Homeಅಂಕಣಗಳುಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

ಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

- Advertisement -
- Advertisement -

ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಾಗಲಿ, ಸಂಸತ್ ಭವನದಲ್ಲಿ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಾಗಲೀ, ಅವಕ್ಕೆ ನೀಡುವ ಪ್ರತಿಕ್ರಿಯೆ ವಸನಿಷ್ಠ ಉತ್ತರಗಳಾಗಿರದೆ, ಅದು ಮುಂದೆ ಚುನಾವಣಾ ರ್‍ಯಾಲಿಗಳಲ್ಲಿ ಮಾಡುವ ಭಾಷಣದ ಪೂರ್ವತಯ್ಯಾರಿ ಆಗಿರಲಿದೆ ಎಂಬ ಆಪಾದನೆಯನ್ನು ಮಾನ್ಯ ಪ್ರಧಾನಮಂತ್ರಿಗಳು ಸಾಬೀತುಮಾಡಿಕೊಂಡೇ ಬಂದಿದ್ದಾರೆ. ಅತಿ ಹೆಚ್ಚು ಪ್ರಚಾರ ಮಾಡಲಾಗಿದ್ದ ಪ್ರಧಾನಿ ಅವರ ಯುಎಸ್‌ಎ ಪ್ರವಾಸದ ಕಾರ್ಯಕಲಾಪಗಳಲ್ಲಿ, ಆ ದೇಶದ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ಮೋದಿ ನಡೆಸಲಿದ್ದ ಪತ್ರಿಕಾಗೋಷ್ಠಿ ಪ್ರವಾಸಕ್ಕಿಂತಲೂ ಸ್ವಲ್ಪ ಹೆಚ್ಚು ಪ್ರಚಾರ ಪಡೆದುಕೊಂಡಿದ್ದೇನೋ ನಿಜ. ಕೇವಲ ಎರಡು ಪ್ರಶ್ನೆಗಳಿಗೆ ಸೀಮಿತವಾಗಿದ್ದ ಆ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಎರಡೂ ರಾಷ್ಟ್ರಗಳ ಮುಖಂಡರು ಉತ್ತರಿಸಿದ್ದು, ಎರಡೂ ದೇಶಗಳಲ್ಲಿ ಇನ್ನೇನು ಬರಲಿರುವ ಚುನಾವಣೆಗಳಿಗೆ ಭಾಷಣ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿರುವಂತಿತ್ತು. ಭಾರತದ ಪ್ರಧಾನಿಯವರಿಗೆ ಪ್ರೆಸ್ ಕಾನ್ಫರೆನ್ಸ್ ಎಂಬುದು ಬ್ರಹ್ಮಾಂಡದಲ್ಲಿ ನಡೆಯುವ ವಿರಳ ಘಟನೆಯಂತಾಗಿರುವ ಸಮಯದಲ್ಲಿ, ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿದೆ, ಪರಿಸರ-ಹವಾಮಾನ ಇವೆಲ್ಲವೂ ನಮ್ಮ ಸಂಸ್ಕೃತಿ ಎಂಬಿತ್ಯಾದಿಯಾಗಿ ಎಂದಿನಂತೆ ಯಾವುದೇ ಅಂಕಿಅಂಶಗಳ ಆಧಾರವಿಲ್ಲದೆ ಅವರು ಕೊಚ್ಚಿಕೊಂಡಿದ್ದಾರೆ. ಫಾಲೋ-ಅಪ್ ಪ್ರಶ್ನೆಗೆ ಅವಕಾಶವೂ ಇಲ್ಲದಂತೆ ’ಫಿಕ್ಸ್’ ಮಾಡಿಕೊಂಡಿದ್ದ ಪ್ರೆಸ್ ಕಾನ್ಫರೆನ್ಸ್‌ನಲ್ಲಿನ ಮಾತುಗಳಿಗೆ ಯಾವ ಆತ್ಮಸಾಕ್ಷಿಯ ಅವಶ್ಯಕತೆಯೂ ಇರುವುದಿಲ್ಲ. ಅದರಂತೆಯೇ ಇಬ್ಬರೂ ಮುಖಂಡರು ನಡೆದುಕೊಂಡಿದ್ದಾರೆ. ಕನಿಷ್ಠ ಪಕ್ಷ ಬೈಡೆನ್ ನಡೆಯನ್ನು ಬೂಟಾಟಿಕೆ ಎಂದು ಅಲ್ಲಿನ ಮಾಧ್ಯಮಗಳು (ಸ್ವತಂತ್ರ, ಸಣ್ಣವು, ದೊಡ್ಡವು ಮತ್ತು ಮುಖ್ಯವಾಹಿನಿಗಳು ಸೇರಿದಂತೆ) ಬಣ್ಣಿಸುವುದಕ್ಕೆ ಸಾಧ್ಯವಾದಷ್ಟು ಅಲ್ಲಿ ಖಂಡಿತಾ ಪ್ರಜಾಪ್ರಭುತ್ವ ಉಳಿದಿದೆ! ಇಲ್ಲಿ ಮೋದಿಯವರನ್ನು ಟೀಕಿಸಿದ ಮೇನ್‌ಸ್ಟ್ರೀಮ್ ಮಾಧ್ಯಮಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗುವುದು ಕಷ್ಟ. ಆ ಮಟ್ಟಿಗೆ ತೋರಿಕೆಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಕೂಡ ಇಲ್ಲಿನ ಪ್ರಭುತ್ವ ಎಫರ್ಟ್ ಹಾಕಿರುವಂತೆ ಕಾಣುವುದಿಲ್ಲ.

