ಗುರುವಾರ ದೆಹಲಿ ವಿಧಾನಸಭೆಯಲ್ಲಿ ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸುವುದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ನಾಲ್ವರು ಬಿಜೆಪಿ ಶಾಸಕರನ್ನು ಉಪ ಸಭಾಪತಿಗಳ ಆದೇಶದ ಮೇಲೆ ಮಾರ್ಷಲ್ಗಳು ಹೊರಹಾಕಿದ್ದಾರೆ.
ಸದನದಲ್ಲಿ ಮಣಿಪುರಕ್ಕೆ ಸಂಬಂಧಿಸಿದಂತೆ ಎಎಪಿ ಶಾಸಕ ದುರ್ಗೇಶ್ ಪಾಠಕ್ ಅವರು ಚರ್ಚೆ ಆರಂಭಿಸಿದರು. ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದರು. ದೆಹಲಿಗೆ ಸಂಬಂಧಿಸಿದ ವಿಚಾರಗಳನ್ನು ಮಾತ್ರವೇ ಚರ್ಚಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಉಪ ಸಭಾಪತಿ ರಾಖಿ ಬಿರ್ಲಾ ಅವರು ಶಾಸಕರ ಪ್ರತಿಭಟನೆಯನ್ನು ಪ್ರಶ್ನಿಸಿ, ಮಣಿಪುರ ಸಮಸ್ಯೆಯು ಸದನದಲ್ಲಿ ಚರ್ಚಿಸುವಂತಹ ವಿಚಾರವಲ್ಲ ಎಂದು ಭಾವಿಸಿದ್ದೀರಾ? ಉತ್ತರ ಪ್ರದೇಶ ವಿಧಾನಸಭೆಯಲ್ಲಿಯೂ ಮಣಿಪುರ ವಿಚಾರ ಚರ್ಚೆಯಾಗಿದೆ ಎಂದು ಹೇಳಿದರು.
ಉಪಸಭಾಪತಿಗಳು ಚರ್ಚೆಗೆ ಅವಕಾಶ ನೀಡಿದ ಮೇಲೂ ಬಿಜೆಪಿ ಶಾಸಕರಾದ ಅಭಯ್ ವರ್ಮಾ, ಜಿತೇಂದರ್ ಮಹಾಜನ್, ಅಜಯ್ ಮಹಾವ ಮತ್ತು ಒ.ಪಿ ಶರ್ಮಾ ಪ್ರತಿಭಟನೆ ಮುಂದುವರಿಸಿದರು. ಈ ವೇಳೆ ಮಾರ್ಷಲ್ಗಳ ಮೂಲಕ ಅವರನ್ನು ಸದನದಿಂದ ಹೊರಗಟ್ಟಲಾಯಿತು.
ಮಣಿಪುರ ವಿಚಾರವಾಗಿ ಚರ್ಚೆ ನಡೆಸುವುದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸುತ್ತಿರುವುದು ದುರದೃಷ್ಟಕರ ಎಂದು ಎಎಪಿ ಶಾಸಕ ದುರ್ಗೇಶ್ ಪಾಠಕ್ ಅವರು ಟೀಕಿಸಿದರು. ಇದೇ ವೇಳೆ ಎಎಪಿ ಶಾಸಕರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಇದನ್ನೂ ಓದಿ: ಮಣಿಪುರ: ಬುಡಕಟ್ಟು ಪ್ರಾಬಲ್ಯವಿರುವ ಜಿಲ್ಲೆಗಳಿಗೆ ಪ್ರತ್ಯೇಕ ಆಡಳಿತಾತ್ಮಕ ಹುದ್ದೆ ನೀಡಬೇಕು: ಪ್ರಧಾನಿಗೆ ಕುಕಿ ಶಾಸಕರ ಒತ್ತಾಯ