ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುವ ಸ್ಥಳದಲ್ಲಿ ಮಂಗಳೂರು ಮಹಾನಗರ ಪಾಲಿಕೆ ತರಕಾರಿ ಮಾರುಕಟ್ಟೆಗೆ ಅಂಗಡಿ ನಿರ್ಮಿಸುತ್ತಿದೆ ಎಂದು ಆರೋಪಿಸಿ ನಗರದ ಲೇಡಿಗೋಷನ್ ಆಸ್ಪತ್ರೆಯ ಬಳಿ ಬೀದಿಬದಿ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಮಂಗಳೂರು ನಗರದ ಲೇಡಿಗೋಷನ್ ಬಳಿ ಘಟನೆ ನಡೆದಿದ್ದು, ರಸ್ತೆಯ ಮೇಲೆಯೆ ತಾತ್ಕಾಲಿಕ ಮಾರುಕಟ್ಟೆ ಮಾಡಲು ಮಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ ಎಂದು ತಿಳಿದು ಬಂದಿದೆ. ಆಸ್ಪತ್ರೆ ಪಕ್ಕದಲ್ಲಿರುವ ರಸ್ತೆಯನ್ನು ಆಕ್ರಮಿಸಿ ಮಳಿಗೆಯ ಕಾಮಗಾರಿ ನಡೆಸಲು ಕಂಬಗಳನ್ನು ಹಾಗೂ ಶೀಟುಗಳನ್ನು ತಂದು ಸುರಿಯುತ್ತಿರುವುದನ್ನು ಗಮನಿಸಿದ ಬೀದಿಬದಿ ವ್ಯಾಪಾರಸ್ಥರು ಪ್ರತಿಭಟನೆಗೆ ನಡೆಸಿದ್ದಾರೆ.
(ಮಾರುಕಟ್ಟೆ ನಿರ್ಮಿಸಲು ಶೀಟುಗಳನ್ನು ತಂದ ಲಾರಿಯನ್ನು ತಡೆದ ಬೀದಿ ಬದಿ ವ್ಯಾಪಾರಿಗಳು)
ರಸ್ತೆ ಬದಿ 3 ಅಡಿ ಜಾಗದಲ್ಲಿ ಬೀದಿ ಬದಿ ವ್ಯಾಪಾರಸ್ಥರು ವ್ಯಾಪಾರ ಮಾಡುತಿದ್ದಾಗ ಬೀದಿಬದಿ ವ್ಯಾಪಾರಿಗಳ ಮೇಲೆ ಧಾಳಿ ಮಾಡುತ್ತಿದ್ದ ಮಹಾನಗರ ಪಾಲಿಕೆ ಈಗ ತಾನೆ ಮುಂದಾಗಿ ಈ ಹಿಂದೆ ಕೇಂದ್ರ ಮಾರುಕಟ್ಟೆಯಲ್ಲಿದ್ದ ವ್ಯಾಪಾರಿಗಳಿಗೆ ಅದೇ ರಸ್ತೆಯ ಜಾಗದಲ್ಲಿ 10 ಅಡಿ ರಸ್ತೆ ಕಬಳಿಸಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಮಾಡುತ್ತಿದ್ದಾರೆ, ಇದ್ಯಾವ ನ್ಯಾಯ ಎಂದು ಬೀದಿ ಬದಿ ವ್ಯಾಪಾರಿಗಳು ಪ್ರಶ್ನಿಸುತ್ತಿದ್ದಾರೆ.
ಘಟನೆಯ ಬಗ್ಗೆ ಮಾತನಾಡಿದ ಬೀದಿ ಬದಿ ವ್ಯಾಪಾರಿಗಳ ಸಂಘ(ಸಿಐಟಿಯು)ದ ಬಿ.ಕೆ. ಇಂತಿಯಾಝ್ “ಸರ್ಕಾರವೇ ಗುರುತಿನ ಚೀಟಿ ನೀಡಿದ್ದ ಕಳೆದ ಮೂವತ್ತು ನಲವತ್ತು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬರುತ್ತಿದ್ದಂತಹ ಜಾಗದಲ್ಲೇ ತಾತ್ಕಾಲಿಕ ಮಾರುಕಟ್ಟೆ ನಿರ್ಮಿಸುತ್ತಿದ್ದಾರೆ. ಅಲ್ಲದೆ ಕಾನೂನು ಬಾಹಿರವಾಗಿ ಹತ್ತು ಅಡಿ ಜಾಗವನ್ನು ಅತಿಕ್ರಮಿಸಿ ರಸ್ತೆಯ ಮೇಲೆ ಮಾರುಕಟ್ಟೆ ಕಟ್ಟುತ್ತಿದ್ದಾರೆ. ಇದು ಕಳೆದ ತಿಂಗಳಿನಿಂದ ವ್ಯಾಪಾರ ಮಾಡಲಾಗದೆ ಕಷ್ಟಪಡುತ್ತಿರುವ ಬಡ ಬೀದಿಬದಿ ವ್ಯಾಪಾರಿಗಳ ಬದುಕಿನ ಮೇಲಿನ ದಾಳಿಯಾಗಿದೆ. ಇಂತಹ ಅನ್ಯಾಯವನ್ನು ನಾವು ಒಪ್ಪುವುದಿಲ್ಲ, ಇದರ ವಿರುದ್ದ ಹೋರಾಟವನ್ನು ಕೈಗೆತ್ತಿಕೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಮಂಗಳೂರು ಮಹಾನಗರ ಪಾಲಿಕೆಯ ಉಪ ಆಯುಕ್ತ ಸಂತೋಷ್ ಕುಮಾರ್ ” ಕೇಂದ್ರ ಮಾರುಕಟ್ಟೆಯ 106 ವ್ಯಾಪಾರಿಗಳು ಹಾಗೂ ಅಲ್ಲೇ ಇರುವ ತರಕಾರಿ ಹಾಗೂ ಹಣ್ಣು ಮಾರಾಟ ಮಾಡುವ ಬೀದಿಬದಿ ವ್ಯಾಪಾರಿಗಳ ಸಹಿತ ಒಟ್ಟು 150 ರಷ್ಟು ಜನರಿಗೆ ಶೆಡ್ ಕಟ್ಟಲಾಗುತ್ತಿದೆ. ಈ ಶೆಡ್ಡುಗಳು ಕೇವಲ ಎರಡು ಮೂರು ತಿಂಗಳಿಗೆ ಮಾತ್ರವಾಗಿದ್ದು, ತಾತ್ಕಾಲಿಕ ಮಾರುಕಟ್ಟೆಯಾಗಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆ : ಮಂಗಳೂರು ಪಾಲಿಕೆಗೆ ಬೀದಿಬದಿ ವ್ಯಾಪಾರಿಗಳ ಪ್ರಶ್ನೆ
ನಮ್ಮ ಯೂಟ್ಯೂಬ್ ಚಾನೆಲ್ಗೆ Subscribe ಆಗಿ