ಪ್ರಜಾಪ್ರಭುತ್ವದ ತೋರಿಕೆಯೂ ಇಲ್ಲ ಎಂಬುವುದಕ್ಕೆ ಕ್ಲಾಸಿಕ್ ಉದಾಹರಣೆಯೆಂಬಂತೆ ಮೋದಿಯವರನ್ನು ಅಂದು ಪ್ರಶ್ನಿಸಿದ ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯ ಪತ್ರಕರ್ತೆಯ ಮೇಲೆ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿ ಪ್ರಾರಂಭವಾಗಿತ್ತು. ದಾಳಿ ನಡೆಸುತ್ತಿದ್ದವರು ಯಾರೋ ’ಫ್ರಿಂಜ್’ಗಳಲ್ಲ; (2022ರಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಇಸ್ಲಾಂ ಧರ್ಮ ಪ್ರವಾದಿ ಮೊಹಮದ್ ಅವರ ಮೇಲೆ ಅನುಚಿತ ಪ್ರತಿಕ್ರಿಯೆಗಳನ್ನು ನೀಡಿದ್ದರು. ಮಧ್ಯಪ್ರಾಚ್ಯದ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಇದನ್ನು ವಿರೋಧಿಸಿ ಆರ್ಥಿಕ ನಿರ್ಬಂಧದ ಬೆದರಿಕೆ ಹಾಕಿದ ಮೇಲೆ ಬಿಜೆಪಿ ಅವರನ್ನು ಫ್ರಿಂಜ್ ಎಂದು ಬಗೆದು ತನ್ನನ್ನು ನೂಪುರ್ ಅವರ ಹೇಳಿಕೆಯಿಂದ ಪ್ರತ್ಯೇಕಿಸಿಕೊಳ್ಳಲು ಪ್ರಯತ್ನಿಸಿತ್ತು. ಇಂತಹ ಸಂದರ್ಭ ಈಗ ಡಬ್ಲ್ಯುಎಸ್‌ಜೆ ಪತ್ರಕರ್ತೆಯ ಮೇಲೆ ಪ್ರತಿಕ್ರಿಯಿಸುವ ವ್ಯಕ್ತಿಗೆ ಮುಂದೆಂದಾದರೂ ಬರಬಹುದಾದರೂ, ಸದ್ಯಕ್ಕೆ ಆತ ಬಿಜೆಪಿಯಲ್ಲಿ ಪ್ರಭಾವಿ) ಆತ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವಿಯ. “ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ’ರಕ್ಷಣೆ’ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಬೇಕಂತಲೇ ಕೇಳಿದ ಪೂರ್ವನಿರ್ಧರಿತ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣವಾಗಿ ಹೊಡೆದುಹಾಕಿದರು. ಅವರ ಪ್ರತಿಕ್ರಿಯೆಯಲ್ಲಿ ಅವರು ಮುಸ್ಲಿಮರ ಹೆಸರನ್ನಾಗಲೀ ಅಥವಾ ಇನ್ಯಾವುದೇ ಹೆಸರನ್ನು ಎತ್ತಲಿಲ್ಲ, ಸಂವಿಧಾನದ ಬಗ್ಗೆ, ಅರ್ಹತೆಯ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸಂಪನ್ಮೂಲಗಳನ್ನು ಪಡೆಯುವ ಪ್ರವೇಶಾವಕಾಶ ಮತ್ತು ಜಾತಿ, ಗುಂಪು, ಮತ ಅಥವಾ ಭೌಗೋಳಿಕತೆಯ ಮೇಲೆ ಯಾವುದೇ ತಾರತಮ್ಯ ಮಾಡದಿರುವುದರ ಬಗ್ಗೆ ಮಾತನಾಡಿದರು… ಅಂತಹುದೇ ಪ್ರಶ್ನೆಗೆ ಅಧ್ಯಕ್ಷ ಬೈಡೆನ್ ಅವರ ತಣ್ಣಗಿನ ಪ್ರತಿಕ್ರಿಯ ಬಳಿಕ ಇದು ಟೂಲ್‌ಕಿಟ್ ಗ್ಯಾಂಗ್‌ಗೆ ಕೊಟ್ಟ ಮತ್ತೊಂದು ಹೊಡೆತವಾಗಿತ್ತು” ಎಂದು ಮಾಳವಿಯ ಟ್ವೀಟ್ ಮಾಡಿದರು. ’ಮೋಟಿವೇಟೆಡ್’, ’ಟೂಲ್‌ಕಿಟ್’ ಎಂಬ ಪದಗಳನ್ನು ಬಳಸುವ ಮೂಲಕ ತಮ್ಮ ಟ್ರೋಲ್ ಪಡೆಯನ್ನು ಪ್ರಚೋದಿಸಿ ಉದ್ರೇಕಗೊಳಿಸಿದ್ದರು. ಅಲ್ಲಿಂದ ಪ್ರಾರಂಭವಾಯಿತು ನೋಡಿ, ಬಿಜೆಪಿ ಐಟಿ ಸೇನೆ ಡಬ್ಲ್ಯುಎಸ್‌ಜೆ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ವಿರುದ್ಧ ಸೆಟೆದು ನಿಂತಿತು. ಆಕೆ ಪಾಕಿಸ್ತಾನಿ, ಇಸ್ಲಾಮಿಸ್ಟ್, ಹಿಂದೂ ವಿರೋಧಿ ಮುಂತಾಗಿ ಟ್ರಾಲಿಂಗ್ ಶುರುಹಚ್ಚಿಕೊಂಡಿತು. ಈ ಆನ್‌ಲೈನ್ ಅಟ್ಯಾಕ್ ಯಾವ ಹಂತಕ್ಕೆ ಬೆಳೆಯಿತೆಂದರೆ, ಇದಕ್ಕೆ ವೈಟ್‌ಹೌಸ್ ಪ್ರತಿಕ್ರಿಯೆ ನೀಡಬೇಕಾಗಿ ಬಂತು. ಯುಎಸ್‌ನ ರಾಷ್ಟ್ರೀಯ ಭದ್ರತಾ ಪರಿಷತ್ತಿನ ಸಂವಹನ ವಿಭಾಗದ ಮುಖ್ಯಸ್ಥ ಜಾನ್ ಕಿರ್ಬಿ ಪ್ರತಿಕ್ರಿಯಿಸಿ, “ದೌರ್ಜನ್ಯದ ಬಗೆಗಿನ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಇದನ್ನು ಒಪ್ಪಲು ಅಸಾಧ್ಯ, ಯಾವುದೇ ಸನ್ನಿವೇಶದಲ್ಲಿ, ಎಲ್ಲೇ ಆಗಲಿ, ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಕಳೆದ ವಾರ ಸ್ಟೇಟ್ (ಅಮೆರಿಕ) ಭೇಟಿಯ ವೇಳೆ ಪ್ರದರ್ಶಿಸಲಾಗಿದ್ದ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದ್ದು ಇದು ಅನೈತಿಕವಾಗಿದೆ” ಎಂದಿದ್ದಾರೆ. ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಕೂಡ ತನ್ನ ಉದ್ಯೋಗಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪ್ರಕಟಣೆ ನೀಡಿತು. ಸಬ್ರಿನಾ ಸಿದ್ದಿಕಿ ತಾನು ಮತ್ತು ತನ್ನ ತಂದೆ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಬೆಂಬಲಿಸಿ ಟಿವಿ ನೋಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿಕೊಂಡರು ಕೂಡ!

ಇದನ್ನೂ ಓದಿ: ಮೋದಿಗೆ ಪ್ರಶ್ನೆ ಮಾಡಿದ್ದ ಪತ್ರಕರ್ತೆಗೆ ಹಿಂದುತ್ವವಾದಿಗಳಿಂದ ನಿಂದನೆ; ಅಮೆರಿಕ ಶ್ವೇತಭವನದಿಂದ ಖಂಡನೆ

ಈಗ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಅವರ ಹೆಸರಿನಲ್ಲಿ ಇರುವ ’ಸಿದ್ದಿಕಿ’ ಭಾರತದಲ್ಲಿ ಪತ್ರಕರ್ತರ ಮೇಲೆ ನಡೆದ ದಾಳಿಯ ಮತ್ತೊಂದು ಪ್ರಕರಣವನ್ನು ನೆನಪಿಸದೆ ಇರದು. ಉತ್ತರಪ್ರದೇಶದ ಹಾತ್ರಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಡೆದ ರೇಪ್ ಮತ್ತು ಕೊಲೆ ಘಟನೆಯನ್ನು ವರದಿ ಮಾಡಲು ಸಿದ್ದಿಕ್ ಕಪ್ಪನ್ ಕೇರಳದಿಂದ ಬಂದಿದ್ದರು. ಅವರ ಜೊತೆಗೆ ಆತಿಕುರ್ ರಹಮಾನ್ ಮತ್ತು ವಿದ್ಯಾರ್ಥಿ ಮಸೂದ್ ಅಹ್ಮದ್ ಇದ್ದರು. ಅತ್ತ ಒಂದು ಕಡೆ ಕುಟುಂಬಸ್ಥರಿಗೂ ಶವವನ್ನು ನೀಡದೆ 19 ವರ್ಷದ ಆ ಸಂತ್ರಸ್ತ ಯುವತಿಯ ಶವವನ್ನು ಆತುರಾತುರದಲ್ಲಿ ಪೊಲೀಸರು ಸುಟ್ಟುಹಾಕುತ್ತಿದ್ದರೆ ಮತ್ತೊಂದು ಕಡೆ ಸಿದ್ದಿಕ್, ರಹಮಾನ್, ಅಹ್ಮದ್‌ರ ಮೇಲೆ ಪೊಲೀಸರು ’ಫಿಲ್ಮಿ’ ರೀತಿಯಲ್ಲಿ ಆರೋಪಗಳನ್ನು ಹೊರಿಸಿ ಯುಎಪಿಎ ಜಡಿದು ಬಂಧಿಸುತ್ತಿದ್ದರು. ಅಷ್ಟು ಸಾಲದೆಂಬಂತೆ ಅವರನ್ನು ಕರೆತಂದಿದ್ದ ಟ್ಯಾಕ್ಸಿ ಚಾಲಕ ಮೊಹಮ್ಮದ್ ಆಲಂ ಅವರ ಮೇಲೆಯೂ ಯುಎಪಿಎ ಹಾಕಿ ಬಂಧಿಸಿದ್ದರು. ಆಲಂ ಮತ್ತು ಸಿದ್ದಿಕಿ ಕ್ರಮವಾಗಿ 27 ಮತ್ತು 28 ತಿಂಗಳುಗಳ ಕಾಲ ಜೈಲಿನಲ್ಲಿದ್ದು 2022ರಲ್ಲಿ ಜಾಮೀನು ಪಡೆದರೆ ರಹಮಾನ ಅವರು 32 ತಿಂಗಳು ಕಾಲ ಜೈಲಿನಲ್ಲಿದ್ದು 23 ಜೂನ್ 2023ರಂದು ಜಾಮೀನು ಪಡೆದು ಹೊರಬಂದಿದ್ದಾರೆ. ಮಸೂದ್ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಜಾಮೀನಿನ ಮೇಲೆ ಕೆಲವೇ ದಿನಗಳ ಹಿಂದೆ ಹೊರಬಂದ ರಹಮಾನ್ ಅವರು “ಮುಸ್ಲಿಮರಾಗಿದ್ದಕ್ಕೆ ನಮ್ಮನ್ನು ಶಿಕ್ಷಿಸಲಾಯಿತು. ಜೈಲಿನಲ್ಲಿ ನನ್ನ ಆತ್ಮಬಲವನ್ನು ಮುರಿಯಲು ಎಲ್ಲಾ ತಂತ್ರಗಳನ್ನು ಅವರು ಬಳಸಿದರು, ಆದರೆ ಆ ಕೆಲಸದಲ್ಲಿ ಅವರು ಸೋತರು. ನನಗೆ ಯಾವುದರ ಬಗ್ಗೆಯೂ ಭಯವಿಲ್ಲ. ಇನ್ನೂ ಹೆಚ್ಚೇನು ಅವರು ಮಾಡಬಲ್ಲರು? ನಿಮ್ಮನ್ನು ಜೈಲಿಗೆ ಹಾಕಿದ ಮೇಲೆ ಭಯ ಕಾಣೆಯಾಗಿಬಿಡುತ್ತದೆ” ಎಂದಿದ್ದಾರೆ. ನಮ್ಮ ಪ್ರಜಾಪ್ರಭುತ್ವ ಈ ಸ್ಥಿತಿಯನ್ನು ಎದುರಿಸುತ್ತಿರುವಾಗ ಯುಎಸ್‌ಎನಲ್ಲಿ ಪತ್ರಕರ್ತೆಯಾಗಿರುವ ಸಬ್ರಿನಾ ಸಿದ್ದಿಕಿ ಸಾಪೇಕ್ಷವಾಗಿ ಸ್ವಲ್ಪ ಹೆಚ್ಚು ಸೇಫ್ ಎನ್ನಬಹುದೇನೋ!

