Homeಮುಖಪುಟಸಾಮಾಜಿಕ ನ್ಯಾಯ: ತಮಿಳುನಾಡು ಸಾಗಬೇಕಾದ ದೂರವೆಷ್ಟು?

ಸಾಮಾಜಿಕ ನ್ಯಾಯ: ತಮಿಳುನಾಡು ಸಾಗಬೇಕಾದ ದೂರವೆಷ್ಟು?

ಸಮಾನತೆಯ ಹರಿಕಾರ ಪೆರಿಯಾರ್‌ ಅವರ ಜನ್ಮದಿನವನ್ನು (ಸೆ.17) ‘ಸಾಮಾಜಿಕ ನ್ಯಾಯದಿನ’ ಎಂದು ತಮಿಳು ನಾಡು ಸರ್ಕಾರ ಆಚರಿಸಿದೆ. ಆದರೆ ತಮಿಳುನಾಡು ನಿಜಕ್ಕೂ ಸಾಮಾಜಿಕ ನ್ಯಾಯವನ್ನು ಸಾಧಿಸಿದೆಯೇ?

- Advertisement -
- Advertisement -

ಸಮಾನತೆಯ ಹರಿಕಾರ, ದ್ರಾವಿಡ ಚಳವಳಿಯ ನೇತಾರ ಪೆರಿಯಾರ್‌ ರಾಮಸ್ವಾಮಿ ನಾಯ್ಕರ್ ಅವರ ಜನ್ಮದಿನವನ್ನು (ಸೆ.17) ‘ಸಾಮಾಜಿಕ ನ್ಯಾಯದಿನ’ ಎಂದು ತಮಿಳು ನಾಡು ಸರ್ಕಾರ ಘೋಷಿಸಿದೆ. ಅದರಂತೆ ಅವರ ಜನ್ಮದಿನವನ್ನು ಈ ಬಾರಿ ಆಚರಿಸಲಾಗಿದೆ.

ಎಂ.ಕೆ.ಸ್ಟಾಲಿನ್‌ ನಾಯಕತ್ವದಲ್ಲಿ ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರ ಹಲವು ಸುಧಾರಣೆಗಳನ್ನು ತರುತ್ತಿರುವುದು ಆಶಾದಾಯ ಬೆಳೆವಣಿಗೆ. ಆದರೆ ತಮಿಳುನಾಡಿನಲ್ಲಿ ಬೇರು ಬಿಟ್ಟಿರುವ ಮೌಢ್ಯ, ಜಾತಿ ವ್ಯವಸ್ಥೆ, ಲಿಂಗ ತಾರತಮ್ಯ ಮೊದಲಾದ ಸಾಮಾಜಿಕ ಸಂಗತಿಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ.

ಸಾಮಾಜಿಕ ನ್ಯಾಯದಿನದ ಹಿನ್ನೆಲೆಯಲ್ಲಿ ‘ದಿ ಕ್ವಿಂಟ್’ ಸುದ್ದಿ ಜಾಲತಾಣದಲ್ಲಿ ಪ್ರಕಟವಾಗಿರುವ ಸ್ಮಿತಾ ಟಿ.ಕೆ. ಅವರ ಲೇಖನವು, ತಮಿಳುನಾಡು ಎದುರಿಸುತ್ತಿರುವ ಸಾಮಾಜಿಕ ಅಸಮಾನತೆಗಳತ್ತ ಬೊಟ್ಟು ಮಾಡಿದೆ.

ಇದನ್ನೂ ಓದಿ: ಹೋರಾಟಗಾರರ ಮೇಲೆ ದಾಖಲಾಗಿದ್ದ 5,570 ಪ್ರಕರಣ ಹಿಂಪಡೆದ ತಮಿಳುನಾಡು ಸರ್ಕಾರ

ಜಾತಿ ಪ್ರೇರಿತ ಕೊಲೆಗಳ ಕುರಿತು ಕೆಲಸ ಮಾಡುತ್ತಿರುವ ಕಾತಿರ್ ಆಫ್ ಎವಿಡೆನ್ಸ್ ಸಂಘಟನೆಯ ಪ್ರಕಾರ, 2013ರಿಂದ 2017ರ ಅವಧಿಯಲ್ಲಿ ಒಟ್ಟು 187 ಮರ್ಯಾದೆ ಹೆಸರಲ್ಲಿ ಹತ್ಯೆಗಳು ನಡೆದಿವೆ. ಅದರಲ್ಲಿ ಸಾವಿಗೀಡಾದವರು ಶೇ. 80 ಮಂದಿ ಮಹಿಳೆಯರಾಗಿದ್ದಾರೆ. ಇದು ಅಧಿಕೃತವಾಗಿ ದಾಖಲಾಗಿರುವ ವರದಿಯಷ್ಟೇ. ಬಹುತೇಕ ಕೊಲೆಗಳು ಆತ್ಮಹತ್ಯೆ ಎಂದೋ, ಸಹಜ ಸಾವೆಂದೋ ವರದಿಯಾಗುತ್ತಿವೆ ಎನ್ನಲಾಗಿದೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ಎನ್ಸಿಆರ್ಬಿ) ನೀಡಿದ 2020ರ ವರದಿಯ ಪ್ರಕಾರ ತಮಿಳುನಾಡಿನಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ. 2019ರಲ್ಲಿ 15.6ರಷ್ಟಿದ್ದ ಈ ಪ್ರಮಾಣ 2020ರಲ್ಲಿ 17.4ರಷ್ಟಾಗಿದೆ. ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ 2019ರಲ್ಲಿ 4,139 ಇದ್ದದ್ದು, 2020ರಲ್ಲಿ 4,338ರಷ್ಟಾಗಿದೆ.

