ಗ್ರಾಮೀಣ ಪ್ರದೇಶದ ಜನರಿಗೆ 100 ದಿನಗಳ ಉದ್ಯೋಗ ನೀಡುವ ಕೇಂದ್ರದ ಯೋಜನೆಗೆ ಹಣ ಸ್ಥಗಿತಗೊಳಿಸುವುದರ ವಿರುದ್ಧ ಮತ್ತೊಂದು ಸುತ್ತಿನ ಪ್ರತಿಭಟನೆ ನಡೆಸುವುದಾಗಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.
ಕೋಲ್ಕತ್ತಾದ ನೇತಾಜಿ ಕ್ರೀಡಾಂಗಣದಲ್ಲಿ ಮಾತನಾಡಿದ ಅವರು, ”ಡಿಸೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ದೆಹಲಿಗೆ ಭೇಟಿ ನೀಡುತ್ತೇವೆ ಈ ವೇಳೆ ನಮ್ಮ ಸಂಸದರೊಂದಿಗೆ ಪ್ರಧಾನಿಯನ್ನು ಭೇಟಿಯಾಗುವಂತೆ ಕೇಳಿಕೊಳ್ಳುತ್ತೇವೆ. ಭೇಟಿಗೆ ಅವಕಾಶ ನೀಡದಿದ್ದರೆ, ಬೇರೆ ರೀತಿಯಲ್ಲಿ ಪ್ರತಿಭಟನೆಯಾಗಬಹುದು ಹಾಗಾಗಿ ಎಲ್ಲರೂ ಸಿದ್ಧರಾಗಿರಿ” ಎಂದು ತಮ್ಮ ಬೆಂಬಲಿಗರಿಗೆ ಕರೆ ನೀಡಿದ್ದಾರೆ.
ಟಿಎಂಸಿ ಪಕ್ಷವು ಈಗಾಗಲೇ ದೆಹಲಿ ಮತ್ತು ಕೋಲ್ಕತ್ತಾದಲ್ಲಿ ಹಣ ಸ್ಥಗಿತಗೊಳಿಸುವುದರ ವಿರುದ್ಧ ಅಭಿಯಾನಗಳನ್ನು ನಡೆಸಿದೆ. ಈ ಹಿಂದೆ, ಬ್ಯಾನರ್ಜಿ ಅವರು ಪ್ರತಿಕ್ರಿಯಿಸಬೇಕು ಎಂದು ಕೇಂದ್ರಕ್ಕೆ ಅಲ್ಟಿಮೇಟಮ್ ನೀಡಿದ್ದರು.
ಇದೇ ವೇಳೆ ತೃಣಮೂಲ ಬೆಂಬಲಿಗರಿಗೆ ಡಿಸೆಂಬರ್ 2 ಮತ್ತು 3 ರಂದು ಬೂತ್ ಮಟ್ಟದ ಕಾರ್ಯಕ್ರಮಗಳನ್ನು ಕೈಗೊಂಡು ಜನರನ್ನು ಒಗ್ಗೂಡಿಸಲು ಸೂಚಿಸಲಾಗಿದೆ.
ನವೆಂಬರ್ 28, 29 ಮತ್ತು 30ರಂದು ತೃಣಮೂಲ ಶಾಸಕರು ರಾಜ್ಯ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಆ ದಿನಗಳಲ್ಲಿ ವಿಧಾನಸಭೆಯ ಆವರಣದಲ್ಲಿ ಅವರು ಕೇಂದ್ರದ ವಿರುದ್ಧ ಧರಣಿ ನಡೆಸಲಿದ್ದಾರೆ.
ಸಂಸದ ಮಹುವಾ ಮೊಯಿತ್ರಾ ಕುರಿತು ಮಾತನಾಡಿದ ಬ್ಯಾನರ್ಜಿ, ಚುನಾವಣೆ ಹತ್ತಿರವಿರುವಾಗ ನಾವು ಊಹಿಸಿದಂತೆ ಅವರನ್ನು ಸಂಸತ್ತಿನಿಂದ ಹೊರಗೆ ಹಾಕುತ್ತಿದ್ದಾರೆ. ಈ ಮೂಲಕ ಅವರನ್ನು ಹೆಚ್ಚು ಜನಪ್ರಿಯಗೊಳಿಸಲಾಗುತ್ತಿದೆ. ಅವರು ಹೊರಗೆ ಮಾತನಾಡುವುದನ್ನು ಮುಂದುವರಿಸಬಹುದು ಎಂದು ಹೇಳಿದರು.
ಇದನ್ನೂ ಓದಿ: ಮಹುವಾ ವಿರುದ್ಧದ ಪ್ರಶ್ನೆಗಾಗಿ ನಗದು ಆರೋಪ: ಮೌನ ಮುರಿದ ಮಮತಾ ಬ್ಯಾನರ್ಜಿ