Homeಅಂಕಣಗಳುಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

ಮೂರು ದಿನವೂ ಉಳಿಯದ ’ವಿರಳ’ ಪತ್ರಿಕಾ ಗೋಷ್ಠಿಯ ಎತ್ತರದ ಪ್ರತಿಪಾದನೆಗಳು!

- Advertisement -
- Advertisement -

ಅವರಿಗೆ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರು ಕೇಳುವ ಪ್ರಶ್ನೆಗಳಾಗಲಿ, ಸಂಸತ್ ಭವನದಲ್ಲಿ ಪ್ರತಿಪಕ್ಷಗಳು ಕೇಳುವ ಪ್ರಶ್ನೆಗಳಾಗಲೀ, ಅವಕ್ಕೆ ನೀಡುವ ಪ್ರತಿಕ್ರಿಯೆ ವಸನಿಷ್ಠ ಉತ್ತರಗಳಾಗಿರದೆ, ಅದು ಮುಂದೆ ಚುನಾವಣಾ ರ್‍ಯಾಲಿಗಳಲ್ಲಿ ಮಾಡುವ ಭಾಷಣದ ಪೂರ್ವತಯ್ಯಾರಿ ಆಗಿರಲಿದೆ ಎಂಬ ಆಪಾದನೆಯನ್ನು ಮಾನ್ಯ ಪ್ರಧಾನಮಂತ್ರಿಗಳು ಸಾಬೀತುಮಾಡಿಕೊಂಡೇ ಬಂದಿದ್ದಾರೆ. ಅತಿ ಹೆಚ್ಚು ಪ್ರಚಾರ ಮಾಡಲಾಗಿದ್ದ ಪ್ರಧಾನಿ ಅವರ ಯುಎಸ್‌ಎ ಪ್ರವಾಸದ ಕಾರ್ಯಕಲಾಪಗಳಲ್ಲಿ, ಆ ದೇಶದ ಅಧ್ಯಕ್ಷ ಜೋ ಬೈಡೆನ್ ಜೊತೆಗೆ ಮೋದಿ ನಡೆಸಲಿದ್ದ ಪತ್ರಿಕಾಗೋಷ್ಠಿ ಪ್ರವಾಸಕ್ಕಿಂತಲೂ ಸ್ವಲ್ಪ ಹೆಚ್ಚು ಪ್ರಚಾರ ಪಡೆದುಕೊಂಡಿದ್ದೇನೋ ನಿಜ. ಕೇವಲ ಎರಡು ಪ್ರಶ್ನೆಗಳಿಗೆ ಸೀಮಿತವಾಗಿದ್ದ ಆ ಪ್ರೆಸ್ ಕಾನ್ಫರೆನ್ಸ್‌ನಲ್ಲಿ ಎರಡೂ ರಾಷ್ಟ್ರಗಳ ಮುಖಂಡರು ಉತ್ತರಿಸಿದ್ದು, ಎರಡೂ ದೇಶಗಳಲ್ಲಿ ಇನ್ನೇನು ಬರಲಿರುವ ಚುನಾವಣೆಗಳಿಗೆ ಭಾಷಣ ಮಾಡಿ ಸಿದ್ಧತೆ ಮಾಡಿಕೊಳ್ಳುತ್ತಿರುವಂತಿತ್ತು. ಭಾರತದ ಪ್ರಧಾನಿಯವರಿಗೆ ಪ್ರೆಸ್ ಕಾನ್ಫರೆನ್ಸ್ ಎಂಬುದು ಬ್ರಹ್ಮಾಂಡದಲ್ಲಿ ನಡೆಯುವ ವಿರಳ ಘಟನೆಯಂತಾಗಿರುವ ಸಮಯದಲ್ಲಿ, ಪ್ರಜಾಪ್ರಭುತ್ವ ನಮ್ಮ ನರನಾಡಿಗಳಲ್ಲಿದೆ, ಪರಿಸರ-ಹವಾಮಾನ ಇವೆಲ್ಲವೂ ನಮ್ಮ ಸಂಸ್ಕೃತಿ ಎಂಬಿತ್ಯಾದಿಯಾಗಿ ಎಂದಿನಂತೆ ಯಾವುದೇ ಅಂಕಿಅಂಶಗಳ ಆಧಾರವಿಲ್ಲದೆ ಅವರು ಕೊಚ್ಚಿಕೊಂಡಿದ್ದಾರೆ. ಫಾಲೋ-ಅಪ್ ಪ್ರಶ್ನೆಗೆ ಅವಕಾಶವೂ ಇಲ್ಲದಂತೆ ’ಫಿಕ್ಸ್’ ಮಾಡಿಕೊಂಡಿದ್ದ ಪ್ರೆಸ್ ಕಾನ್ಫರೆನ್ಸ್‌ನಲ್ಲಿನ ಮಾತುಗಳಿಗೆ ಯಾವ ಆತ್ಮಸಾಕ್ಷಿಯ ಅವಶ್ಯಕತೆಯೂ ಇರುವುದಿಲ್ಲ. ಅದರಂತೆಯೇ ಇಬ್ಬರೂ ಮುಖಂಡರು ನಡೆದುಕೊಂಡಿದ್ದಾರೆ. ಕನಿಷ್ಠ ಪಕ್ಷ ಬೈಡೆನ್ ನಡೆಯನ್ನು ಬೂಟಾಟಿಕೆ ಎಂದು ಅಲ್ಲಿನ ಮಾಧ್ಯಮಗಳು (ಸ್ವತಂತ್ರ, ಸಣ್ಣವು, ದೊಡ್ಡವು ಮತ್ತು ಮುಖ್ಯವಾಹಿನಿಗಳು ಸೇರಿದಂತೆ) ಬಣ್ಣಿಸುವುದಕ್ಕೆ ಸಾಧ್ಯವಾದಷ್ಟು ಅಲ್ಲಿ ಖಂಡಿತಾ ಪ್ರಜಾಪ್ರಭುತ್ವ ಉಳಿದಿದೆ! ಇಲ್ಲಿ ಮೋದಿಯವರನ್ನು ಟೀಕಿಸಿದ ಮೇನ್‌ಸ್ಟ್ರೀಮ್ ಮಾಧ್ಯಮಗಳನ್ನು ದುರ್ಬೀನು ಹಾಕಿ ಹುಡುಕಿದರೂ ಸಿಗುವುದು ಕಷ್ಟ. ಆ ಮಟ್ಟಿಗೆ ತೋರಿಕೆಯ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ಕೂಡ ಇಲ್ಲಿನ ಪ್ರಭುತ್ವ ಎಫರ್ಟ್ ಹಾಕಿರುವಂತೆ ಕಾಣುವುದಿಲ್ಲ.

