ಮಣಿಪುರದಲ್ಲಿ ನಡೆಯುತ್ತಿರುವ ಮೈತಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳ ನಂತರ ಸರ್ಕಾರ ತಗೆದುಕೊಂಡ ಕ್ರಮಗಳ ಕುರಿತು ಮತ್ತು ಸಧ್ಯದ ಸ್ಥಿತಿಗತಿಯ ವರದಿಯನ್ನು ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶನ ನೀಡಿದೆ ಎಂದು ಲೈವ್ ಲಾ ವರದಿ ಮಾಡಿದೆ.
ಎರಡು ಅರ್ಜಿಗಳ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶ ನೀಡಿದೆ.
ಕುಕಿಗಳಿಗೆ ಸೇನೆಯ ರಕ್ಷಣೆಯನ್ನು ಕೋರಿದ ಸರ್ಕಾರೇತರ ಸಂಸ್ಥೆಯಾದ ಮಣಿಪುರ ಟ್ರೈಬಲ್ ಫೋರಂ ಅರ್ಜಿ ಸಲ್ಲಿಸಿದೆ.
ಬಿಜೆಪಿ ಶಾಸಕ ದಿಂಗಂಗ್ಲುಂಗ್ ಗ್ಯಾಂಗ್ಮೇಯ್ ಅವರು ಎರಡನೇ ಮನವಿ ಸಲ್ಲಿಸಿದ್ದು, ಮಣಿಪುರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿದೆ. (”ಬಹುಸಂಖ್ಯಾತ ಮೈತಿ ಸಮುದಾಯವನ್ನು ಪರಿಶಿಷ್ಟ ಪಂಗಡದ ವರ್ಗಕ್ಕೆ ಸೇರಿಸುವ ಬೇಡಿಕೆಯ ಅರ್ಜಿಗಳನ್ನು ರಾಜ್ಯ ಸರ್ಕಾರ ಪರಿಗಣಿಸಬೇಕು” ಎನ್ನುವುದು ಹೈಕೋರ್ಟ್ ಆದೇಶ)
ಮೈತಿ ಸಮುದಾಯದ ಮೀಸಲಾತಿ ಬೇಡಿಕೆಯನ್ನು ವಿರೋಧಿಸಿ ಮೇ 3ರಂದು ರ್ಯಾಲಿ ಆಯೋಜಿಸಲಾಗಿತ್ತು. ಇದು ಹಿಂಸಾಚಾರಕ್ಕೆ ಕಾರಣವಾಗಿದೆ. ಈ ಘಟನೆಯಿಂದ ಈವರೆಗೂ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 50 ಸಾವಿರಕ್ಕೂ ಅಧಿಕ ಜನರು ಆಶ್ರಯ ಶಿಬಿರಗಳಲ್ಲಿದ್ದಾರೆ. ಅಂದಿನಿಂದ ರಾಜ್ಯವು ಹಿಂಸಾಚಾರವು ವ್ಯಾಪಕವಾಗಿ ಹಬ್ಬುತ್ತಿದೆ.
ಸೋಮವಾರದ ವಿಚಾರಣೆಯ ಸಂದರ್ಭದಲ್ಲಿ, ಮಣಿಪುರ ಬುಡಕಟ್ಟು ವೇದಿಕೆಯ ಪರವಾಗಿ ಹಾಜರಾದ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್, ”ರಾಜ್ಯದಲ್ಲಿ ಪರಿಸ್ಥಿತಿ ಹದಗೆಟ್ಟಿದೆ” ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿದರು.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮಾತನಾಡಿ, ”ಪರಿಸ್ಥಿತಿ ನಿಧಾನವಾಗಿ ಸುಧಾರಿಸುತ್ತಿದೆ ಮತ್ತು ರಾಜ್ಯದಲ್ಲಿ ಕರ್ಫ್ಯೂವನ್ನು ಈಗ 24 ಗಂಟೆಗಳಿಂದ ಐದು ಗಂಟೆಗೆ ಇಳಿಸಲಾಗಿದೆ” ಎಂದು ಹೇಳಿದ್ದಾರೆ.
