ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ತವರು ಗ್ರಾಮ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ಕೋಟತಟ್ಟುವಿನಲ್ಲಿ ಆದಿವಾಸಿ ಕೊರಗ ಸಮುದಾಯದ ಮನೆಗೆ ನುಗ್ಗಿ ಅಮಾನವೀಯ ಹಲ್ಲೆ, ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ತೀವ್ರ ಖಂಡನೆ ವ್ಯಕ್ತವಾಗಿದೆ. ಕೃತ್ಯ ಖಂಡಿಸಿ ಗುರುವಾರ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ದಲಿತ ಹಕ್ಕುಗಳ ಸಮಿತಿ, ಡಿವೈಎಫ್ಐ ವತಿಯಿಂದ ಮಂಗಳೂರಿನಲ್ಲಿ ಪ್ರತಿಭಟನೆ ನಡೆಯಿತು.
ಕ್ಲಾಕ್ ಟವರ್ ಬಳಿ ಜರುಗಿದ ಈ ಪ್ರತಿಭಟನಾ ಸಭೆಯಲ್ಲಿ ಮಾತಾಡಿದ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ರಾಜ್ಯ ಸಹ ಸಂಚಾಲಕ ಡಾ.ಕೃಷ್ಣಪ್ಪ ಕೊಂಚಾಡಿ, “ಕೊರಗ ಜನಾಂಗದವರ ಮನೆಗೆ ನುಗ್ಗಿ ದಾಂಧಲೆ ಮಾಡಿದ ಪೊಲೀಸರನ್ನು ಬಂದಿಸಿ ಜೈಲಿಗಟ್ಟುವುದು ಸಹಜ ನ್ಯಾಯವಾಗಿತ್ತು. ಆದರೆ ದೌರ್ಜನ್ಯಕ್ಕೆ ಒಳಗಾದವರ ಮೇಲೆಯೆ ಪ್ರಕರಣ ದಾಖಲಿಸಲಾಗಿದೆ. ಇದ್ಯಾವ ನ್ಯಾಯ” ಎಂದು ಪ್ರಶ್ನಸಿದ್ದಾರೆ.
ಕೊರಗ ಜನಾಂಗ ಇಲ್ಲಿಯ ಮೂಲ ನಿವಾಸಿಗಳು. ಈ ಸಮುದಾಯದ ಜನಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗುತ್ತಿದೆ. ಕೊರಗರನ್ನು ಮುಖ್ಯವಾಹಿನಿಗೆ ತರಬೇಕಾದ ಪೊಲೀಸರೆ ದಬ್ಬಾಳಿಕೆ ಮಾಡಿರುವುದು ಅಕ್ಷಮ್ಯ ಅಪರಾಧ. ಮೂಲನಿವಾಸಿಗಳ ಮೇಲೆ ಲಾಠಿ ಬೀಸಿದ ತಪ್ಪಿತಸ್ಥ ಪೊಲೀಸರನ್ನು ಅಮಾನತು ಮಾಡಿದರೆ ಅಥವಾ ವರ್ಗಾಯಿಸಿದರೆ ಸಾಲದು. ಆ ಪೊಲೀಸರನ್ನು ಬಂಧಿಸಿ ಜೈಲಿಗೆ ಹಾಕಬೇಕು ಕಠಿಣ ಶಿಕ್ಷಗೊಳಪಡಿಸಬೇಕು ಎಂದು ಕೃಷ್ಣಪ್ಪ ಕೊಂಚಾಡಿ ಒತ್ತಾಯಿಸಿದರು.
ಡಿಜೆಯಿಂದ ಸಾರ್ವಜನಿಕರ ನಿದ್ದೆಗೆ ಭಂಗ ಬರುವುದಾದರೆ ಜಿಲ್ಲೆಯಲ್ಲಿ ಇಡೀ ವರ್ಷ ರಾತ್ರಿ ವೇಳೆಯಲ್ಲಿ ನಡೆಯುವ ಯಕ್ಷಗಾನ, ಭಜನೆ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮದಿಂದ ಜನರ ನಿದ್ದೆ ಹಾಳಾಗುದಿಲ್ಲವೆ? ಆ ಬಗ್ಗೆ ಪೊಲೀಸರು ಎಂಥ ಕ್ರಮ ಕೈಗೊಂಡಿದ್ದಾರೆ ಎಂದು ಕೃಷ್ಣಪ್ಪ ಪ್ರಶ್ನಿಸಿದ್ದಾರೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ದೌರ್ಜನ್ಯಕ್ಕೆ ಒಳಗಾದ ವರನ ಮದುವೆಯಲ್ಲಿ ಪಾಲ್ಗೊಂಡು ಮೊಸಳೆ ಕಣ್ಣೀರು ಸುರಿಸಿದ್ದಾರೆ. ಸಚಿವರಿಗೆ ನಿಜವಾಗಿಯೂ ಕೊರಗ ಜನಾಂಗದ ಮೇಲೆ ಕಾಳಜಿ, ಪ್ರೀತಿಯಿದ್ದರೆ ವರನ ಸಮೇತ 7 ಜನ ಕೊರಗರ ಮೇಲೆ ಪೋಲೀಸರು ಹಾಕಿರುವ ಸುಳ್ಳು ಪ್ರಕರಣ ತಕ್ಷಣ ವಾಪಸ್ ಪಡೆಯಲು ಕ್ರಮ ಕೈಗೊಳ್ಳಬೇಕೆಂದು ಕೃಷ್ಣಪ್ಪ ಆಗ್ರಹಿಸಿದರು.
ಇದನ್ನೂ ಓದಿ: ಉಡುಪಿ: ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮಕ್ಕೆ ನುಗ್ಗಿ ದೌರ್ಜನ್ಯ ಎಸಗಿದ ಪೊಲೀಸರು