ಉತ್ತರ ಪ್ರದೇಶದ ವಾರಣಾಸಿಯ ಜ್ಞಾನವಾಪಿ ಮಸೀದಿಯಂತೆ ಮಂಗಳೂರಿನ ಮಳಲಿಪೇಟೆ ಜುಮ್ಮಾ ಮಸೀದಿಯಲ್ಲಿ ಸಮೀಕ್ಷೆ ನಡೆಸುವಂತೆ ಕೋರಿ ಹಿಂದೂ ಪಕ್ಷಕಾರರು ಸಲ್ಲಿಸಿರುವ ಅರ್ಜಿಯನ್ನು ಫೆ. 8ರಂದು (ಗುರುವಾರ) ವಿಚಾರಣೆ ನಡೆಸುವುದಾಗಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಇಂದು(ಫೆ.6) ತಿಳಿಸಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ.
ಇಂದು ಬೆಳಗ್ಗೆ ವಿಚಾರಣೆಗೆ ಬಂದಾಗ ನ್ಯಾಯಾಧೀಶೆ ನಿಖಿತಾ ಅಕ್ಕಿ ಅವರು ಗುರುವಾರ ಅರ್ಜಿ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.
ಜ್ಞಾನವಾಪಿ ಮಸೀದಿಯಂತೆಯೇ ಮಳಲಿ ಮಸೀದಿ ಸಮೀಕ್ಷೆ: ಫೆ.8ರಂದು ವಿಚಾರಣೆ ನಡೆಸಲಿರುವ ಮಂಗಳೂರು ನ್ಯಾಯಾಲಯ #MalaliMasjid https://t.co/y1KWnNqIBQ
— ಬಾರ್ & ಬೆಂಚ್ – Kannada Bar & Bench (@Kbarandbench) February 6, 2024
ಮಳಲಿಪೇಟೆ ಜುಮ್ಮಾ ಮಸೀದಿಯನ್ನು ಪ್ರತಿವಾದಿಯಾಗಿಸಿರುವ ಅರ್ಜಿದಾರರಾದ ಧನಂಜಯ್ ಹಾಗೂ ಇನ್ನಿತರರು “ಮಸೀದಿ ಸಮೀಕ್ಷೆ ನಡೆಸುವ ಸಂಬಂಧ ನ್ಯಾಯಾಲಯ ಅಡ್ವೊಕೇಟ್ ಕಮಿಷನರ್ ಅವರನ್ನು ನೇಮಿಸಬೇಕು. ಅವರಿಗೆ ತಜ್ಞರು, ಇಲ್ಲವೇ ಪುರಾತತ್ವ ಇಲಾಖೆಯ ಅಧಿಕಾರಿಗಳು ನೆರವು ಒದಗಿಸಲು ನಿರ್ದೇಶನ ನೀಡಬೇಕು”ಎಂದು ಕೋರಿದ್ದಾರೆ. ನ್ಯಾಯವಾದಿ ಚಿದಾನಂದ ಎಂ ಕೆದಿಲಾಯ ಮೂಲಕ ಅರ್ಜಿ ಸಲ್ಲಿಸಲಾಗಿದೆ ಎಂದು ವರದಿ ತಿಳಿಸಿದೆ.
ಮಳಲಿ ಮಸೀದಿಯ ಹಳೆಯ ಕಟ್ಟಡ ಪುರಾತನ ದೇವಾಲಯವಾಗಿದೆ. ಅದು ದೇವಾಲಯದ ಗರ್ಭಗುಡಿಯಾಗಿದೆ. ಅಲ್ಲಿನ ವಾಸ್ತುಶಿಲ್ಪದ ಚಿತ್ರಗಳು, ಗೋಡೆ, ಕೆತ್ತನೆಗಳು ಮತ್ತು ಐತಿಹಾಸಿಕ ಸ್ವರೂಪವನ್ನು ಆಧರಿಸಿ ಅಡ್ವೊಕೇಟ್ ಕಮಿಷನರ್ ವರದಿ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.