ಈ ವೇಳೆ ವಕೀಲ ಕಾಲಿನ್ ಗೊನ್ಸಾಲ್ವೆಸ್ ಅವರು, ಕುಕಿ ಸಮುದಾಯದ ಜನರಿಗೆ ರಕ್ಷಣೆಯನ್ನು ಕೋರಿದರು. ಹಲವಾರು ಉಗ್ರಗಾಮಿ ಗುಂಪಿನ ನಾಯಕರು ಅವರನ್ನು ನಾಶಮಾಡುವುದಾಗಿ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ ಆದರೂ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಕುಕಿಗಳ ವಿರುದ್ಧದ ಹಿಂಸಾಚಾರವು “ರಾಜ್ಯ ಸರ್ಕಾರದಿಂದ ಪ್ರಾಯೋಜಿತವಾಗಿದೆ” ಎಂದು ವಕೀಲರು ಆರೋಪಿಸಿದ್ದಾರೆ.
ಶನಿವಾರ ನಡೆದ ನಾಲ್ವರ ಹತ್ಯೆಯ ಬಗ್ಗೆಯೂ ವಕೀಲ ಗೊನ್ಸಾಲ್ವೆಸ್ ಅವರು ನ್ಯಾಯಾಲಯಕ್ಕೆ ತಿಳಿಸಿದರು. “ಕುಕಿಗಳು ದಾಳಿ ಮಾಡುತ್ತಿಲ್ಲ, ಕುಕಿಗಳು ರಕ್ಷಿಸುತ್ತಿದ್ದಾರೆ. ಮೈತಿ ಸಮುದಾಯದವರು ಮಿತಿಮೀರಿ ನಡೆದುಕೊಳ್ಳುತ್ತಿದ್ದಾರೆ. ಅವರು ತಮ್ಮ ಕೆಲಸವನ್ನು ಮಾಡಲು ಬಿಡುತ್ತಿಲ್ಲ ಎಂದು ಸೇನೆಯು ಹೇಳಿದೆ” ಎಂದು ಅವರು ಹೇಳಿದರು.
”ಗೊನ್ಸಾಲ್ವೆಸ್ ಅವರು ಈ ಪ್ರಕರಣಕ್ಕೆ “ಕಮ್ಯೂನಲ್ ದೃಷ್ಟಿಕೋನ” ನೀಡಬಾರದು ಮತ್ತು ಮನುಷ್ಯತ್ವದಿಂದ ವ್ಯವಹರಿಸಲಾಗುತ್ತಿದೆ” ಎಂದು ಮೆಹ್ತಾ ಸೋಮವಾರ ಹೇಳಿದ್ದಾರೆ.
ಸಂತ್ರಸ್ತರಿಗೆ ಪುನರ್ವಸತಿಯನ್ನು ನೀಡಿರುವ ಬಗ್ಗೆ ಮತ್ತು ಕಾನೂನು, ಸುವ್ಯವಸ್ಥೆ ಪರಿಸ್ಥಿತಿಯನ್ನು ಸುಧಾರಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಮತ್ತು ಸಧ್ಯದ ಸ್ಥಿತಿಗತಿಯ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಸಾಲಿಸಿಟರ್ ಜನರಲ್ ಅವರನ್ನು ನ್ಯಾಯಾಲಯ ಕೇಳಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಜುಲೈ 10 ರಂದು ನಡೆಯಲಿದೆ.
ಇದನ್ನೂ ಓದಿ: ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿ: ಮಣಿಪುರ ವಿಚಾರಕ್ಕೆ ಮೋದಿ ವಿರುದ್ಧ ನಟ ಕಿಶೋರ್ ವಾಗ್ದಾಳಿ