“ಶೇ. 50ರಷ್ಟು ಮಹಿಳಾ ಪ್ರಾತಿನಿಧ್ಯ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಇರಬೇಕೆಂದು ಪೆರಿಯಾರ್ ಪ್ರತಿಪಾದಿಸಿದ್ದರು. ಮಹಿಳೆಯರನ್ನು ಅಡುಗೆ ಮನೆಯಿಂದ ಹೊರತಂದು ಸ್ವಾತಂತ್ರ್ಯ ನೀಡಬೇಕು ಎನ್ನುತ್ತಿದ್ದರು. ಆದರೆ ಅದು ಸಾಧ್ಯವಾಗಿಲ್ಲ. ಡಿಎಂಕೆ ನೇತೃತ್ವದ ಈಗಿನ ಸರ್ಕಾರದಲ್ಲಿನ 33 ಸಚಿವರಲ್ಲಿ ಇಬ್ಬರು ಮಾತ್ರ ಮಹಿಳೆಯರಿದ್ದಾರೆ” ಎಂದು ಸ್ಮಿತಾ ಉಲ್ಲೇಖಿಸಿದ್ದಾರೆ.

ಜಾತಿ ನಿರ್ಮೂಲನೆ ಮಾಡಬೇಕೆಂದು ಸರ್ಕಾರವೇನೋ ಹೆಜ್ಜೆ ಇರಿಸಿದೆ. ಆದರೆ ತಮಿಳುನಾಡಿನ ಜಾತಿ ವ್ಯವಸ್ಥೆ ಆತಂಕಕಾರಿಯಾದದ್ದು. ಎನ್‌‌ಸಿಆರ್‌ಬಿ ವರದಿಯ ಪ್ರಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗಗಳ ಮೇಲಿನ ದೌರ್ಜನ್ಯಗಳು ಹೆಚ್ಚಾಗಿವೆ. 2019ರಲ್ಲಿ 1,144 ಪ್ರಕರಣಗಳಿದ್ದವು, 2020ರಲ್ಲಿ 1,274 ಪ್ರಕರಣಗಳು ವರದಿಯಾಗಿವೆ.

ವಣ್ಣಿಯಾರ್ಸ್ ಮೇಲ್ವರ್ಗಕ್ಕೆ ಸೇರಿದ 20 ಜನರ ಗುಂಪು ಕ್ಷುಲ್ಲಕ ಕಾರಣಕ್ಕಾಗಿ ಇಬ್ಬರು ದಲಿತ ಯುವಕರನ್ನು ಕೊಂದಿರುವ ಘಟನೆ ಕಳೆದ ಅಂಬೇಡ್ಕರ್ ಜಯಂತಿಯಂದು ನಡೆದುಹೋಯಿತು. ಮ್ಯಾನ್ಯುಯಲ್ ಸ್ಕ್ಯಾವೆಂಜಿಂಗ್ ನಿರ್ಮೂಲನೆಗೆ ಸರಿಯಾದ ಕ್ರಮ ಜರುಗಿಸದ ಕಾರಣ ಕಳೆದ ಒಂದು ದಶಕದಲ್ಲಿ ಅತಿ ಹೆಚ್ಚು ಸಫಾಯಿಗಳು ತಮಿಳುನಾಡಿನಲ್ಲೇ ಸಾವನ್ನಪ್ಪಿದ್ದಾರೆ ಎನ್ನುತ್ತದೆ ವರದಿ.

1993ರಿಂದ 2019ರವರೆಗೆ ದೇಶದ 18 ರಾಜ್ಯಗಳಲ್ಲಿ ಎಷ್ಟು ಸಫಾಯಿಗಳು ಸಾವನ್ನಪ್ಪಿದ್ದಾರೆಂದು ಸರ್ಕಾರ ಸಮೀಕ್ಷೆ ನಡೆಸಿದಾಗ 206 ಮಂದಿ ಸಫಾಯಿಗಳು ತಮಿಳುನಾಡಿನಲ್ಲಿ ಸಾವನ್ನಪ್ಪಿರುವುದು ತಿಳಿದುಬಂದಿದೆ. ಇತರೆ ರಾಜ್ಯಗಳಿಗೆ ಹೋಲಿಸಿದರೆ ತಮಿಳುನಾಡು ಮೊದಲನೇ ಸ್ಥಾನದಲ್ಲಿದೆ ಎನ್ನಲಾಗಿದೆ.

