ಪುಸ್ತಕವೊಂದರಲ್ಲಿ ಮಣಿಪುರ ರಾಜ್ಯದ ಇತಿಹಾಸವನ್ನು ತಿರುಚಿದ ಆರೋಪದ ಮೇಲೆ ಕುಕಿ-ಜೋ ಬುಡುಕಟ್ಟು ಸಮುದಾಯದ ಲೇಖಕ ಮತ್ತು ಇಬ್ಬರು ಶಿಕ್ಷಣ ತಜ್ಞರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
‘ದಿ ಆಂಗ್ಲೋ-ಕುಕಿ ವಾರ್ 1917-1919’ ಎಂಬ ಶೀರ್ಷಿಕೆಯ ಪುಸ್ತಕವನ್ನು ನಿವೃತ್ತ ಕರ್ನಲ್ ವಿಜಯ್ ಚೆಂಜಿ ಬರೆದಿದ್ದಾರೆ ಮತ್ತು ಶಿಕ್ಷಣತಜ್ಞರಾದ ಜಾಂಗ್ಖೋಮಾಂಗ್ ಗೈಟ್ ಮತ್ತು ಥೋಂಗ್ಖೋಲಾಲ್ ಹಾಕಿಪ್ ಸಂಪಾದಿಸಿದ್ದಾರೆ. ಈ ಮೂವರ ವಿರುದ್ಧ ಇಂಫಾಲ್ನ ಫೆಡರೇಶನ್ ಆಫ್ ಹೌಮಿ ಎನ್ನುವ ನಾಗರಿಕ ಸಂಘಟನೆ ದೂರು ನೀಡಿದೆ.
ಚೆಂಜಿ, ಗೈಟ್ ಮತ್ತು ಹಾಕಿಪ್ ಮೇಲೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಭಾರತ ಸರ್ಕಾರದ ವಿರುದ್ಧ ಯುದ್ಧ ಮಾಡುವುದು, ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸುಳ್ಳು ಮಾಹಿತಿ ಹಂಚಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ.
ಆಗಸ್ಟ್ 9ರಂದು ಚೆಂಜಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರೆ, ಗೈಟ್ ಮತ್ತು ಹಾಕಿಪ್ ವಿರುದ್ಧ ಆಗಸ್ಟ್ 7 ರಂದು ಪ್ರಕರಣ ದಾಖಲಾಗಿದೆ.
ಗೈಟ್ ಅವರು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಐತಿಹಾಸಿಕ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದರೆ. ಹಾಕಿಪ್ ವಿಶ್ವವಿದ್ಯಾಲಯದ ಕಾನೂನು ಮತ್ತು ಆಡಳಿತದ ಅಧ್ಯಯನ ಕೇಂದ್ರದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ.
1917 ರಿಂದ 1919 ರವರೆಗಿನ ಕುಕಿ ದಂಗೆಯನ್ನು ಆಂಗ್ಲೋ-ಕುಕಿ ಯುದ್ಧ ಎಂದು ಪುಸ್ತಕವು ತಪ್ಪಾಗಿ ಚಿತ್ರಿಸಿದೆ ಎಂದು ಫೆಡರೇಶನ್ ಆಫ್ ಹೌಮಿ ಸಂಘಟನೆ ಆರೋಪಿಸಿದೆ. ಮಣಿಪುರದ ಇತಿಹಾಸದಲ್ಲಿ ಯಾವುದೇ ಆಂಗ್ಲೋ-ಕುಕಿ ಯುದ್ಧ ನಡೆದಿಲ್ಲ ಎಂದು ಸಂಘಟನೆ ಹೇಳಿಕೊಂಡಿದೆ.
ಈ ಪ್ರದೇಶದ ಲೇಬರ್ ಕಾರ್ಪ್ಸ್ನಲ್ಲಿ ಕುಕಿಗಳ ನೇಮಕಾತಿಯನ್ನು ವಿರೋಧಿಸಿದ್ದರಿಂದ ಕುಕಿ ಬಂಡಾಯ ನಡೆದಿದೆ ಎಂದು ದೂರುದಾರರು ಹೇಳಿದ್ದಾರೆ. ಈ ಭಾರತೀಯ ಲೇಬರ್ ಕಾರ್ಪ್ಸ್ ವಿಶ್ವ ಯುದ್ದ I ರ ಸಮಯದಲ್ಲಿ ವಿಶ್ವದ ಹಲವಾರು ಭಾಗಗಳಲ್ಲಿ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲು ಬ್ರಿಟಿಷ್ ಸರ್ಕಾರದಿಂದ ನೇಮಕಗೊಂಡ ಕಾರ್ಮಿಕರನ್ನು ಒಳಗೊಂಡಿತ್ತು.
ಕುಕಿ ದಂಗೆಯು ಬೆಟ್ಟದ ಪ್ರದೇಶಗಳಲ್ಲಿನ ನಾಗಾಗಳು, ಕೋಮ್ಗಳ ಹತ್ಯಾಕಾಂಡ, ಕಣಿವೆಯಲ್ಲಿ ಮೈತೀಸ್ ಮತ್ತು ಮುಸ್ಲಿಮರ ಹತ್ಯಾಕಾಂಡವನ್ನು ಒಳಗೊಂಡಿತ್ತು ಎಂದು ಸಂಘಟನೆಯು ಹೇಳಿಕೊಂಡಿದೆ.
ಬಂಡಾಯ ನಾಯಕರು, ತಾವು ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದು ತಪ್ಪಾಗಿದೆ ಎಂದು ಸ್ಥಳೀಯ ಅಧಿಕಾರಿಗಳಿಗೆ ಕ್ಷಮಾಪಣಾ ಪತ್ರ ಬರೆದು ಇನ್ಮುಂದೆ ಸರ್ಕಾರಕ್ಕೆ ನಿಷ್ಠೆಯಿಂದ ಇರುತ್ತೇವೆ ಎಂದು ಪ್ರತಿಜ್ಞೆ ಮಾಡಿದ ದಾಖಲೆಗಳಿವೆ ಎಂದು ಫೆಡರೇಶನ್ ಆಫ್ ಹೌಮಿ ಹೇಳಿಕೊಂಡಿದೆ.
ಲೇಖಕರು ಐತಿಹಾಸಿಕ ಸತ್ಯಗಳನ್ನು ಮುಚ್ಚಿಟ್ಟು, ವೈಯಕ್ತಿಕ ಲಾಭಕ್ಕಾಗಿ ಮತ್ತು ನಿರ್ದಿಷ್ಟ ಸಮುದಾಯದ ಪರವಾಗಿ ಇತಿಹಾಸವನ್ನು ತಿರುಚಲು ಉದ್ದೇಶಪೂರ್ವಕವಾಗಿ ಅನೇಕ ಸುಳ್ಳುಗಳನ್ನು ರಚಿಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ: ವಿಳಂಬ ತನಿಖೆಗೆ ಸುಪ್ರೀಂ ಬೇಸರ