ಪ್ರಜಾಪ್ರಭುತ್ವದ ತೋರಿಕೆಯೂ ಇಲ್ಲ ಎಂಬುವುದಕ್ಕೆ ಕ್ಲಾಸಿಕ್ ಉದಾಹರಣೆಯೆಂಬಂತೆ ಮೋದಿಯವರನ್ನು ಅಂದು ಪ್ರಶ್ನಿಸಿದ ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆಯ ಪತ್ರಕರ್ತೆಯ ಮೇಲೆ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ದಾಳಿ ಪ್ರಾರಂಭವಾಗಿತ್ತು. ದಾಳಿ ನಡೆಸುತ್ತಿದ್ದವರು ಯಾರೋ ’ಫ್ರಿಂಜ್’ಗಳಲ್ಲ; (2022ರಲ್ಲಿ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಇಸ್ಲಾಂ ಧರ್ಮ ಪ್ರವಾದಿ ಮೊಹಮದ್ ಅವರ ಮೇಲೆ ಅನುಚಿತ ಪ್ರತಿಕ್ರಿಯೆಗಳನ್ನು ನೀಡಿದ್ದರು. ಮಧ್ಯಪ್ರಾಚ್ಯದ ಕೆಲವು ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಇದನ್ನು ವಿರೋಧಿಸಿ ಆರ್ಥಿಕ ನಿರ್ಬಂಧದ ಬೆದರಿಕೆ ಹಾಕಿದ ಮೇಲೆ ಬಿಜೆಪಿ ಅವರನ್ನು ಫ್ರಿಂಜ್ ಎಂದು ಬಗೆದು ತನ್ನನ್ನು ನೂಪುರ್ ಅವರ ಹೇಳಿಕೆಯಿಂದ ಪ್ರತ್ಯೇಕಿಸಿಕೊಳ್ಳಲು ಪ್ರಯತ್ನಿಸಿತ್ತು. ಇಂತಹ ಸಂದರ್ಭ ಈಗ ಡಬ್ಲ್ಯುಎಸ್‌ಜೆ ಪತ್ರಕರ್ತೆಯ ಮೇಲೆ ಪ್ರತಿಕ್ರಿಯಿಸುವ ವ್ಯಕ್ತಿಗೆ ಮುಂದೆಂದಾದರೂ ಬರಬಹುದಾದರೂ, ಸದ್ಯಕ್ಕೆ ಆತ ಬಿಜೆಪಿಯಲ್ಲಿ ಪ್ರಭಾವಿ) ಆತ ಬಿಜೆಪಿ ಐಟಿ ಸೆಲ್‌ನ ಮುಖ್ಯಸ್ಥ ಅಮಿತ್ ಮಾಳವಿಯ. “ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳ ’ರಕ್ಷಣೆ’ ಮಾಡಲು ಯಾವ ಕ್ರಮಗಳನ್ನು ತೆಗೆದುಕೊಂಡಿದ್ದೀರಿ ಎಂದು ಬೇಕಂತಲೇ ಕೇಳಿದ ಪೂರ್ವನಿರ್ಧರಿತ ಪ್ರಶ್ನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಸಂಪೂರ್ಣವಾಗಿ ಹೊಡೆದುಹಾಕಿದರು. ಅವರ ಪ್ರತಿಕ್ರಿಯೆಯಲ್ಲಿ ಅವರು ಮುಸ್ಲಿಮರ ಹೆಸರನ್ನಾಗಲೀ ಅಥವಾ ಇನ್ಯಾವುದೇ ಹೆಸರನ್ನು ಎತ್ತಲಿಲ್ಲ, ಸಂವಿಧಾನದ ಬಗ್ಗೆ, ಅರ್ಹತೆಯ ಮಾನದಂಡದ ಆಧಾರದ ಮೇಲೆ ಸರ್ಕಾರಿ ಸಂಪನ್ಮೂಲಗಳನ್ನು ಪಡೆಯುವ ಪ್ರವೇಶಾವಕಾಶ ಮತ್ತು ಜಾತಿ, ಗುಂಪು, ಮತ ಅಥವಾ ಭೌಗೋಳಿಕತೆಯ ಮೇಲೆ ಯಾವುದೇ ತಾರತಮ್ಯ ಮಾಡದಿರುವುದರ ಬಗ್ಗೆ ಮಾತನಾಡಿದರು… ಅಂತಹುದೇ ಪ್ರಶ್ನೆಗೆ ಅಧ್ಯಕ್ಷ ಬೈಡೆನ್ ಅವರ ತಣ್ಣಗಿನ ಪ್ರತಿಕ್ರಿಯ ಬಳಿಕ ಇದು ಟೂಲ್‌ಕಿಟ್ ಗ್ಯಾಂಗ್‌ಗೆ ಕೊಟ್ಟ ಮತ್ತೊಂದು ಹೊಡೆತವಾಗಿತ್ತು” ಎಂದು ಮಾಳವಿಯ ಟ್ವೀಟ್ ಮಾಡಿದರು. ’ಮೋಟಿವೇಟೆಡ್’, ’ಟೂಲ್‌ಕಿಟ್’ ಎಂಬ ಪದಗಳನ್ನು ಬಳಸುವ ಮೂಲಕ ತಮ್ಮ ಟ್ರೋಲ್ ಪಡೆಯನ್ನು ಪ್ರಚೋದಿಸಿ ಉದ್ರೇಕಗೊಳಿಸಿದ್ದರು. ಅಲ್ಲಿಂದ ಪ್ರಾರಂಭವಾಯಿತು ನೋಡಿ, ಬಿಜೆಪಿ ಐಟಿ ಸೇನೆ ಡಬ್ಲ್ಯುಎಸ್‌ಜೆ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ವಿರುದ್ಧ ಸೆಟೆದು ನಿಂತಿತು. ಆಕೆ ಪಾಕಿಸ್ತಾನಿ, ಇಸ್ಲಾಮಿಸ್ಟ್, ಹಿಂದೂ ವಿರೋಧಿ ಮುಂತಾಗಿ ಟ್ರಾಲಿಂಗ್ ಶುರುಹಚ್ಚಿಕೊಂಡಿತು. ಈ ಆನ್‌ಲೈನ್ ಅಟ್ಯಾಕ್ ಯಾವ ಹಂತಕ್ಕೆ ಬೆಳೆಯಿತೆಂದರೆ, ಇದಕ್ಕೆ ವೈಟ್‌ಹೌಸ್ ಪ್ರತಿಕ್ರಿಯೆ ನೀಡಬೇಕಾಗಿ ಬಂತು. ಯುಎಸ್‌ನ ರಾಷ್ಟ್ರೀಯ ಭದ್ರತಾ ಪರಿಷತ್ತಿನ ಸಂವಹನ ವಿಭಾಗದ ಮುಖ್ಯಸ್ಥ ಜಾನ್ ಕಿರ್ಬಿ ಪ್ರತಿಕ್ರಿಯಿಸಿ, “ದೌರ್ಜನ್ಯದ ಬಗೆಗಿನ ವರದಿಗಳ ಬಗ್ಗೆ ನಮಗೆ ತಿಳಿದಿದೆ. ಇದನ್ನು ಒಪ್ಪಲು ಅಸಾಧ್ಯ, ಯಾವುದೇ ಸನ್ನಿವೇಶದಲ್ಲಿ, ಎಲ್ಲೇ ಆಗಲಿ, ಪತ್ರಕರ್ತರಿಗೆ ಕಿರುಕುಳ ನೀಡುವುದನ್ನು ನಾವು ಸಂಪೂರ್ಣವಾಗಿ ಖಂಡಿಸುತ್ತೇವೆ. ಕಳೆದ ವಾರ ಸ್ಟೇಟ್ (ಅಮೆರಿಕ) ಭೇಟಿಯ ವೇಳೆ ಪ್ರದರ್ಶಿಸಲಾಗಿದ್ದ ಪ್ರಜಾಪ್ರಭುತ್ವದ ತತ್ವಗಳಿಗೆ ವಿರುದ್ಧವಾಗಿದ್ದು ಇದು ಅನೈತಿಕವಾಗಿದೆ” ಎಂದಿದ್ದಾರೆ. ’ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ಕೂಡ ತನ್ನ ಉದ್ಯೋಗಿಯ ಮೇಲೆ ನಡೆದ ದಾಳಿಯನ್ನು ಖಂಡಿಸಿ ಪ್ರಕಟಣೆ ನೀಡಿತು. ಸಬ್ರಿನಾ ಸಿದ್ದಿಕಿ ತಾನು ಮತ್ತು ತನ್ನ ತಂದೆ ಕ್ರಿಕೆಟ್ ವಿಶ್ವಕಪ್‌ನಲ್ಲಿ ಭಾರತ ತಂಡವನ್ನು ಬೆಂಬಲಿಸಿ ಟಿವಿ ನೋಡುತ್ತಿರುವ ಫೋಟೋವನ್ನು ಟ್ವೀಟ್ ಮಾಡಿಕೊಂಡರು ಕೂಡ!

