋದಿ-ಶಾ ಜೋಡಿಯ ನೇರ ಮಧ್ಯಸ್ಥಿಕೆಯಿಂದಾಗಲಿ ಅಲ್ಲ. ಅವರಿಗೆ ಯಾವ ತ್ರಾಸೂ ಇಲ್ಲದೆ, ಏಕಾಏಕಿ ಮಂತ್ರಿಭಾಗ್ಯ ಕರುಣಿಸಿಬಿಟ್ಟರೆ ಅವರು ತಮ್ಮನ್ನು ಮಂತ್ರಿ ಮಾಡಿದ್ದೇ ಯಡ್ಯೂರಪ್ಪನವರು ಅಂತ ಅವರ ಪಾಳೆಯವನ್ನೇ ಸೇರಿಬಿಡುವ ಸಾಧ್ಯತೆ ಹೆಚ್ಚು. ಯಾಕೆಂದರೆ ತಮ್ಮ ಗೆಲುವಿನಲ್ಲಿ ಯಡ್ಯೂರಪ್ಪನವರ ಮುತುವರ್ಜಿಯನ್ನು ಅವರು ಹತ್ತಿರದಿಂದ ಕಂಡಿದ್ದಾರೆ. ಹುಣಸೂರಿನಲ್ಲಿ ಸೋತಿರುವ ಅನರ್ಹ ಶಾಸಕ ಎಚ್.ವಿಶ್ವನಾಥ್ ’ನಾನು ಚುನಾವಣೆಯಲ್ಲಿ ಸೋತಿರಬಹುದು. ಆದರೆ ನಮಗೆ ಯಡ್ಯೂರಪ್ಪನವರೇ ಹೈಕಮಾಂಡ್’ ಎಂದು ಹೇಳಿರೋದು ಈ ಸಾಧ್ಯತೆಯನ್ನು ರುಜುವಾತು ಮಾಡುತ್ತೆ.

ಹಾಗೇನಾದರು ಆದಲ್ಲಿ, ಸಂಪುಟದ ಮುಕ್ಕಾಲು ಭಾಗ ಯಡ್ಯೂರಪ್ಪನವರ ಬೆಂಬಲಿಗರೇ ತುಂಬಿಕೊಂಡಂತಾಗುತ್ತೆ. ಸರ್ಕಾರದ ಮೇಲಷ್ಟೆ ಅಲ್ಲ, ಪಕ್ಷದ ಮೇಲೂ ಯಡ್ಯೂರಪ್ಪನವರ ಹಿಡಿತ ಬಿಗಿಗೊಳ್ಳುತ್ತದೆ. ಆಗ ಮೂವರು  ಡಿಸಿಎಂಗಳನ್ನು ನೇಮಿಸಿ, ನಳಿನ್ ಕುಮಾರ್ ಕಟೀಲ್ ಥರದ ಅಧ್ಯಕ್ಷರನ್ನು ಆಯ್ಕೆ ಮಾಡಿ ಯಡ್ಯೂರಪ್ಪರನ್ನು ಕಟ್ಟಿಹಾಕಲು ತಾವು ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥವಾಗಿಬಿಡುತ್ತವೆ ಎಂಬುದು ಹೈಕಮಾಂಡ್‌ಗೆ ಚೆನ್ನಾಗಿಯೇ ಗೊತ್ತು.

ಅದಕ್ಕೋಸ್ಕರವೇ ಈ ವಿಳಂಬ ನೀತಿ ಎನ್ನಲಾಗುತ್ತಿದೆ. ಹೊಸದಾಗಿ ಮಂತ್ರಿಯಾಗುವವರಿಗೆ ‘ಯಡ್ಯೂರಪ್ಪನವರಿಗಿಂತಲೂ ಹೈಕಮಾಂಡ್ ಕೃಪಾಕಟಾಕ್ಷವೇ ತುಂಬಾ ಮುಖ್ಯ’ ಎಂಬ ಬಿಜೆಪಿ ಸಂಸ್ಕೃತಿಯನ್ನು ಮನದಟ್ಟು ಮಾಡಿಸಿ ಅವರು ಸಾರಾಸಗಟು ಯಡ್ಯೂರಪ್ಪನವರ ಹಿಂಬಾಲಕರಾಗದಂತೆ ಸತಾಯಿಸಲು ನಿರ್ಧರಿಸಲಾಗಿದೆ ಎನ್ನುತ್ತಿವೆ ಮೂಲಗಳು.

ಇಲ್ಲಿ ಇನ್ನೂ ಒಂದು ಲೆಕ್ಕಾಚಾರವಿದ್ದಿರಬಹುದು. ಗೆದ್ದ ಕೂಡಲೇ ಅವರನ್ನು ಅನಾಯಾಸವಾಗಿ ಮಂತ್ರಿಮಾಡಿಬಿಟ್ಟರೆ ಪೊಗದಸ್ತಾದ ಖಾತೆಗೇ ಬೇಡಿಕೆ ಇಟ್ಟುಬಿಡುತ್ತಾರೆ. ಈ ಸಂದರ್ಭದಲ್ಲಿ ಇಲ್ಲ ಎನ್ನುವುದೂ ಕಷ್ಟ. ತುಸು ಸತಾಯಿಸಿ, ‘ಮಂತ್ರಿ ಮಾಡಿದರೆ ಸಾಕು, ಖಾತೆ ಯಾವುದಾದರೇನು’ ಎನ್ನುವಲ್ಲಿಗೆ ಬಗ್ಗಿಸಿ ಮಂತ್ರಿಗಿರಿ ಕರುಣಿಸುವ ಆಲೋಚನೆಯೂ ಇರಬಹುದು. ಉಪಚುನಾವಣೆಯಲ್ಲಿ ಗೆದ್ದ ವಲಸಿಗರೆಲ್ಲ ಭರಪೂರ ಖಾತೆಗಳ ಮೇಲೆ ಕಣ್ಣಿಟ್ಟು ಕೂತಿದ್ದಾರೆ. ಅವರಿಗೆ ಅವುಗಳನ್ನು ಬಿಟ್ಟುಕೊಟ್ಟರೆ, ಮೂಲ ಬಿಜೆಪಿಗರಲ್ಲಿ ಬಂಡಾಯ ಶುರುವಾಗುತ್ತೆ. ಅದನ್ನು ತಡೆಯಬೇಕೆಂದರೆ, ಹೀಗೆ ಒಂದಷ್ಟು ಸತಾಯಿಸಿ ಮಂತ್ರಿ ಮಾಡುವುದು ಒಳಿತು ಎಂಬ ತಂತ್ರವೂ ಇದ್ದಿರಬಹುದು. ಬಹುಶಃ ಈ ತಂತ್ರೋಪದೇಶ ಮಾಡಿಯೇ ಯಡ್ಯೂರಪ್ಪನವರನ್ನೂ ಬಿಜೆಪಿ ಹೈಕಮಾಂಡ್ ವಿಳಂಬ ನೀತಿಗೆ ಒಪ್ಪಿಸಿರಲೂಬಹುದು. ಇದು ದಿಟವೇ ಆಗಿದ್ದರೆ ಒಂದೇ ಕಲ್ಲಿಗೆ ಎರಡು ಹಕ್ಕಿಗಳನ್ನು ಉರುಳಿಸುವ ಹುನ್ನಾರ ಹೈಕಮಾಂಡ್‌ನದ್ದು. ಯಾವುದನ್ನೂ ತಳ್ಳಿಹಾಕಲಿಕ್ಕಾಗುವುದಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...