ಬೆಂಗಳೂರಿನಲ್ಲಿ ಕಳೆದ ವಾರ ಉಂಟಾದ ನೆರೆಗೆ ಕಾರಣವಾದ ಸುಮಾರು 700 ಮಳೆ ನೀರಿನ ಚರಂಡಿಗಳನ್ನು ಮುಚ್ಚಿದ ಅತಿಕ್ರಮಣದಾರರ ಪಟ್ಟಿಯಲ್ಲಿ ಹೈ-ಪ್ರೊಫೈಲ್ ಬಿಲ್ಡರ್ಗಳು, ಡೆವಲಪರ್ಗಳು ಮತ್ತು ಟೆಕ್ ಪಾರ್ಕ್ಗಳು ಸೇರಿವೆ ಎಂದು ಎನ್ಡಿಟಿವಿ ವರದಿ ಹೇಳಿದೆ. ಈ ಪಟ್ಟಿಯಲ್ಲಿ ವಿಪ್ರೋ, ಪ್ರೆಸ್ಟೀಜ್, ಇಕೋ ಸ್ಪೇಸ್, ಬಾಗ್ಮನೆ ಟೆಕ್ ಪಾರ್ಕ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಮತ್ತು ದಿವ್ಯಶ್ರೀ ವಿಲ್ಲಾಸ್ ಸೇರಿದಂತೆ ಹಲವು ದೊಡ್ಡ ಕಂಪೆನಿಗಳ ಹೆಸರು ಇವೆ ಅದು ಉಲ್ಲೇಖಿಸಿದೆ.
ಬಿಬಿಎಂಪಿ ಕಳೆದ ಎರಡು ದಿನಗಳಿಂದ ಅತಿಕ್ರಮಣಕಾರರು ಎಂದು ಆರೋಪಿಸಿ ಜನ ಸಾಮಾನ್ಯರ ಆಸ್ತಿಗಳನ್ನು ಬುಲ್ಡೋಝರ್ ಮೂಲಕ ಕೆಡವಲಾಗುತ್ತಿದೆ. ಅದಾಗ್ಯೂ ಈ ವೇಳೆ ಈ ಯಾವುದೆ ದೊಡ್ಡ ಕಂಪೆನಿಗಳ ಆಸ್ತಿಗಳನ್ನು ಕೆಡವಿದ್ದು ಈ ವರೆಗೆ ವರದಿಯಾಗಿಲ್ಲ ಎಂದು ಎನ್ಡಿಟವಿ ವರದಿ ಮಾಡಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
“ಸಾಮಾನ್ಯ ಮನುಷ್ಯರ ಆಸ್ತಿಗಳನ್ನು ನೆಲಸಮಗೊಳಿಸುವ ಕಾರ್ಯಗಳು ಭರದಿಂದ ಸಾಗುತ್ತಿರುವಾಗ, ಬೃಹತ್ ಕಂಪನಿಗಳು ಇನ್ನೂ ಮುಟ್ಟಿಲ್ಲ” ಎಂದು ತನ್ನ ವರದಿಯಲ್ಲಿ ಎನ್ಡಿಟಿವಿ ಹೇಳಿದೆ.
ಇದನ್ನೂ ಓದಿ: ‘ನೋಯ್ಡಾ ಟ್ವಿನ್ ಟವರ್ ಶೈಲಿಯಲ್ಲಿ ಕೆಡವುತ್ತೇವೆ’: ಬೆಂಗಳೂರು ಕಟ್ಟಡಗಳ ಬಗ್ಗೆ ಸಚಿವ ಆರ್. ಅಶೋಕ್
“ಅತಿಕ್ರಮ ಮಾಡಿರುವ ಯಾವುದೆ ಕಂಪೆನಿಗಳನ್ನು ಬಿಡುವುದಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಬಿಬಿಎಂಪಿ ಇಂಜಿನಿಯರ್ ಹೇಳಿದ್ದಾರಾದರೂ, ಯಾವುದೆ ದೊಡ್ಡ ಕಂಪೆನಿಗಳ ಮೇಲೆ ಇನ್ನೂ ಕ್ರಮ ಪ್ರಾರಂಭವಾಗಿಲ್ಲ” ಎಂದು ಎನ್ಡಿಟಿವಿ ವರದಿ ಹೇಳಿದೆ.
ಈ ನಡುವೆ ಬೆಂಗಳೂರಿನಲ್ಲಿ ನೆರೆ ಬಂದಿದ್ದರ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರದ ಬಗ್ಗೆ ತೀವ್ರ ಟೀಕೆ ಮಾಡಿದ್ದ ಯುವ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ನಲಪಾಡ್ ಸೇರಿದ ಪೂರ್ವ ಬೆಂಗಳೂರಿನ ನಲಪಾಡ್ ಅಕಾಡೆಮಿ ಆಫ್ ಇಂಟರ್ನ್ಯಾಶನಲ್ ಸ್ಕೂಲ್ ಆವರಣದಲ್ಲಿ ಧ್ವಂಸ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ಶಾಲೆಯು ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದು ಗಮನಕ್ಕೆ ಬಾರದೆ ಹೋದದ್ದು ಹೇಗೆ ಎಂಬ ಪ್ರಶ್ನೆಗೆ, ಕಟ್ಟಡ ನಿರ್ವಣದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಮುಖ್ಯ ಎಂಜಿನಿಯರ್ ಮಾಲತಿ ಅವರು ಕಂದಾಯ ಇಲಾಖೆಯನ್ನು ದೂಷಿಸಿದ್ದಾರೆ. “ಈ ಬಗ್ಗೆ ನಮಗೆ ತಿಳಿದಿರಲಿಲ್ಲ, ಇದು ಕಂದಾಯ ಇಲಾಖೆಯ ಅಡಿಯಲ್ಲಿ ಬರುತ್ತದೆ. ಅವರು ಪರಿಶೀಲಿಸಬೇಕಿತ್ತು. ಈಗ ನಾವು ಅತಿಕ್ರಮಣವನ್ನು ಕೆಡವುತ್ತಿದ್ದೇವೆ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಹಾ ಮಳೆಗೆ ಜಲಾವೃತಗೊಂಡ ಬೆಂಗಳೂರಿನ ರಸ್ತೆಗಳು; ದಿಕ್ಕು ತಪ್ಪಿದ ಗೂಗಲ್ ಮ್ಯಾಪ್!
ಕೆಲವು ದಿನಗಳಿಂದ ಬೆಂಗಳೂರಿನ ಹಲವು ವಸತಿ ಪ್ರದೇಶದಲ್ಲಿ ಕಟ್ಟಡಗಳನ್ನು ಕೆಡವಲಾಗುತ್ತಿದೆ. ಆದರೆ ಯಾವುದೇ ಅಧಿಕೃತ ಅಂಕಿಅಂಶಗಳು ಇನ್ನೂ ಬಂದಿಲ್ಲ ಎಂದು ವರದಿಯಾಗಿದೆ. ಬೆಂಗಳೂರಿನ ಪೂರ್ವ ಭಾಗದಲ್ಲಿ ಮಂಗಳವಾರ ನಾಲ್ಕು ಅಂತಸ್ತಿನ ಕಟ್ಟಡದ ಗೋಡೆಯನ್ನು ನಿವಾಸಿಗಳು ತಮ್ಮ ಮನೆಗಳಲ್ಲಿದ್ದಾಗ ನೆಲಸಮಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.
