ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ಕಳೆದ 24 ದಿನಗಳಿಂದ ದೆಹಲಿಯಲ್ಲಿ ಪ್ರತಿಭಟಿಸುತ್ತಿರುವ ರೈತರನ್ನು ಬೆಂಬಲಿಸಿ ಎನ್ಡಿಎ ಮಿತ್ರ ಪಕ್ಷ RLP ಸಂಸದ ಹನುಮಾನ್ ಬೆನಿವಾಲ್ ಮೂರು ಸಂಸದೀಯ ಸಮಿತಿಗಳಿಗೆ ರಾಜೀನಾಮೆ ನೀಡಿದ್ದಾರೆ.
ರಾಷ್ಟ್ರೀಯ ಲೋಕತಾಂತ್ರಿಕ್ ಪಕ್ಷದಿಂದ ರಾಜಸ್ಥಾನದ ನಾಗೂರ್ನ ಸಂಸದರಾದ ಹನುಮಾನ್ ಬೆನಿವಾಲ್ ಇಂದು ತಮ್ಮ ರಾಜೀನಾಮೆಯನ್ನು ಸ್ವೀಕರ್ ಓಂ ಬಿರ್ಲಾರವರಿಗೆ ಸಲ್ಲಿಸಿದ್ದಾರೆ.
ಸಂಸತ್ತಿನಲ್ಲಿ ನಾನು ಭಾಗವಾಗಿದ್ದ ಹಲವು ಸಮಿತಿಗಳಲ್ಲಿ ವಿವಿಧ ಜನ ಕೇಂದ್ರಿತ ಸಮಸ್ಯೆಗಳನ್ನು ಎತ್ತಿದ್ದೆ. ಸಮಸ್ಯೆಗಳ ಬಗ್ಗೆ ಕ್ರಮ ಕೈಗೊಳ್ಳದಿರುವುದು ಬೇಸರದ ಸಂಗತಿ. ಕ್ರಮ ಕೈಗೊಳ್ಳದಿದ್ದರೆ ಸಂಸದೀಯ ಸಮಿತಿಗಳಲ್ಲಿ ಇದ್ದು ಏನು ಪ್ರಯೋಜನ? ಸಮಸ್ಯೆಗಳು ಬಗೆಹರಿಯದಿರುವುದು ಮತ್ತು ರೈತರ ಆಂದೋಲನಕ್ಕೆ ಬೆಂಬಲ ನೀಡಲು ನಾನು ಸಮಿತಿಗಳಿಗೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಅವರು ಹೇಳಿದ್ದಾರೆ. ಬೆನಿವಾಲ್ ಕೈಗಾರಿಕೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಸಂಸದೀಯ ಸಮಿತಿಯ ಭಾಗವಾಗಿದ್ದರು.
ರಾಜಸ್ಥಾನದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ರಾಷ್ಟ್ರೀಯ ಲೋಕತಾಂತ್ರಿಕ ಪಕ್ಷವು, ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿದ್ದು, ಜಾಥಾಕ್ಕೆ ಸ್ವತಃ ಹನುಮಾನ್ ಬೆನಿವಾಲ್ ನೇತೃತ್ವ ನೀಡಿದ್ದರು.
ಅಮಿತ್ ಶಾ ಜೀ, ನಡೆಯುತ್ತಿರುವ ರೈತರ ಆಂದೋಲನಕ್ಕೆ ದೇಶದಾದ್ಯಂತ ವ್ಯಕ್ತವಾಗಿರುವ ಬೆಂಬಲವನ್ನ ಗಮನದಲ್ಲಿಟ್ಟುಕೊಂಡು, ಇತ್ತೀಚೆಗೆ ಕೃಷಿಗೆ ಸಂಬಂಧಿಸಿದ ಮೂರು ಮಸೂದೆಗಳನ್ನು ತಕ್ಷಣವೇ ಹಿಂಪಡೆಯಬೇಕು. ಕೇಂದ್ರವು ಸ್ವಾಮಿನಾಥನ್ ಆಯೋಗದ ಎಲ್ಲಾ ಶಿಫಾರಸುಗಳನ್ನು ಜಾರಿಗೆ ತರಬೇಕು ಮತ್ತು ದೆಹಲಿಯಲ್ಲಿ ರೈತರೊಂದಿಗೆ ತಕ್ಷಣ ಸಂವಾದವನ್ನು ನಡೆಸಬೇಕು” ಎಂದು ಬೆನಿವಾಲ್ ಈ ಹಿಂದೆ ಟ್ವೀಟ್ ಮಾಡಿದ್ದರು.
“ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿ (ಆರ್ಎಲ್ಪಿ)ಯು ಎನ್ಡಿಎಯ ಘಟಕವಿರಬಹುದು. ಆದರೆ ಇದಕ್ಕೆ ಶಕ್ತಿ ಬಂದಿರುವುದು ರೈತರು ಮತ್ತು ಸೈನಿಕರಿಂದ. ಈ ವಿಚಾರದಲ್ಲಿ ತ್ವರಿತ ಕ್ರಮ ಕೈಗೊಳ್ಳದಿದ್ದರೆ ಇದ್ದಲ್ಲಿ, ನಾವು ರೈತರ ಹಿತದೃಷ್ಟಿಯಿಂದಾಗಿ ಎನ್ಡಿಯ ಜೊತೆಗಿನ ಸಹಭಾಗಿತ್ವದ ಕುರಿತು ಮರುಚಿಂತನೆ ಮಾಡಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದ್ದರು.
ಸೆಪ್ಟೆಂಬರ್ನಲ್ಲಿ ಕೃಷಿ ಮಸೂದೆಗಳನ್ನು ಅಂಗೀಕರಿಸಿದ ಕಾರಣ ಬಿಜೆಪಿ ತನ್ನ ಹಳೆಯ ಮಿತ್ರ ಪಕ್ಷಗಳಲ್ಲಿ ಒಂದಾದ ಶಿರೋಮಣಿ ಅಕಾಲಿ ದಳವನ್ನು ಕಳೆದುಕೊಂಡಿದೆ. ಇದರ ಬೆನ್ನಲ್ಲೇ ಈಗ ರಾಷ್ಟ್ರೀಯ ಲೋಕತಾಂತ್ರಿಕ್ ಪಾರ್ಟಿಯ ಹನುಮಾನ್ ಬೆನಿವಾಲ್ ಎನ್ಡಿಎ ತೊರೆಯುವ ಬೆದರಿಕೆ ಹಾಕಿದ್ದಾರೆ.
ಇದನ್ನೂ ಓದಿ: ಕೃಷಿ ಕಾಯ್ದೆ ರದ್ದುಗೊಳಿಸದಿದ್ದರೆ ಎನ್ಡಿಎ ತೊರೆಯುತ್ತೇವೆ: ಅಮಿತ್ ಶಾಗೆ ಪತ್ರ ಬರೆದ ಬಿಜೆಪಿಯ ಮತ್ತೊಂದು ಮೈತ್ರಿ ಪಕ್ಷ!