ಉತ್ತರ ಪ್ರದೇಶದ ಬಳಿಕ ಬಿಹಾರದಲ್ಲಿ ಹಲಾಲ್ ಪ್ರಮಾಣಪತ್ರ ಹೊಂದಿರುವ ಉತ್ಪನ್ನಗಳನ್ನು ನಿಷೇಧಿಸುವಂತೆ ಆಗ್ರಹಿಸಿ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಸಿಎಂ ನಿತೀಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಹಲಾಲ್ ಉತ್ಪನ್ನ ‘ಜಿಹಾದ್’ ಎಂದಿರುವ ಗಿರಿರಾಜ್ ಸಿಂಗ್, ಇದರಿಂದ ಇಸ್ಲಾಮಿಕ್ ವ್ಯವಹಾರದ ಉದ್ದೇಶ ಹೊಂದಲಾಗಿದೆ ಎಂದಿದ್ದಾರೆ.
ಬಿಹಾರದ ಬೇಗುಸರಾಯ್ನ ಸಂಸದರಾಗಿರುವ ಗಿರಿರಾಜ್ ಸಿಂಗ್, ಸಿಎಂಗೆ ಬರೆದಿರುವ ಪತ್ರದ ಪ್ರತಿಯನ್ನು ಎಕ್ಸ್ (ಟ್ವಿಟ್ಟರ್) ನಲ್ಲಿ ಹಂಚಿಕೊಂಡಿದ್ದು, ಯಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ನಿರ್ಧಾರವನ್ನು ಅಕ್ಕಪಕ್ಕದ ರಾಜ್ಯಗಳು ಮಾದರಿಯಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.
माननीय मुख्यमंत्री, बिहार से अनुरोध है कि “हलाल सर्टिफ़ाइड” पर बैन लगाया जाएं।@NitishKumar pic.twitter.com/GAcFFi8t6K
— Shandilya Giriraj Singh (@girirajsinghbjp) November 22, 2023
ವಿಡಿಯೋ ಮೂಲಕ ಮಾತನಾಡಿರುವ ಗಿರಿರಾಜ್ ಸಿಂಗ್, ಹಲಾಲ್ ಪ್ರಾಮಾಣಿಕೃತ ಉತ್ಪನ್ನಗಳ ಮಾರಾಟ ಮಧ್ಯಕಾಲೀನ ಯುಗದಲ್ಲಿ ಮುಸ್ಲಿಂ ರಾಜರು ಇತರ ಧರ್ಮೀಯರಿಗೆ ವಿಧಿಸುತ್ತಿದ್ದ ‘ಜಿಝ್ಯಾ’ ತೆರಿಗೆಯಂತಿದೆ. ಕಾಂಗ್ರೆಸ್ ಸೇರಿದಂತೆ ಹಿಂದಿನ ಸರ್ಕಾರಗಳು ಮತ ರಾಜಕಾರಣಕ್ಕೋಸ್ಕರ ಹಲಾಲ್ ಉತ್ಪನ್ನವನ್ನು ಬೆಂಬಲಿಸಿದೆ ಎಂದಿದ್ದಾರೆ.
ತುಕ್ಡೇ ತುಕ್ಡೇ ಗ್ಯಾಂಗ್ಗಳು ಬಿಹಾರದ ಎಲ್ಲಾ ಮೂಲೆ ಮೂಲೆಗಳಲ್ಲಿ ಹಲಾಲ್ ಪ್ರಾಮಾಣಿಕೃತ ಉತ್ಪನ್ನಗಳನ್ನು ಮಾರಾಟ ಮಾಡುತ್ತಿವೆ. ಹಲಾಲ್ ಉತ್ಪನ್ನಗಳನ್ನು ಹಿಂದೂ ಮಂತ್ರಗಳಂತೆ ಕುರಾನ್ ಮೂಲಕ ಪವಿತ್ರೀಕರಣಗೊಳಿಸಲಾಗುತ್ತದೆ. ಇದರಿಂದ ಸನಾತನ ಧರ್ಮ ಅಪಾಯದಲ್ಲಿದೆ. ಹಲಾಲ್ ಉತ್ಪನ್ನಗಳ ಮೂಲಕ ಶರಿಯಾ ಕಾನೂನು ಹೇರಲಾಗ್ತಿದೆ. ಅಲ್ಲದೆ, ಇದು ಉಗ್ರವಾದಿಗಳೊಂದಿಗೆ ಸಂಪರ್ಕ ಹೊಂದಿದೆ ಎಂದು ಗಿರಿರಾಜ್ ಸಿಂಗ್ ಆರೋಪಿಸಿದ್ದಾರೆ.
ಗಿರಿರಾಜ್ ಸಿಂಗ್ ಆರೋಪಕ್ಕೆ ಜೆಡಿ(ಯು) ನಾಯಕ ನೀರಜ್ ಕುಮಾರ್ ತಿರುಗೇಟು ಕೊಟ್ಟಿದ್ದು, ಬಿಜೆಪಿ ನಾಯಕರು ಹಿಂದೂ ಧರ್ಮದ ಪಾಲಕರಂತೆ ತಮ್ಮನ್ನು ತಾವು ಬಿಂಬಿಸಿಕೊಳ್ಳುತ್ತಾರೆ. ಆದರೆ, ಅವರದ್ದೇ ಆಡಳಿತದ ಉತ್ತರ ಪ್ರದೇಶದಂತಹ ರಾಜ್ಯಗಳು ಗೋಮಾಂಸ ರಫ್ತಿನಲ್ಲಿ ಮುಂಚೂಣಿಯಲ್ಲಿದೆ. ಇವೆಲ್ಲವೂ ಅವರ ಬೂಟಾಟಿಕೆ ಎಂದಿದ್ದಾರೆ.
ಇದನ್ನೂ ಓದಿ: ಮಹುವಾ ವಿರುದ್ಧದ ಪ್ರಶ್ನೆಗಾಗಿ ನಗದು ಆರೋಪ: ಮೌನ ಮುರಿದ ಮಮತಾ ಬ್ಯಾನರ್ಜಿ