ಕಟ್ಟಡದ ಮಾಲೀಕ ದಿನೇಶ್ ರೆಡ್ಡಿ ಅವರು, “ಕಟ್ಟಡದ ನಿರ್ಮಾಣಕ್ಕೆ ಮುಂದಾದಾಗಲೆ ಎಲ್ಲಾ ಅಗತ್ಯ ಅನುಮತಿಗಳನ್ನು ತೆಗೆದುಕೊಂಡಿದ್ದೇವೆ. ಈ ಮಳೆನೀರು ಚರಂಡಿ ಬಹಳ ದಿನಗಳಿಂದ ಇದೆ, ಈ ವಿಚಾರ ಗೊತ್ತಿದ್ದರೂ ಅಧಿಕಾರಿಗಳು ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದಾರೆ. ನಾನು ಯಾವುದೇ ನಿಯಮ ಉಲ್ಲಂಘಿಸಿಲ್ಲ.ಯಾವುದೇ ಸೂಚನೆ ನೀಡದೆ ಬಂದು ಕಾಂಪೌಂಡ್ ಗೋಡೆ ಕೆಡವಿದ್ದಾರೆ” ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ, ಕಟ್ಟಡ ಧ್ವಂಸವನ್ನು ಮೇಲ್ವಿಚಾರಣೆ ನಡೆಸುತ್ತಿರುವ ಕಾರ್ಯನಿರ್ವಾಹಕ ಇಂಜಿನಿಯರ್, ಕಟ್ಟಡ ನಿರ್ಮಾಣಕ್ಕೆ ಯಾವುದೇ ಅನುಮತಿಯನ್ನು ನೀಡಿಲ್ಲ ಎಂದು ಹೇಳಿದ್ದಾರೆ. “ಈ ಕಟ್ಟಡಕ್ಕೆ ಯಾವುದೇ ಮಂಜೂರಾತಿ ಯೋಜನೆ ನೀಡಲಾಗಿಲ್ಲ. ಅವರು ಕಾನೂನು ಉಲ್ಲಂಘಿಸಿ ಮಳೆನೀರು ಹರಿಯುವ ಚರಂಡಿಯಲ್ಲಿ ಕಟ್ಟಡ ನಿರ್ಮಿಸಿದ್ದಾರೆ” ಎಂದು ಕಾರ್ಯಪಾಲಕ ಎಂಜಿನಿಯರ್ ಮುನಿರೆಡ್ಡಿ ಹೇಳಿದ್ದಾರೆ.
ಇದನ್ನೂ ಓದಿ: ದೇವಾಲಯ ನಿರ್ಮಾಣ ವಿವಾದದ ಬಳಿಕ ಬೆಂಗಳೂರು ವಿವಿಯಲ್ಲಿ ದಿಢೀರನೆ ಗಣಪತಿ ಪ್ರತಿಷ್ಟಾಪನೆ; ಆರೋಪ
ಆದಾಗ್ಯೂ, ಕಟ್ಟಡ ಧ್ವಂಸದ ಬಗ್ಗೆ ಯಾವುದೇ ಸೂಚನೆಯನ್ನು ನೀಡಿಲ್ಲ ಎಂದು ಅನೇಕ ನಿವಾಸಿಗಳು ದೂರಿದ್ದಾರೆ. “ಸರ್ಕಾರ ನಮಗೆ ಯಾವುದೆ ಮಾಹಿತಿ ನೀಡಿಲ್ಲ. ಕಟ್ಟಡಗಳನ್ನು ಕೆಡವಲು ಆರಂಭಿಸಿದಾಗ ನಾವು ನಮ್ಮ ಮನೆಯೊಳಗಿದ್ದೆವು” ಎಂದು ಕೆಡವಲಾಗುತ್ತಿರುವ ನಾಲ್ಕು ಅಂತಸ್ತಿನ ಕಟ್ಟಡದ ನಿವಾಸಿ ಅಲೋಕ್ ಹೇಳಿದ್ದಾರೆ.
“ನಾನು ರಾತ್ರಿ ಪಾಳಿ ಕೆಲಸದಲ್ಲಿದ್ದು, ಅದನ್ನು ಮುಗಿಸಿ ಗಾಢ ನಿದ್ದೆಯಲ್ಲಿದ್ದೆ. ಕೆಡವುವಿಕೆಯ ದೊಡ್ಡ ಶಬ್ದಕ್ಕೆ ನಾನು ಇದ್ದಕ್ಕಿದ್ದಂತೆ ಎಚ್ಚರವಾಯಿತು” ಎಂದು ಮತ್ತೊಬ್ಬ ನಿವಾಸಿ ಪ್ರವೀಣ್ ಹೇಳಿದ್ದಾರೆ.