ಇದ್ರಿಸ್ ಪಾಷಾ

ದೊಡ್ಡದೊಡ್ಡ ಕಾರ್ಪೊರೇಟ್ ಧಣಿಗಳನ್ನು ಭೇಟಿ ಮಾಡಿ, ಅಮೆರಿಕದ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಿ (ಭಾರತದಲ್ಲಿ ಅಲ್ಪಸಂಖ್ಯಾತರನ್ನು ದಮನಿಸಲಾಗುತ್ತಿದೆ ಎಂದು ಆರೋಪಿಸಿ ಮೂವರು ಅಮೆರಿಕ ಲಾಮೇಕರ್‌ಗಳು ಇದರಿಂದ ದೂರವುಳಿದಿದ್ದರು), ಬೈಡೆನ್ ಅವರ ಜೊತೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಂಡು ಯುಎಸ್‌ಎ ಪ್ರವಾಸ ಮುಗಿಸಿ ಈಜಿಪ್ಟ್ ಪ್ರವಾಸ ಶುರುಮಾಡುವ ಹೊತ್ತಿಗೆ ಜೂನ್ 26ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗೋರಕ್ಷಣೆಯ ಹೆಸರಿನ ಕೊಲೆಗಡುಕರು ಇಬ್ಬರು ಮುಸಲ್ಮಾನರ ಮೇಲೆ ದೊಣ್ಣೆ ಮತ್ತು ಸ್ಟೀಲ್ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಅಫನ್ ಅನ್ಸಾರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರೆ, ನಾಸಿರ್ ಖುರೇಶಿ ತೀವ್ರ ಗಾಯಗಳಿಗೆ ತುತ್ತಾಗಿದ್ದಾರೆ. ಇದಕ್ಕೆ ಎರಡು ವಾರಗಳ ಹಿಂದೆಯಷ್ಟೇ ಜೂನ್ 8ರಂದು ನಾಸಿಕ್‌ನಲ್ಲಿಯೇ ಗೋರಕ್ಷಕರ ದಾಳಿಗೆ ಕೊಲೆಯಾಗಿದ್ದರು ಎನ್ನಲಾಗಿದ್ದ ಲುಕ್‌ಮನ್ ಅನ್ಸಾರಿ ಅವರ ಮೃತದೇಹ ಪತ್ತೆಯಾಗಿತ್ತು. ಏಪ್ರಿಲ್‌ನಲ್ಲಿ ಕರ್ನಾಟಕದ ರಾಮನಗರದಲ್ಲಿ ಇದ್ರಿಸ್ ಪಾಷಾ ಎಂಬುವವರನ್ನು ಗೋರಕ್ಷಣೆಯ ಹೆಸರನಲ್ಲಿ ಕೊಲೆಗೈಯ್ಯಲಾಗಿತ್ತು. ಇದ್ರಿಸ್ ಪಾಷಾ ಮತ್ತು ಸಹಚರರು ಅಧಿಕೃತ ರಶೀದಿಯೊಂದಿಗೇ ದನಗಳನ್ನು ಸಾಗಣೆ ಮಾಡುತ್ತಿದಾರೂ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಗೋಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿತ್ತು. ಈಗ ಪುನೀತ್ ಕೆರೆಹಳ್ಳಿ ಮತ್ತು ಇತರ ಐವರು ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ ಕೊಲೆ ಆರೋಪಿಗಳು ಜಾಮೀನು ಪಡೆದು ರೋಷಾವೇಷದ ಮಾತುಗಳನ್ನಾಡುವುದರಲ್ಲಿ ನಿರತರಾಗಿದ್ದಾರೆ!

ಅಲ್ಪಸಂಖ್ಯಾತ ಧರ್ಮೀಯರ ಮೇಲೆ ದೇಶದ ಬಹುಸಂಖ್ಯಾತರು ಸವಾರಿ ನಡೆಸುತ್ತ್ತಿರುವುದಕ್ಕೆ ಬಹುಶಃ ದಿನಾಲು ನೂರಾರು ಉದಾಹರಣೆಗಳು ಸಿಕ್ಕಾವು.

ಇಂತಹ ಪರಿಸ್ಥಿತಿ ಸೃಷ್ಟಿಯಾಗುವುದಕ್ಕೆ ಮೋದಿ ಆಡಳಿತದ ಸರ್ಕಾರ ಕಾರಣವಲ್ಲವೇ? ಮೋದಿಯವರ ಪಕ್ಷ ಬಿಜೆಪಿ ಕಾರಣವಲ್ಲವೇ? ಬಿಜೆಪಿಯ ತಾತ್ವಿಕ ಪೋಷಕ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಕಾರಣವಲ್ಲವೇ? ಇದನ್ನು ತಡೆಯಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡುವುದರ ಬದಲು ಪ್ರಜಾಪ್ರಭುತ್ವ ನರನಾಡಿಗಳಲ್ಲಿ ಹರಿಯುತ್ತಿದೆ ಎಂಬ ಒಣಮಾತು ಇದ್ರಿಸ್ ಪಾಷಾನ ಜೀವವನ್ನು ವಾಪಸ್ ತಂದುಕೊಡುತ್ತದೆಯೇ? ಅವರ ಕುಟುಂಬದ ಸಂಕಟವನ್ನು ಕಡಿಮೆ ಮಾಡುತ್ತದೆಯೇ?