ಇದನ್ನೂ ಓದಿ: ಮೋದಿಗೆ ಪ್ರಶ್ನೆ ಮಾಡಿದ್ದ ಪತ್ರಕರ್ತೆಗೆ ಹಿಂದುತ್ವವಾದಿಗಳಿಂದ ನಿಂದನೆ; ಅಮೆರಿಕ ಶ್ವೇತಭವನದಿಂದ ಖಂಡನೆ

ಈಗ ಸಂಘ ಪರಿವಾರದ ಕೆಂಗಣ್ಣಿಗೆ ಗುರಿಯಾಗಿರುವ ಪತ್ರಕರ್ತೆ ಸಬ್ರಿನಾ ಸಿದ್ದಿಕಿ ಅವರ ಹೆಸರಿನಲ್ಲಿ ಇರುವ ’ಸಿದ್ದಿಕಿ’ ಭಾರತದಲ್ಲಿ ಪತ್ರಕರ್ತರ ಮೇಲೆ ನಡೆದ ದಾಳಿಯ ಮತ್ತೊಂದು ಪ್ರಕರಣವನ್ನು ನೆನಪಿಸದೆ ಇರದು. ಉತ್ತರಪ್ರದೇಶದ ಹಾತ್ರಸ್‌ನಲ್ಲಿ 19 ವರ್ಷದ ದಲಿತ ಯುವತಿಯ ಮೇಲೆ ನಡೆದ ರೇಪ್ ಮತ್ತು ಕೊಲೆ ಘಟನೆಯನ್ನು ವರದಿ ಮಾಡಲು ಸಿದ್ದಿಕ್ ಕಪ್ಪನ್ ಕೇರಳದಿಂದ ಬಂದಿದ್ದರು. ಅವರ ಜೊತೆಗೆ ಆತಿಕುರ್ ರಹಮಾನ್ ಮತ್ತು ವಿದ್ಯಾರ್ಥಿ ಮಸೂದ್ ಅಹ್ಮದ್ ಇದ್ದರು. ಅತ್ತ ಒಂದು ಕಡೆ ಕುಟುಂಬಸ್ಥರಿಗೂ ಶವವನ್ನು ನೀಡದೆ 19 ವರ್ಷದ ಆ ಸಂತ್ರಸ್ತ ಯುವತಿಯ ಶವವನ್ನು ಆತುರಾತುರದಲ್ಲಿ ಪೊಲೀಸರು ಸುಟ್ಟುಹಾಕುತ್ತಿದ್ದರೆ ಮತ್ತೊಂದು ಕಡೆ ಸಿದ್ದಿಕ್, ರಹಮಾನ್, ಅಹ್ಮದ್‌ರ ಮೇಲೆ ಪೊಲೀಸರು ’ಫಿಲ್ಮಿ’ ರೀತಿಯಲ್ಲಿ ಆರೋಪಗಳನ್ನು ಹೊರಿಸಿ ಯುಎಪಿಎ ಜಡಿದು ಬಂಧಿಸುತ್ತಿದ್ದರು. ಅಷ್ಟು ಸಾಲದೆಂಬಂತೆ ಅವರನ್ನು ಕರೆತಂದಿದ್ದ ಟ್ಯಾಕ್ಸಿ ಚಾಲಕ ಮೊಹಮ್ಮದ್ ಆಲಂ ಅವರ ಮೇಲೆಯೂ ಯುಎಪಿಎ ಹಾಕಿ ಬಂಧಿಸಿದ್ದರು. ಆಲಂ ಮತ್ತು ಸಿದ್ದಿಕಿ ಕ್ರಮವಾಗಿ 27 ಮತ್ತು 28 ತಿಂಗಳುಗಳ ಕಾಲ ಜೈಲಿನಲ್ಲಿದ್ದು 2022ರಲ್ಲಿ ಜಾಮೀನು ಪಡೆದರೆ ರಹಮಾನ ಅವರು 32 ತಿಂಗಳು ಕಾಲ ಜೈಲಿನಲ್ಲಿದ್ದು 23 ಜೂನ್ 2023ರಂದು ಜಾಮೀನು ಪಡೆದು ಹೊರಬಂದಿದ್ದಾರೆ. ಮಸೂದ್ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಜಾಮೀನಿನ ಮೇಲೆ ಕೆಲವೇ ದಿನಗಳ ಹಿಂದೆ ಹೊರಬಂದ ರಹಮಾನ್ ಅವರು “ಮುಸ್ಲಿಮರಾಗಿದ್ದಕ್ಕೆ ನಮ್ಮನ್ನು ಶಿಕ್ಷಿಸಲಾಯಿತು. ಜೈಲಿನಲ್ಲಿ ನನ್ನ ಆತ್ಮಬಲವನ್ನು ಮುರಿಯಲು ಎಲ್ಲಾ ತಂತ್ರಗಳನ್ನು ಅವರು ಬಳಸಿದರು, ಆದರೆ ಆ ಕೆಲಸದಲ್ಲಿ ಅವರು ಸೋತರು. ನನಗೆ ಯಾವುದರ ಬಗ್ಗೆಯೂ ಭಯವಿಲ್ಲ. ಇನ್ನೂ ಹೆಚ್ಚೇನು ಅವರು ಮಾಡಬಲ್ಲರು? ನಿಮ್ಮನ್ನು ಜೈಲಿಗೆ ಹಾಕಿದ ಮೇಲೆ ಭಯ ಕಾಣೆಯಾಗಿಬಿಡುತ್ತದೆ” ಎಂದಿದ್ದಾರೆ. ನಮ್ಮ ಪ್ರಜಾಪ್ರಭುತ್ವ ಈ ಸ್ಥಿತಿಯನ್ನು ಎದುರಿಸುತ್ತಿರುವಾಗ ಯುಎಸ್‌ಎನಲ್ಲಿ ಪತ್ರಕರ್ತೆಯಾಗಿರುವ ಸಬ್ರಿನಾ ಸಿದ್ದಿಕಿ ಸಾಪೇಕ್ಷವಾಗಿ ಸ್ವಲ್ಪ ಹೆಚ್ಚು ಸೇಫ್ ಎನ್ನಬಹುದೇನೋ!

