Homeಮುಖಪುಟಅಯೋಧ್ಯೆ ತೀರ್ಪು ಮರುಪರಿಶೀಲನೆ ಅರ್ಜಿಗಳನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್

ಅಯೋಧ್ಯೆ ತೀರ್ಪು ಮರುಪರಿಶೀಲನೆ ಅರ್ಜಿಗಳನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್

- Advertisement -
- Advertisement -

ಅಯೋಧ್ಯೆ ವಿವಾದಕ್ಕೆ ಸಂಬಂಧಪಟ್ಟಂತೆ ನವೆಂಬರ್ ೯ನೇ ತಾರೀಕು ತಾನು ನೀಡಿದ್ದ ತೀರ್ಪನ್ನು ಮರು ಪರಿಶೀಲಿಸುವಂತೆ ಸಲ್ಲಿಕೆಯಾಗಿದ್ದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ತಳ್ಳಿಹಾಕಿದೆ. ದಶಕಗಳಷ್ಟು ಹಳೆಯದಾದ ವಿವಾದಕ್ಕೆ ಸಂಬಂಧಿಸಿ ಅಂತಿಮ ತೀರ್ಪು ಪ್ರಕಟಿಸಿದ್ದ ಸರ್ವೋಚ್ಛ ನ್ಯಾಯಾಲಯ ವಿವಾದಿತ ಜಾಗವನ್ನು ರಾಮಮಂದಿರ ನಿರ್ಮಿಸಲು ಬಿಟ್ಟುಕೊಡಬೇಕು ಮತ್ತು ಮಸೀದಿ ನಿರ್ಮಿಸಲು ಸುನ್ನಿ ವಕ್ಫ್ ಮಂಡಳಿಗೆ ಸರ್ಕಾರವು ಅಯೋಧ್ಯೆಯಲ್ಲೆ ಬೇರೆಡೆ ಐದು ಎಕರೆ ಜಮೀನು ನೀಡಬೇಕೆಂದು ಆದೇಶಿಸಿತ್ತು. ವಿವಾದಿತ ಸ್ಥಳದ ಮೇಲೆ ಹಕ್ಕುದಾವೆ ಮಂಡಿಸಿದ್ದ ನಿರ್ಮೋಹಿ ಅಖಾರದ ವಾದವನ್ನು ನ್ಯಾಯಾಲಯ ತಳ್ಳಿಹಾಕಿತ್ತು.
ಸುಪ್ರೀಂ ಕೋರ್ಟ್‌ನ ಅಂದಿನ ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್, ಎಸ್.ಎ.ಬೊಬ್ಡೆ, ಡಿ.ವೈ.ಚಂದ್ರಚೂಡ್, ಅಶೋಕ್ ಭೂಷಣ್ ಮತ್ತು ಅಬ್ದುಲ್ ನಜೀರ್ ಇದ್ದ ಪಂಚಸದಸ್ಯರ ಪೀಠ ಈ ತೀರ್ಪನ್ನು ನೀಡಿತ್ತು. ರಂಜನ್ ಗೊಗಯ್ ನಿವೃತ್ತರಾದ ಕಾರಣ, ತೀರ್ಪಿನ ಮರುಪರಿಶೀಲನೆ ಅರ್ಜಿಗಳ ಬಗ್ಗೆ ವಿವೇಚಿಸಲು ಪಂಚ ಸದಸ್ಯ ಪೀಠಕ್ಕೆ ನ್ಯಾಯಮೂರ್ತಿ ಸಂಜೀವ್ ಖನ್ನಾರನ್ನು ಸೇರ್ಪಡೆ ಮಾಡಲಾಗಿತ್ತು.

ಸಲ್ಲಿಕೆಯಾದ ಮರುಪರಿಶೀಲನೆ ಅರ್ಜಿಗಳನ್ನು ಆಂತರಿಕ ವಿಮರ್ಶೆಯಲ್ಲಿ ಚರ್ಚೆಗೆ ಪರಿಗಣಿಸಿ, ಅವುಗಳನ್ನು ಸಾರ್ವಜನಿಕ ವಿಚಾರಣೆಗೆ ತೆಗೆದುಕೊಳ್ಳಬೇಕೊ ಬೇಡವೋ ಎಂದು ಪಂಚಸದಸ್ಯರ ನ್ಯಾಯಪೀಠ ತಿಳಿಸಿತ್ತು. ಇವತ್ತು ತನ್ನ ತೀರ್ಮಾನವನ್ನು ಹೊರಹಾಕಿರುವ ಸುಪ್ರೀಂ ಕೋರ್ಟ್ ಸಾರಾಸಗಟಾಗಿ ಎಲ್ಲಾ ಮರುಪರಿಶೀಲನೆ ಅರ್ಜಿಗಳನ್ನು ತಳ್ಳಿಹಾಕಿದೆ.
ಮೂಲ ದಾವೆಯಲ್ಲಿ ಕಕ್ಷಿದಾರರಾಗಿದ್ದವರೂ ಸಲ್ಲಿಸಿದ್ದ ಎಂಟು ಅರ್ಜಿಗಳಲ್ಲದೆ ಮೂರನೇ ವ್ಯಕ್ತಿಗಳೂ ಸಲ್ಲಿಸಿದ್ದ ಒಟ್ಟು ೧೮ ತೀರ್ಪು ಮರುಪರಿಶೀಲನೆ ಅರ್ಜಿಗಳು ಸಲ್ಲಿಕೆಯಾಗಿದ್ದವು. ಡಿಸೆಂಬರ್ ೨ನೇ ತಾರೀಕು ಮೊದಲನೇ ಮರುಪರಿಶೀಲನೆ ಅರ್ಜಿ ಸಲ್ಲಿಕೆಯಾಗಿತ್ತು. ಅದಾದ ನಂತರ, ಇರ್ಫಾನ್ ಹಬೀಬ್, ಜಯಂತಿ ಘೋಷ್, ನಂದಿನಿ ಸುಂದರ್, ಪ್ರಭಾತ್ ಪಟ್ನಾಯಕ್ ಮೊದಲಾದ ಸುಮಾರು ೪೦ ಚಿಂತಕರು ಅರ್ಜಿ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಡಿಸೆಂಬರ್ ೯ರಂದು ಅಖಿಲಭಾರತ ಹಿಂದೂ ಮಹಾಸಭಾ ಕೂಡಾ ಅರ್ಜಿಯೂ ಸಲ್ಲಿಸಿತ್ತು.

ಹೀಗೆ ಸಲ್ಲಿಕೆಯಾಗಿದ್ದ ಒಟ್ಟು ೧೮ ಅರ್ಜಿಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಎಲ್ಲವನ್ನೂ ತಳ್ಳಿಹಾಕಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...