ಕಳೆದ ಮೂರು ತಿಂಗಳಿನಿಂದಲೂ ಮಣಿಪುರ ಹೊತ್ತು ಉರಿಯುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡುವವರಿಗೆಲ್ಲ ಭದ್ರತೆ ನೀಡಲು ಮುಂದಾಗುವ ನಮ್ಮ ದೇಶದ ಸರ್ಕಾರ ಮಣಿಪುರದಲ್ಲಿ ಇಲ್ಲಿಯವರೆಗೂ ಸರಿಯಾದ ಭದ್ರತೆ ನೀಡಲು ಸಾಧ್ಯವಾಗಿಲ್ಲ. ಭದ್ರತೆ ನೀಡುವುದಿರಲಿ, ಪೊಲೀಸರ ಹಾಗೂ ಪ್ಯಾರಾಮಿಲಿಟರಿ ಫೋರ್ಸ್ನ ಬಂದೂಕುಗಳನ್ನು ಮಣಿಪುರದ ತೀವ್ರಗಾಮಿಗಳು ಹೊತ್ತುಕೊಂಡು ಹೋಗಲು ಅನುವು ಮಾಡಿಕೊಡಲಾಗಿದೆ. ಮೈತೆ ಮತ್ತು ಕುಕಿ ಸಮುದಾಯಗಳೆರಡರ ಕಡೆಯೂ ಸಾವು ನೋವುಗಳಾಗಿವೆ. ಕುಕಿ ಸಮುದಾಯದ ಯುವತಿಯರನ್ನು ಅಮಾನವೀಯವಾಗಿ ವಿಕೃತವಾಗಿ ಬೆತ್ತಲೆ ಮೆರವಣಿಗೆ ಮಾಡಿದ್ದನ್ನು ಕೋಪ ಮತ್ತು ಕಣ್ಣಿರಿಲ್ಲದೆ ನೋಡಲು ಸಾಧ್ಯವೇ ಇಲ್ಲ. ಮಣಿಪುರದ ಹಿಂಸಾಚಾರವನ್ನು ನಿಯಂತ್ರಿಸುವಲ್ಲಿ ಮೋದಿಯವರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದ್ದು ಎದ್ದು ಕಾಣುತ್ತಿದೆ. ಸ್ವತಃ ಮೋದಿಯವರೇ ಮಣಿಪುರದ ಬಗ್ಗೆ ತುಟಿ ಬಿಚ್ಚಲು ಎರಡು ತಿಂಗಳು ತೆಗೆದುಕೊಂಡಿದ್ದಾರೆ. ಭಾರತದ ಸಂವಿಧಾನಾತ್ಮಕ ಸದನವಾಗಿರುವ ಸಂಸತ್ತಿನಲ್ಲಿ ಮಣಿಪುರದ ಬಗ್ಗೆ ಪ್ರಧಾನಿಯವರ ತುಟಿ ಬಿಚ್ಚಿಸಲು ಅವಿಶ್ವಾಸ ನಿರ್ಣಯ ಕೈಗೊಳ್ಳುವ ದುಸ್ಥಿತಿಗೆ ದೇಶದ ಪ್ರಜಾಪ್ರಭುತ್ವ ತಲುಪಿದೆ. ಸಂಸತ್ತಿನಲ್ಲಿ ಮಣಿಪುರದ ಮಹಿಳೆಯರ ಆಕ್ರಂದನವನ್ನು ಕೇಳಬೇಕಿದ್ದ ಆಡಳಿತ ಪಕ್ಷದ ಮಹಿಳೆಯರು ʼಫ್ಲೈಯಿಂಗ್ ಕಿಸ್ʼ ಚರ್ಚೆ ಮಾಡುತ್ತಿದ್ದಾರೆ.
ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗಾಗಿ ಕೊನೆಗೂ ಸಂಸತ್ತಿಗೆ ಬಂದ ಪ್ರಧಾನಿ ಮೋದಿಯವರು ಬರೋಬ್ಬರಿ 133 ನಿಮಿಶಗಳ ಕಾಲ ಭಾಷಣ ಮಾಡಿದ್ದಾರೆ. ಅಂದರೆ 2 ಗಂಟೆಗಳಿಗಿಂತಲೂ ಹೆಚ್ಚು ಸಮಯ ಮಾತಾಡಿದ್ದಾರೆ. ಇದರಲ್ಲಿ ಮಣಿಪುರದ ಬಗ್ಗೆ ಕೇವಲ 7 ನಿಮಿಷಗಳ ಕಾಲ ಮಾತಾಡಿದ್ದಾರೆ! ಅನ್ಯಾಯಕ್ಕೊಳಗಾಗಿರುವ ಮಣಿಪುರಕ್ಕೆ ಮತ್ತಷ್ಟು ಅನ್ಯಾಯ ಮಾಡಿದ್ದಾರೆ. 7 ನಿಮಿಷ ಮಾತನಾಡುವ ಮೂಲಕ ಮಣಿಪುರಕ್ಕೂ ಮೋದಿ ಸರ್ಕಾರಕ್ಕೂ ಸಂಬಂಧಿಲ್ಲವೆಂದೇ ಹೇಳುತ್ತಿದ್ದಾರೆ.
ಇದು ಒಂದು ಕಡೆಯಾದರೆ ಗೃಹಮಂತ್ರಿ ಅಮಿತ್ ಶಾ ಅವರು ಸಂಸತ್ತಿನಲ್ಲಿ ʼಮಣಿಪುರದ ಪ್ರಕ್ಷುಬ್ದತೆಗೆ ಮ್ಯಾನ್ಮಾರ್ನಿಂದ ವಲಸೆ ಬಂದಿರುವ ಕುಕಿಗಳು ಪ್ರಮುಖ ಪಾತ್ರ ವಹಸಿದ್ದಾರೆʼ ಎಂಬಂತಹ ಮಾತುಗಳನ್ನಾಡಿ ಮಣಿಪುರದಲ್ಲಿ ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಮಣಿಪುರದ ಗಲಭೆಯನ್ನು ಶಮನ ಮಾಡಲಂತೂ ಇವರಿಗೆ ಸಾಧ್ಯವಾಗಲಿಲ್ಲ. ದಿನವೂ ಕೊಲೆ, ಸುಲಿಗೆ, ಅತ್ಯಾಚಾರಗಳು ವರದಿಯಾಗುತ್ತಿವೆ. ಮೈತೆ ಮತ್ತು ಕುಕಿಗಳ ನಡುವೆ ವೈಷಮ್ಯ ಮುಗಿಲುಮುಟ್ಟಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಕೈಕಟ್ಟಿ ಕುಳಿತಿದೆ. ಹೀಗಿರುವಾಗ ಅಮಿತ್ ಶಾ ಇಂತಹ ಹೇಳಿಕೆ ಕೊಟ್ಟಿರುವುದು ಉರಿಯುತ್ತಿರುವ ಬೆಂಕಿಗೆ ತುಪ್ಪ ಸುರಿಯುವುರಲ್ಲಿ ಎರಡು ಮಾತಿಲ್ಲ. ಮಣಿಪುರದ ಮೈತೆಗಳ ಪರವಾಗಿ ಅಲ್ಲಿನ ಬಿಜೆಪಿ ಸರ್ಕಾರ ಬಹಿರಂಗವಾಗಿಯೇ ಕೆಲಸ ಮಾಡುತ್ತಿದೆ ಎಂಬ ವಿಚಾರಕ್ಕೆ ಅಮಿತ್ ಶಾ ಮಾತುಗಳು ಸಾಕ್ಷಿ ನೀಡುತ್ತಿವೆ. ಬೇಲಿಯೇ ಎದ್ದು ಹೊಲವನ್ನು ಮೇಯುತ್ತಿರುವಾಗ ಮಣಿಪುರವನ್ನು ಕಾಪಾಡುವವರಾರು? ಮಣಿಪುರ ಭಾರತದ ಅವಿಭಾಜ್ಯ ಅಂಗವಲ್ಲವೇ? ಕುಕಿಗಳು ಭಾರತೀಯರಲ್ಲವೇ?
– ಸಾಕ್ಯ ಸಮಗಾರ
ಇದನ್ನೂ ಓದಿ; ಫ್ಲೈಯಿಂಗ್ ಕಿಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸುವವರು ಬ್ರಿಜ್ಭೂಷಣ್ ಬಗ್ಗೆ ಯಾಕೆ ಮಾತನಾಡುವುದಿಲ್ಲ?: ಮೊಯಿತ್ರಾ ಪ್ರಶ್ನೆ