ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಉಗ್ರರು ಹಾಗೂ ಭಾರತೀಯ ಯೋಧರ ನಡುವೆ ನಡೆಯುತ್ತಿರುವ ಗುಂಡಿನ ಚಕಮಕಿ ಮುಂದುವರಿದಿದೆ. ಭಯೋತ್ಪಾದಕರ ದಾಳಿಗೆ ಮತ್ತೋರ್ವ ಯೋಧ ಮೃತಪಟ್ಟಿದ್ದಾರೆ.
ನಿನ್ನೆಯಿಂದ ಮೃತಪಟ್ಟ ಯೋಧರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂವರು ಸೈನಿಕರು ಮತ್ತು ಇಬ್ಬರು ಕ್ಯಾಪ್ಟನ್ಗಳು ಸೇರಿದ್ದಾರೆ. ಮೃತ ಕ್ಯಾಪ್ಟನ್ಗಳ ಪೈಕಿ ಮಂಗಳೂರಿನ ಎಂಆರ್ಪಿಎಲ್ನಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಎಂ. ವೆಂಕಟೇಶ್ ಅವರ ಮಗ ಪ್ರಾಂಜಲ್ ಕೂಡ ಒಬ್ಬರು.
ರಾಜೌರಿ ಜಿಲ್ಲೆಯ ಬಾಜಿ ಮಾಲ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿದ್ದಾರೆ. ಉಗ್ರರು ಮತ್ತು ಸೇನಾ ಪಡೆಗಳ ನಡುವೆ ಕಳೆದ 24 ಗಂಟೆಯಿಂದ ಗುಂಡಿನ ಕಾಳಗ ನಡೆಯುತ್ತಿದೆ ಎಂದು ವರದಿಗಳು ಹೇಳಿವೆ.
ಘಟನೆಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ಉಧಂಪುರದಲ್ಲಿರುವ ಸೇನಾ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ ಸೇನಾ ಸಿಬ್ಬಂದಿ ಎನ್ಕೌಂಟರ್ನಲ್ಲಿ ಇಬ್ಬರು ಉಗ್ರರನ್ನು ಹತ್ಯೆ ಮಾಡಿದ್ದಾರೆ.
ನಿನ್ನೆ ಪ್ರಾರಂಭಗೊಂಡ ಸೇನಾ ಕಾರ್ಯಾಚರಣೆ ರಾತ್ರಿ ಸ್ಥಗಿತಗೊಂಡಿತ್ತು. ಇಂದು ಮುಂಜಾನೆ ಮತ್ತೆ ಪ್ರಾರಂಭಗೊಂಡಿದೆ. ಅರಣ್ಯದಲ್ಲಿ ಅಡಗಿರುವ ಉಗ್ರರು ತಪ್ಪಿಸಿಕೊಳ್ಳದಂತೆ ಸೇನಾ ಸಿಬ್ಬಂದಿ ಸುತ್ತುವರಿದಿದ್ದಾರೆ.
ಇದನ್ನೂ ಓದಿ : ಗುರುದ್ವಾರ: ನಿಹಾಂಗ್ ಸಿಖ್ಖರ ನಡುವೆ ಘರ್ಷಣೆ; ಪೇದೆಯನ್ನು ಗುಂಡಿಟ್ಟು ಹತ್ಯೆ