ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಹಲವು ಕಸರತ್ತುಗಳನ್ನು ನಡೆಸುತ್ತಿದ್ದಾರೆ. ಮುಖ್ಯಮಂತ್ರಿಯವರ ಸುಪುತ್ರ ಬಿ.ವೈ. ವಿಜಯೇಂದ್ರ ಈ ನಿಮಿತ್ತ ಈಗಾಗಲೇ ಒಂದು ಸುತ್ತು ದೆಹಲಿ ಪ್ರವಾಸವನ್ನೂ ಕೈಗೊಂಡಿದ್ದಾರೆ. ಹಾಗೇ ಮುಖ್ಯಮಂತ್ರಿಗಳ ಆಪ್ತ ಶಾಸಕರು ಸಹಿತ ಅನೇಕರು ಈಗಲೂ ಬಿ.ಎಸ್. ಯಡಿಯೂರಪ್ಪ ಪರವಾಗಿ ಹೈಕಮಾಂಡ್ನಲ್ಲಿ ಲಾಭಿ ನಡೆಸುತ್ತಿದ್ದಾರೆ. ಅತ್ತ ಯಡಿಯೂರಪ್ಪ ವಿರೋಧಿ ಬಣ ಕೂಡ ಬಿ ಎಸ್ ವೈ ಕೆಳಗಿಳಿಸಲು ತೆರೆಮರೆಯ ಕಸರತ್ತು ಮುಂದುವರೆಸಿದೆ. ಇದೆಲ್ಲದರ ನಡುವೆ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಬೆಂಗಳೂರು ಪ್ರವಾಸ ಹಲವು ಕುತೂಹಲಕ್ಕೆ ಕಾರಣವಾಗಿದೆ. ಆದರೆ ಇದೆಲ್ಲದರ ನಡುವೆ ಬಿ.ಎಸ್. ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಯಡಿಯೂರಪ್ಪನವರೇ ಇನ್ನುಳಿದ 2 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯಲಿ ಎಂದು ದೇವಸ್ಥಾನದಲ್ಲಿ ಪೂಜೆ ಪುನಸ್ಕಾರಗಳನ್ನು ನಡೆಸುತ್ತಿದ್ದಾರೆ.
ಮಂಡ್ಯದಲ್ಲಿ ಯಡಿಯೂರಪ್ಪ ಅಭಿಮಾನಿ ಬಳಗವು ದೇವರಿಗೆ ಎಂಟೂ ದಿಕ್ಕಿನಲ್ಲಿ ಈಡುಗಾಯಿ ಒಡೆದು ಯಡಿಯೂರಪ್ಪನವರು ಇನ್ನುಳಿದ 2 ವರ್ಷ ಮುಖ್ಯ ಮಂತ್ರಿಯಾಗಿ ಅಧಿಕಾರ ಪೂರೈಸಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ. ಮಂಡ್ಯದ ಕಾಳಿಕಾಂಬ ದೇವಸ್ಥಾನದಲ್ಲಿ ನೆರೆದ ಯಡಿಯೂರಪ್ಪ ಅಭಿಮಾನಿಗಳು ಬಿಎಸ್ವೈ ಆರೋಗ್ಯಕ್ಕಾಗಿಯೂ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಬಿ.ಎಸ್. ಯಡಿಯೂರಪ್ಪನವರು ತಮ್ಮ ಇಳಿ ವಯಸ್ಸಿನಲ್ಲಿಯೂ ರಾಜ್ಯ ಪ್ರವಾಸ ಕೈಗೊಂಡು ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತುತ್ತಿದ್ದಾರೆ. ರಾಜ್ಯದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಬೆಂಗಳೂರಿಗೆ ಆಗಮಿಸರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಯಡಿಯೂರಪ್ಪನವರಿಗೆ ಸಹಕಾರ ನೀಡುವಂತಾಗಬೇಕು. ಹಾಗಾಗಿ ಕಾಳಮ್ಮ ದೇವಿಗೆ ಈಡುಗಾಯಿ ಪೂಜೆ ಸಲ್ಲಿಸಿದ್ದೇವೆ ಎಂದು ಬಿ.ಎಸ್.ಯಡಿಯೂರಪ್ಪ ಅಭಿಮಾನಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಕೊರೊನಾ ತಂದೆಳೆದ ಕೃಷಿ ಸಂಕಷ್ಟಗಳು ಮತ್ತು ಪ್ರಭುತ್ವದ ಹೊಣೆಗಾರಿಕೆ: ಡಾ. ಜಿ. ಎನ್. ಮಲ್ಲಿಕಾರ್ಜುನಪ್ಪ