ಮಾಲೆಗಾಂವ್ ಭಯೋತ್ಪಾದಕ ಸ್ಪೋಟದ ಪ್ರಮುಖ ಆರೋಪಿ ಹಾಗೂ ಬಿಜೆಪಿ ಸಂಸದೆಯು ಆಗಿರುವ ಪ್ರಜ್ಞಾ ಸಿಂಗ್ ಠಾಕೂರ್ ಪ್ರಕರಣದ ವಿಚಾರಣೆಗೆ ಎರಡನೇ ಬಾರಿಯೂ ತಪ್ಪಿಸಿಕೊಂಡಿದ್ದಾರೆ. ಆರೋಪಿಗೆ ಡಿಸೆಂಬರ್ 19 ಖುದ್ದು ಹಾಜರಾಗುವಂತೆ ಎನ್ಐಎ ವಿಶೇಷ ನ್ಯಾಯಾಲಯವು ಸೂಚಿಸಿತ್ತು.
ಡಿಸೆಂಬರ್ ಆರಂಭದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಕೂಡಾ ಪ್ರಜ್ಞಾ ಸಹಿತ ನಾಲ್ಕು ಆರೋಪಿಗಳು ಹಾಜರಾಗಿರಲಿಲ್ಲ. ಆರೋಪಿಯು ವಿಚಾರಣೆಗೂ ಮೊದಲೇ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವುದರಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ ಎಂದು ಆಕೆಯ ವಕೀಲ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದಾರೆ. ನ್ಯಾಯಾಲಯವು ಆಕೆಯ ಜೊತೆಗೆ ಇತರ ಆರೋಪಿಗಳಿಗೆ ಕೂಡಾ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.
ಇದನ್ನೂ ಓದಿ: ಗೋಡ್ಸೆ ದೇಶಭಕ್ತ ಎಂಬ ಪ್ರಜ್ಞಾ ಹೇಳಿಕೆಗೆ ಸಂಸತ್ನಲ್ಲಿ ಭಾರೀ ಕೋಲಾಹಲ
ಈ ಬಗ್ಗೆ ವಿಚಾರಣಾ ನ್ಯಾಯಾಲಯಕ್ಕೆ ಮಾಹಿತಿ ನೀಡಿದ ಆಕೆಯ ವಕೀಲ ಜೆ.ಪಿ ಮಿಶ್ರಾ, “ಸಂಸದೆ ಮುಂಬೈಗೆ ಎರಡು ದಿನಗಳ ಮಟ್ಟಿಗೆ ಆಗಮಿಸಲಿದ್ದರು. ಅದಕ್ಕಾಗಿ ವಿಮಾನ ನಿಲ್ದಾಣದ ಸಮೀಪದ ನಂದಗಿರಿಯಲ್ಲಿನ ಗೆಸ್ಟ್ ಹೌಸ್ನಲ್ಲಿ ಕೊಠಡಿಯನ್ನೂ ಕಾದಿರಿಸಲಾಗಿತ್ತು. ಆದರೆ ವೈದ್ಯರು ಆಕೆಗೆ ಆಸ್ಪತ್ರೆಗೆ ದಾಖಲಾಗುವಂತೆ ಹೇಳಿದ್ದಾರೆ” ಎಂದಿದ್ದಾರೆ.
ಮುಂಬೈಗೆ ತೆರಳುವುದಕ್ಕೆ ಮುಂಚಿತವಾಗಿಯೆ ಪ್ರಜ್ಞಾ ಏಮ್ಸ್ಗೆ ವೈದ್ಯಕೀಯ ಪರೀಕ್ಷೆಗೆಂದು ಹೋಗಿದ್ದ ಸಂದರ್ಭ ವೈದ್ಯರು ಆಕೆಗೆ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಅದಾಗ್ಯೂ ಆರೋಪಿಯು ಯಾವ ಆರೋಗ್ಯ ಸಮಸ್ಯೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆಂಬ ಕುರಿತು ಮಾಹಿತಿಯಿಲ್ಲ. ಕೆಲ ತಿಂಗಳುಗಳ ಹಿಂದೆ ಆಕೆ ಕಣ್ಣಿನ ಆಪರೇಷನ್ಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ಇದನ್ನೂ ಓದಿ: ರಕ್ಷಣಾ ಸಚಿವಾಲಯದ ಸಮಿತಿಗೆ ಪ್ರಜ್ಞಾ ಸಿಂಗ್ ಠಾಕೂರ್!