ಸಂವೇದನಾಶೀಲ ವ್ಯಕ್ತಿತ್ವವುಳ್ಳ ಕನ್ನಡದ ಹೆಸರಾಂತ ನಟ ಕಿಶೋರ್ ಅವರು ಮತ್ತೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹರಿಹಾಯ್ದಿದ್ದು, ಮೋದಿಯನ್ನು ಪ್ರಚಾರದಾಹಿ, ಅಧಿಕಾರದಾಹಿ ಪ್ರಧಾನಿ ಎಂದು ಟೀಕಿಸಿದ್ದಾರೆ.
ನಟ ಕಿಶೋರ್ ಅವರು ಈಗಾಗಲೇ ಸಾಕಷ್ಟು ಬಾರಿ ಪ್ರಧಾನಿ ವಿರುದ್ಧ ಮಾತನಾಡಿಸ್ಸು, ಈ ಬಾರಿ ಮಣಿಪುರದಲ್ಲಿ ನಡೆದ ಹಿಂಸಾಚಾರವನ್ನಿಟ್ಟುಕೊಂಡು ನರೇಂದ್ರ ಮೋದಿ ಅವರಿಗೆ ತಿವಿದಿದ್ದಾರೆ.
ಮಣಿಪುರ ಹಿಂಸಾಚಾರದಿಂದ ನಲಗುತ್ತಿದೆ. ಅಲ್ಲಿ ಶಾಂತಿ ಸ್ಥಾಪಿಸಲು ಕಸರತ್ತುಗಳು ನಡೆಯುತ್ತಿವೆ. ಮಣಿಪುರ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಯುತ್ತಿವೆ. ನಿನ್ನೆಯಷ್ಟೇ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೂಡ ಮಣಿಪುರಕ್ಕೆ ಭೇಟಿ ನೀಡಿದ್ದಾರೆ. ಆದರೆ, ಪ್ರಧಾನಿ ಮೋದಿ ಮಾತ್ರ ಭೇಟಿ ಮಾಡಿಲ್ಲ ಎನ್ನುವುದು ಒಂದುಕಡೆಯಾದರೆ, ಆ ಬಗ್ಗೆ ಒಂದೇ ಒಂದು ಮಾತು ಕೂಡ ಮಾತನಾಡಿಲ್ಲ ಎನ್ನುವುದು ಕಿಶೋರ್ ಆರೋಪವಾಗಿದೆ.
ಈ ಬಗ್ಗೆ ಕಿಶೋರ್ ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು, ”ಮನ್ ಕೀ ಬಾತ್ ನಲ್ಲಿ ಕಳೆದುಹೋದ ಮಣಿಪುರದ ಬಾತ್. ದೇಶದಲ್ಲಿ ಎಲ್ಲೇ ಅಶಾಂತಿ ಮೂಡಿದಾಗಲೂ ಒಬ್ಬ ಪ್ರಧಾನಿ ಮಾಡಬಹುದಾದ ಮೂಲಭೂತ, ಅತೀ ಸರಳ, ಕಾಮನ್ ಸೆನ್ಸ್ ನ ಕೆಲಸ ಶಾಂತಿಯ ಕರೆ ಕೊಡುವುದು. ಅದನ್ನೂ ಕೂಡ ಮಾಡದ ಪ್ರಧಾನಿಯ ಮನಸ್ಥಿತಿಯೇನು?” ಎಂದು ಪ್ರಶ್ನೆ ಮಾಡಿದ್ದಾರೆ.
”ನೂರ ನಲವತ್ತು ಕೋಟಿ ಓಟಿನ ದೇಶದಲ್ಲಿ ಕೇವಲ 2 ಲೋಕಸಭೆ ಸೀಟಿನ ಮಣಿಪುರದ ಸತ್ತುಹೋದ ನೂರು ಓಟು, ಮನೆ ಕಳೆದುಕೊಂಡ 50 ಸಾವಿರ ಓಟುಗಳು, ಈ ಪ್ರಚಾರದಾಹಿ ಅಧಿಕಾರದಾಹಿ ಪ್ರಧಾನಿಗೆ ಯಾವ ಲೆಕ್ಕವೆಂಬುದೇ? 2002 ರಲ್ಲಿ ಗುಜರಾತ್ 2023 ರಲ್ಲಿ ಮಣಿಪುರ .. ಜೀವಗಳು ಮುಖ್ಯವಲ್ಲ ಓಟುಗಳಷ್ಟೇ ಮುಖ್ಯ… ಇತಿಹಾಸಕ್ಕೆ ಮರೆವಿಲ್ಲ ನೆನಪಿರಲಿ..” ಎಂದು ಎಚ್ಚರಿಸಿದ್ದಾರೆ.
View this post on Instagram