ಜನಪರ ಕೆಲಸಗಳನ್ನು ಮಾಡುತ್ತಿರುವ ತಮಿಳುನಾಡು ಸರ್ಕಾರ, ಇಂತಹ ಅನಿಷ್ಟ ಪದ್ಧತಿಗಳನ್ನು ನಿರ್ಮೂಲನೆ ಮಾಡಬೇಕು. ಪೆರಿಯಾರ್ ಥರದ ಮಹನೀಯರು ನೆಡೆದಾಡಿದ ನೆಲದಲ್ಲಿ ಮೌಢ್ಯಗಳು ತೊಗಲಬೇಕು. ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಸಮಾನ ಅವಕಾಶ ದೊರಕುವಂತಾಗಬೇಕು. ಡಿಎಂಕೆ, ಎಐಡಿಎಂಕೆ ಯಾವುದೇ ಪಕ್ಷ ಅಧಿಕಾರದಲ್ಲಿರಲಿ ಅಥವಾ ವಿರೋಧ ಪಕ್ಷ ಸ್ಥಾನದಲ್ಲಿರಲಿ ರಾಜ್ಯವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿ ಎಲ್ಲರಿಗೂ ಇರುತ್ತದೆ. ಹೀಗಾಗಿ ಇಲ್ಲಿನ ಬಹುತೇಕ ಅಂಕಿ-ಅಂಶಗಳು ಎಐಎಡಿಎಂ ಅವಧಿಗೆ ಸಂಬಂಧಿಸಿವೆ ಎಂದು ಸುಮ್ಮನಾಗಲು ಸಾಧ್ಯವಿಲ್ಲ.

ಈಗ ಅಧಿಕಾರ ಹಿಡಿದಿರುವ ಡಿಎಂಕೆ ಹೊಸ ಭರವಸೆಗಳನ್ನು ಹುಟ್ಟು ಹಾಕಿದೆ. ಜನಪ್ರಿಯ ಕಾರ್ಯಕ್ರಮಗಳ ಮೂಲಕ ಸದ್ಯಕ್ಕೆ ಜನಮಾನಸಕ್ಕೆ ಲಗ್ಗೆ ಇಡುತ್ತಿರುವ ಸ್ಟಾಲಿನ್, ತಮಿಳುನಾಡನ್ನು ಮಾದರಿ ರಾಜ್ಯವನ್ನಾಗಿ ಮಾಡಲು ಬೇಕಾದ ಎಲ್ಲ ಕ್ರಮಗಳನ್ನು ತಮ್ಮ ಕೈಲಾದ ಮಟ್ಟಿಗೆ ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಕ್ರಾಂತಿ ರಾತ್ರಿ ಬೆಳಗಾಗುವುದರೊಳಗೆ ಆಗುವುದು ಅಸಾಧ್ಯ. ಈ ಪೋಸ್ಟ್ ಟ್ರೂತ್ ಕಾಲದಲ್ಲಂತೂ ಬದಲಾವಣೆಗೆ ಹೆಚ್ಚಿನ ಶ್ರಮವಂತೂ ಅಗತ್ಯ ಎನ್ನುತ್ತಾರೆ ಪ್ರಜ್ಞಾವಂತರು.

(ಮಾಹಿತಿ ಕೃಪೆ: ಸ್ಮಿತಾ ಕೆ.ಎಸ್., ದಿ ಕ್ವಿಂಟ್‌‌)


ಇದನ್ನೂ ಓದಿ: ತಮಿಳುನಾಡು: ಸ್ಟಾಲಿನ್ ಸಂಪುಟದಲ್ಲಿ ಪುರುಷರದೇ ದರ್ಬಾರು – ಮಹಿಳೆಯರಿಗೆ ಕನಿಷ್ಠ ಪ್ರಾತಿನಿಧ್ಯ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಚುನಾವಣಾ ಆಯೋಗ ಪಕ್ಷಾತೀತವಾಗಿ ನಡೆದುಕೊಳ್ಳುತ್ತಿಲ್ಲ: ಪಿಣರಾಯಿ ವಿಜಯನ್

0
ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಮುಸ್ಲಿಮರ ವಿರುದ್ಧ ನೀಡಿದ್ದ ಹೇಳಿಕೆಗಳಿಗೆ ಸಂಬಂಧಿಸಿದಂತೆ ತಕ್ಷಣ ಕ್ರಮ ಕೈಗೊಳ್ಳುವ ಮೂಲಕ ಚುನಾವಣಾ ಆಯೋಗವು ಪಕ್ಷಾತೀತವಾಗಿ ವರ್ತಿಸದಿರುವುದು ದುರದೃಷ್ಟಕರ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮೋದಿಯ...