Homeಕರ್ನಾಟಕಹೊಸ ಸಂಸತ್‌ ಕಟ್ಟಡಕ್ಕೆ ‘ಅಂಬೇಡ್ಕರ್‌’ ಹೆಸರಿಡಿ: ಕೇಂದ್ರಕ್ಕೆ ತೆಲಂಗಾಣ ಸರ್ಕಾರ ಒತ್ತಾಯ

ಹೊಸ ಸಂಸತ್‌ ಕಟ್ಟಡಕ್ಕೆ ‘ಅಂಬೇಡ್ಕರ್‌’ ಹೆಸರಿಡಿ: ಕೇಂದ್ರಕ್ಕೆ ತೆಲಂಗಾಣ ಸರ್ಕಾರ ಒತ್ತಾಯ

- Advertisement -
- Advertisement -

ತೆಲಂಗಾಣ ವಿಧಾನಸಭೆಯು ಮಂಗಳವಾರ ಎರಡು ನಿರ್ಣಯಗಳನ್ನು ಅಂಗೀಕರಿಸಿದೆ. ದೆಹಲಿಯ ಹೊಸ ಸಂಸತ್‌ ಕಟ್ಟಡಕ್ಕೆ ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ಹೆಸರಿಡಬೇಕು ಎಂದು ಕೇಂದ್ರ ಸರ್ಕಾರವನ್ನು ಒಂದು ನಿರ್ಣಯ ಒತ್ತಾಯಿಸಿದರೆ, ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಹೊಸ ವಿದ್ಯುತ್ ತಿದ್ದುಪಡಿ ಮಸೂದೆಯನ್ನು ವಾಪಸ್‌ ಪಡೆಯುವಂತೆ ಮತ್ತೊಂದು ನಿರ್ಣಯ ಒತ್ತಾಯಿಸಿದೆ.

ಡಾ.ಅಂಬೇಡ್ಕರ್ ಕುರಿತು ನಿರ್ಣಯ ಮಂಡಿಸಿದ ಸಚಿವ ಕೆ.ಟಿ.ರಾಮರಾವ್, ಸಂವಿಧಾನ ರಚನೆಯಲ್ಲಿ ಅವರ ಕೊಡುಗೆಯನ್ನು ಶ್ಲಾಘಿಸಿದರು. ಹೊಸ ರಾಜ್ಯಗಳ ರಚನೆಗೆ ಸಂಬಂಧಿಸಿದ ಸಂವಿಧಾನದ 3 ನೇ ಪರಿಚ್ಛೇದದಿಂದಾಗಿ ತೆಲಂಗಾಣ ರಚನೆಯಾಗಿದೆ ಎಂದು ಬಣ್ಣಿಸಿದ್ದಾರೆ.

ಜೂನ್ 2, 2014ರಂದು ಆಂಧ್ರ ಪ್ರದೇಶವನ್ನು ಇಬ್ಬಾಗ ಮಾಡಿ ತೆಲಂಗಾಣ ರಾಜ್ಯವನ್ನು ರಚಿಸಲಾಯಿತು. “ಭಾರತವು ಪ್ರಜಾಸತ್ತಾತ್ಮಕ ಗಣರಾಜ್ಯವಾಗಲು ಅಂಬೇಡ್ಕರ್ ಕಾರಣ” ಎಂದು ಕೆ.ಟಿ.ಆರ್‌. ಬಣ್ಣಿಸಿದ್ದಾರೆ.

“ಹೊಸ ಸಂಸತ್ತಿನ ಕಟ್ಟಡಕ್ಕೆ ಅಂಬೇಡ್ಕರ್‌ರವರ ಹೆಸರನ್ನು ಇಡುವುದಕ್ಕಿಂತ ಉತ್ತಮವಾದ ಶ್ರದ್ಧಾಂಜಲಿ ಇನ್ನೊಂದಿಲ್ಲ” ಎಂದು ಅವರು ಹೇಳಿರುವುದಾಗಿ ‘ಹಿಂದೂಸ್ತಾನ್ ಟೈಮ್ಸ್’ ವರದಿ ಮಾಡಿದೆ.

ಕಾಂಗ್ರೆಸ್ ಮತ್ತು ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ಈ ನಿರ್ಣಯವನ್ನು ಬೆಂಬಲಿಸಿವೆ. ಧ್ವನಿ ಮತದ ಮೂಲಕ ಸರ್ವಾನುಮತದಿಂದ ನಿರ್ಣಯ ಅಂಗೀಕಾರವಾಗಿದೆ.