ಇದ್ರಿಸ್ ಪಾಷಾ

ದೊಡ್ಡದೊಡ್ಡ ಕಾರ್ಪೊರೇಟ್ ಧಣಿಗಳನ್ನು ಭೇಟಿ ಮಾಡಿ, ಅಮೆರಿಕದ ಕಾಂಗ್ರೆಸ್‌ನಲ್ಲಿ ಭಾಷಣ ಮಾಡಿ (ಭಾರತದಲ್ಲಿ ಅಲ್ಪಸಂಖ್ಯಾತರನ್ನು ದಮನಿಸಲಾಗುತ್ತಿದೆ ಎಂದು ಆರೋಪಿಸಿ ಮೂವರು ಅಮೆರಿಕ ಲಾಮೇಕರ್‌ಗಳು ಇದರಿಂದ ದೂರವುಳಿದಿದ್ದರು), ಬೈಡೆನ್ ಅವರ ಜೊತೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಂಡು ಯುಎಸ್‌ಎ ಪ್ರವಾಸ ಮುಗಿಸಿ ಈಜಿಪ್ಟ್ ಪ್ರವಾಸ ಶುರುಮಾಡುವ ಹೊತ್ತಿಗೆ ಜೂನ್ 26ರಂದು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಗೋರಕ್ಷಣೆಯ ಹೆಸರಿನ ಕೊಲೆಗಡುಕರು ಇಬ್ಬರು ಮುಸಲ್ಮಾನರ ಮೇಲೆ ದೊಣ್ಣೆ ಮತ್ತು ಸ್ಟೀಲ್ ರಾಡ್‌ಗಳಿಂದ ಹಲ್ಲೆ ನಡೆಸಿದ್ದಾರೆ. ಅದರಲ್ಲಿ ಅಫನ್ ಅನ್ಸಾರಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರೆ, ನಾಸಿರ್ ಖುರೇಶಿ ತೀವ್ರ ಗಾಯಗಳಿಗೆ ತುತ್ತಾಗಿದ್ದಾರೆ. ಇದಕ್ಕೆ ಎರಡು ವಾರಗಳ ಹಿಂದೆಯಷ್ಟೇ ಜೂನ್ 8ರಂದು ನಾಸಿಕ್‌ನಲ್ಲಿಯೇ ಗೋರಕ್ಷಕರ ದಾಳಿಗೆ ಕೊಲೆಯಾಗಿದ್ದರು ಎನ್ನಲಾಗಿದ್ದ ಲುಕ್‌ಮನ್ ಅನ್ಸಾರಿ ಅವರ ಮೃತದೇಹ ಪತ್ತೆಯಾಗಿತ್ತು. ಏಪ್ರಿಲ್‌ನಲ್ಲಿ ಕರ್ನಾಟಕದ ರಾಮನಗರದಲ್ಲಿ ಇದ್ರಿಸ್ ಪಾಷಾ ಎಂಬುವವರನ್ನು ಗೋರಕ್ಷಣೆಯ ಹೆಸರನಲ್ಲಿ ಕೊಲೆಗೈಯ್ಯಲಾಗಿತ್ತು. ಇದ್ರಿಸ್ ಪಾಷಾ ಮತ್ತು ಸಹಚರರು ಅಧಿಕೃತ ರಶೀದಿಯೊಂದಿಗೇ ದನಗಳನ್ನು ಸಾಗಣೆ ಮಾಡುತ್ತಿದಾರೂ ಪುನೀತ್ ಕೆರೆಹಳ್ಳಿ ಮತ್ತು ಆತನ ಸಹಚರರು ಗೋಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಆರೋಪ ಮಾಡಲಾಗಿತ್ತು. ಈಗ ಪುನೀತ್ ಕೆರೆಹಳ್ಳಿ ಮತ್ತು ಇತರ ಐವರು ಆರೋಪಿಗಳ ಮೇಲೆ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಆದರೆ ಕೊಲೆ ಆರೋಪಿಗಳು ಜಾಮೀನು ಪಡೆದು ರೋಷಾವೇಷದ ಮಾತುಗಳನ್ನಾಡುವುದರಲ್ಲಿ ನಿರತರಾಗಿದ್ದಾರೆ!

