ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜ (ಕೇಸರಿ ಧ್ವಜ) ತೆರವುಗೊಳಿಸಿ ರಾಷ್ಟ್ರಧ್ವಜ ಹಾರಿಸಿರುವುದನ್ನು ಖಂಡಿಸಿ ಬಿಜೆಪಿ ಮತ್ತು ಸಂಘಪರಿವಾರ ಕರೆಕೊಟ್ಟಿದ್ದ ಇಂದಿನ(ಫೆ.9) ಮಂಡ್ಯ ಬಂದ್ ಸಂಪೂರ್ಣ ವಿಫಲವಾಗಿದೆ ಎಂದು ತಿಳಿದು ಬಂದಿದೆ.
ಮಂಡ್ಯ ನಗರದಲ್ಲಿ ಎಂದಿನಂತೆ ಅಂಗಡಿ-ಮುಂಗಟ್ಟುಗಳು ತೆರೆದಿತ್ತು. ಜನರು ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಶಾಲ- ಕಾಲೇಜು, ಚಿತ್ರ ಮಂದಿರಗಳು ಎಂದಿನಂತೆ ಕಾರ್ಯನಿರ್ವಹಿಸಿವೆ. ಕೆಲ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು ಮಾತ್ರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಎಂದು ವರದಿಗಳು ತಿಳಿಸಿವೆ.
ಕೆರಗೋಡಿನಲ್ಲಿ ಹನುಮ ಧ್ವಜ ತೆರವುಗೊಳಿಸಿದ್ದನ್ನು ಖಂಡಿಸಿ ಜನವರಿ 30ರಂದು ಕೇಸರಿ ಶಾಲು ಹಾಕಿಕೊಂಡು ಪ್ರತಿಭಟನೆಗೆ ಹಾಜರಾಗಿದ್ದ ಹೆಚ್.ಡಿ ಕುಮಾರಸ್ವಾಮಿ ಮತ್ತು ಅವರ ಜೆಡಿಎಸ್ ಕಾರ್ಯಕರ್ತರು ಕೂಡ ಇಂದಿನ ಪ್ರತಿಭಟನೆಯಿಂದ ದೂರ ಉಳಿದಿದ್ದರು.
ಮಂಡ್ಯ ಬಂದ್ಗೆ ಬೆಂಬಲ ನೀಡುವಂತೆ ಸಂಘ ಪರಿವಾರದ ಮುಖಂಡರು ವರ್ತಕರು, ಆಟೋ ಚಾಲಕರನ್ನು ಗುರುವಾರ ಭೇಟಿ ಮಾಡಿ, ಮನವಿ ಮಾಡಿದ್ದರು. ಆದರೂ, ಯಾರೂ ಕೂಡ ಬಂದ್ಗೆ ಬೆಂಬಲ ನೀಡಿಲ್ಲ. ಬಂದ್ ಬಗ್ಗೆ ತಟಸ್ಥವಾಗಿ ಉಳಿಯಲು ಅವರು ನಿರ್ಧರಿಸಿದ್ದರು ಎಂದು ವರದಿಗಳು ಹೇಳಿವೆ.
ಬಂದ್ಗೆ ಬೆಂಬಲ ದೊರೆಯದ ಕಾರಣ, ಸಂಘಪರಿವಾದ ಕಾರ್ಯಕರ್ತರು ಕೆರಗೋಡಿನಿಂದ ಮಂಡ್ಯಕ್ಕೆ ಬೈಕ್ ರ್ಯಾಲಿ ನಡೆಸಿ, ನಗರದ ವೀರಾಂಜನೇಯ ದೇವಾಲಯದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ‘ನಿಮಗೆ ನಾಲಿಗೆಗಳೆಷ್ಟು..?’; ‘ದೆಹಲಿ ಚಲೋ’ ಟೀಕಿಸಿದ ಬಿಜೆಪಿಗರ ವಿರುದ್ಧ ಸಿಎಂ ಕಿಡಿ