ಒಕ್ಕೂಟ ಸರ್ಕಾರ ಏಕೆ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಸಾವಿಗೆ ಸಂಬಂಧಿಸಿದ ಕಡತಗಳನ್ನು ಬಹಿರಂಗಪಡಿಸಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಭಾನುವಾರ (ಜ.23) ಪ್ರಶ್ನಿಸಿದ್ದಾರೆ.
ಜಪಾನ್ನ ರೆಂಕೋಜಿ ದೇವಸ್ಥಾನದಲ್ಲಿ ಸಂರಕ್ಷಿಸಲ್ಪಟ್ಟಿರುವ ಸ್ವಾತಂತ್ರ್ಯ ಹೋರಾಟಗಾರ ಸುಭಾಷ್ ಚಂದ್ರ ಬೋಸ್ ಚಿತಾಭಸ್ಮವನ್ನು ಡಿಎನ್ಎ ಪರೀಕ್ಷೆಗೆ ಕಳುಹಿಸಬೇಕೆಂದು ತೃಣಮೂಲ ಕಾಂಗ್ರೆಸ್ ಪಕ್ಷವು ಒತ್ತಾಯಿಸಿದೆ.
ನೇತಾಜಿ ಅವರ 125 ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಮಾತನಾಡಿರುವ ಅವರು, ಒಕ್ಕೂಟ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ನೇತೃತ್ವದ ಸರ್ಕಾರ ನೇತಾಜಿ ಕಣ್ಮರೆಯ ಹಿಂದಿನ ರಹಸ್ಯವನ್ನು ಬಹಿರಂಗಪಡಿಸುವ ಭರವಸೆಯನ್ನು ಈಡೇರಿಸುವಲ್ಲಿ ವಿಫಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ನೇತಾಜಿ ಜನ್ಮದಿನ: ಹೀಗಿದ್ದರು ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್
“ಪ್ರತಿಮೆ ಸ್ಥಾಪಿಸುವ ಮೂಲಕ ನೇತಾಜಿ ಅವರ ಮೇಲಿನ ಪ್ರೀತಿಯನ್ನು ನೀವು ಘೋಷಿಸಲು ಸಾಧ್ಯವಿಲ್ಲ, ಅವರ ಕಣ್ಮರೆ ಹಿಂದಿನ ರಹಸ್ಯವನ್ನು ಅನಾವರಣಗೊಳಿಸಲು ನೀವು ಏನು ಮಾಡಿದ್ದೀರಿ..? ಕೇಂದ್ರದಲ್ಲಿರುವ ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಎಲ್ಲಾ ರಹಸ್ಯಗಳನ್ನು ಬಯಲಿಗೆಳೆಯುವುದಾಗಿ ಭರವಸೆ ನೀಡಿತ್ತು, ಆದರೆ ಅದು ವಿಫಲವಾಗಿದೆ” ಎಂದು ಸಿಎಂ ಮಮತಾ ಬ್ಯಾನರ್ಜಿ ಕಿಡಿ ಕಾರಿದ್ದಾರೆ.
Till today we don't know about Netaji's whereabouts. They (Centre) had said that when they come to power, they will work on it but nothing happened. In fact, we (state) have released & declassified all files on Netaji Bose: West Bengal CM Mamata Banerjee at an event in Kolkata pic.twitter.com/tAmfSN3ez7
— ANI (@ANI) January 23, 2022
ನೇತಾಜಿ ಸುಭಾಷ್ ಚಂದ್ರ ಬೋಸ್ ಸಾವಿನ ವಿವಾದವು ಬಂಗಾಳದಲ್ಲಿ ಭಾರೀ ಭಾವನಾತ್ಮಕ ವಿಷಯವಾಗಿದೆ. ಅವರು 1945 ರಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿಲ್ಲ ಎಂದು ಹಲವರು ನಂಬುತ್ತಾರೆ.
