ರಾಜ್ಯದಲ್ಲಿರುವ ಅರ್ಧದಷ್ಟು ಹಾಸ್ಟೆಲ್ ಗಳಿಗೆ ಸ್ವಂತ ಕಟ್ಟಡಗಳಿಲ್ಲ. ಖಾಲಿ ನಿವೇಶನಗಳಿದ್ದರೂ ಕಟ್ಟಡ ಕಟ್ಟಲು ಮುಂದಾಗದ ಸರ್ಕಾರ.. ಹಿಂದಿದೆ ಖಾಸಗಿ ಲಾಬಿ..
ಮೂರು ಹಾಸ್ಟೆಲ್ ಗಳ ವಿದ್ಯಾರ್ಥಿನಿಯರನ್ನು ಲಾಡ್ಜ್ ಗೆ ತಳ್ಳಲು ಮುಂದಾಗಿದ್ದ ಅಧಿಕಾರಿಗಳು: ಕೆವಿಎಸ್ ಮಧ್ಯಪ್ರವೇಶದಿಂದ ಬಚಾವ್..
ಕಲಬುರ್ಗಿ ಜಿಲ್ಲೆಯ ಅಂಬಿಕನಗರ, ವೇಂಕಟೇಶನಗರ ಹಾಗೂ ಎನ್.ಜಿ.ಓ ನಗರಗಳ ಮೂರು ಹೆಣ್ಣುಮಕ್ಕಳ ಹಾಸ್ಟೆಲ್ ಗಳಿಗೆ ಸ್ವಂತ ಕಟ್ಟಡಗಳಿಲ್ಲ. ಖಾಸಗಿ ಕಟ್ಟಡಗಳು ಸಹ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಸ್ಥಳಾಂತರ ಮಾಡಬೇಕಾಗಿತ್ತು. ಹೊಸ ಕಟ್ಟಡ ಕಟ್ಟುವವರೆಗೆ ಇಲ್ಲಿರುವ ವಿದ್ಯಾರ್ಥಿನಿಯರನ್ನು ಲಾಡ್ಜ್ ಒಂದಕ್ಕೆ ಕಳಿಸಿ ಲಾಭ ಹೊಡೆಯಲು ಹೊಂಚಿಸಿದ್ದರು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ. ಲಾಡ್ಜ್ ನ ಮಾಲೀಕರೊಂದಿಗೆ ಮಾತಾಡಿ ಆಗಲೇ ಕಮಿಷನ್ ಕೂಡ ಮಾತಾಡಿ ಮುಗಿದಿತ್ತು.
ಇನ್ನು ಇದಕ್ಕೆ ಒಪ್ಪದ ವಿದ್ಯಾರ್ಥಿನಿಯರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹೆದರಿಸಿ ಸ್ಥಳಾಂತರಕ್ಕೆ ಅವರ ಸಹಿ ಮೂಲಕ ಒಪ್ಪಿಗೆಯನ್ನು ಪಡೆಯಲಾಗಿತ್ತು. ವಿಷಯ ತಿಳಿದ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ಪದಾಧಿಕಾರಿಗಳು ಅಧಿಕಾರಿಗಳನ್ನು ಸಂಪರ್ಕಿಸಿದರೆ ಉಡಾಫೆಯ ಉತ್ತರ ಸಿಕ್ಕಿತ್ತು. ಆಕ್ರೋಶಗೊಂಡ ವಿದ್ಯಾರ್ಥಿಗಳು ಹಾಸ್ಟೆಲ್ ನ ವಿದ್ಯಾರ್ಥಿನಿಯರನ್ನು ಒಟ್ಟುಗೂಡಿಸಿ, ಈ ಎಲ್ಲಾ ವಿದ್ಯಾರ್ಥಿ ವಿರೋಧಿ ನಿಲುವುಗಳನ್ನು ವಿರೋಧಿಸಿ ಆಗಸ್ಟ್ 10 ರಂದು KVS ನೇತೃತ್ವದಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಎದುರು ದೊಡ್ಡ ಪ್ರತಿಭಟನೆಯನ್ನು ನಡೆಸಿದ್ದರು. ನಾಗರೀಕ ಸಮಾಜದ ಗಮನಕ್ಕೆ ಬಂದ ಕೂಡಲೇ ಹಲವರು ಇದನ್ನು ಖಂಡಿಸಿದರು. ಮಾಧ್ಯಮಗಳಲ್ಲಿ ವಿಷಯ ಹೊರಬಂದ ನಂತರ ಸ್ಥಳಾಂತರವನ್ನು ನಿಲ್ಲಿಸುವುದಾಗಿ ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿಗಳು ಒಪ್ಪಿಕೊಂಡರು.
ಹೋರಾಟದ ಮುಂದುವರೆದ ಭಾಗವಾಗಿ ಬೆಂಗಳೂರಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಯುಕ್ತರಾದ ವಸಂತ್ ಕುಮಾರ್ ಅವರನ್ನು KVS ತಂಡ ಭೇಟಿ ಮಾಡಿ ಸ್ಥಳಾಂತರ ಮಾಡಬಾರದು, ಶೀಘ್ರದಲ್ಲಿಯೇ ಎಲ್ಲಾ ಹಾಸ್ಟೆಲ್ ಗಳಿಗೂ ಸ್ವಂತ ಕಟ್ಟಡಗಳನ್ನು ನಿರ್ಮಿಸಬೇಕು, ಈಗಿರುವ ಹಾಸ್ಟೆಲ್ ಗಳನ್ನೇ ಮತ್ತಷ್ಟು ವಿದ್ಯಾರ್ಥಿ ಸ್ನೇಹಿಯಾಗಿ ಅಭಿವೃದ್ಧಿ ಮಾಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಬೆದರಿಸಿದ ಅಧಿಕಾರಿಗಳ ಮೇಲೆ ಶಿಸ್ತು ಕ್ರಮವನ್ನು ಜರುಗಿಸಬೇಕೇಂದು ಆಗ್ರಹಿಸಿಲಾಯಿತು.
ವಿದ್ಯಾರ್ಥಿಗಳ ಹಕ್ಕೊತ್ತಾಯಕ್ಕೆ ಒಪ್ಪಿದ ಆಯುಕ್ತರು, ”ಹಾಸ್ಟೆಲ್ ಸ್ಥಳಾಂತರವನ್ನು ಯಾವುದೇ ಕಾರಣಕ್ಕೆ ಮಾಡುವುದಿಲ್ಲ ಎಂದು ತಿಳಿಸಿ, ಅಧಿಕಾರಿ ಮೆಹಬೂಬ್ ಪಾಷಾ ಅವರ ಮೇಲೆ ಶಿಸ್ತು ಕ್ರಮ ಜಾರಿ ಮಾಡುವಂತೆ ಹಿಂದುಳಿದ ವರ್ಗದ ಸಚಿವಾಲಯದ ಆಪ್ತ ಕಾರ್ಯದರ್ಶಿಗಳಿಗೆ ಸೂಚನಾ ಪತ್ರವನ್ನು ನೀಡಿದ್ದಾರೆ.” KVS ತಂಡ ಸಚಿವಾಲಯದ ಆಪ್ತ ಕಾರ್ಯದರ್ಶಿಗಳಿಗೂ ಆಗ್ರಹ ಪತ್ರವನ್ನು ನೀಡಿ ಶೀಘ್ರವಾಗಿ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ. ಅಲ್ಲಿಗೆ ಸದ್ಯಕ್ಕೆ ಆ ವಿದ್ಯಾರ್ಥಿನಿಯರು ನಿಟ್ಟುಸಿರು ಬಿಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಕೊಪ್ಪಳದ ಮೆಟ್ರಿಕ್ ಪೂರ್ವ ವಿದ್ಯಾರ್ಥಿನಿಲಯವೊಂದಕ್ಕೆ ಸ್ವಂತ ಕಟ್ಟಡವಿಲ್ಲದೇ ಖಾಸಗಿ ಕಟ್ಟಡದಲ್ಲಿ ಧ್ವಜಕಂಬ ಇಳಿಸಲು ಹೋಗಿ ಕರೆಂಟ್ ಶಾಕ್ ನಿಂದ ಐವರು ವಿದ್ಯಾರ್ಥಿಗಳು ದುರಂತದ ಸಾವನಪ್ಪಿರುವ ದುರ್ಘಟನೆ ಜರುಗಿದೆ. ಇಲ್ಲಿಯೂ ಇದೇ ಸಮಸ್ಯೆ.. ಸ್ವಂತ ಕಟ್ಟಡವಿಲ್ಲ, ಖಾಸಗಿ ಕಟ್ಟಡಗಳಲ್ಲಿ ಸುರಕ್ಷತೆಯಿಲ್ಲ..