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತದಲ್ಲಿ ಕುಸಿಯುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಿಜೆಪಿ ಮುಖಂಡರು ಒಬಾಮಾ ಹೆಸರನ್ನೂ ಆಡಿಕೊಂಡು ಟ್ರಾಲ್ ಮಾಡಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಟೀಕೆಯನ್ನು ಒಂದು ಹಂತ ಮುಂದಕ್ಕೆ ತೆಗೆದುಕೊಂಡುಹೋಗಿ, ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮುಸ್ಲಿಂ ರಾಷ್ಟ್ರಗಳ ಮೇಲಿನ ಅಮೆರಿಕ ದಾಳಿಯನ್ನು ನಿಲ್ಲಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು. ಬೇರೆ ರಾಷ್ಟ್ರಗಳ ಜನರ ಮೇಲಿನ ಮಾನವ ಹಕ್ಕುಗಳ ಹರಣದ ವಿಷಯದಲ್ಲಿ ಯುಎಸ್‌ಎ ದಾಖಲೆ ಭಯಾನಕವಾಗಿರುವುದು ನಿಜ. ಅದು ಬರಾಕ್ ಒಬಾಮಾ ಅವರ ಕಾಲಕ್ಕೂ ದಯನೀಯವಾಗಿತ್ತು ಎಂಬುದನ್ನು ಹಲವರು ಗುರುತಿಸಿದ್ದಾರೆ.

ಬರಾಕ್ ಒಬಾಮಾ

ಆದರೆ ಇದು ಭಾರತದಂತಹ ದೇಶಕ್ಕೆ ಮಾದರಿಯಾಗಬಾರದಲ್ಲವೇ? ಪ್ರಜಾಪ್ರಭುತ್ವ ನರನಾಡಿಗಳಲ್ಲ ಹರಿಯುವ ದೇಶದಲ್ಲಿ ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಲಿಂಚಿಂಗ್‌ಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೇಕೆ?

ಮತ್ತೊಮ್ಮೆ ಆ ವಿರಳಾತಿ ವಿರಳ ಪತ್ರಿಕಾ ಗೋಷ್ಠಿಯಲ್ಲಿ ಸಬ್ರಿನಾ ಸಿದ್ದಿಕಿ ಕೇಳಿದ ಆ ಪ್ರಶ್ನೆಯನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳುವುದು ಉಚಿತವಾದೀತು: “ಪ್ರಧಾನ ಮಂತ್ರಿಯವರೇ, ಭಾರತ ಬಹಳ ಕಾಲದಿಂದಲೂ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾ ಬಂದಿದೆ, ಆದರೆ ಹಲವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯವೆಸಗಿರುವ ಮತ್ತು ವಿರೋಧಿಗಳ ಸದ್ದಡಗಿಸಿರುವ ಬಗ್ಗೆ ಮಾತಾಡುವ ಹಲವು ಮಾನವ ಹಕ್ಕುಗಳ ಸಂಘಟನೆಗಳಿವೆ. ಶ್ವೇತ ಭವನದ ಪೂರ್ವ ಕೊಠಡಿಯಲ್ಲಿ ಈಗ ನೀವು ನಿಂತಿರುವಾಗ, ಎಲ್ಲಿ ವಿಶ್ವದ ಹಲವು ನಾಯಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ಬಗ್ಗೆ ಭರವಸೆಗಳನ್ನು ನೀಡಿದ್ದಾರೋ ಅಲ್ಲಿ, ನಿಮ್ಮ ದೇಶದಲ್ಲಿ ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಿಮ್ಮ ಸರ್ಕಾರ ಮತ್ತು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೀರಿ?

ಈ ಪ್ರಶ್ನೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಳ್ಳುವ ಯಾವ ಉತ್ತರವನ್ನಾದರೂ ನೀಡಿ ನುಣುಚಿಕೊಳ್ಳಬಹುದು. ಆದರೆ ದಿನನಿತ್ಯ ಇಲ್ಲಿ ನಡೆಯುವ ಘಟನೆಗಳು ಅದಕ್ಕೆ ವ್ಯತಿರಿಕ್ತವಾದ ಮೆಜಾರಿಟೇರಿಯನ್ ಭಾವನೆ ಭಾರತದಲ್ಲಿ ನೆಲೆಸಿರುವುದಕ್ಕೆ ಸಾಕ್ಷ್ಯ ನುಡಿಯುತ್ತಿರುತ್ತವೆ. ಅಪರೂಪದ ಪತ್ರಿಕಾಗೋಷ್ಠಿಯ ಈ ಪ್ರಶ್ನೆ ಇನ್ನಷ್ಟು ದಿನ ಕಾಡಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...