ಅಲ್ಪಸಂಖ್ಯಾತ ಧರ್ಮೀಯರ ಮೇಲೆ ದೇಶದ ಬಹುಸಂಖ್ಯಾತರು ಸವಾರಿ ನಡೆಸುತ್ತ್ತಿರುವುದಕ್ಕೆ ಬಹುಶಃ ದಿನಾಲು ನೂರಾರು ಉದಾಹರಣೆಗಳು ಸಿಕ್ಕಾವು.

ಇಂತಹ ಪರಿಸ್ಥಿತಿ ಸೃಷ್ಟಿಯಾಗುವುದಕ್ಕೆ ಮೋದಿ ಆಡಳಿತದ ಸರ್ಕಾರ ಕಾರಣವಲ್ಲವೇ? ಮೋದಿಯವರ ಪಕ್ಷ ಬಿಜೆಪಿ ಕಾರಣವಲ್ಲವೇ? ಬಿಜೆಪಿಯ ತಾತ್ವಿಕ ಪೋಷಕ ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರ ಕಾರಣವಲ್ಲವೇ? ಇದನ್ನು ತಡೆಯಲು ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂಬ ಪ್ರಶ್ನೆಗೆ ಪ್ರಾಮಾಣಿಕ ಉತ್ತರ ನೀಡುವುದರ ಬದಲು ಪ್ರಜಾಪ್ರಭುತ್ವ ನರನಾಡಿಗಳಲ್ಲಿ ಹರಿಯುತ್ತಿದೆ ಎಂಬ ಒಣಮಾತು ಇದ್ರಿಸ್ ಪಾಷಾನ ಜೀವವನ್ನು ವಾಪಸ್ ತಂದುಕೊಡುತ್ತದೆಯೇ? ಅವರ ಕುಟುಂಬದ ಸಂಕಟವನ್ನು ಕಡಿಮೆ ಮಾಡುತ್ತದೆಯೇ?

ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತದಲ್ಲಿ ಕುಸಿಯುತ್ತಿರುವ ಧಾರ್ಮಿಕ ಅಲ್ಪಸಂಖ್ಯಾತರ ಸ್ವಾತಂತ್ರ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಬಿಜೆಪಿ ಮುಖಂಡರು ಒಬಾಮಾ ಹೆಸರನ್ನೂ ಆಡಿಕೊಂಡು ಟ್ರಾಲ್ ಮಾಡಿದರು. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಟೀಕೆಯನ್ನು ಒಂದು ಹಂತ ಮುಂದಕ್ಕೆ ತೆಗೆದುಕೊಂಡುಹೋಗಿ, ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಮಯದಲ್ಲಿ ಮುಸ್ಲಿಂ ರಾಷ್ಟ್ರಗಳ ಮೇಲಿನ ಅಮೆರಿಕ ದಾಳಿಯನ್ನು ನಿಲ್ಲಿಸಲಿಲ್ಲವೇಕೆ ಎಂದು ಪ್ರಶ್ನಿಸಿದರು. ಬೇರೆ ರಾಷ್ಟ್ರಗಳ ಜನರ ಮೇಲಿನ ಮಾನವ ಹಕ್ಕುಗಳ ಹರಣದ ವಿಷಯದಲ್ಲಿ ಯುಎಸ್‌ಎ ದಾಖಲೆ ಭಯಾನಕವಾಗಿರುವುದು ನಿಜ. ಅದು ಬರಾಕ್ ಒಬಾಮಾ ಅವರ ಕಾಲಕ್ಕೂ ದಯನೀಯವಾಗಿತ್ತು ಎಂಬುದನ್ನು ಹಲವರು ಗುರುತಿಸಿದ್ದಾರೆ.