ವಾಸ್ತವವೇನು?
RTI ನಿಂದ ಪಡೆದ ಮಾಹಿತಿ ಪ್ರಕಾರ ಕರ್ನಾಟಕದಲ್ಲಿ ಒಟ್ಟು 2438 ಸರ್ಕಾರಿ ವಿದ್ಯಾರ್ಥಿ ನಿಲಯಗಳಿವೆ. ಇವುಗಳಲ್ಲಿ ಕೇವಲ 1325 ವಿದ್ಯಾರ್ಥಿ ನಿಲಯಗಳಿಗೆ ಮಾತ್ರ ಸ್ವಂತ ಕಟ್ಟಡಗಳಿವೆ. ಉಳಿದಂತೆ 1031 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಸುಮಾರು ಅಷ್ಟೇ ಸಂಖ್ಯೆಯ ಸರ್ಕಾರಿ ನಿವೇಶನಗಳು ಇದ್ದರೂ ಸಹ ಕೇವಲ 340 ಕಟ್ಟಡಗಳು ಮಾತ್ರ ಕಾಮಗಾರಿ ಹಂತದಲ್ಲಿವೆ. ಇನ್ನು 602 ಸರ್ಕಾರಿ ನಿವೇಶನಗಳು ಖಾಲಿ ಬಿದ್ದಿದ್ದರೂ ಸಹ ಹಾಸ್ಟೆಲ್ ಕಟ್ಟಡ ಕಟ್ಟಲು ಸರ್ಕಾರ ಮುಂದಾಗಿಲ್ಲ.
ಸ್ವಂತ ಕಟ್ಟಡವಿಲ್ಲದೇ ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿರುವ ವಿದ್ಯಾರ್ಥಿನಿಲಯಗಳು ಉತ್ತರ ಕರ್ನಾಟಕದಲ್ಲಿಯೇ ಹೆಚ್ಚಿವೆ. ಒಂದೇ ರೂಮಿನಲ್ಲಿ 4 ವಿದ್ಯಾರ್ಥಿಗಳು ಮಾತ್ರ ಇರಬೇಕೆಂಬ ನಿಯಮವಿದ್ದರೂ ಸಹ ಹತ್ತಾರು ವಿದ್ಯಾರ್ಥಿಗಳು ವಾಸಿಸಬೇಕಾದ ಪರಿಸ್ಥಿತಿ ಇದೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲ. ನಿಲಯ ಪಾಲಕರು ಸಹ ದಿನನಿತ್ಯ ಬರುವುದಿಲ್ಲ.
ಇದರ ಹಿಂದಿದೆ ಖಾಸಗಿ ಲಾಬಿ
ನಿವೇಶನಗಳಿದ್ದರೂ ಸಹ ಸರ್ಕಾರಿ ಕಟ್ಟಡ ಕಟ್ಟದಿರುವುದರ ಹಿಂದೆ ದೊಡ್ಡ ಖಾಸಗಿ ಮಾಫಿಯಾ ಕೆಲಸ ಮಾಡುತ್ತಿದೆ. ಖಾಸಗಿ ಕಟ್ಟಡದ ಮಾಲೀಕರು, ರಿಯಲ್ ಎಸ್ಟೇಟ್ ಕುಳಗಳು ಸ್ಥಳೀಯ ವಾರ್ಡನ್ ಗಳೊಂದಿಗೆ ಶಾಮೀಲಾಗಿ ಸರ್ಕಾರದ ದುಡ್ಡನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಮಾಸಿಕ ಲಕ್ಷಾಂತರ ರೂಪಾಯಿ ಬಾಡಿಗೆ ಹೆಸರಿನಲ್ಲಿ ಲೂಟಿ ಮಾಡುತ್ತಿದ್ದಾರೆ. ಒಂದು ವೇಳೆ ಸರ್ಕಾರ ಸ್ವಂತ ಕಟ್ಟಡ ಕಟ್ಟಿಬಿಟ್ಟರೆ ಇವರ ಕಮಾಯಿಗೆ ಬ್ರೇಕ್ ಬೀಳುತ್ತದೆ ಅದಕ್ಕೆ ಅವರು ಯಥಾಸ್ಥಿತಿ ಕಾಪಾಡಿಕೊಳ್ಳಲು ನಿಂತಿದ್ದಾರೆ.