ವಿದ್ಯುತ್ ತಿದ್ದುಪಡಿ ಮಸೂದೆಯನ್ನು ವಿರೋಧಿಸುವ ನಿರ್ಣಯವನ್ನು ಇಂಧನ ಸಚಿವ ಜಿ ಜಗದೀಶ್ ರೆಡ್ಡಿ ಮಂಗಳವಾರ ಮಂಡಿಸಿದರು. ಉದ್ದೇಶಿತ ಶಾಸನವು ರೈತರು, ಸಮಾಜದ ಬಡ ವರ್ಗದ ಜನರು ಮತ್ತು ವಿದ್ಯುತ್ ಕ್ಷೇತ್ರದ ನೌಕರರ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ ಎಂದು ಎಚ್ಚರಿಸಿದರು.

ರಾಜ್ಯ ವಿಧಾನಸಭೆಯಲ್ಲೂ ಈ ಕುರಿತು ಚರ್ಚೆಯಾಗಿದ್ದು, ಮಸೂದೆಯನ್ನು ವಾಪಸ್‌ ಪಡೆಯಬೇಕು ಎಂದು ಕೋರಲಾಯಿತು.

ಮಸೂದೆಯನ್ನು ಆಗಸ್ಟ್ 8 ರಂದು ಲೋಕಸಭೆಯಲ್ಲಿ ಮಂಡಿಸಲಾಯಿತು. ವಿದ್ಯುತ್ ಕಾಯಿದೆ- 2003 ಅನ್ನು ತಿದ್ದುಪಡಿ ಮಾಡಲು ಉದ್ದೇಶಿಸಿರುವ ಈ ಮಸೂದೆಗೆ ವಿರೋಧ ಪಕ್ಷಗಳು ವ್ಯಾಪಕ ಟೀಕೆ ವ್ಯಕ್ತಪಡಿಸಿವೆ. ಬಳಿಕ ಮಸೂದೆಯನ್ನು ಪರಿಶೀಲನೆಗಾಗಿ ಇಂಧನ ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಲಾಗಿದೆ.

ಇದನ್ನೂ ಓದಿರಿ: ಅಂಬೇಡ್ಕರ್‌ವಾದಿ ದೃಷ್ಟಿಯಲ್ಲಿ ಸಾವರ್ಕರ್‌ ನೋಡುತ್ತಿದ್ದೇನೆ: ಎನ್‌.ಮಹೇಶ್‌

ವಿದ್ಯುತ್ ತಿದ್ದುಪಡಿ ಮಸೂದೆ 2022- ಒಂದು ಪ್ರದೇಶದಲ್ಲಿ ಬಹು ಸೇವಾ ಪೂರೈಕೆದಾರರಿಗೆ ಅವಕಾಶ ನೀಡುತ್ತದೆ. ಗ್ರಾಹಕರಿಗೆ ಆಯ್ಕೆಗಳನ್ನು ಒದಗಿಸುವ ಮೂಲಕ ವಿದ್ಯುತ್ ವಿತರಣಾ ವಲಯದಲ್ಲಿ ಸ್ಪರ್ಧೆಯನ್ನು ಸೃಷ್ಟಿಸಲು ಪ್ರಯತ್ನಿಸುತ್ತದೆ.

ಮಸೂದೆಯು ಖಾಸಗೀಕರಣವನ್ನು ಉತ್ತೇಜಿಸಬಹುದು. ಸಹಕಾರಿ ಒಕ್ಕೂಟ ವ್ಯವಸ್ಥೆಗೆ ತೊಂದರೆ ಉಂಟುಮಾಡಬಹುದು ಎಂದು ವಿರೋಧ ಪಕ್ಷಗಳು ಆತಂಕ ವ್ಯಕ್ತಪಡಿಸಿವೆ. ವಿದ್ಯುತ್‌ ಪೂರೈಕೆಯಲ್ಲಿ ರೈತರಿಗೆ ನೀಡುತ್ತಿದ್ದ ಸಬ್ಸಿಡಿಯನ್ನು ಕಿತ್ತುಕೊಳ್ಳುವ ಆತಂಕವೂ ಈ ಮಸೂದೆಯಿಂದ ಎದುರಾಗಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...