ಬರಾಕ್ ಒಬಾಮಾ

ಆದರೆ ಇದು ಭಾರತದಂತಹ ದೇಶಕ್ಕೆ ಮಾದರಿಯಾಗಬಾರದಲ್ಲವೇ? ಪ್ರಜಾಪ್ರಭುತ್ವ ನರನಾಡಿಗಳಲ್ಲ ಹರಿಯುವ ದೇಶದಲ್ಲಿ ಗೋರಕ್ಷಣೆ ಹೆಸರಿನಲ್ಲಿ ನಡೆಯುವ ಲಿಂಚಿಂಗ್‌ಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೇಕೆ?

ಮತ್ತೊಮ್ಮೆ ಆ ವಿರಳಾತಿ ವಿರಳ ಪತ್ರಿಕಾ ಗೋಷ್ಠಿಯಲ್ಲಿ ಸಬ್ರಿನಾ ಸಿದ್ದಿಕಿ ಕೇಳಿದ ಆ ಪ್ರಶ್ನೆಯನ್ನು ಇಲ್ಲಿ ಮತ್ತೆ ನೆನಪಿಸಿಕೊಳ್ಳುವುದು ಉಚಿತವಾದೀತು: “ಪ್ರಧಾನ ಮಂತ್ರಿಯವರೇ, ಭಾರತ ಬಹಳ ಕಾಲದಿಂದಲೂ ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಎಂದು ಹೆಮ್ಮೆ ಪಟ್ಟುಕೊಳ್ಳುತ್ತಾ ಬಂದಿದೆ, ಆದರೆ ಹಲವು ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ತಾರತಮ್ಯವೆಸಗಿರುವ ಮತ್ತು ವಿರೋಧಿಗಳ ಸದ್ದಡಗಿಸಿರುವ ಬಗ್ಗೆ ಮಾತಾಡುವ ಹಲವು ಮಾನವ ಹಕ್ಕುಗಳ ಸಂಘಟನೆಗಳಿವೆ. ಶ್ವೇತ ಭವನದ ಪೂರ್ವ ಕೊಠಡಿಯಲ್ಲಿ ಈಗ ನೀವು ನಿಂತಿರುವಾಗ, ಎಲ್ಲಿ ವಿಶ್ವದ ಹಲವು ನಾಯಕರು ಪ್ರಜಾಪ್ರಭುತ್ವವನ್ನು ರಕ್ಷಿಸುವ ಬಗ್ಗೆ ಭರವಸೆಗಳನ್ನು ನೀಡಿದ್ದಾರೋ ಅಲ್ಲಿ, ನಿಮ್ಮ ದೇಶದಲ್ಲಿ ಮುಸ್ಲಿಮರ ಮತ್ತು ಇತರ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ನಿಮ್ಮ ಸರ್ಕಾರ ಮತ್ತು ನೀವು ಯಾವ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗುತ್ತೀರಿ?

ಈ ಪ್ರಶ್ನೆಗೆ ಪ್ರಜಾಪ್ರಭುತ್ವದ ಬಗ್ಗೆ ಕೊಚ್ಚಿಕೊಳ್ಳುವ ಯಾವ ಉತ್ತರವನ್ನಾದರೂ ನೀಡಿ ನುಣುಚಿಕೊಳ್ಳಬಹುದು. ಆದರೆ ದಿನನಿತ್ಯ ಇಲ್ಲಿ ನಡೆಯುವ ಘಟನೆಗಳು ಅದಕ್ಕೆ ವ್ಯತಿರಿಕ್ತವಾದ ಮೆಜಾರಿಟೇರಿಯನ್ ಭಾವನೆ ಭಾರತದಲ್ಲಿ ನೆಲೆಸಿರುವುದಕ್ಕೆ ಸಾಕ್ಷ್ಯ ನುಡಿಯುತ್ತಿರುತ್ತವೆ. ಅಪರೂಪದ ಪತ್ರಿಕಾಗೋಷ್ಠಿಯ ಈ ಪ್ರಶ್ನೆ ಇನ್ನಷ್ಟು ದಿನ ಕಾಡಲಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...