ಇವರುಗಳೆಲ್ಲಾ ಸಚಿವರ ಲೆವೆಲ್ ನಲ್ಲಿ ಆಪರೇಟ್ ಆಗುತ್ತಿದ್ದಾರೆ. ಬೆಂಗಳೂರಿನಲ್ಲಿ ಲಾಬಿ ನಡೆಸಿ ಕಟ್ಟಡ ನಿರ್ಮಾಣದ ಟೆಂಡರ್ ಗಾಗಿ ಇಲ್ಲವೇ ಕಟ್ಟಡ ಕಟ್ಟಬಾರದಾಗಿ ಒತ್ತಡ ತರುತ್ತಿದ್ದಾರೆ. ಇದೆಲ್ಲದರ ದುಷ್ಪರಿಣಾಮಗಳನ್ನು ಅಮಾಯಕ ವಿದ್ಯಾರ್ಥಿಗಳು ಅನುಭವಿಸಬೇಕಿದೆ.
ಸರ್ಕಾರಿ ಹಾಸ್ಟೆಲ್ ಗಳ ದುಸ್ಥಿತಿ
ಇನ್ನು ಸರಕಾರದ ಕೆಲ ಹಾಸ್ಟೆಲ್ ಗಳು ಇಂದು ದನದ ಕೊಟ್ಟಿಗೆಗಳಿಗಿಂತ ಕಡೆಯಾಗಿವೆ. ಬಡ, ಮಧ್ಯಮ ವರ್ಗವನ್ನು ಶೈಕ್ಷಣಿಕ ಸೌಲಭ್ಯದಿಂದ ವಂಚಿಸುವ ವ್ಯವಸ್ಥಿತ ಹುನ್ನಾರದ ಭಾಗವಾಗಿಯೇ ಹಾಸ್ಟೆಲ್ ಗಳನ್ನು ದಿವಾಳಿ ಎಬ್ಬಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದು 73 ವರ್ಷಗಳಾದರೂ ಬಹುತೇಕ ಹಾಸ್ಟೆಲ್ ಗಳಿಗೆ ಬಾಡಿಗೆ ಕಟ್ಟಡಗಳೇ ಗತಿಯಾಗಿವೆ! ರೈಲು ಬೋಗಿಯಂತೆ ವರ್ಷದಿಂದ ವರ್ಷಕ್ಕೆ ಇವು ವಾರ್ಡ್ ನಿಂದ ವಾರ್ಡ್ ಗೆ ಚಲಿಸುತ್ತಲೇ ಇರುತ್ತವೆ!
ಹಿಂದುಳಿದ, ಎಸ್ಸಿ, ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿಗಳು ಉತ್ತಮ ಊಟಕ್ಕಾಗಿ ಸಮಾಜ ಕಲ್ಯಾಣ ಇಲಾಖೆ ಇಲ್ಲವೇ ಸಂಬಂಧಿಸಿದ ಅಧಿಕಾರಿಗಳ ಕಾರ್ಯಾಲಯದ ಮುಂದೆ ದಿನಗಟ್ಟಲೇ ಹೋರಾಟ ಮಾಡಲೇಬೇಕಾದ ದುಃಸ್ಥಿತಿ ಇದೆ. ಬಹುತೇಕ ಎಲ್ಲಾ ವಾರ್ಡನ್ ಗಳು ಮಕ್ಕಳ ಅನುದಾನವನ್ನು ಕದಿಯುತ್ತಿರುವುದು ಎಲ್ಲರಿಗೂ ಗೊತ್ತಿದ್ದರೂ ಅದನ್ನು ನಿಯಂತ್ರಿಸಲು ಯಾರೂ ಮುಂದಾಗುತ್ತಿಲ್ಲ ಎಂದು ಪತ್ರಕರ್ತರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ಈ ದುರಂತದ ಪರಿಸ್ಥಿತಿಯಲ್ಲಿ ಉತ್ತಮ ಗುಣಮಟ್ಟದ ಆಹಾರ, ಸುಸಜ್ಜಿತ ಗ್ರಂಥಾಲಯ, ಕಂಪ್ಯೂಟರ್ ಸೌಲಭ್ಯ, ಆಟದ ಮೈದಾನವನ್ನು ನಿರೀಕ್ಷಿಸುವುದು ದುರಾಸೆಯಲ್ಲವೇ?