2017 ರಲ್ಲಿ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರವಾಗಿ, ಸುಭಾಸ್ ಚಂದ್ರ ಬೋಸ್ ಅವರು ಆಗಸ್ಟ್ 18, 1945 ರಂದು ತೈಪೆಯಲ್ಲಿ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಒಕ್ಕೂಟ ಸರ್ಕಾರ ದೃಢಪಡಿಸಿತು.
ನೇತಾಜಿಗೆ ಸಂಬಂಧಿಸಿದ ಎಲ್ಲ ಕಡತಗಳನ್ನು ಬಹಿರಂಗಪಡಿಸಿರುವುದಾಗಿ ಒಕ್ಕೂಟ ಸರ್ಕಾರ ಹೇಳಿಕೊಂಡಿದೆ. ಏಪ್ರಿಲ್ 2016 ರಲ್ಲಿ, ಕೇಂದ್ರವು 25 ಡಿಕ್ಲಾಸಿಫೈಡ್ ಫೈಲ್ಗಳ ಮೂರನೇ ಬ್ಯಾಚ್ ಅನ್ನು ಬಿಡುಗಡೆ ಮಾಡಿತು, ಇದರಲ್ಲಿ ಪ್ರಧಾನ ಮಂತ್ರಿ ಕಚೇರಿ ಮತ್ತು ಗೃಹ ಸಚಿವಾಲಯದಿಂದ ತಲಾ ಐದು ಫೈಲ್ಗಳು ಮತ್ತು ವಿದೇಶಾಂಗ ಸಚಿವಾಲಯದ 15 ಫೈಲ್ಗಳು ಸೇರಿವೆ. ಕಡತಗಳು 1956 ಮತ್ತು 2009 ರ ನಡುವಿನ ಅವಧಿಗೆ ಸಂಬಂಧಿಸಿವೆ. ಆದರೆ, ಈ ಕಡತಗಳು ಸಾರ್ವಜನಿಕರಿಗೆ ಲಭ್ಯವಿಲ್ಲ ಎಂದು ಸಂಶೋಧಕರ ತಂಡ ಆರೋಪಿಸಿದೆ. ಶನಿವಾರ(ಜ.22) ತೃಣಮೂಲ ಕಾಂಗ್ರೆಸ್ ಸಂಸದ ಸುಖೇಂದು ಶೇಖರ್ ರೇ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ನೇತಾಜಿ ಫೈಲ್ಗಳ ವರ್ಗೀಕರಣವನ್ನು ಕೋರಿದ್ದಾರೆ.
ಇಂಡಿಯಾ ಗೇಟ್ನಲ್ಲಿ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ಗ್ರಾನೈಟ್ ಪ್ರತಿಮೆಯನ್ನು ನಿರ್ಮಿಸುವುದಾಗಿ ಪ್ರಧಾನಿ ಭರವಸೆ ನೀಡಿದ್ದಾರೆ. ಪ್ರತಿಮೆ ಸಿದ್ಧವಾಗುವವರೆಗೆ ಸ್ಥಳದಲ್ಲಿ ನೇತಾಜಿಯ ಹೋಲೋಗ್ರಾಂ ಹಾಕಲಾಗುವುದು ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿ, ಚಿತ್ರವನ್ನು ಹಂಚಿಕೊಂಡಿದ್ದರು.
“ನಾವು ನಿಮ್ಮ ಮೇಲೆ ಒತ್ತಡ ಹೇರಿದ್ದರಿಂದ ಪ್ರತಿಮೆಯನ್ನು ನಿರ್ಮಿಸಲಾಗುತ್ತಿದೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದನ್ನೂ ಓದಿ: ಒಕ್ಕೂಟ ಸರ್ಕಾರ ತಿರಸ್ಕರಿಸಿದ ಸುಭಾಷ್ ಚಂದ್ರ ಬೋಸ್ ಸ್ತಬ್ಧಚಿತ್ರ ಕೊಲ್ಕತ್ತಾದಲ್ಲಿ ಪ್ರದರ್ಶನ: ಬಂಗಾಳ ಸರ್ಕಾರ