ಸ್ಥಳವನ್ನು ಅಗೆದು ಮತ್ತು ಉತ್ಖನನ ನಡೆಸಿ ಅಲ್ಲಿ ಚಾರಿತ್ರಿಕ ಕುರುಹುಗಳಿವೆಯೇ ಪ್ರತಿಮೆಗಳಿವೆಯೇ ಎಂದು ಪರಿಶೀಲಿಸಬೇಕು. ಸ್ಥಳದಲ್ಲಿರುವ ಕಟ್ಟಡ ಮತ್ತು ಸ್ಮಾರಕಗಳ ಕಾಲಮಾನದ ಕುರಿತು ವರದಿ ಮಾಡಬೇಕು. ಇಡೀ ಕಟ್ಟಡದ ಅಥವಾ ಅಲ್ಲಿ ನೆಲೆಗೊಂಡಿರಬಹುದಾದ ಮತ್ತಾವುದೇ ಸ್ಮಾರಕಗಳ ಒಟ್ಟಾರೆ ಸ್ವರೂಪದ ಬಗ್ಗೆ ವೈಜ್ಞಾನಿಕ ವರದಿ ನೀಡಬೇಕು ಎಂದು ಕೂಡ ಅರ್ಜಿಯಲ್ಲಿ ವಿನಂತಿಸಲಾಗಿದೆ.
ಪ್ರಕರಣದ ಹಿನ್ನೆಲೆ :
ಮಳಲಿ ಮಸೀದಿಯ ಹಳೆಯ ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸಲು 2022ರಲ್ಲಿ ಮಸೀದಿ ಸಮಿತಿ ಮುಂದಾಗಿತ್ತು. ದ್ರಾವಿಡ ಶೈಲಿಯ ಹಳೆಯ ಕಡ್ಡದ ಸುತ್ತಲು ಕಡೆವಿ ಮಧ್ಯದ ಭಾಗ ಹಾಗೆಯೇ ಬಿಟ್ಟಿತ್ತು. ಮಸೀದಿಯ ಮೇಲ್ಚಾವಣಿ ದೇಗುಲ ಶೈಲಿಯಲ್ಲಿರುವುದನ್ನು ಕಂಡ ಹಿಂದುತ್ವ ಸಂಘಟನೆ ಮುಖಂಡರು ಮಸೀದಿಯ ಒಳಗೆ ಶಿವನ ಸನ್ನಿಧಾನ ಇರುವುದರಿಂದ ದುರಸ್ತಿ ಕಾಮಗಾರಿ ಸ್ಥಗಿತಗೊಳಿಸಿ ಸಮೀಕ್ಷೆ ನಡೆಸಬೇಕು ಎಂದು ಕೋರಿ ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಆದರೆ, ಮಳಲಿ ಮಸೀದಿ ವಕ್ಫ್ ಮಂಡಳಿಗೆ ಸೇರಿದ ಆಸ್ತಿಯಾಗಿದೆ ಎಂದು ಮಸೀದಿ ಸಮಿತಿ ಹೈಕೋರ್ಟ್ ಮೆಟ್ಟಿಲೇರಿತ್ತು. ವಾದ ಆಲಿಸಿದ್ದ ಹೈಕೋರ್ಟ್, ಅರ್ಜಿಯನ್ನು ಜಿಲ್ಲಾ ನ್ಯಾಯಾಲಯವೇ ವಿಚಾರಣೆ ನಡೆಸಬೇಕೆಂದು ಜ. 31ರಂದು ಸೂಚಿಸಿತ್ತು.
ಕಳೆದ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ದಕ್ಷಿಣ ಕನ್ನಡ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ಅವರು “ವಿವಾದಕ್ಕೆ ಸಂಬಂಧಿಸಿದ ಕಾನೂನು ಹೋರಾಟದಿಂದ ದೂರ ಉಳಿದಿದ್ದ ವಕ್ಫ್ ಮಂಡಳಿ ಇನ್ನು ತನ್ನನ್ನೂ ಪ್ರಕರಣದ ಕಕ್ಷಿದಾರನನ್ನಾಗಿ ಪರಿಗಣಿಸುವಂತೆ ಅರ್ಜಿ ಸಲ್ಲಿಸಲಿದೆ. ಈ ಕುರಿತ ಕಾನೂನು ಹೋರಾಟದಲ್ಲಿ ತೊಡಗಿಸಿಕೊಳ್ಳಲಿದೆ” ಎಂದು ತಿಳಿಸಿದ್ದರು.
ಇದನ್ನೂ ಓದಿ : ಹೋರಾಟಗಾರರ ಒತ್ತಡಕ್ಕೆ ಮಣಿದ ನ್ಯಾಷನಲ್ ಕಾಲೇಜು; ಡಾ.ರವಿ ಬಾಗಿ ವರ್ಗಾವಣೆ ನಿರ್ಧಾರದಿಂದ ಹಿಂದೆ ಸರಿದ ಆಡಳಿತ ಮಂಡಳಿ