ಇದೇ ಸಂದರ್ಭದಲ್ಲಿ ಕೆಲವೊಂದು ಅತ್ಯುತ್ತಮ ಹಾಸ್ಟೆಲ್ ಗಳು ಇವೆ. ಬೆಂಗಳೂರನ ನೆಲಮಂಗಲದ ಸರ್ಕಾರಿ ಹಾಸ್ಟೆಲ್ ಫೈವ್ ಸ್ಟಾರ್ ಹೋಟೆಲ್ ನಂತೆ ಕಂಗೊಳಿಸುತ್ತದೆ. ಶುಚಿತ್ವಕ್ಕೆ ಮಹತ್ವ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಶಿಸ್ತನ್ನು ಕಲಿಸಲಾಗುತ್ತಿದೆ. ಇದು ಸಹ ಸರ್ಕಾರಿ ಹಾಸ್ಟೆಲ್ ಆದರೂ ಇದು ಹೇಗೆ ಸಾಧ್ಯ? ಹೇಗೆಂದರೆ ಸ್ಥಳೀಯ ದಲಿತ ಸಂಘಟನೆಗಳ ಹೋರಾಟದಿಂದ ಕಟ್ಟಡ ನಿರ್ಮಾಣದಲ್ಲಿ ಯಾವುದೇ ಭ್ರಷ್ಟಾಚಾರ ನಡೆಯದೇ ಅತ್ಯುತ್ತಮ ಕಟ್ಟಡ ಕಟ್ಟಲು ಸಾಧ್ಯವಾಯಿತು. ಅಲ್ಲಿನ ವಾರ್ಡನ್ ಹೋರಾಟದ ಹಿನ್ನೆಲೆಯಿಂದ ಬಂದವರು. ಅವರು ಮಕ್ಕಳ ಭವಿಷ್ಯದ ಮೇಲಿನ ಪ್ರೀತಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಇದು ನಿಜಕ್ಕೂ ಮಾದರಿ ಹಾಸ್ಟೆಲ್ ಆಗಿದೆ.
ಅಂದರೆ ಇಚ್ಛಾಶಕ್ತಿ ಇದ್ದರೆ ಸಾಕು ಇರುವ ಅನುದಾನದಲ್ಲಿಯೇ ಹಾಸ್ಟೆಲ್ ಗಳನ್ನು ಅತ್ಯುತ್ತಮವಾಗಿ ನಡೆಸಲು ಸಾಧ್ಯ. ಅಂತಹ ಇಚ್ಛಾಶಕ್ತಿಯನ್ನು ಸರ್ಕಾರದಲ್ಲಿ, ಸಮಾಜ ಕಲ್ಯಾಣ/ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ, ವಾರ್ಡನ್ ಗಳಲ್ಲಿ ತರುವವರು ಯಾರು ಎನ್ನುವುದು ಯಕ್ಷಪ್ರಶ್ನೆಯಾಗಿದೆ. ಈ ಪ್ರಶ್ನೆಗೆ ಉತ್ತರ ಕಂಡುಕೊಂಡಾಗ ಮಾತ್ರ ಶಿಕ್ಷಣದ ನಿಜವಾದ ಉದ್ದೇಶವನ್ನು ಈಡೇರಿಸಲು ಸಾಧ್ಯ.
ಕಟ್ಟಡದ ಗುತ್ತಿಗೆದಾರ,ರಾಜಕಾರಣಿ, ಕೆಲವು ಸರ್ಕಾರಿ ಕೆಲಸಗಾರರು ಮತ್ತು rti ಹಾಕುವವರವರೆವಿಗೂ ಹಣ ಸೋರಿಕೆ ಇದೆ…